Thursday, June 20, 2024

ಸತ್ಯ | ನ್ಯಾಯ |ಧರ್ಮ

ಕೆನಡಾ ಪ್ರಧಾನಿಯ ಖಾಲಿಸ್ತಾನ್‌ ಪ್ರೇಮ?: ಹದಗೆಡುತ್ತಿದೆ ಇಂಡೋ-ಕೆನಡಾ ಸಂಬಂಧ!


ಬೆಂಗಳೂರು:
ಪಂಜಾಬ್‌ನ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆಯನ್ನು ಕೆನಡಾದ ವಿನ್ನಿಪೆಗ್ ನಗರದಲ್ಲಿ ಅಪರಿಚಿತ ವ್ಯಕ್ತಿಗಳು ಕೊಂದಿರುವುದು ಸಪ್ಟೆಂಬರ್‌, 21 ಗುರುವಾರದಂದು ವರದಿಯಾಗಿದೆ. ಈತನ ಮೇಲೆ ಕೊಲೆ, ಕೊಲೆಗೆ ಸಂಚು, ದರೋಡೆ ಸೇರಿದಂತೆ ಒಟ್ಟು 18 ಪ್ರಕರಣಗಳು ದಾಖಲಾಗಿದ್ದವು.

ಸುಖದುಲ್ ಸಿಂಗ್

ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿರುವ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ನೀಡಿದ ಹೇಳಿಕೆಯ ಬೆನ್ನಲ್ಲೇ ಈ ಹತ್ಯೆ ನಡೆದಿದೆ. ಟ್ರೂಡೋ ಹೇಳಿಕೆ ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧ ಹದಗೆಡುತ್ತಿರುವುದನ್ನು ತೋರಿಸುತ್ತದೆ. ಮಾತ್ರವಲ್ಲ, ಕೆನಡಾ ಪ್ರಧಾನಿ ಖಾಲಿಸ್ತಾನಿಗಳ ಪರ ಇರುವ ವಿಚಾರ ಭಾರೀ ಚರ್ಚೆಯಲ್ಲಿದೆ.

ಯಾಕೆ ಕೆನಡಾದ ಸಿಖ್ಖರು ಸುದ್ದಿಯಲ್ಲಿದ್ದಾರೆ?

2021 ರ ಜನಗಣತಿಯ ಪ್ರಕಾರ ಕೆನಡಾದ ಒಟ್ಟು ಜನಸಂಖ್ಯೆ ಸರಿ ಸುಮಾರು 37 ಮಿಲಿಯನ್. ಕೆನಡಾದಲ್ಲಿ 1.4 ಮಿಲಿಯನ್  ಭಾರತೀಯರಿದ್ದಾರೆ.  ಅವರಲ್ಲಿ ಸುಮಾರು 7,70,000 ಜನ ((ಒಟ್ಟು ಜನಸಂಖ್ಯೆಯ 1.7%)  ಸಿಖ್ಖರು. 2011ರ ಭಾರತದ ಜನಗಣತಿಯ ಪ್ರಕಾರ ಭಾರತದಲ್ಲಿ 1.7% ಸಿಖ್ಖರಿದ್ದಾರೆ. ಕೆನಡಾಕ್ಕೆ ವಲಸೆ ಹೋಗಿರುವ ಪಂಜಾಬಿನ ಸಿಖ್ಖರು ಇಂದು ಆ ದೇಶದ ಪ್ರಮುಖ ಸಮುದಾಯವಾಗಿ ಬದಲಾಗಿದ್ದಾರೆ. ಕೆನಡಾದಲ್ಲಿನ ಸೈನ್‌ಬೋರ್ಡ್‌ಗಳು ಸಹ ಪಂಜಾಬಿ ಭಾಷೆಯಲ್ಲಿವೆ.

