Saturday, June 28, 2025

ಸತ್ಯ | ನ್ಯಾಯ |ಧರ್ಮ

ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಯಾಕೆ? ಪತ್ರಿಕಾಗೋಷ್ಠಿಯ ಫುಲ್ ಡೀಟೇಲ್ಸ್ ಇಲ್ಲಿದೆ

ಶಿವಮೊಗ್ಗದಲ್ಲಿ ವಂಶಪಾರಂಪರ್ಯ ರಾಜಕಾರಣ ಹಾಗೂ ಏಕವ್ಯಕ್ತಿ ಚಕ್ರಾಧಿಪತ್ಯದ ವಿರುದ್ಧ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ತಿರುಗಿ ಬಿದ್ದಿದ್ದಾರೆ. ‘ಹೆಚ್ಚೆಂದರೆ ನನ್ನನ್ನು ಪಕ್ಷ ಉಚ್ಚಾಟಿಸಬಹುದು, ಆದರೆ ನಾನು ಗೆದ್ದು ತೋರಿಸಿದ ಮೇಲೆ ಮತ್ತೆ ಬಿಜೆಪಿ ಬಾಗಿಲು ತೆರೆಯುತ್ತೆ. ನಾನು ಎಲ್ಲದಕ್ಕೂ ಸಿದ್ದನಾಗಿಯೇ ನಿಂತಿದ್ದೇನೆ’ ಎಂದು ಈಶ್ವರಪ್ಪ ಗುಡುಗಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ. ಇದಕ್ಕೆ ಸರಿಯಾಗಿ ಹಿಂದೆ ತನ್ನ ಶಾಸಕ ಸ್ಥಾನ ಕೈತಪ್ಪಿದ್ದಕ್ಕೆ ಪಕ್ಷದ ವರಿಷ್ಠರು ನೀಡಿದ ಭರವಸೆಯನ್ನು ಮತ್ತೆ ನೆನಪಿಸಿಕೊಂಡು, ಶಿವಮೊಗ್ಗ ಅಥವಾ ಹಾವೇರಿ ಲೋಕಸಭಾ ಕ್ಷೇತ್ರ ಬಿಟ್ಟುಕೊಡುವ ಭರವಸೆ ಈಗ ಎಲ್ಲಿ ಹೋಯಿತು ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ವಂಶ ಪಾರಂಪರ್ಯದ ಬಗ್ಗೆ ಹೆಚ್ಚು ಮಾತಾಡಲ್ಲ. ರಾಜ್ಯದ ಬಿಜೆಪಿ ಯಲ್ಲಿ ಕೂಡ ಕಾಂಗ್ರೆಸ್ ಸಂಸ್ಕ್ರತಿ ಬೆಳೆಯುತ್ತಿರುವುದು ದೌರ್ಭಾಗ್ಯ. ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗಾದ ಅನ್ಯಾಯ ಸರಿಪಡಿಸುವ ಭರವಸೆ ಪಕ್ಷದ ನಾಯಕರಿಂದ ಸಿಕ್ಕಿತ್ತು. ನನಗೆ ಟಿಕೆಟ್ ಕೈತಪ್ಪಿದ ಶುರುವಿನಲ್ಲಿ ಯಡಿಯೂರಪ್ಪ ಸಹ ಹಾವೇರಿಯಲ್ಲಿ ಕಾಂತೇಶ್ ಗೆ ಟಿಕೆಟ್ ಕೊಡಿಸಿ ಗೆಲ್ಲಿಸುವೆ ಎಂದಿದ್ದರು. ಆದರೆ ಅಲ್ಲಿ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಅವರು ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಅವರನ್ನು ಅಲ್ಲಿ ಒತ್ತಾಯಪೂರ್ವಕವಾಗಿ ನಿಲ್ಲಿಸಲಾಗಿದೆ. ನನಗೆ ಅಥವಾ ಕಾಂತೇಶ್ ಗೆ ಟಿಕೆಟ್ ಕೊಡಿಸುವುದಾಗಿ ಹೇಳಿ, ಈಗ ಬೊಮ್ಮಾಯಿ ಮತ್ತು ಶೋಭಾ ಪರ ಮಾತ್ರ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಹೈಕಮಾಂಡ್ ಇನ್ನೂ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಯೇ ನಡೆಸದಿರುವ ಸಂದರ್ಭದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಮುನ್ನ ಶೋಭಾ ಕರಂದ್ಲಾಜೆ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚನೆಯನ್ನು ಹೇಗೆ ಕೊಟ್ಟರು. ಬೊಮ್ಮಾಯಿ ಕೂಡ ಕಾಂತೇಶ್ ಪರ ನಿಲುವು ವ್ಯಕ್ತಪಡಿಸಿದ್ದರು. ಬೊಮ್ಮಾಯಿಗೆ ಇಷ್ಟವಿಲ್ಲದಿದ್ದರೂ ಟಿಕೆಟ್ ಕೊಡಿಸಿದ್ದಾರೆ. ಶೋಭಾ ವಿರುದ್ದ ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರೇ ‘ಗೋ ಬ್ಯಾಕ್ ಶೋಭಾ’ ಕೂಗೆದ್ದರೂ ಬೆಂಗಳೂರು ಉತ್ತರದಿಂದ ಟಿಕೆಟ್ ಕೊಡಿಸಿದ್ದಾರೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷ ಬಿಟ್ಟು ಹೋಗಬಾರದು ಎಂದವ ನಾನು. ಆದರೆ ಪಕ್ಷವೇ ತಾಯಿ ಎಂದಾಗ ಆಕೆಯ ಕತ್ತು ಹಿಸುಕುವ ಪ್ರಯತ್ನ ನಡೆದಿರುವಾಗ ಸುಮ್ಮನೆ ಇರಬೇಕಾ.? ಹೀಗಾಗಿ ನನ್ನ ಸ್ಪರ್ಧೆ ಅನಿವಾರ್ಯ ಎಂದು ಈಶ್ವರಪ್ಪ ಹೇಳಿದರು.

