ಬೆಳಗಾವಿ: ವಕ್ಫ್ ಆಸ್ತಿ ಅತಿಕ್ರಮಣದಾರರಿಗೆ ನೋಟಿಸ್ ಜಾರಿ ಮಾಡಿರುವ ನಿರ್ಧಾರವನ್ನು ತೀವ್ರವಾಗಿ ಸಮರ್ಥಿಸಿಕೊಂಡಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್, ವಕ್ಫ್ ಭೂಮಿಯಲ್ಲಿ ನಿರ್ಮಿಸಿರುವ ದೇವಸ್ಥಾನಗಳನ್ನು ಯಾವುದೇ ಕಾರಣಕ್ಕೂ ಮುಟ್ಟುವುದಿಲ್ಲ ಎಂದು ಭರವಸೆ ನೀಡಿದರು.
ಸಚಿವರು ತಾನು ನೀಡಿರುವ ಹೇಳಿಕೆಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ಬೇಷರತ್ ಕ್ಷಮೆಯಾಚಿಸುವುದಾಗಿಯೂ ತಿಳಿಸಿದರು.
ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಸೀದಿಯಲ್ಲಿ ಶಿವಲಿಂಗ ಹುಡುಕುವಂತಹ ಪಕ್ಷವಲ್ಲ ಎಂದು ಬಿಜೆಪಿಯನ್ನು ಜರಿದರು.
ವಿಧಾನ ಪರಿಷತ್ತಿನ ಸಭೆಯಲ್ಲಿ ವಕ್ಫ್ ಆಸ್ತಿ ಮೇಲಿನ ಚರ್ಚೆಗೆ ಉತ್ತರಿಸಿದ ಖಾನ್, ರೈತರಿಗೆ ಸೇರಿದ ಭೂಮಿಯನ್ನು ಸರ್ಕಾರ ಮುಟ್ಟುವುದಿಲ್ಲ ಎಂದು ಹೇಳಿದರು.
ನಾವು ದೇವಸ್ಥಾನ ಅಥವಾ ರೈತರಿಂದ ಭೂಮಿ ಕಸಿದುಕೊಳ್ಳಲು ಬಂದಿಲ್ಲ, ನಮ್ಮ ಸರ್ಕಾರ ರೈತ ಪರವಾಗಿದೆ ಎಂದರು.
ಒಂದು ವೇಳೆ ತಪ್ಪಾಗಿ ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ಸೇರಿಸಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದೂ ಅವರು ಹೇಳಿದರು.
“ನಿಮಗೆ (ಬಿಜೆಪಿ) ನಿಜವಾಗಿಯೂ ಜನರ ಹಿತ ಕಾಪಾಡುವ ಹಂಬಲವಿದ್ದರೆ ಅಂತಹ ಕೆಲಸಗಳನ್ನು ಹೃದಯಾಂತರಾಳದಿಂದ ಮಾಡಿ, ಆಡಂಬರ ಬೇಡ, ಶಿವಲಿಂಗಗಳನ್ನು ಹುಡುಕಲು 200 ವರ್ಷಗಳ ಹಿಂದಿನ ಮಸೀದಿಗಳ ಹಿಂದೆ ಹೋಗುತ್ತಿದ್ದೀರಿ.ನಾವು ಹಾಗಲ್ಲ. ನಮ್ಮ ಹೃದಯಗಳು ಶುದ್ಧವಾಗಿವೆ, ವಕ್ಫ್ಗೆ ಸೇರಿದ ಭೂಮಿಯಲ್ಲಿ ಕೆಲವು ದೇವಾಲಯಗಳು ಬಂದರೂ ನಾವು ಯಾವುದೇ ದೇವಾಲಯವನ್ನು ಮುಟ್ಟುವುದಿಲ್ಲ” ಎಂದು ಅವರು ಹೇಳಿದರು.
ಯಾವುದೇ ದೇವಸ್ಥಾನವನ್ನು ಮುಟ್ಟುವ ಕನಸು ಕೂಡ ಬೇಡ’ ಎಂದು ಬಿಜೆಪಿ ಸದಸ್ಯ ಎಸ್.ಕೇಶವಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು. “ನಾವು ನಿಮ್ಮಂತೆ ಅಲ್ಲ” ಎಂದು ಖಾನ್ ತಿರುಗೇಟು ನೀಡಿದರು.