ಭಾರತದಲ್ಲಿ  ‘ವಾರಿಸ್ ಪಂಜಾಬ್ ದೇ’ನ ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್  2023ರ ಏಪ್ರಿಲ್‌ನಲ್ಲಿ ಪೊಲೀಸರ ಮೇಲೆ ನಡೆಸಿದ ದಾಳಿಯ ಆರೋಪದಲ್ಲಿ ತನ್ನ ಬೆಂಬಲಿಗರೊಂದಿಗೆ ಬಂಧಿಸಲ್ಪಟ್ಟು, ಸದ್ಯ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾನೆ. ಈ ಮೂಲಕ ಅಮೃತಪಾಲ್‌ನ ಖಾಲಿಸ್ತಾನಕ್ಕಾಗಿ ನಡೆಯುತ್ತಿದ್ದ ಹೋರಾಟ ನಿಂತು ಹೋಯ್ತು.

ಅಮೃತಪಾಲ್ ಸಿಂಗ್

ಈಗ ಕೆನಡಾ ಪ್ರಧಾನಿ ಭಾರತದ ಹಸ್ತಾಕ್ಷೇಪದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರೆ, ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳೂ ಭಾರತದ ಬಗ್ಗೆ ದೂರಲು ಶುರು ಮಾಡಿವೆ. ಜಿ20 ಶೃಂಗಸಭೆಗೆ ಭಾರತಕ್ಕೆ ಬಂದ ಅಮೇರಿಕಾದ ಅಧ್ಯಕ್ಷ ಜೋ ಬಿಡನ್ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಟಿ ನಡೆಸದೆ, ನೇರ ವಿಯೇಟ್ನಾಂಗೆ ಹೋಗಿ ಅಲ್ಲಿನ ರಾಜಧಾನಿ ಹನಾಯ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಪತ್ರಿಕಾ ಸ್ವಾತಂತ್ರ್ಯ ಕುಸಿದಿದೆ ಎಂದು ಹೇಳಿಕೆ ನೀಡಿದ್ದರು.

ಅಮೇರಿಕಾದಲ್ಲಿ ಇದೇ ವರ್ಷ ಖಾಲಿಸ್ತಾನಿ ಸಪರೇಟಿಸ್ಟ್‌ ಭಯೋತ್ಪಾದಕರಾದ ಹರ್ದೀಪ್ ಸಿಂಗ್ ನಿಜ್ಜಾರ್, ಪರಮ್ಜಿತ್ ಸಿಂಗ್ ಪಂಜ್ವಾರ್ ಮತ್ತು ಅವತಾರ್ ಸಿಂಗ್ ಖಾಂಡಾ ಹತ್ಯೆಯಾದ ನಲವತ್ತೈದು ದಿನಗಳ ನಂತರ ಜುಲೈನಲ್ಲಿ ಸಿಖ್ಸ್‌ ಫಾರ್‌ ಜಸ್ಟೀಸ್‌ನ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ನಾಪತ್ತೆಯಾಗಿದ್ದ ಸುದ್ದಿ ವೈರಲ್‌ ಆಗಿತ್ತು. ಹತ್ಯೆಯ ಊಹಾಪೋಹಗಳೂ ಎದ್ದಿದ್ದವು. ಆದರೆ ಗುರುಪತ್ವಂತ್ ಸಿಂಗ್ ಪನ್ನುನ್‌ ಇನ್ನೂ ಬದುಕಿದ್ದು, ತನ್ನ ವಿಡಿಯೋವೊಂದರಲ್ಲಿ ಭಾರತೀಯರಿಗೆ ಬೆದರಿಕೆ ಹಾಕಿದ್ದಾನೆ.

