Home ಜನ-ಗಣ-ಮನ ಯುವ ನೋಟ “ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು…”

“ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು…”

0

ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು.

“ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…” ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. “ಇವ್ರ್ ಕರ್ಮ ಎಂತ ಹಾರು ಫ್ಯಾನ್ ಮಾಡುಸ್ತಾರೆ..” ಅಂತ ಮನಸಲ್ಲಿ ಅಂದ್ಕೋತ ಮತಾಡ್ತ ಇದ್ದ ಹಾಗೆ ಗೊತ್ತಾಯ್ತು. ಅದು ಹಾರು ಫ್ಯಾನ್ ಅಲ್ಲ ಡ್ರೋನ್ ಎಂದು.

 ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು, ಮಗ, ಮಗಳ ಮದ್ವೆ ಮಾಡ್ಬೇಕು, ಮನೆ ಕಟ್ಬೇಕು, ಅನಾರೋಗ್ಯ ಪೀಡಿತ ವಯಸ್ಸಾದವರ ಆಸ್ಪತ್ರೆಗೆ ಸೇರಿಸಬೇಕು ಏನೆಲ್ಲ ಮಾಡ್ಬೇಕು ಅಂದ್ರು ಮಲೆನಾಡಿಗರಿಗೆ ಬೆನ್ನೆಲುಬಾಗಿ ಆರ್ಥಿಕ ಧೈರ್ಯ ಕೊಟ್ಟಿದ್ದು ಅಡಿಕೆ. ಯಾವ ಮಟ್ಟಕ್ಕೆಂದರೆ ಮಲೆನಾಡಿನ ಮೂಲ ಪ್ರಭೇದವೇ ಅಲ್ಲದ ಅಡಿಕೆ ಬೆಳೆ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಮಾತು ಗದ್ದೆ, ತೋಟ, ಹಡ್ಡೆ, ಮದ್ವೆ ಮನೆ, ಸಾವಿನ ಮನೆ ಎಲ್ಲ ಕಡೆ ಕೇಳ್ತಿದೆ.

 ಇದು ಇವತ್ತಿನ ಮಲೆನಾಡಿನ ಸ್ಥಿತಿಯಲ್ಲಿ ಸತ್ಯವೂ ಹೌದು. ಅಡಿಕೆ ಇದ್ದರೆ ಬದುಕು ಎನ್ನುವಷ್ಟು ಅವಲಂಬನೆಯೇ ಬಹುಪಾಲು. ಈಗ ಕಾಡುತ್ತಿರುವ ಅಭದ್ರತೆ ಒಂದೆಡೆ ಆದರೆ ಅಡಿಕೆ ಮಲೆನಾಡಿನ ಸಂಸ್ಕೃತಿ, ಜನಜೀವನವನ್ನೇ ಮತ್ತೆಂದು ಸರಿಪಡಿಸಲಾಗದಷ್ಟು ಅಂದಗೆಡಿಸಿ ಇಟ್ಟಿರುವುದು ಜೀರ್ಣಿಸಿಕೊಳ್ಳಲಾಗದ್ದು. ಹಿರಿಯರು ಎರಡು ಗುಡ್ಡಗಳ ನಡುವಿನ ಸರಕಲು ಜಾಗದಲ್ಲಿ ಸಾಂಪ್ರದಾಯಿಕವಾಗಿ, ಸಾವಯವವಾಗಿ ಬೆಳೆಯುತ್ತಿದ್ದ ಬೆಳೆ ಕಳೆದೆರಡು ದಶಕಗಳಿಂದ ಭತ್ತದ ಗದ್ದೆಗಳ ಜೊತೆಜೊತೆಗೆ ಮನೆ ಬಳಿಯ ಗುಡ್ಡಗಾಡುಗಳನ್ನೆಲ್ಲ ಆವರಿಸಿ ಕೇಕೆ ಹಾಕುತ್ತಿತ್ತು. ಮದುವೆ ಮನೆ ಸಾವಿನ ಮನೆ ತೊಟ್ಟಿಲು ಶಾಸ್ತ್ರ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮಾತೆತ್ತಿದರೆ “ನಿಮ್ಗೆ ಎಷ್ಟ್ ಕುಂಟಾಲ್ ಅಡಿಕೆ ಆಗ್ತದೆ…” ಪರಿಚಯದ ನಂತರದ ಮಾತೇ ಇದಾಗಿತ್ತು. ಗದ್ದೆ ಮಾಡ್ತೇವೆ ಎಂದರೆ ಸಾಕು “ಇನ್ನೂ ಗದ್ದೆ ಇಟ್ಕೊಂಡಿರ? ನಮ್ಗ್ ಆ ರಗಳೆ ಇಲ್ಲ. ಪೂರ್ತಿ ತ್ವಾಟ ಹಾಕಿವಿ” ಹೊಟ್ಟೆಗೆ ಅನ್ನ ಬೆಳೆದು ಕೊಳ್ಳುವುದೇ ರಗಳೆ ಎನ್ನುವುದರ ಮಟ್ಟಕ್ಕೆ ಮಾತನಾಡಿಕೊಳ್ಳುವವರಿಗೇನು ಕಡಿಮೆ ಇರಲಿಲ್ಲ.

