ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸದಾ ಹರಿಹಾಯುವ ಸುಬ್ರಮಣಿಯಮ್ ಸ್ವಾಮಿ ಇನ್ನೊಮ್ಮೆ ತಮ್ಮ ಮಾತಿನ ಚಾಟಿಯನ್ನು ಬೀಸಿದ್ದಾರೆ.
ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಟ್ವೀಟ್ ಮಾಡಿರುವ ಅವರು, ಮೋದಿಯವರಿಂದ ರಾಜೀನಾಮೆ ರಾಜೀನಾಮೆ ಪಡೆಯಬೇಕೆಂದು ಪಕ್ಷವನ್ನು ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಹೇಳಿಕೆಯಲ್ಲಿ “ಲಡಾಖ್ ಪ್ರದೇಶದಲ್ಲಿ ಭಾರತದ 4067 ಚದರ KM ಭೂಮಿಯನ್ನು ಚೀನಾ ಆಕ್ರಮಿಸಿದಾಗ ಮೋದಿ ಹೇಡಿಯಂತೆ ಇದ್ದರು. ಮಾಲ್ಡೀವ್ಸ್ ನಾಯಕರು ಭಾರತೀಯರು ತಮ್ಮ ದೇಶವನ್ನು ತೊರೆಯುವಂತೆ ಕರೆ ನೀಡಿದಾಗ ಮೋದಿ ಅಲುಗಾಡಲಿಲ್ಲ. ಈಗ ಬಾಂಗ್ಲಾ ಪ್ರಧಾನಿಯನ್ನು ಮುಸ್ಲಿಮರು ಬೆನ್ನಟ್ಟುತ್ತಿರುವಾಗ ನಡುಗುತ್ತಿದ್ದಾರೆ. ಇನ್ನು ನೇಪಾಳದ ವಿಷಯ ಕೇಳಲೇಬೇಡಿ.. ಮೋದಿಯ ಬಳಿ ರಾಜೀನಾಮೆ ಕೇಳಬೇಕಿದೆ” ಎಂದಿದ್ದಾರೆ.
ಬಾಂಗ್ಲಾ ದೇಶದ ರಾಜಕೀಯ ಪಲ್ಲಟಗಳ ಕುರಿತು ಮೋದಿ ಬಾಯಿ ಬಿಡುತ್ತಿಲ್ಲ. ಚೀನಾ, ಪಾಕಿಸ್ತಾನದ ಸರ್ಕಾರಗಳು ಬಾಂಗ್ಲಾ ಸರ್ಕಾರ ರಚನೆಯಲ್ಲಿ ಪಾತ್ರವಹಿಸುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮೋದಿ ಏನು ನಡೆದಿಲ್ಲವೆನ್ನುವಂತೆ ಮೌನವಾಗಿದ್ದಾರೆ. ಶೇಖ್ ಹಸೀನಾ ಅವರ ಕೈ ಬಿಡುವ ಉದ್ದೇಶವನ್ನೇನಾದರೂ ಮೋದಿ ಹೊಂದಿದ್ದಾರೆಯೇ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶದ ವಿಚಾರದಲ್ಲೂ ʼಯಾರೂ ಬಂದಿಲ್ಲʼ ಎನ್ನುವ ರೀತಿಯ ಧೋರಣೆ ಸರಿಯಲ್ಲ, ಮೋದಿಯಾಗಲೀ, ವಿದೇಶಾಂಗ ಸಚಿವರಾಗಲೀ ಈ ಕುರಿತು ಇದುವರೆಗೆ ಒಂದು ಹೇಳಿಕೆಯನ್ನು ಸಹ ನೀಡಿಲ್ಲ. ಏಷ್ಯಾ ಖಂಡದಲ್ಲಿ ಭಾರತದ ಸ್ಥಾನಮಾನದ ಪ್ರಶ್ನೆಯಿದು ಎನ್ನುವ ಅರ್ಥದಲ್ಲಿ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಕಳೆದ ಒಂದೆರಡು ವರ್ಷಗಳಿಂದ ಸುಬ್ರಮಣಿಯನ್ ಸ್ವಾಮಿ ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಲೇ ಇದ್ದಾರೆ. ಆದರೆ ಪಕ್ಷ ಮತ್ತು ಸರ್ಕಾರ ಎರಡೂ ಅವರನ್ನು ಪೂರ್ತಿಯಾಗಿ ನಿರ್ಲಕ್ಷಿಸಿವೆ.