ಬೇಕಾದವರಿಗೆ ಟಿಕೆಟ್ ಕೊಡಿಸಿದೀರಲ್ಲ ಅದೆಷ್ಟು ಜನರ ಗೆಲ್ಲಿಸುವಿರೋ ನೋಡುವೆ. ಒಂದು ಕುಟುಂಬದ ಹಿಡಿತದಿಂದ ಪಕ್ಷ ತಪ್ಪಿಸಲು ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುತ್ತೇನೆ. ಇದು ಉದ್ವೇಗದ ತೀರ್ಮಾನ ಅಲ್ಲ. ಸಿದ್ದಾಂತದ ನಿರ್ಧಾರ ಎಂಬುದಾಗಿ ಗುಡುಗಿದ್ದಾರೆ.

ಸ್ಪರ್ಧೆ ಮಾಡಿದರೆ ಪಕ್ಷ ನೋಟೀಸ್ ನೀಡಿ ಉಚ್ಚಾಟನೆ ಮಾಡಬಹುದು. ಚುನಾವಣೆ ಬಳಿಕ ಗೆದ್ದು ಮತ್ತೆ ಪಕ್ಷ ಸೇರ್ಪಡೆಗೆ ಅವಕಾಶ ಇದ್ದೇ ಇದೆ. ನಾನು ಮೋದಿ ಪರವಾಗಿಯೇ ಇದ್ದೇನೆ. ಚುನಾವಣೆಯಲ್ಲಿ ಈಗ ಬಿಜೆಪಿ ಟಿಕೆಟ್ ಪಡೆದವರೆಲ್ಲರಿಗಿಂತ ಒಂದು ಗುಲಗಂಜಿ ನಾನು ಹೆಚ್ಚಿದ್ದೇನೆ. ಈಶ್ವರಪ್ಪ ಯಾವುದೇ ಒಂದು ಜಾತಿಗೆ ಸೀಮಿತವಾದವನಲ್ಲ ಎಂಬುದು ಫಲಿತಾಂಶದ ಮೂಲಕ ಗೊತ್ತಾಗುತ್ತದೆ. ಮಾತು ಕೊಟ್ಟು ಮೋಸ ಮಾಡಿದವರಿಗೆ ಪಾಠ ಕಲಿಸೋಣ. ನಾಮಪತ್ರ ಸಲ್ಲಿಕೆಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಬರಬೇಕು. ಆ ಮೂಲಕ ಒಂದು ಕುಟುಂಬದ ಹಿಡಿತದಿಂದ ಪಕ್ಷವನ್ನು ಬಿಡಿಸೋಣ ಎಂದು ಹೇಳಿದರು.

