Sunday, June 16, 2024

ಸತ್ಯ | ನ್ಯಾಯ |ಧರ್ಮ

ಅಸಮಾಧಾನಿತರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತಾರಾ ಬಿಜೆಪಿ ಹೊಸ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ?

ರಾಜ್ಯ ವಿಧಾನಸಭಾ ಚುನಾವಣೆ ನಂತರ ಕರ್ನಾಟಕ ಬಿಜೆಪಿ ಅಕ್ಷರಶಃ ದಿಕ್ಕು ದೆಸೆಯಿಲ್ಲದ ಅತಂತ್ರ ಸ್ಥಿತಿಯಲ್ಲಿತ್ತು. ಒಂದು ಕಡೆ ವಿಪಕ್ಷ ನಾಯಕನಿಲ್ಲ, ಇನ್ನೊಂದು ಕಡೆ ರಾಜ್ಯಾಧ್ಯಕ್ಷ ಇದ್ದರೂ ಆ ಸ್ಥಾನ ಸಂಪೂರ್ಣ ಕೋಮಾ ಸ್ಥಿತಿಗೆ ಹೋಗಿತ್ತು. ಇಂತಹ ಸ್ಥಿತಿಯಲ್ಲಿ ಇದ್ದ ಬಿಜೆಪಿಗೆ ಈಗ ಹೊಸ ರಾಜ್ಯಾಧ್ಯಕ್ಷರ ಆಯ್ಕೆಯಾಗಿದೆ.

ಆದರೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆಗೆ ಈಗ ಬಿಜೆಪಿಯಲ್ಲಿ ಬಹಿರಂಗವಾಗಿಯೇ ಬಿನ್ನಮತ ಸ್ಪೋಟಗೊಂಡಿದೆ. ಕುಟುಂಬ ರಾಜಕಾರಣದ ವಿರುದ್ಧವೇ ದನಿ ಏರಿಸಿಕೊಂಡು ಬಂದ ಬಿಜೆಪಿಯಲ್ಲೇ ಈಗ ಕುಟುಂಬ ರಾಜಕಾರಣ ನಡೆಯುತ್ತಿದೆ. ಕೇವಲ ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷ ಗಿಟ್ಟಿಸಿಕೊಂಡ ಬಗ್ಗೆ ವಿಜಯೇಂದ್ರ ವಿರುದ್ಧ ಸ್ವಪಕ್ಷೀಯರೇ ಅಸಮಾಧಾನ ಹೊರ ಹಾಕಿದ್ದಾರೆ.

ಸಧ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿ ಇದ್ದವರ ಪಟ್ಟಿ ಮಾಡ್ತಾ ಹೋದರೆ ಸಿಗೋದು ಹತ್ತು ಹಲವು ಹೆಸರುಗಳು. ಅದರಲ್ಲಿ ಸದಾನಂದ ಗೌಡ, ವಿ.ಸೋಮಣ್ಣ, ಯಡಿಯೂರಪ್ಪರ ಟೀಕಿಸುತ್ತಲೇ ಬಂದಿರುವ ಬಸನಗೌಡ ಪಾಟೀಲ್ ಯತ್ನಾಳ್ ಇನ್ನೂ ಹಲವರು ತಮ್ಮದೇ ವರ್ಚಸ್ಸಿನಿಂದ ಗುರುತಿಸಿಕೊಂಡವರಾದರೆ,  ಬಿ.ಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಆರ್.ಅಶೋಕ್, ಅಶ್ವತ್ ನಾರಾಯಣ್, ಅರವಿಂದ ಬೆಲ್ಲದ್, ಸಿ.ಟಿ.ರವಿ, ಮುರುಗೇಶ್ ನಿರಾಣಿ ಇನ್ನೂ ಹತ್ತು ಹಲವು ಮಂದಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಪೈಪೋಟಿ ನೀಡಿದ್ದರು.