ಇದೇ ತಿಂಗಳು ಮಾಡಿರುವ ಈ ವಿಡಿಯೋದಲ್ಲಿ ಕೆನಡಾದಲ್ಲಿರುವ ಭಾರತೀಯರು ಕೆನಡಾವನ್ನು ತೊರೆಯುವಂತೆ ಹೇಳಿದ್ದ. “ಇಂಡೋ-ಕೆನಡಿಯನ್ ಹಿಂದೂಗಳೇ, ನೀವು ಕೆನಡಾ ಮತ್ತು ಕೆನಡಾದ ಸಂವಿಧಾನಕ್ಕೆ ನಿಮ್ಮ ನಿಷ್ಠೆಯನ್ನು ತೋರಿಸಿಲ್ಲ. ನೀವು ಕೆನಡಾವನ್ನು ಬಿಟ್ಟು, ಭಾರತಕ್ಕೆ ಮರಳಿ. ಖಾಲಿಸ್ತಾನ್ ಪರ ಸಿಖ್ಖರು ಯಾವಾಗಲೂ ಕೆನಡಾಕ್ಕೆ ನಿಷ್ಠರಾಗಿದ್ದಾರೆ. ಅವರು ಯಾವಾಗಲೂ ಕೆನಡಾದ ಪರವಿರಲಿದ್ದಾರೆ ಮತ್ತು ಅವರ ಎಂದೆಂದಿಗೂ ಕೆನಡಾದ ಕಾನೂನು ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯುತ್ತಾರೆ,” ಎಂದಿದ್ದ. ಭಾರತ ಕೆನಡಾವನ್ನು ದೂರುತ್ತಿದೆ, ಆದರೆ ಈ ಗುರುಪತ್ವಂತ್ ಸಿಂಗ್ ಪನ್ನುನ್‌ ಮಾತ್ರ ಅಮೇರಿಕಾದಲ್ಲಿದ್ದಾನೆ.

ಗುರುಪತ್ವಂತ್ ಸಿಂಗ್

ಜೂನ್‌ನಲ್ಲಿ ಸರ್ರೆಯಲ್ಲಿ ನಡೆದ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಭಾರತೀಯ ಸರ್ಕಾರಿ ಏಜೆಂಟರಿಗೂ ಸಂಬಂಧ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ ಮರುದಿನವೇ ಈತ ಈ ಬೆದರಿಕೆ ಹಾಕಿದ್ದಾನೆ.  

ದಿ ವೈರ್‌ಗೆ ಪ್ರಕಟಿಸಿರುವ  ಹಿರಿಯ ಪತ್ರಕರ್ತ ಜಗ್ತಾರ್‌ ಸಿಂಗ್‌ ಹೇಳಿಕೆಯಲ್ಲಿ “ಖಾಲಿಸ್ತಾನವು ಪ್ರಜಾಪ್ರಭುತ್ವದ ಡೊಮೇನ್‌ನಲ್ಲಿ ಎಂದಿಗೂ ಒಂದು ಸಮಸ್ಯೆಯಾಗಿರಲಿಲ್ಲ. ಭಾರತ ಸರ್ಕಾರ ಇದನ್ನು ರಾಜಕೀಯ ಸವಾಲಾಗಿ ತೆಗೆದುಕೊಳ್ಳಬೇಕು. ಖಾಲಿಸ್ತಾನ್ ಹೋರಾಟವನ್ನು ನಿಲ್ಲಿಸಬೇಕು. ಏಕೆಂದರೆ ಸಿಖ್ಖರಲ್ಲಿ ಒಂದು ಪರಕೀಯತೆಯ ಭಾವನೆ ಬಂದಿದೆ. ಪಂಜಾಬ್‌ನ ಬಹುತೇಕ ಪ್ರತಿ ಮೂರನೇ ಕುಟುಂಬವು ಈಗ ಕೆನಡಾದಲ್ಲಿ ಅಥವಾ ಬೇರೆ ದೇಶಗಳಲ್ಲಿ ನೆಲೆಸಿದೆ. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಭಾರತ ಏಕೆ ಮೌನವಾಗಿದೆ?” ಎಂದು ಪ್ರಶ್ನಿಸಿದ್ದಾರೆ.

