Home ದೇಶ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ: ಪಂದ್ಯಕ್ಕೂ ಮೊದಲೇ ಅಂಪೈಯರ್‌ ಅಂಕಣದಿಂದ ಹೊರ ನಡೆದಿದ್ದೇಕೆ?

ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ: ಪಂದ್ಯಕ್ಕೂ ಮೊದಲೇ ಅಂಪೈಯರ್‌ ಅಂಕಣದಿಂದ ಹೊರ ನಡೆದಿದ್ದೇಕೆ?

0

ಹೊಸದೆಹಲಿ: ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಮಾರ್ಚ್ 8ರಂದು ನಡೆದ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಸಭೆಯಲ್ಲಿ ಅವರು ಭಾಗವಹಿಸಿರಲಿಲ್ಲ.‌ ಇನ್ನು ಕೆಲವೇ ತಿಂಗಳ ಅಂತರದಲ್ಲಿ ಲೋಕಸಭಾ ಚುನಾವಣೆಯಿದ್ದು ಇಷ್ಟರಲ್ಲೇ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ, ಈ ಸಂದರ್ಭದಲ್ಲಿ ಅವರು ರಾಜಿನಾಮೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.

ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗಬೇಕಿರುವ ಸಮಯದಲ್ಲಿ ಅರುಣ್‌ ಗೋಯಲ್‌ ರಾಜೀನಾಮೆ ನೀಡಿರುವುದು ಭಾರತದ ಚುನಾವಣಾ ಆಯೋಗದಲ್ಲಿ ಎಲ್ಲವೂ ಸರಿಯಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಕಾನೂನು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಮಾರ್ಚ್ 9, ಶನಿವಾರ, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅರುಣ್ ಗೋಯೆಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಮತ್ತು ಇದು ತಕ್ಷಣದಿಂದ ಜಾರಿಗೆ ಬಂದಿದೆ. ಅರುಣ್ ಗೋಯೆಲ್ ತಮ್ಮ ರಾಜೀನಾಮೆಯಲ್ಲಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಅರುಣ್ ಗೋಯಲ್ ಅವರ ರಾಜೀನಾಮೆಗೆ ಕಾರಣ ಬೇರೆಯೇ ಬೇರೆಯೇ ಇದೆ ಎನ್ನಲಾಗುತ್ತಿದೆ.

ಭಾರತದ ಚುನಾವಣಾ ಆಯೋಗವು ಮೂವರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ, ಅವರಲ್ಲಿ ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಅಂದರೆ ಸಿಇಸಿ. ರಾಜೀವ್ ಕುಮಾರ್ ಪ್ರಸ್ತುತ ಭಾರತದ ಚುನಾವಣಾ ಆಯುಕ್ತರಾಗಿದ್ದಾರೆ. ಫೆಬ್ರವರಿಯಲ್ಲಿ ಅನೂಪ್ ಚಂದ್ರ ಪಾಂಡೆ ಚುನಾವಣಾ ಆಯುಕ್ತರಾಗಿ ನಿವೃತ್ತರಾದರು. ಅವರ ಬದಲಿಗೂ ಇದುವರೆಗೆ ಯಾರನ್ನೂ ನೇಮಿಸಲಾಗಿಲ್ಲ. ಅದೇ ಸಮಯದಲ್ಲಿ, ಅರುಣ್ ಗೋಯಲ್ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ. ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಒಬ್ಬರೇ ಚುನಾವಣಾ ಆಯೋಗದಲ್ಲಿ ಉಳಿದಿದ್ದಾರೆ.

