ಕಲಬುರಗಿ, ಬೀದರ, ಬಿಜಾಪುರ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ 15-30ವರ್ಷದೊಳಗಿನ ಯುವಕರು ಕುಡಿತಕ್ಕೆ ಒಳಗಾಗಿದ್ದಾರೆ. ಕಾರಣ ಈಗಿರುವ ನಮ್ಮ ಡಬಲ್ ಇಂಜಿನ್ ಸರ್ಕಾರವೆ. 2014 ರಿಂದ ಇಲ್ಲಿಯವರೆಗೂ ಒಂದೂ ಸರ್ಕಾರಿ ಹುದ್ದೆಗೆ ಅರ್ಜಿ ಕರೆದಿಲ್ಲ. ಮಾಡಿಲ್ಲ. ಬದಲಿಗೆ ಪಕೊಡೆ ಮಾಡ್ರಿ ಅಂತ ಹೇಳತು – ಪ್ರಿಯಾಂಕಾ ಮಾವಿನಕರ್
ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು. ಆದರೆ ಇಂದಿನ ಯುವಜನರೇ ಇಂದಿನ ಪ್ರಜೆಗಳು, ಪ್ರಜಾಪ್ರಭುತ್ವದ ಬಹು ನಿರೀಕ್ಷಿತ ಕೊಂಡಿಗಳು ಕೂಡ ಹೌದು. ಒಟ್ಟು ಭಾರತದ ಜನಸಂಖ್ಯೆಯಲ್ಲಿ50 % ಯುವಜನರಿದ್ದಾರೆ. ಆದರೆ ಇಂದಿನ ಯುವಜನರ ಪರಿಸ್ಥಿತಿ ಏನಾಗಿದೆ.? ಯುವಜನರ ಸಮಸ್ಯೆಗಳೇನು? ಯುವಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣವಿದೆಯಾ? ಎಲ್ಲಿ ನೋಡಿದ್ರಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಯುವಜನರ ದಿಕ್ಕು ತಪ್ಪಿಸಲಾಗುತ್ತಿದೆ. ಕೋಮುವಾದ ವಿಷ ಬೀಜ ಬಿತ್ತವ ಈ ನೆಲದಲ್ಲಿ ಮನುಷ್ಯತ್ವ, ಪ್ರೀತಿ ಕಾಣೆಯಾಗಿದೆ.
ಯುವಜನರಿಗೆ ನೂರೆಂಟು ಸಮಸ್ಯೆಗಳಿವೆ, ಅವುಗಳಲ್ಲಿ ಮುಖ್ಯವಾಗಿ ನಿರುದ್ಯೋಗ ಮತ್ತು ಕುಡಿತ. ಇವುಗಳನ್ನು ಪ್ರಶ್ನೆ ಮಾಡದಂತೆ ನಮ್ಮ ತಲೆಯೊಳಗೆ ಕೋಮುವಾದದ ಬೀಜ ಬಿತ್ತಿದ್ದಾರೆ. ಅವು ಜಟಿಲಗೊಂಡ ಜೇಡರ ಬಲೆಯೊಳಗೆ ನಮ್ಮನ್ನ ಬಂಧಿಸಿಟ್ಟಿವೆ. ಪ್ರಶ್ನಿಸುವ ಹಕ್ಕಿನಿಂದ, ಮಾತನಾಡುವ ಹಕ್ಕಿನಿಂದ ನಮ್ಮನ್ನು ದೂರಾನೆ ಇರಿಸಿದೆ. ನಾವು ಯಾವ ಬಟ್ಟೆ ಧರಿಸಬೇಕು, ಯಾವ ಆಹಾರ ತಿನ್ನಬೇಕು, ಹಣೆಗೆ ಕುಂಕುಮ ಹಚ್ಚಬೇಕೊ ಬೇಡ್ವೊ, ಕುಂಕುಮ ಹಚ್ಚಿಲ್ಲ ಅಂದ್ರೆ ಯಾಕೆ ಹಚ್ಚಿಲ್ಲವೆಂದು ಕೇಳುವ ಅವಿವೇಕಿಗಳ ಕೈಯಲ್ಲಿ ರೆಕ್ಕೆ ಮುರಿದ ಹಕ್ಕಿಗಳಂತಾಗಿದ್ದೆವೆ.