ಯುಎಪಿಎ ಮತ್ತು ಎನ್‌ಎಸ್‌ಎ ಕಾರಣದಿಂದಾಗಿ ಅನೇಕ ಜನರು ಖಾಲಿಸ್ತಾನದ ಪರವಹಿಸಿ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಭಾರತದಲ್ಲಿ ಅರಸ್ಟ್‌ ಆದರೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇದು ನಡೆಯುತ್ತಲೇ ಇದೆ.

2022 ರಲ್ಲಿ ಪಂಜಾಬ್ ಅಸೆಂಬ್ಲಿ ಚುನಾವಣೆಗಿಂತ ಮೊದಲು ಬಿಜೆಪಿ ಸಂತೃಸ್ತರಿಗೆ ಐದು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿತ್ತು. 1997ರಲ್ಲಿ ಶಿರೋಮಣಿ ಅಕಾಲಿದಳದ ಆಗಿನ ಅಧ್ಯಕ್ಷ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಬರವಸೆ ನೀಡಿದ್ದರು, ಆದರೆ ಅದು ನೆರವೇರಲೇ ಇಲ್ಲ. ಹೀಗಾಗಿ ಒಂದು ತೆರನಾದ ಅಸಮಧಾನ ಬೆಳೆಯುತ್ತಲೇ ಹೋಯಿತು.

ಖಾಲಿಸ್ತಾನಿ ಪ್ರೇಮಿಯೇ ಕೆನಡಾ ಪ್ರಧಾನಿ?

ಭಾರತದಲ್ಲಿ ಖಾಲಿಸ್ತಾನ ಪರ ನಿಲುವು ಕಡಿವೆಯಾದರೂ ವಿದೇಶದಲ್ಲಿ ಹೆಚ್ಚಿದೆ. ಭಾರತ ಖಾಲಿಸ್ತಾನಿ ಹೋರಾಟದ ಪ್ರಮುಖ ಭೂಮಿಕೆಯಾಗಿರುವುದರಿಂದ ಇಲ್ಲಿನ ಕಾನೂನುಗಳ ಕಾರಣದಿಂದ ಖಾಲಿಸ್ತಾನ ಪರ ಘೋಷಣೆಗಳು ಕಡಿಮೆಯಾದರೂ, ಕೆನಡಾ ಸೇರಿದಂತೆ ಪಶ್ಚಿಮದ ರಾಷ್ಟ್ರಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇದು ಮುಂದುವರಿದಿದೆ.

1985 ರಲ್ಲಿ 329 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಫ್ಲೈಟ್ 182 ರ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಬ್ರಿಟಿಷ್ ಕೊಲಂಬಿಯಾದ ಬರ್ನಾಬಿಯಲ್ಲಿ ನೆಲೆಸಿದ್ದ ತಲ್ವಿಂದರ್ ಸಿಂಗ್ ಪರ್ಮಾರ್ ಖಾಲಿಸ್ತಾನಿ ಉಗ್ರಗಾಮಿ ಗುಂಪು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥ. 1981 ರಲ್ಲಿ ಇಬ್ಬರು ಪಂಜಾಬ್ ಪೊಲೀಸರನ್ನು ಕೊಂದ ಆರೋಪದ ಮೇಲೆ 1983 ರಲ್ಲಿ ಜರ್ಮನಿಯಲ್ಲಿ ಈತನನ್ನು ಬಂಧಿಸಲಾಯಿತು. 1984 ರಲ್ಲಿ ಬಿಡುಗಡೆಯಾದ ಮೇಲೆ ತಕ್ಷಣವೇ ಕೆನಡಾಕ್ಕೆ ಮರಳಿ ವಿಮಾನ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ. ಇದು ಇತಿಹಾಸದಲ್ಲಿಯೇ ಅತ್ಯಂತ ಭೀಕರ ದಾಳಿಯಾಗಿತ್ತು. ಆಗ ಪ್ರಧಾನಿಯಾಗಿದ್ದ ಈಗಿನ ಕೆನಡಾ ಪ್ರಧಾನಿಯ ತಂದೆ ಪಿಯರೆ ಟ್ರುಡೊ ಪ್ರಧಾನಿಯಾಗಿದ್ದಾಗ ಕೆನಡಾ ಸರ್ಕಾರ ಪರ್ಮಾರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿತ್ತು.