‘ಇದು ಸಾಮಾನ್ಯ ಸಂದರ್ಭದ ರಾಜೀನಾಮೆ ಅಲ್ಲ’

ಚುನಾವಣಾ ಆಯುಕ್ತ ಹುದ್ದೆಗೆ ಅರುಣ್ ಗೋಯೆಲ್ ಅವರ ಹಠಾತ್ ರಾಜೀನಾಮೆಗೆ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಅವರು ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ. ರಾಜೀನಾಮೆಗೆ ಕಾರಣ ಏನೇ ಇರಲಿ, ಈ ರಾಜೀನಾಮೆ ಸಾಮಾನ್ಯ ಸಂದರ್ಭದಲ್ಲಿ ಸಲ್ಲಿಸಲಾಗಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಚುನಾವಣೆಗಳಲ್ಲಿ ಪಾರದರ್ಶಕತೆಗಾಗಿ ತರುವ ನಿಟ್ಟಿನಲ್ಲಿ ಕೆಲಸ ಮಾಡುವ ಎಡಿಆರ್ ಸಂಘಟನೆಯ ಸದಸ್ಯ ಜಗದೀಪ್ ಛೋಕರ್, “ಅಸ್ಪಷ್ಟ ಸಂದರ್ಭಗಳಲ್ಲಿ ಚುನಾವಣಾ ಆಯುಕ್ತರು ರಾಜೀನಾಮೆ ನೀಡುವುದು ಸಾಮಾನ್ಯ ವಿಷಯವಲ್ಲವಲ್ಲ. ಇದರ ಹಿಂದೆ ಬಲವಾದ ಕಾರಣವಿದೆ. ಆ ಕಾರಣವೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ” ಎಂದಿದ್ದಾರೆ.

“ಅವರ ರಾಜೀನಾಮೆಗೆ ಕಾರಣವಾಗಿರುವ ವೈಯುಕ್ತಿಕ ಕಾರಣಗಳು ಯಾವುದು ಎನ್ನುವುದು ನಮಗೆ ತಿಳಿದಿಲ್ಲ. ಚುನಾವಣಾ ಆಯೋಗವು ಕಾರಣವನ್ನು ಕೇಳಿಲ್ಲ. ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ರಾಜೀನಾಮೆಗೆ ಅದೂ ಕಾರಣವಾಗಿರಬಹುದು. ನಿಜವಾದ ಕಾರಣ ಏನೆನ್ನುವುದು ತಿಳಿಯುವವರೆಗೂ ಇದೇ ಕಾರಣವೆಂದು ಹೇಳುವುದು ಕಷ್ಟ.”

ಹಿರಿಯ ಪತ್ರಕರ್ತ ಹೇಮಂತ್ ಅತ್ರಿ ಕೂಡ ಅರುಣ್ ಗೋಯಲ್ ಅವರ ರಾಜೀನಾಮೆ ಸಾಮಾನ್ಯ ವಿಷಯವವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಅರುಣ್ ಗೋಯೆಲ್ ಬಹಳ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿ, ಅವರು ಚುನಾವಣಾ ಆಯುಕ್ತರಾಗುವ ಮೊದಲು ಉನ್ನತ ಮಟ್ಟದ ಅಧಿಕಾರಿಯಾಗಿದ್ದರು. ಅವರ ಅಧಿಕಾರಾವಧಿ ಇನ್ನೂ ಮೂರೂವರೆ ವರ್ಷಗಳು ಉಳಿದಿವೆ, ಹೀಗಿರುವಾಗ ಅವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿರುವುದು ಸಾಮಾನ್ಯ ವಿಷಯವವಲ್ಲ.

ನೇಮಕಾತಿಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು

ಅರುಣ್ ಗೋಯೆಲ್ ಪಂಜಾಬ್ ಕೇಡರಿಗೆ ಸೇರಿದ ನಿವೃತ್ತ ಐಎಎಸ್ ಅಧಿಕಾರಿ. ಗೋಯೆಲ್ ಅವರನ್ನು ನವೆಂಬರ್ 2022ರಲ್ಲಿ ಭಾರತದ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು. ಆ ಸಂದರ್ಭದಲ್ಲಿ ಅರುಣ್ ಗೋಯೆಲ್ ಅವರ ನೇಮಕವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಅರುಣ್ ಗೋಯೆಲ್ ಅವರು 37 ವರ್ಷಗಳ ಕಾಲ ಐಎಎಸ್ ಆಗಿ ಸೇವೆ ಸಲ್ಲಿಸಿದ್ದರು.

