“ಗಬ್ಬರ್ ಸಿಂಗ್ ದರೋಡೆಯ ಪ್ರಮಾಣವನ್ನು ಕಡಿಮೆ ಮಾಡಿದ್ದಾನೆ, ಇದಕ್ಕಾಗಿ ಎಲ್ಲರೂ ಉತ್ಸವ ಆಚರಿಸಬೇಕು. ಈ ಗಬ್ಬರ್ ಸಿಂಗ್ 8 ವರ್ಷ ಮಾಡಿದ ಪೂರ್ಣ ಪ್ರಮಾಣದ ಲೂಟಿಯನ್ನು ಎಲ್ಲರೂ ಮರೆತುಬಿಡಬೇಕು! ಕೇಂದ್ರ ಸರ್ಕಾರದ ವರಸೆ ಇದು!” ಎಂದು ಸಚಿವ ಪ್ರಿಯಾಂಕ್ ಖರ್ಗೆ ಮೋದಿ ಆಡಳಿತಕ್ಕೆ ಲೇವಡಿ ಮಾಡಿದ್ದಾರೆ.
“ಈ ದೇಶದ ಜನರನ್ನು ಹೇಗೆ ಬೇಕಾದರೂ ಮರಳು ಮಾಡಬಹುದಾದಷ್ಟು ಮೂರ್ಖರು ಎಂದು ಭ್ರಮಿಸಿದೆ ಬಿಜೆಪಿ. ಆದರೆ ಜನರು ಮೂರ್ಖರಲ್ಲ. ಈಗ “GST ಉಳಿತಾಯ ಉತ್ಸವ“ ಮಾಡಬೇಕಂತೆ, ಕಳೆದ 8 ವರ್ಷದಿಂದ ”GST ಲೂಟಿ ಉತ್ಸವ” ಮಾಡುತ್ತಿದ್ದರಲ್ಲವೇ?” ಎಂದು ತಮ್ಮ ಜಾಲತಾಣದ ಮೂಲಕ ಪ್ರಶ್ನೆ ಎತ್ತಿದ್ದಾರೆ.
“ಜನರನ್ನು ಬಾವಿಗೆ ತಳ್ಳಿದ್ದು ಇವರೇ, ಈಗ ಬಾವಿಯಿಂದ ಮೇಲೇತ್ತಲು ಏಣಿ ಕೊಟ್ಟಿದ್ದೇವೆ ಎನ್ನುತ್ತಿರುವವರೂ ಇವರೇ. ಏಣಿ ಕೊಟ್ಟಿದ್ದಕ್ಕೆ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದೆ. 8 ವರ್ಷದಿಂದ ಜನರನ್ನು ಬಾವಿಗೆ ತಳ್ಳಿದ್ದರ ಪಾಪದ ಹೊಣೆಯೂ ಮೋದಿಯವರದ್ದೇ” ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
GST ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಮಾಧ್ಯಮಗಳ ಮುಂದೆ ಬಂದು GST ಇಳಿಕೆ ಉತ್ಸವ ಮಾಡಿ ಎಂದು ಜನತೆಗೆ ಕರೆ ನೀಡಿದ್ದರು. ಈ 8 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ GST ಏರಿಸಿ ಜನರಿಗೆ ಹೊರಿಸಿದ ಹೊರೆ ಎಂತದ್ದು ಎಂಬ ಬಗ್ಗೆ ಈಗ ಪ್ರಿಯಾಂಕ್ ಖರ್ಗೆ ಮೋದಿ ಆಡಳಿತಕ್ಕೆ ಪ್ರಶ್ನೆ ಎತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗಬ್ಬರ್ ಸಿಂಗ್ ಟ್ಯಾಕ್ಸ್ ಕಡಿತಗೊಳಿಸಬೇಕು ಎಂದು ಈ ಹಿಂದೆಯೇ ಹಲವು ಬಾರಿ ಆಗ್ರಹಿಸಿದ್ದಾಗ ಅವರ ಮಾತುಗಳನ್ನು ವ್ಯಂಗ್ಯ ಮಾಡಿದ್ದ ಬಿಜೆಪಿಯವರಿಗೆ ಈಗ ಜನಾಕ್ರೋಶಕ್ಕೆ ಬೆದರಿ GST ಕಡಿತಗೊಳಿಸಿದ್ದರ ಕ್ರೆಡಿಟ್ ತೆಗೆದುಕೊಳ್ಳಲು ನಾಚಿಕೆ ಎನಿಸುವುದಿಲ್ಲವೇ? ಎಂದು ಟೀಕಿಸಿದ್ದಾರೆ.
ದುಬಾರಿ GST ಜಾರಿ ಮಾಡಿದಾಗಲೂ ಮಾಸ್ಟರ್ ಸ್ಟ್ರೋಕ್ ಅಂದರು, ಈಗ GST ಕಡಿತಗೊಳಿಸಿದ್ದನ್ನೂ ಮಾಸ್ಟರ್ ಸ್ಟ್ರೋಕ್ ಅನ್ನುತ್ತಿದ್ದಾರೆ!ಆದರೆ ಈ ಎಂಟು ವರ್ಷಗಳಲ್ಲಿ ಜನತೆಗೆ, ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು ಭರಿಸುವವರು ಯಾರು? ಈ 8 ವರ್ಷಗಳಲ್ಲಿ ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು GST ಪರಿಣಾಮದಿಂದ ಮುಚ್ಚಿಹೋಗಿದ್ದಕ್ಕೆ ಜವಾಬ್ದಾರಿ ಯಾರು? ಎಂದು ಪ್ರಶ್ನಿಸಿದ್ದಾರೆ.
ಈ 8 ವರ್ಷಗಳಲ್ಲಿ ದೇಶದ ಆರ್ಥಿಕತೆಗೆ ಬಿದ್ದ ಹೊಡೆತಕ್ಕೆ ಹೊಣೆ ಯಾರು? ಆಗಿರುವ ಉದ್ಯೋಗ ನಷ್ಟಕ್ಕೆ ಜವಾಬ್ದಾರಿ ಯಾರು? ಇದೆಲ್ಲವಕ್ಕೂ ಮೋದಿಯವರೇ ಹೊಣೆಯಲ್ಲವೇ? ಎಂದು ಪ್ರಶ್ನೆ ಎತ್ತಿದ್ದಾರೆ.