ಶಿಕ್ಷಣವೆಂಬುದು ಈಗ ಶ್ರೀಮಂತರ ಸ್ವತ್ತಾಗಿದೆ. ಕೆಳವರ್ಗದವರು ಉನ್ನತ ಶಿಕ್ಷಣ ಪಡೆಯದಂತೆ ವ್ಯವಸ್ಥಿತವಾಗಿ ಸಂಚು ಮಾಡಿದ್ದಾರೆ. ಆದರೂ ಹೋರಾಡಿ ಶಿಕ್ಷಣ ಪಡೆದಂತಹ ಅನೇಕ ಯುವಜನರು ಇಂದು ನಿರುದ್ಯೋಗವೆಂಬ ಬಿಡಿಸಿಕೊಳ್ಳಲಾಗದ ಸುಳಿಯೊಳಗೆ ಸಿಕ್ಕಿ ನರಳಾಡುತ್ತಿದ್ದಾರೆ..ಬಿ.ಎ, ಎಂ.ಎ, ಓದಿದ ಯುವಜನರು ಇಂದು ಪಿಯೂನ್ ಕೆಲಸ ಸಿಕ್ಕರೂ ಸಾಕು ಎನ್ನುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.
ನಮ್ಮ ಮನೆ ಹತ್ರ ಒಬ್ಬರು ಅಂಟಿ ಇದ್ದಾರೆ. ಅವರ ಮಗ M.Sc ಮಾಡಿದ್ದಾನೆ. ಆದರೆ ಕೆಲಸ ಇಲ್ಲ. ಏನ್ ಮಾಡಬೇಕು ಬದುಕುವುದು ಅನಿವಾರ್ಯ ಅಲ್ವಾ? ಅದಕ್ಕೆ ಆ ಹುಡ್ಗ ಮದುವೆಯ ಮಂಟಪದಲ್ಲಿ ಕೆಲಸ ಮಾಡಲು ಹೋಗುತ್ತಾನೆ. ನಮ್ಮ ಕಡೆ ಶಾದಿಖಾನಿ ಅಂತ ಕರಿತೀವಿ. ಹೆಚ್ಚಾಗಿ ಈ ಮದುವೆಗಳೆಲ್ಲವೂ ಮುಸ್ಲಿಂ ಸಮುದಾಯದ್ದಾಗಿರುತ್ತವೆ. ರಾತ್ರಿ 8-9 ಕ್ಕೆ ಶುರುವಾಗಿ ಮಧ್ಯರಾತ್ರಿ ಮುಗಿಯುತ್ತದೆ. ಈ ಕೆಲಸ ಮತ್ತು ಈ ಸಮಯ ಎರಡು ಸೂಕ್ತವೆಂದು ಅನೇಕ ಯುವಜನರಿಗೆ ಅನಿಸುತ್ತಿದೆ. ಯಾಕೆಂದರೆ ಡಬಲ್ ಡಿಗ್ರಿ ಮಾಡಿ ನಾನು ಕೂಲಿ ಕೆಲಸ ಮಾಡಿದ್ರೆ ಜನ ನನ್ನ ಬಗ್ಗೆ ಏನ್ ಅನ್ನಕೊಳ್ಳತ್ತಾರೊ ಅನ್ನೊ ಹಿಂಜರಿಕೆ ಒಂದ್ ಕಡೆಯಾದರೆ ಮನೆಯ ಜವಾಬ್ದಾರಿ ಹೊರಲೇಬೇಕು ಅನ್ನುವ ಅನಿವಾರ್ಯತೆ ಮತ್ತೊಂದು ಕಡೆ. ಬಿಸಿ ತುಪ್ಪ ನುಂಗೊಕ್ಕೂ ಆಗಲ್ಲ ಉಗುಳೊಕ್ಕೂ ಆಗಲ್ಲ.
ಇಷ್ಟು ಓದಿದರೂ ಕೆಲಸ ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡವರೇ ಹೆಚ್ಚು. ಇನ್ನು ಕೆಲವರು ನಿರುದ್ಯೋಗದಿಂದಾಗಿ ಮಾನಸಿಕ ಹಿಂಸೆಗೆ ಒಳಗಾಗಿ ಕುಡಿತವೆಂಬ ಚಟಕ್ಕೆ ಒಳಗಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡಿದ್ರೆ ಜನ ಆಡಕೊಳ್ಳತ್ತಾರೆ. ಡಬಲ್ ಡಿಗ್ರಿ ಮಾಡಿ ಹೊಲದಾಗ ಕೆಲಸ ಮಾಡ್ತಿದ್ದಾನೆ ಅಂತ ಮಾತಾಡತ್ತಾರೆ ಎಂಬ ಭಯಕ್ಕೆ ಹೆದರಿ ಒತ್ತಡಕ ಒಳಗಾಗಿ ಕುಡಿತಕ್ಕೆ ಒಳಗಾದ ಅನೇಕ ಉದಾಹರಣೆಗಳಿವೆ.