ಮಲೆನಾಡಿನಲ್ಲಿ ಬೇರೆ ಯಾವ ಬೆಳೆಯು ಕೊಡಲಾಗದ ಲಾಭದ ಹಿಂದೆ ಬಿದ್ದವರು ಇಲ್ಲಿಯ ಪ್ರಕೃತಿಗೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ, ಅದ್ದೂರಿ ಮದುವೆ, ಇನ್ನೂ ಮುಂದೆ ಹೋಗಿ ಹುಟ್ಟಿದ ಹಬ್ಬದ ಸಂಭ್ರಮ ಇನ್ನು ಏನೇನೋ ಲಕ್ಷ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡುವಷ್ಟು ಗಟ್ಟಿಗರಾಗಿದ್ದರು. ಗಟ್ಟಿಗರಾಗಿದ್ದರು ಎನ್ನುವುದಕ್ಕಿಂತ ತೋರುಗಾಣಿಕೆಯ ಬದುಕು. ಈಗೀಗ ಮಲೆನಾಡಿನಲ್ಲಿ ನಿರ್ಮಾಣವಾದ ಯಾವುದೇ ಸ್ಲ್ಯಾಬ್ ಮನೆಗಳ ಒಳಹೊಕ್ಕರೂ ಸರ್ವೇ ಸಾಮಾನ್ಯವಾಗಿ ಗುರುತಿಸಬಹುದಾದ ಒಂದು ಅಂಶವೆಂದರೆ ಬಂದವರಿಗೆ ತೋರಿಸಲೆಂದೇ ಮಾಡಿಟ್ಟ ಲಕ್ಷದ ಖರ್ಚು ಮಾಡಿದ ಅಡುಗೆ ಮನೆ. ಅಲ್ಲಿ ಅಡುಗೆಯನ್ನು ಮಾಡದೆ ಕೇವಲ ವಾಸ್ತುವಿನ ಹೆಸರು ಹೇಳಿಕೊಂಡು ಬಂದವರಿಗೆ ಕರೆಕರೆದು ತೋರಿಸುವ ಗತ್ತಿಗಷ್ಟೇ ಆಗಿತ್ತದು. ದಿನ ನಿತ್ಯದ ಅಡುಗೆ ಕೆಲಸಕ್ಕೆ ಅಲ್ಲೆಲ್ಲೋ ಮೂಲೆಯಲ್ಲಿ ಮತ್ತೊಂದು ಅಡುಗೆ ಮನೆ. ಕೆಲವೇ ವರ್ಷಗಳಲ್ಲಿ ಮಳೆ ತಡೆದುಕೊಳ್ಳಲಾಗದೆ ಮಳೆ ನೀರು ತೊಟ್ಟಿಕ್ಕುವ ಸ್ಲ್ಯಾಬ್ ಮನೆಗಳ ಮೇಲೆ ಮತ್ತೆ ಕಟ್ಟಿ ಹೆಂಚು, ಶೀಟ್ ಹಾಕಿಸಿ ತಮ್ಮ ತೋರುಗಾಣಿಕೆ ಬದುಕು ಹೊರಕಾಣದಂತೆ ತೇಪೆ ಹಚ್ಚುವ ಕಾರ್ಯ.