ತಲ್ವಿಂದರ್ ಸಿಂಗ್ ಪರ್ಮಾರ್

ಕೆನಡಾದ ಪ್ರಸಿದ್ಧ ಪತ್ರಕರ್ತ ಟೆರ್ರಿ ಮಿಲೆವ್ಸ್ಕಿ ತನ್ನ ಪುಸ್ತಕದಲ್ಲಿ  “ಭಾರತವು ರಾಣಿಗೆ ಸಾಕಷ್ಟು ಗೌರವವನ್ನು ನೀಡದೇ ಇದ್ದರಿಂದ ತಲ್ವಿಂದರ್ ಪರ್ಮಾರನನ್ನು ಭಾರತಕ್ಕೆ ಹಸ್ತಾಂತರಿಸಲು 1982 ರಲ್ಲಿ ಪಿಯರೆ ಟ್ರುಡೊ ಅವರ ಸರ್ಕಾರ ನಿರಾಕರಿಸಿತು. ಅದು ತಮಾಷೆಯಲ್ಲ. ಆದರೆ ಕೆನಡಾದ ರಾಜತಾಂತ್ರಿಕರು ಕಾಮನ್‌ವೆಲ್ತ್ ದೇಶಗಳ ನಡುವಿನ ಹಸ್ತಾಂತರದ ಪ್ರೋಟೋಕಾಲ್‌ಗಳು ಭಾರತಕ್ಕೆ ಅನ್ವಯಿಸುವುದಿಲ್ಲ ಎಂದು ಭಾರತೀಯ ಸಹವರ್ತಿಗಳಿಗೆ ಹೇಳಿದರು. ಏಕೆಂದರೆ ಭಾರತವು ರಾಣಿಯನ್ನು ಕಾಮನ್‌ವೆಲ್ತ್‌ನ ಮುಖ್ಯಸ್ಥೆಯನ್ನಾಗಿ ಮಾತ್ರ ನೋಡಿದೆಯೇ ಹೊರತು, ರಾಷ್ಟ್ರದ ಮುಖ್ಯಸ್ಥರಾಗಿ ಅಲ್ಲ. ಅಲ್ಲಿಗೆ ಪ್ರಕರಣ ಮುಗಿಯಿತು!” ಬರೆದಿದ್ದರು.

ಆದರೆ, 1992 ರಲ್ಲಿ ಪರ್ಮಾರ್ ಪಾಕಿಸ್ತಾನದಿಂದ ಭಾರತಕ್ಕೆ ನುಸುಳುವಾಗ ಪಂಜಾಬ್ ಪೊಲೀಸರ ಗುಂಡಿಗೆ ಬಲಿಯಾದ. ಆದರೆ ಈ ವರ್ಷ ಜೂನ್‌ 25 ರಂದು ಉಗ್ರಗಾಮಿ ಪರ್ಮಾರ್‌ ಸ್ಮರಣಾರ್ಥ ಕೆನಡಾದಲ್ಲಿ ರ್ಯಾಲಿ ಆಯೋಜಿಸಿದ್ದರು.

ಪರ್ಮಾರ್‌ ಸ್ಮರಣಾರ್ಥ ಕೆನಡಾದಲ್ಲಿ ಆಯೋಜಿಸಿದ್ದ ರ್ಯಾಲಿ ಪೋಸ್ಟರ್

ಈಗ ಪಿಯರೆ ಟ್ರುಡೊ ಮಗ ಜಸ್ಟಿನ್ ಟ್ರುಡೊ ಕೆನಡಾದ ಪ್ರಧಾನಿಯಾಗಿದ್ದು,  ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಇದಕ್ಕೆ ಪುಷ್ಟಿ ನೀಡುವಂತೆ ನಡೆದುಕೊಂಡಿದ್ದಾರೆ.