ಅರುಣ್ ಗೋಯೆಲ್ ಡಿಸೆಂಬರ್ 31, 2022ರಂದು ವೃತ್ತಿಯಿಂದ ನಿವೃತ್ತರಾಗಬೇಕಿತ್ತು, ಆದರೆ ಅದಕ್ಕೂ ಒಂದು ತಿಂಗಳ ಮೊದಲು, 2022ರ ನವೆಂಬರ್ 18ರಂದು ಅವರು ಸ್ವಯಂ ನಿವೃತ್ತಿ ಪಡೆದರು. ಅವರ ನಿವೃತ್ತಿಯ ಒಂದು ದಿನದ ನಂತರ, ಭಾರತದ ರಾಷ್ಟ್ರಪತಿಗಳು ಅವರನ್ನು ಚುನಾವಣಾ ಆಯುಕ್ತರ ಹುದ್ದೆಗೆ ನೇಮಿಸಿದರು.

ಮೇ 5, 2022ರಿಂದ ಖಾಲಿ ಇದ್ದಿದ್ದ ಚುನಾವಣಾ ಆಯುಕ್ತರ ಹುದ್ದೆಗೆ ನೇಮಕಗೊಂಡ ಮರುದಿನವೇ ಅರುಣ್ ಗೋಯೆಲ್ ಅಧಿಕಾರ ವಹಿಸಿಕೊಂಡರು. ಆದರೆ ಅದೇ ಸಮಯದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.

ಗೋಯೆಲ್‌ ಅವರ ನೇಮಕವನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಆದರೆ, ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಚುನಾವಣಾ ಆಯುಕ್ತರ ಸ್ಥಾನಕ್ಕೆಂದು ಶಾರ್ಟ್‌ ಲಿಸ್ಟ್‌ ಮಾಡಲಾಗಿದ್ದ ಪಟ್ಟಿಯಲ್ಲಿ ಒಟ್ಟು ನಾಲ್ವರು ಅಧಿಕಾರಿಗಳ ಹೆಸರುಗಳಿದ್ದವು. ಅವರಲ್ಲಿ ಗೋಯೆಲ್‌ ಅವರಿಗೆ ಇದ್ದಿದ್ದು ಕನಿಷ್ಟ ಅನುಭವ.

ಗೋಯೆಲ್ ಅವರ ನೇಮಕದ ಸಮಯದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್, ನೇಮಕಾತಿ ಸಮಿತಿಯು ಗೋಯೆಲ್ ಅವರ ಹೆಸರನ್ನು ಶಾರ್ಟ್‌ ಲಿಸ್ಟ್ ಮಾಡಿದ ದಿನದಂದು, ಗೋಯಲ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು ಮತ್ತು ಅದನ್ನು ಸ್ವೀಕರಿಸಲಾಗಿತ್ತು ಎಂದು ತೀರ್ಪಿನಲ್ಲಿ ಹೇಳಲಾಗಿತ್ತು.

“ಅಧಿಕಾರಿಯನ್ನು ನೇಮಕ ಮಾಡುವ ಪ್ರಸ್ತಾಪದ ಬಗ್ಗೆ ತಿಳಿದಿಲ್ಲದಿದ್ದರೆ, ಅಧಿಕಾರಿ 18.11.2022ರಂದು ಸ್ವಯಂ ನಿವೃತ್ತಿಗೆ ಹೇಗೆ ಅರ್ಜಿ ಸಲ್ಲಿಸಿದ್ದರು ಎಂದು ಆಶ್ಚರ್ಯವಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರತಿಭಟನೆಗಳು ಮತ್ತು ಪ್ರಶ್ನೆಗಳ ಹೊರತಾಗಿಯೂ, ಅರುಣ್ ಗೋಯಲ್ ಅಂದು ಹುದ್ದೆಗೆ ರಾಜೀನಾಮೆ ನೀಡಿರಲಿಲ್ಲ. ಆದರೆ, ಈಗ ಇದ್ದಕ್ಕಿದ್ದಂತೆ ಅವರು ರಾಜೀನಾಮೆ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಹೇಮಂತ್ ಅತ್ರಿ, “ಅವರನ್ನು ನೇಮಕ ಮಾಡಲು ಕೇಂದ್ರ ಸರ್ಕಾರವು ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ನಿರ್ಲಕ್ಷಿಸಿತ್ತು, ಅಂದು ಸುಪ್ರೀಂ ಕೋರ್ಟ್ ಕೂಡ ಬಲವಾದ ಟೀಕೆಗಳನ್ನು ಮಾಡಿತ್ತು. ಆದರೆ ಈಗ ಅವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಆಯೋಗದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿದೆ” ಎನ್ನುತ್ತಾರೆ.

