ನವದೆಹಲಿ: ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ವಿವಾದ ಸೃಷ್ಠಿಸಿದ್ದ ಎಲ್ ಆ್ಯಂಡ್ ಟಿ ಅಧ್ಯಕ್ಷ ಎಸ್. ಎನ್ ಸುಬ್ರಹ್ಮಣ್ಯನ್ ಅವರ ಮತ್ತೊಂದು ಹೇಳಿಕೆ ನೀಡಿದ್ದಾರೆ. ಸರ್ಕಾರದ ನರೆಗಾ ಯೋಜನೆಯಿಂದ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ಮಂಗಳವಾರ ಸಿಐಐ ಸಂಘಟಿಸಿದ್ದ ‘ಸೌತ್ ಗ್ಲೋಬಲ್ ಲಿಂಕೇಜಸ್ ಸಮ್ಮಿಟ್–2025’ರಲ್ಲಿ ಮಾತನಾಡಿದ ಅವರು, ತಮ್ಮ ಊರಿನಲ್ಲಿ ಜನ ಸುಖವಾಗಿರುವುದರಿಂದ ಕೆಲಸಕ್ಕಾಗಿ ಬೇರೆ ಕಡೆ ಹೋಗಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ನಿರ್ಮಾಣ ವಲಯದಲ್ಲಿ ಕಾರ್ಮಿಕರ ಕೊರತೆಯಾಗಿದೆ. ಭಾರತೀಯರು ಕಚೇರಿಗಿಂತ ಮನೆಯಿಂದಲೇ ಕೆಲಸ ಮಾಡಲು ಬಯಸುತ್ತಾರೆ ಎಂದಿದ್ದಾರೆ.
‘ನಿರ್ಮಾಣ ವಲಯದಲ್ಲಿ ಕಾರ್ಮಿಕರು ಸಿಗುವುದೇ ಕಷ್ಟವಾಗಿದೆ. ನೆಮ್ಮದಿಯ ಜೀವನ ಬಯಸುವುದರಿದ ಅವರು ಊರು ಬಿಟ್ಟು ಬರುತ್ತಿಲ್ಲ. ನರೇಗಾ, ನೇರ ನಗದು ವರ್ಗಾವಣೆ ಹಾಗೂ ಜನಧನ ಖಾತೆಗಳಿಂದಾಗಿ ಕಾರ್ಮಿಕರ ಲಭ್ಯತೆ ಕಡಿಮೆಯಾಗುತ್ತಿದೆ. ಅವಕಾಶಗಳನ್ನು ಹುಡುಕಿಕೊಂಡು ಜನ ವಲಸೆ ಹೋಗುತ್ತಿಲ್ಲ. ಸ್ಥಳೀಯ ಆರ್ಥಿಕತೆ ಚೆನ್ನಾಗಿರುವುದರಿಂದಲೂ ಆಗಿರಬಹುದು. ಅಥವಾ ಸರ್ಕಾರದ ವಿವಿಧ ಯೋಜನೆಗಳಿಂದಲೂ ಆಗಿರಬಹುದು’ ಎಂದು ಹೇಳಿದ್ದಾರೆ.
ಹಣದುಬ್ಬರಕ್ಕೆ ಅನುಗುಣವಾಗಿ ಕಾರ್ಮಿಕರ ವೇತನವನ್ನು ಪರಿಷ್ಕರಿಸಬೇಕಿದೆ. ಮಧ್ಯಪ್ರಾಚ್ಯದಲ್ಲಿ 3.5 ಪಟ್ಟು ಹೆಚ್ಚಿನ ವೇತನ ಸಿಗುವುದರಿಂದ ಭಾರತೀಯ ಕಾರ್ಮಿಕರು ಅಲ್ಲಿಗೆ ವಲಸೆ ಹೋಗುತ್ತಿದ್ದಾರೆ. ವಲಸೆ ಸಮಸ್ಯೆ ಕೂಡ ಕಾರ್ಮಿಕರ ಕೊರತೆಗೆ ಕಾರಣ ಎಂದಿದ್ದಾರೆ.
‘ಐಟಿ ಉದ್ಯೋಗಿಯನ್ನು ಕಚೇರಿಗೆ ಬಂದು ಕೆಲಸ ಮಾಡಿ ಎಂದು ಹೇಳಿ. ಆಗ ಅವರು ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಅವರು ಅರೋಪಿಸಿದ್ದಾರೆ.
ನಾನು 1983 ರಲ್ಲಿ ಎಲ್ & ಟಿ ಗೆ ಸೇರಿದಾಗ, ನನ್ನ ಬಾಸ್, ನೀವು ಚೆನ್ನೈನವರಾಗಿದ್ದರೆ, ದೆಹಲಿಗೆ ಹೋಗಿ ಕೆಲಸ ಮಾಡಿ ಎಂದು ಹೇಳಿದ್ದರು. ಇಂದು ನಾನು ಚೆನ್ನೈನ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ದೆಹಲಿಗೆ ಹೋಗಿ ಕೆಲಸ ಮಾಡಲು ಹೇಳಿದರೆ, ಅವರು ರಾಜೀನಾಮೆ ನೀಡುತ್ತಾರೆ. ಸ್ಥಳಾಂತರಗೊಳ್ಳಲು ಐಟಿ ವಲಯದಲ್ಲಿ ಹಿಂದೇಟು ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.
‘ಭಾನುವಾರದಂದು ಸಹ ಕೆಲಸ ಮಾಡಬೇಕು. ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡುತ್ತಾ ಕೂಡುತ್ತಿರಿ? ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ. ನಾನು ಭಾನುವಾರವೂ ಕೆಲಸ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದ್ದ ಹೇಳಿಕೆ ಭಾರಿ ವಿವಾದ ಹುಟ್ಟು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.