ಫೆಬ್ರವರಿ 2018 ರ ತನ್ನ ಭಾರತ ಬೇಟಿಯ ಸಂದರ್ಭದಲ್ಲಿ ಕೆನಡಾದಲ್ಲಿ 2003 ರಲ್ಲಿ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ನಿಷೇಧಿತ ಖಾಲಿಸ್ತಾನ್ ಪರ ಸಂಘಟನೆಯಾದ ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ISYF) ನ ಮಾಜಿ ಸದಸ್ಯ ಜಸ್ಪಾಲ್ ಅತ್ವಾಲ್ ಮುಂಬೈ ಮತ್ತು ದೆಹಲಿಯಲ್ಲಿ ಟ್ರುಡೊಗಾಗಿ ಆಯೋಜಿಸಲಾಗಿದ್ದ ಎರಡು ಕಾರ್ಯಕ್ರಮಗಳಿಗೆ ಆಹ್ವಾನಿಸಲ್ಪಟ್ಟಿದ್ದ. ಇದನ್ನು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ವರದಿ ಮಾಡಿದೆ.

1986 ರಲ್ಲಿ ವ್ಯಾಂಕೋವರ್ ದ್ವೀಪದಲ್ಲಿ ಆಗಿನ ಪಂಜಾಬ್ ಸಚಿವ ಮಲ್ಕಿಯತ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ಅತ್ವಾಲ್‌ನನ್ನು 20 ವರ್ಷಗಳ ಜೈಲು ಶಿಕ್ಷೆ ನೀಡಿದರೂ, ಉತ್ತಮ ನಡವಳಿಕೆಯ ಕಾರಣದಿಂದ ಬೇಗನೆ ಬಿಡುಗಡೆ ಮಾಡಲಾಯಿತು.

ಮುಂಬೈ ಸಮಾರಂಭದಲ್ಲಿ ಟ್ರುಡೊ ಅವರ ಪತ್ನಿ, ಈಗ ಡಿವೋರ್ಸ್‌ ಆಗಿರುವ ಸೋಫಿ ಗ್ರೆಗೊಯಿರ್ ಟ್ರುಡೊ  ಮತ್ತು ಕೆನಡಾದ ಸಚಿವನೊಬ್ಬ ಅತ್ವಾಲ್ ಜೊತೆಗಿದ್ದ ಫೋಟೋ ಸದ್ದು ಮಾಡಿತ್ತು.

ಅತ್ವಾಲ್ ಜೊತೆ ಮುಂಬೈಯಲ್ಲಿ ಟ್ರೂಡೋ ಮಾಜೀ ಪತ್ನಿ

ಡಿಸೆಂಬರ್ 2020 ರಲ್ಲಿ ದೇಶದಾದ್ಯಂತ ಕರಾಳ ಕೃಷಿ ಕಾಯ್ದೆಯ ವಿರುದ್ದ ನಡೆಯುತ್ತಿದ್ದ ರೈತ ಹೋರಾಟವನ್ನು ಒಂದು ಕಡೆಯಲ್ಲಿ ಬಿಜೆಪಿ ʼಖಾಲಿಸ್ತಾನಿ ಬೆಂಬಲಿತʼ ಹೋರಾಟ ಎಂದು ಬಿಂಬಿಸಲು ಎಲ್ಲಾ ತಂತ್ರಗಳನ್ನೂ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಕೆನಡಾ ಪ್ರಧಾನಿ ರೈತ ಹೋರಾಟಕ್ಕೆ ಬೆಂಬಲವನ್ನು ನೀಡಿದ ಮೊದಲ ಗ್ಲೋಬಲ್‌ ಲೀಡರ್‌ ಎನಿಸಕೊಂಡರು. ಪಂಜಾಬ್‌ನಲ್ಲಿ ನಡೆಯುತ್ತಿದ್ದ ರೈತ ಹೋರಾಟಕ್ಕೆ ಖಾಲಿಸ್ತಾನಿ ಬಣ್ಣ ಹಚ್ಚುತ್ತಿದ್ದ ಬಿಜೆಪಿ ಕೆನಡಾಕ್ಕೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿತ್ತು.  ಇದು ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಮೂಗು ತೂರಿಸಿದರೆ ಎರಡೂ ದೇಶಗಳ ಸಂಬಂಧ ಹದಗೆಡಬಹುದು ಎಂದು ಭಾರತ ಸರ್ಕಾರ ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನರ್ ತಿಳಿಸಿತ್ತು.