ಯಾವ ಪರಿಸ್ಥಿತಿಯಲ್ಲಿ ಗೋಯಲ್ ರಾಜೀನಾಮೆ ನೀಡಿದರು?

2024 ರ ಸಾರ್ವತ್ರಿಕ ಚುನಾವಣೆಗೆ ಚುನಾವಣಾ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲವಾದರೂ,  ಏಪ್ರಿಲ್-ಮೇ ತಿಂಗಳಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. 2014ರ ಚುನಾವಣಾ ವೇಳಾಪಟ್ಟಿಯನ್ನು ಮಾರ್ಚ್ 5, 2014ರಂದು ಘೋಷಿಸಲಾಯಿತು ಮತ್ತು 2019ರ ಚುನಾವಣಾ ವೇಳಾಪಟ್ಟಿಯನ್ನು ಮಾರ್ಚ್ 10ರಂದು ಘೋಷಿಸಲಾಯಿತು. ಹೀಗಿರುವಾಗ ಈ ಬಾರಿಯ ಚುನಾವಣೆಯನ್ನು ಸದ್ಯದಲ್ಲೇ ಘೋಷಿಸಲಾಗುತ್ತದೆ ಎನ್ನಲಾಗುತ್ತಿದೆ.

ಮಾರ್ಚ್ 5 ರಂದು ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಅರುಣ್ ಗೋಯೆಲ್ ಪಶ್ಚಿಮ ಬಂಗಾಳಕ್ಕೆ ಹೋಗಿದ್ದರು, ಆದರೆ ಆರೋಗ್ಯ ಸಂಬಂಧಿ ಕಾರಣಗಳನ್ನು ಉಲ್ಲೇಖಿಸಿ ಇದ್ದಕ್ಕಿದ್ದಂತೆ ದೆಹಲಿಗೆ ಮರಳಿದರು.

ಮಾರ್ಚ್ 8 ರಂದು, ಚುನಾವಣೆಯ ಸಮಯದಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸುವ ಬಗ್ಗೆ ಸಭೆ ಇತ್ತು, ಅವರು ಆ ಸಭೆಗೆ ಹೋಗಲಿಲ್ಲ. ಆದರೆ ಅದೇ ದಿನ ಅವರು ನೇರವಾಗಿ ರಾಜೀನಾಮೆ ನೀಡಿದರು. ಅರುಣ್ ಗೋಯೆಲ್ ಅವರ ರಾಜೀನಾಮೆಗೂ ಚುನಾವಣಾ ವೇಳಾಪಟ್ಟಿಗೂ ಸಂಬಂಧವಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹೇಮಂತ್ ಅತ್ರಿ, “ಮುಂದಿನ ಕೆಲವು ದಿನಗಳಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಬೇಕಾಗಿತ್ತು. ಇದು ಖಂಡಿತವಾಗಿಯೂ ಪಶ್ಚಿಮ ಬಂಗಾಳದ ಚುನಾವಣೆಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿದೆ ಎಂದು ತೋರುತ್ತದೆ. ಬಹುಶಃ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ದಿನಾಂಕವನ್ನು ಹೊಂದಿಸುವ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು” ಎಂದು ಅವರು ಹೇಳಿದರು.