ಕಲಬುರಗಿ, ಬೀದರ, ಬಿಜಾಪುರ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ 15-30 ವರ್ಷದೊಳಗಿನ ಯುವಕರು ಕುಡಿತಕ್ಕೆ ಒಳಗಾಗಿದ್ದಾರೆ. ಇವರೆಲ್ಲರೂ ಹಿಂಗ್ ಆಗಲಿಕ್ಕೆ ಬೇರೆ ಯಾರು ಕಾರಣ ಅಲ್ಲ ಈಗಿರುವ ನಮ್ಮ ಡಬಲ್ ಇಂಜಿನ್ ಸರ್ಕಾರವೆ. 2014ರಿಂದ ಇಲ್ಲಿಯವರೆಗೂ ಒಂದೂ ಸರ್ಕಾರಿ ಹುದ್ದೆಗೆ ಅರ್ಜಿ ಕರೆದಿಲ್ಲ. ಮಾಡಿಲ್ಲ. ಬದಲಿಗೆ ಪಕೊಡೆ ಮಾಡ್ರಿ ಅಂತ ಹೇಳತು.
ಇಡೀ ಕರ್ನಾಟದಲ್ಲಿ ಬಿ,ಎ. ಬಿ. ಎಡ್ ಮಾಡಿದವರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಿವೆ. ಆದರೆ ಆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ಒಬ್ಬ ರಾಜಕಾರಣಿಗಾದ್ರೂ ಗೊತ್ತಾ? ಇಲ್ಲ ಅವರಿಗೂ ಸರ್ಕಾರಿ ಶಾಲೆಗಳಿಗೂ ಸಂಬಂಧನೇ ಇಲ್ಲ. ಎಲ್ಲನೂ ಖಾಸಗೀಕರಣ ಮಾಡುವವರು ಕನ್ನಡ ಶಾಲೆಗಳನ್ನು ಉಳಿಸಲ್ಲ. ಗುಲಬರ್ಗಾ ಜಿಲ್ಲೆಯ ಪ್ರತಿಯೊಂದು ಹಳ್ಳಿ ಹಳ್ಳಿಗಳಿಗೆ ಹೋಗಿ ಸರ್ವೇ ಮಾಡಿದಾಗ ತಿಳಿದದ್ದು ಏನಂದರೆ- ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿಯು ಸರ್ಕಾರಿ ಟೀಚರ್ ಗಳ ಸಂಖ್ಯೆ 2-3ಇದ್ರೆ ಹೆಚ್ಚಾಯ್ತು. ಆ ಇಬ್ಬರು ಮೂರುಜನ ಟೀಚರ್ ಗಳೆ ಎಲ್ಲ ವಿಷಯಗಳನ್ನು ಹೇಳಬೇಕು. ಕೆಲವೊಂದು ಶಾಲೆಗಳಲ್ಲಿ ಅತಿಥಿ ಟೀಚರ್ ಇದ್ದಾರೆ. ಅವರ ಸಂಬಳ ಎಷ್ಟು ಅಂದ್ರೆ 6-8ಸಾವಿರ ಮಾತ್ರ.

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ಅನೇಕ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಮೂಲಭೂತ ಸೌಕರ್ಯಗಳ ಕೊರತೆಯ ಜೊತೆಗೆ ವಿಷಯವಾರು ಶಿಕ್ಷಕರು ಇಲ್ಲ. ರಾಜಕಾರಣಿಗಳಿಗೆ ಸರ್ಕಾರಿ ಶಾಲೆಗಳು ಇದ್ರೆಷ್ಟು ಬಿಟ್ಟರೆಷ್ಟು? ಅವರ ಮಕ್ಕಳಿಗಾಗಿ ವಿದೇಶಗಳಲ್ಲಿ ಶಾಲೆಗಳಿವೆ. ಕರ್ನಾಟಕದ ಚಿಂತೆ ಇವರಿಗ್ಯಾಕೆ ಹೇಳಿ.
ಚುನಾವಣೆ ಸಂದರ್ಭದಲ್ಲಿ ಸಾರಾಯಿ, ದುಡ್ಡು ಕೊಟ್ಟು ಯುವಜನರ ದಿಕ್ಕು ತಪ್ಪಿಸುತ್ತಾರೆ, ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಜಾತಿ ಧರ್ಮದ ಹೆಸರಿನಲ್ಲಿ ಯುವಜನರ ಬದುಕನ್ನ ಬೆಂಕಿಯಲ್ಲಿ ಬೇಯಿಸಿ ತಮ್ಮ ಮನೆ ಬೆಳಗಿಸಿಕೊಳ್ಳುವವರಿಗೆ ಈ ಸಲ ಪಾಠ ಕಲಿಸಬೇಕು.