ಜೂನ್‌ನಲ್ಲಿ ಕೆನಡಾದ ಬ್ರಾಂಪ್ಟನ್‌ನಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್‌ನ 39 ನೇ ವಾರ್ಷಿಕೋತ್ಸವದ ಪೆರೇಡ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ವೈಭವೀಕರಿಸುವ ಟ್ಯಾಬ್ಲೋ ಪ್ರದರ್ಶನ ಮಾಡಲಾಗಿತ್ತು.

ಕೆನಡಾದ ಬ್ರಾಂಪ್ಟನ್‌ನಲ್ಲಿ ಇಂದಿರಾ ಗಾಂಧಿ ಹತ್ಯೆಯ ಟ್ಯಾಬ್ಲೋ ಪ್ರದರ್ಶನ

2021 ರಲ್ಲಿ ಟ್ರೂಡೋ ಅವರ ಲಿಬರಲ್ ಪಕ್ಷ 159 ಸ್ಥಾನಗಳೊಂದಿಗೆ ಬಾರಿಗೆ ಅಧಿಕಾರಕ್ಕೆ ಬಂದು, ಟ್ರೂಡೊ ಮೂರನೇ ಬಾರಿಗೆ ಪ್ರಧಾನಿಯಾದರು. ತಮ್ಮ ಅಧಿಕಾರವನ್ನು 2025ರ ವರೆಗೆ ಉಳಿಸಿಕೊಳ್ಳಲು ಕಳೆದ ಮಾರ್ಚ್‌ನಲ್ಲಿ ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಜಗ್ಮೀತ್ ಸಿಂಗ್ ಒಮ್ಮೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಗ್ಗೆ ಸ್ಕ್ರಾಲ್ ವರದಿ ಮಾಡಿತ್ತು.

ತನ್ನ ದೇಶದ ರಾಜಕೀಯ ಲೆಕ್ಕಾಚಾರಗಳನ್ನು ನೋಡಿಕೊಂಡು ಕೆನಡಾದಲ್ಲಿ ಟ್ರೂಡೋ ಖಾಲಿಸ್ತಾನಿಗಳ ಪರ ಮೌನವಾಗಿರುವುದು ಎದ್ದುಕಾಣುತ್ತಿದೆ. ಮಾತ್ರವಲ್ಲ, ಇದನ್ನು ʼಅಭಿವ್ಯಕ್ತಿ ಸ್ವಾತಂತ್ರ್ಯದʼ ಹೆಸರಿನಲ್ಲಿ ಸಮರ್ಥಿಸುತ್ತಿದ್ದಾರೆ. ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಮಾಡಿರುವ ಕೆನಡಾ ಪ್ರಧಾನಿಯ ಹೇಳಿಕೆಯನ್ನು ಭಾರತ ತಿರಸ್ಕರಿಸಿ, ವಿರೋಧಿಸಿದೆ.

Related Articles

ಇತ್ತೀಚಿನ ಸುದ್ದಿಗಳು