ʼಪ್ರಶ್ನಾರ್ಹವಾದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ’

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತದ ಸಾರ್ವತ್ರಿಕ ಚುನಾವಣೆಗಳು ಜಾಗತಿವಾಗಿ ಬಹಳ ದೊಡ್ಡ ಘಟನೆ. ಆದರೆ ಇತ್ತೀಚೆಗೆ ಚುನಾವಣೆಯಲ್ಲಿನ ಪಾರದರ್ಶಕತೆಯ ಕುರಿತು ಪ್ರಶ್ನೆಗಳು ಹುಟ್ಟುತ್ತಿವೆ. ಇತ್ತೀಚಿನ ತಿಂಗಳುಗಳಲ್ಲಿ ಇವಿಎಂಗಳ ಬಳಕೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಇದು ಭಾರತದ ಚುನಾವಣಾ ಆಯೋಗದ ನಿಷ್ಪಕ್ಷಪಾತಿತನ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹೇಮಂತ್ ಅತ್ರಿ, “ಈ ಹಠಾತ್ ರಾಜೀನಾಮೆಯಿಂದ ಅತಿದೊಡ್ಡ ಮಟ್ಟದಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ನಷ್ಟವಾಗಿದೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕಳೆದ 10 ವರ್ಷಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ” ಎನ್ನುತ್ತಾರೆ.

ಆದರೆ, ಅದೇ ಸಮಯದಲ್ಲಿ ಈ ರಾಜೀನಾಮೆಯು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಎಡಿಆರ್ ಸದಸ್ಯ ಜಗದೀಪ್ ಛೋಕರ್ ಅಭಿಪ್ರಾಯಪಟ್ಟಿದ್ದಾರೆ.

“ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಈಗಾಗಲೇ ಪ್ರಶ್ನಾರ್ಹವಾಗಿದೆ. ರಾಜೀನಾಮೆಗೆ ನಿಜವಾದ ಕಾರಣ ಹೊರಬರದ ಹೊರತು, ಅದು ಚುನಾವಣಾ ಆಯೋಗದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಹೇಳಿದರು.

ಹೊಸ ಕಾನೂನಿನ ಅಡಿಯಲ್ಲಿ ಆಯುಕ್ತರನ್ನು ನೇಮಿಸಲಾಗುವುದು

ಚುನಾವಣಾ ಆಯೋಗದಲ್ಲಿ ಇಬ್ಬರು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿ ಇದ್ದು, ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಉಳಿದಿದ್ದಾರೆ.

ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ವ್ಯವಸ್ಥೆ ಮಾಡುವಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿತ್ತು. ಆದಾಗ್ಯೂ, ಕೇಂದ್ರ ಸರ್ಕಾರವು ನೇಮಕಾತಿಗಾಗಿ ಹೊಸ ಕಾನೂನನ್ನು ತಂದಿತ್ತು.

ಇದರ ಅಡಿಯಲ್ಲಿ, ಆಯ್ಕೆ ಸಮಿತಿಯು ಚುನಾವಣಾ ಆಯೋಗವನ್ನು ನೇಮಿಸಬೇಕಾಗುತ್ತದೆ, ಇದರಲ್ಲಿ ಭಾರತದ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಸಚಿವ ಸಂಪುಟದ ಸಚಿವರು ಇರುತ್ತಾರೆ.

ಆದರೆ ಹೊಸ ಆಯುಕ್ತರನ್ನು ತಕ್ಷಣ ನೇಮಿಸಿದರೂ, ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಕಾಗುವಷ್ಟು ಸಮಯವನ್ನು ಹೊಂದಿರುತ್ತಾರೆಯೇ ಎಂದು ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ.

ಹಿರಿಯ ಪತ್ರಕರ್ತ ಹೇಮಂತ್ ಅತ್ರಿ, “ಈಗ ರಾಜೀವ್ ಕುಮಾರ್ ಮಾತ್ರ ಚುನಾವಣಾ ಆಯೋಗದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇಬ್ಬರು ಹೊಸ ಆಯುಕ್ತರನ್ನು ನೇಮಿಸಿದರೂ, ಅವರು ಕೆಲಸವನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ” ಎನ್ನುತ್ತಾರೆ.

ಆಧಾರ: ಬಿಬಿಸಿ

You cannot copy content of this page

Exit mobile version