ಗಂಡನ ವಿವಾಹೇತರ ಸಂಬಂಧವು ಪತ್ನಿಗೆ ಕಿರುಕುಳ ನೀಡಿದ್ದರೆ ಅಥವಾ ಚಿತ್ರಹಿಂಸೆ ನೀಡಿದ್ದರ ಹೊರತಾಗಿ, ಅದು ಕ್ರೌರ್ಯ ಅಥವಾ ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ. ವರದಕ್ಷಿಣೆ ಆರೋಪದ ಸಂಬಂಧ ಬಂಧಿತನಾಗಿದ್ದ ಪತಿಗೆ ಜಾಮೀನು ಮಂಜೂರು ಮಾಡುವಾಗ ದೆಹಲಿ ಹೈಕೋರ್ಟ್ ಈ ರೀತಿಯಾಗಿ ವಿವರಣೆ ನೀಡಿದೆ.
ವಿವಾಹೇತರ ಸಂಬಂಧವು ಪತಿಯನ್ನು ವರದಕ್ಷಿಣೆ, ಕೊಲೆಗೆ ಸಿಲುಕಿಸಲು ಕಾರಣವಾಗಬಾರದು. ಎರಡೂ ಬೇರೆಬೇರೆಯಾಗಿದೆ. ಹಾಗೊಂದು ವೇಳೆ ವರದಕ್ಷಿಣೆ ಕಾರಣಕ್ಕೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಟ್ಟಿದ್ದೇ ಆದರೆ ಮಾತ್ರ ಅದು ವರದಕ್ಷಿಣೆ ಪ್ರಕರಣಕ್ಕೆ ಅನ್ವಯ ಆಗುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವಿವಾಹೇತರ ಸಂಬಂಧ ಮತ್ತು ವರದಕ್ಷಿಣೆ ಬೇಡಿಕೆಯ ನಡುವಿನ ಸಂಬಂಧವನ್ನು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಾಬೀತುಪಡಿಸಬೇಕು. ಈ ಪ್ರಕರಣದಲ್ಲಿ, ದಂಪತಿಗಳು ಸುಮಾರು ಐದು ವರ್ಷಗಳ ಕಾಲ ಜೀವನ ನಡೆಸಿದ್ದರು. 2024ರ ಮಾರ್ಚ್ 18ರಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅತ್ತೆಯ ಮನೆಯಲ್ಲಿ ಮಹಿಳೆಯ ಅಸಹಜ ಸಾವಿನ ನಂತರ ಆತ್ಮಹತ್ಯೆಗೆ ಪ್ರಚೋದನೆ ನೀಡುವುದರ ಜೊತೆಗೆ ವರದಕ್ಷಿಣೆ ಸಾವು ಮತ್ತು ವರದಕ್ಷಿಣೆ ಕಿರುಕುಳದ ಆರೋಪದಡಿಯಲ್ಲಿ ಪತಿಯನ್ನು ಬಂಧಿಸಲಾಗಿತ್ತು. ಮೃತರ ಕುಟುಂಬದ ಪ್ರಕಾರ, ಆರೋಪಿ ಪತಿ ಮಹಿಳೆಯೊಬ್ಬಳೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಆದರೆ ಮಹಿಳೆ ಜೀವಂತವಿರುವಾಗ ಆಕೆಯಾಗಲಿ, ಆಕೆಯ ಪೋಷಕರಾಗಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರಲಿಲ್ಲ. ಆಕೆಯ ಸಾವಿನ ನಂತರ ವರದಕ್ಷಿಣೆ ಪ್ರಕರಣ ದಾಖಲಿಸಲಾಗಿದೆ. ಇದು ಆತನನ್ನು ಉದ್ದೇಶಪೂರ್ವಕವಾಗಿ ಇಕ್ಕಟ್ಟಿಗೆ ಸಿಲುಕಿಸಲು ಮತ್ತು ಶಿಕ್ಷೆ ನೀಡಲು ಬಳಸಿದ ಮಾರ್ಗ ಎಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಇಂತಹ ಪರಿಸ್ಥಿತಿಯಲ್ಲಿ ಆರೋಪಿಯನ್ನು ಜೈಲಿನಲ್ಲಿ ಇಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆರೋಪಿ ವ್ಯಕ್ತಿಯನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಪೀಠ ಆದೇಶಿಸಿದೆ.