ಸದಾನಂದ ಗೌಡ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು, ಪ್ರತಾಪ ಸಿಂಹ ಅವರು ಹಿಂದುತ್ವ ಪರ ಧ್ವನಿ ಎತ್ತಿದ್ದೇ ಟಿಕೆಟ್ ತಪ್ಪಲು ಕಾರಣ. ಒಬ್ಬ ಮಗ ಎಂ.ಪಿ. ಇನ್ನೊಬ್ಬ ಶಾಸಕ ಜೊತೆಗೆ ಜಿಜೆಪಿ ರಾಜ್ಯಾಧ್ಯಕ್ಷ. ನನ್ನ ಎದೆ ಬಗೆದರೆ ರಾಮ ಮತ್ತು ಮೋದಿ.. ಯಡಿಯೂರಪ್ಪ ಎದೆ ಬಗೆದರೆ ಇಬ್ಬರು ಮಕ್ಕಳು ಮತ್ತು ಶೋಭಾ. ಈಗ ಶೆಟ್ಟರ್ ಬೆಳಗಾವಿ ಅಭ್ಯರ್ಥಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಂದರೆ ಅವರೇ ಹೈಕಮಾಂಡ್. ಮೋದಿ ಇಡೀ ದೇಶ ನನ್ನ ಪರಿವಾರ ಎಂದರೆ ರಾಜ್ಯದಲ್ಲಿ ಬಿಜೆಪಿ ಸ್ಥಿತಿಯು ಪರಿವಾರದ ಪರಿಕಲ್ಪನೆಯು ಕಾಂಗ್ರೆಸ್ ನಂತಾಗಿದೆ ಎಂದರು.

ಶಿವಮೊಗ್ಗದಲ್ಲಿ ಇನ್ನೇನು ಗೆದ್ದೇ ಬಿಡುವೆನೆಂಬ ಉಮೇದಿನಲ್ಲಿದ್ದ ಬಿಜೆಪಿಗೆ ಈಗ ಈಶ್ವರಪ್ಪ ಬಂಡಾಯ ನುಂಗಲಾರದ ತುತ್ತಾಗಿದೆ. ಈಶ್ವರಪ್ಪ ಪ್ರತ್ಯೇಕ ಸ್ಪರ್ಧೆಯಿಂದ ಶಿವಮೊಗ್ಗ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಎಂಬ ಪ್ರಶ್ನೆಗಿಂತ, ಬಿಜೆಪಿಗೆ ಈ ಬಾರಿ ಶಿವಮೊಗ್ಗ ಕಬ್ಬಿಣದ ಕಡಲೆಯಂತಾಗಿರುವುದು ಮಾತ್ರ ಸತ್ಯ. ಇಬ್ಬರ ಜಗಳದ ನಡುವೆ ಮೂರನೆಯವರಾಗಿ ಗೀತಾ ಶಿವರಾಜಕುಮಾರ್ ಆಯ್ಕೆ ಸಲೀಸಾದರೂ ಆಶ್ಚರ್ಯ ಪಡಬೇಕಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page