ರಾಜ್ಯಾಧ್ಯಕ್ಷರ ಹುದ್ದೆ ಆಯ್ಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಸಿಟಿ ರವಿಯವರು “ಇಂತಹ ಸಮಯದಲ್ಲಿ ನಾನು ಏನೇ ಮಾತನಾಡಿಜರೂ ಅದು ಅಪಾರ್ಥಕ್ಕೆ ಗುರಿಯಾಗುತ್ತದೆ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ” ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ಹಾಗೆಯೇ ಆರ್.ಅಶೋಕ್, ಅಶ್ವತ್ ನಾರಾಯಣ್, ಅರವಿಂದ ಬೆಲ್ಲದ್, ಸಿ.ಟಿ.ರವಿ, ಮುರುಗೇಶ್ ನಿರಾಣಿ ಇನ್ನೂ ಹಲವು ನಾಯಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೆ ಅಲ್ಲದೆ ಕರಾವಳಿ ಭಾಗಕ್ಕೆ ಈ ವರೆಗೂ ಇದ್ದ ವಿಶೇಷ ಪ್ರಾತಿನಿಧ್ಯ ಕೂಡಾ ಈ ಬಾರಿ ಇಲ್ಲದಾಗಿದೆ. ದೊಡ್ಡ ನಾಯಕರು ಅಥವಾ ಶಾಸಕರ ಮಟ್ಟದಲ್ಲಿ ಅಸಮಾಧಾನ ಇರದಿದ್ದರೂ ಕಾರ್ಯಕರ್ತರ ಮಟ್ಟದಲ್ಲೂ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಬಿಜೆಪಿ ಹೈಕಮಾಂಡ್ ಲಿಂಗಾಯತ ಪ್ರಾತಿನಿಧ್ಯವನ್ನು ಮತ್ತೆ ಮುನ್ನೆಲೆಗೆ ತರಲು ಈ ದಾರಿ ಅನಿವಾರ್ಯವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಏನೇ ಆದರೂ ಈಗಾಗಲೇ ಲಿಂಗಾಯತ ಮತಗಳು ಬಹುತೇಕ ಕಾಂಗ್ರೆಸ್ ಪರ ತಿರುಗಿದ್ದು ಇದನ್ನು ಬಿಜೆಪಿ ಸೆಳೆಯುವುದು ಒಂದು ಸವಾಲೇ ಸರಿ.

ಹೊಸ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನವೆಂಬರ್ 17 ಕ್ಕೆ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ. ‘ಎಲ್ಲಾ ಶಾಸಕರಿಗೂ ಆಹ್ವಾನ ನೀಡುತ್ತೇನೆ, ಪ್ರಮುಖ ಮುಖಂಡರಿಗೂ ಆಹ್ವಾನ ನೀಡುತ್ತೇನೆ,ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿದ್ದೇನೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ ‘ಕೇವಲ ಜಿಲ್ಲಾ ಘಟಕದ ಅಧ್ಯಕ್ಷರುಗಳನ್ನು ಮಾತ್ರ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದೇನೆ. ಉಳಿದಂತೆ ಮಾಧ್ಯಮಗಳ ಮೂಲಕ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಲಿದ್ದೇನೆ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಏನೇ ಇರಲಿ. ದಿಕ್ಕು ದೆಸೆ ಇಲ್ಲದಂತಿದ್ದ ಬಿಜೆಪಿಗೆ ಹೇಳಿಕೊಳ್ಳೋದಕ್ಕಾದರೂ ಒಬ್ಬ ರಾಜ್ಯಾಧ್ಯಕ್ಷ ಸಿಕ್ಕಿದ್ದಾರೆ. ಬಳಲಿ ಬೆಂಡಾಗಿರೋ ಬಿಜೆಪಿ ಮರುಹುಟ್ಟು ಪಡೆಯೋಕೆ ಇರೋ ಅಡ್ಡಗಾಲನ್ನು ದಾಟಿ ಹೇಗೆ ಮುಂಬರುತ್ತೆ ಅನ್ನೋದು ಗಮನಿಸಬೇಕಾದ ವಿಚಾರ.

Related Articles

ಇತ್ತೀಚಿನ ಸುದ್ದಿಗಳು