ಬೆಳಗಾವಿ: ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡು ಸುಮಾರು 22 ದಿನಗಳೇ ಕಳೆದರು ಇನ್ನು ಸೆರೆಸಿಕ್ಕಿಲ್ಲ, ಅರಣ್ಯ ಇಲಾಖೆಯ ಅಧಿಕಾರಿಗಳು ಆಪರೇಷನ್ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದು, ಐದು ದಿನಗಳಿಂದ 160 ಸಿಬ್ಬಂದಿ, ಆನೆ, ಜೆಸಿಬಿಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೀಗಾಗಿ ಕಳೆದ 5 ದಿನಗಳಿಂದ ಪ್ರತಿದಿನವು ಸುಮಾರು 3ಲಕ್ಷದವರೆಗೂ ಹಣ ಖರ್ಚು ಮಾಡಲಾಗುತ್ತಿದ್ದು, ಅರಣ್ಯ ಇಲಾಖೆ ಈವರೆಗೂ ಸುಮಾರು 30 ರಿಂದ 40 ಲಕ್ಷ ಹಣ ಖರ್ಚು ಮಾಡಿದೆ. ನಿತ್ಯವೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದ್ದರು ಚಿರತೆ ಸಿಗದ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಪೋಟೋಹಾಕಿ ವ್ಯಂಗ್ಯ ಮಾಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ಸಾಕಷ್ಟು ಮೀಮ್ಸ್ಗಳು, ಟ್ರೋಲ್ಗಳು ಹರಿದಾಡುತ್ತಿವೆ. ಅಮಿತ್ ಉಪಾಧ್ಯೆ ಅವರು, ಚಿರತೆ ಪೋಟೋ ಹಾಕಿ ನಾ ಅಂತೂ ಬೆಳಗಾವಿ ಬಿಟ್ಟು ಹೋಗಲ್ಲ, ಯಾರಪ್ಪಂದ್ ಏನೈತಿ ಬೆಳಗಾವಿ ನಂದೈತಿ, ನಾ ಇನ್ನೊಂದು ರೌಂಡ್ ಸುತ್ತಿ ಬರುತ್ತೆನೆ ಎಂದು ಚಿರತೆ ಹೇಳುವಹಾಗೆ ಪೋಸ್ಟ್ ಮಾಡಿದ್ದಾರೆ.
ಚಿರತೆಗೆ ಬಿಬತ್ಯಾ ಬೇಲ್ಗಾಂವ್ಕರ್ ಅಂತಾ ಹೆಸರು ಹಾಕಿರುವ ಆಧಾರ್ ಕಾರ್ಡ್ ವೈರಲ್ ಆಗುತ್ತಿದೆ. ನನ್ನ ಎಷ್ಟೇ ಹಿಡಿಯೋಕೆ ಪ್ರಯತ್ನ ಪಟ್ಟರು, ನಾ ಗಣೇಶ ಹಬ್ಬ ಮಾಡ್ಕೊಂಡು ಹೋಗುತ್ತನೆ ಎಂದು ವ್ಯಂಗ್ಯ ಮಾಡಲಾಗಿದೆ. ಹೀಗೆ ಹಲವಾರು ರೀತಿಯಲ್ಲಿ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಚಿರತೆ ಸೆರೆಸಿಗದ ಕಾರಣ ಜನರಲ್ಲಿ ಇನ್ನು ಆತಂಕ ಉಳಿದಿದ್ದು, ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಚಿರತೆ ಸೆರೆಹಿಡಿಯುವುದು ದೊಡ್ಡ ಸವಾಲಾಗಿದೆ.