ಚುನಾವಣೆ ಬಂದರೆ ಸಾಕು ಎಲ್ಲ ರಾಜಕೀಯ ಪಕ್ಷದ ನಾಯಕರು, ಮುಖ್ಯವಾಗಿ ಯುವಕರನ್ನೆ ಟಾರ್ಗೆಟ್ ಮಾಡುತ್ತಾರೆ. ನೂರರಲ್ಲಿ 50% ರಷ್ಟು ಯುವಜನರನ್ನು ಕುಡಿತದ ದಾಸರನ್ನಾಗಿ, ಜಾತಿ ಧರ್ಮದ ಹೆಸರಿನಲ್ಲಿ ಕೋಮುವಾದಿಗಳನ್ನಾಗಿ ಪರಿವರ್ತಿಸುವುದು ಈ ನಮ್ಮ ರಾಜಕೀಯ ನಾಯಕರುಗಳೆ. ಇವರಿಂದ ದೂರವಿದ್ದು ನಮ್ಮ ನಾಳೆಗಳು ನೆರಳು ಕೊಡುವಂತಿರಲಿ.
ತಾಯಿ ಒಬ್ಬಳು ಗಳಗಳನೆ ಅಳುತ್ತಾ ಹೇಳುತ್ತಾಳೆ “ಏನಾರ ಮಾಡ್ರಿ ಮೊದಲು ನಮ್ಮೂರಾಗಿನ ಶರಿ ದುಖಾನ ಬಂದ್ ಮಾಡುಸಬೇಕರೀ.. ನನ್ನ ಮಗ ಎಟ್ ಚೆಂದ ಓದತ್ತಿದ್ದನು, 12ನೇ ನೂ ಪಾಸ್ ಆಗಿನು. ಮುಂದ ಕಾಲೇಜಿಗೆ admission ಮಾಡ್ಯಾನ. ಆದರ ಒಂದಿನನೂ ಕಾಲೇಜಿಗೆ ಹೋಗಲ್ಲ. ಮುಂಜಾನಿ ಎದ್ದು ಶರಿ ದುಖಾನ ಮುಂದೆ ಇರ್ತಾನೆ. ಕುಡದು ಮಂದಿ ಜತಿ ಜಗಳ ಮಾಡ್ಕೊತ್ತಾನ. ಹೊರಗ ಬಿ ಹುಡುಸ್ಕೊಂಡು ಬಡಿಸ್ಕೊಂಡು ಬರ್ತಾನ, ಮನ್ಯಾಗ ಬಂದ್ರ ಅವರ ಅಪ್ಪನೂ ಸಾಯುವಂಗ ಹೊಡಿತಾನ. ಎಲ್ಲಿ ನನ್ನ ಮಗನ ನಾ ಕಳಕೊಂಡು ಬಿಡ್ತಿನಿ ಅಂತ ಹೆದರಿಕಿ ಆಗತ್ತಾದ ರೀ.. ಏನಾರ ಮಾಡಿ ನಮ್ಮೂರಾನ ಶರಿ ದುಖಾನ ಬಂದ್ ಮಾಡಿಸಬೇಕ ರೀ”ʼ ಅಂತ ಆ ತಾಯಿ ಗೋಳ್ಯಾಡಿ ಅಳತ್ತಾಳ. ಈ ತಾಯಿ ಕಣ್ಣೀರಿಗೂ ನ್ಯಾಯ ಕೊಡಿಸಬೇಕು
ರಾಜಕಾರಣಿಗಳು ನಮ್ಮ ಕಡೆ ಗಮನ ಹರಿಸುವುದು 5 ವರ್ಷಕ್ಕೊಮ್ಮೆ. ಈಗ ಚುನಾವಣೆ ಬಂದಿದೆಯಲ್ಲ, ಈಗ ನಾವು ಎಚ್ಚೆತ್ತುಕೊಳ್ಳುವ ಸಂದರ್ಭ ಬಂದಿದೆ. ಮುಖ್ಯವಾಗಿ ಯುವಜನರ ಕೈಯಲ್ಲಿ ಈ ದೇಶದ ಭವಿಷ್ಯವಿದೆ. ಇದನ್ನ ನಾವು ಹೇಗೆ ರೂಪಿಸಬೇಕು ಅನ್ನುವುದನ್ನು ತಲೆಯಲ್ಲಿ ಇಟ್ಟಕೊಂಡು ಓಟ ಮಾಡಿ. ಧರ್ಮ, ಹಿಂದೂತ್ವ ಅಂತ ಕಾಲಕಳೆಯುವವರನ್ನ ದೂರ ಇಡಿ.
ಪ್ರಿಯಾಂಕಾ ಮಾವಿನಕರ್
ಯುವ ಬರಹಗಾರ್ತಿ
ಇದನ್ನೂ ಓದಿ – https://peepalmedia.com/failures-of-the-bjp-government-in-the-field-of-education/ http://ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರಕಾರದ ವೈಫಲ್ಯಗಳು