ಇಲ್ಲಿಯ ಭೌಗೋಳಿಕ ಲಕ್ಷಣಗಳಿಗೆ ಹೊಂದಿಕೆಯಾಗದಂತಹ ಮನೆ ಕಟ್ಟಡಗಳ ನಿರ್ಮಾಣ ಒಂದೆಡೆಯಾದರೆ, ಮದುವೆ ಕಾರ್ಯಕ್ರಮಗಳು ಇಲ್ಲಿನ ಸಂಸ್ಕೃತಿ ಸೊಗಡನ್ನ ಬುಡಮೇಲು ಮಾಡಲು ಮುಂದಾಗಿದ್ದವು. ಹಳ್ಳಿ ಹಳ್ಳಿಗಳ ಹೊಕ್ಕಿದ ಡಿಜೆಯ ಸದ್ದಿನೊಂದಿಗೆ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಮತ್ತೇರಿಸಿ ಕುಣಿಸುತ್ತಿದ್ದವು. ಕಾಲುದಾರಿಯಲ್ಲಿ ಓಡಾಡಿ ಜೀವನ ಕಟ್ಟಿಕೊಂಡ ಊರು ಅಗಲವಾದ ಡಾಂಬರು ರಸ್ತೆಗಳೇ ಬೇಕೆನ್ನುವಷ್ಟು ಹಠ ಹಿಡಿದಿತ್ತು. ಮನೆಮನೆಗೂ ಬಂದು ನಿಂತ ಕಾರು ಬೈಕುಗಳಿಂದ ವೈಭವದ ಮೆಟ್ಟಿಲು ಹತ್ತುವ ತವಕ. ಒಬ್ಬರು ಮಾಡುತ್ತಾರೆಂದು ಮತ್ತೊಬ್ಬರು ಹೇಗೂ ಅಡಿಕೆ ಆಗುತ್ತದಲ್ಲ ಎಂಬ ನಂಬಿಕೆಯಲ್ಲಿಯೇ ಅಲ್ಲಿ ಇಲ್ಲಿ ಸಾಲ ಮಾಡಿ ಸುರಿಯುತ್ತಿದ್ದರು. ಈಗ ಅಡಿಕೆಯ ನಂಬಿಕೆಗೆ ಹೊಡೆತ ಬೀಳುವಂತಾಗಿದೆ.

 ಸಾಂಪ್ರದಾಯಿಕ ಕೃಷಿಯಲ್ಲಿ ಮುಂದುವರಿಯುತ್ತಿರುವ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳು ದುರಾಸೆ ಬೀಳದೆ ಉಳಿದಿದ್ದರೂ ಸಹ ಅವರ ಬದುಕಿನ ಅವಲಂಬನೆ ಅಡಿಕೆಯೇ ಆಗಿತ್ತು. ಅಡಿಕೆ ಆಗುತ್ತದೆ ಎಂಬ ನಂಬಿಕೆಯಲ್ಲಿಯೇ ಮನೆಯಲ್ಲಿಯೇ ಇರಲಿ ಎಂಬ ಭಾವನೆ ತೆಗೆದು ಎಷ್ಟೋ ಹೆಣ್ಣು ಮಕ್ಕಳು ಡಿಗ್ರಿ ಪಡೆಯುವಂತಾಯ್ತು. ಮನೆಮಕ್ಕಳು ಓದಿ ಉದ್ಯೋಗ ಹಿಡಿಯುವಂತಾಯ್ತು. ಇವೆಲ್ಲಕ್ಕೂ ಮೂಲ ಬಲವಾಗಿದ್ದ ಅಡಿಕೆ ಯಾವ ಮಟ್ಟಕ್ಕೆ ಚರ್ಚಾ ವಸ್ತು ಆಗಿತ್ತೆಂದರೆ, ಮುಖ್ಯವಾಗಿ ಜಾತಿಯ ಆಧಾರದ ಮೇಲೆ ಮೇಲು ಕೀಳು ನಡೆಸುವುದಕ್ಕಿಂತ ಅಡಿಕೆ ಎಷ್ಟು ಕುಂಟಾಲ್ ಆಗುತ್ತದೆ ಎನ್ನುವುದರ ಮೇಲೆ ಜನರ ಯೋಗ್ಯತೆ ಅಳೆಯುವ ಮಟ್ಟಕ್ಕೆ ಬಂದು ನಿಂತಿತ್ತು ಬದುಕು. ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರು ಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮಲೆನಾಡಿನ ವಿಷಯದಲ್ಲಿ ಸರ್ಕಾರ ಕೊಟ್ಟಿದ್ದು ಕಡಿಮೆ ಇಲ್ಲಿಂದ ಪಡೆದದ್ದೇ ಹೆಚ್ಚು. ಹಳದಿ ಎಲೆ ರೋಗ ಬಂದು ಮೂರು ದಶಕಗಳಾದರು ಸಹ ಯಾವುದೇ ಔಷಧಿ ಕಂಡುಹಿಡಿಯಲಿಲ್ಲ. ಎಲೆಚುಕ್ಕಿ ರೋಗಕ್ಕೂ ಮದ್ದು ಕಂಡು ಹಿಡಿಯುವ ಸಂಶೋಧನೆಗಳನ್ನ ಸಮರ್ಥವಾಗಿ ನಡೆಸುತ್ತಾರೆಂಬ ಖಾತ್ರಿಯೂ ಇಲ್ಲ. ಆದರೆ ಅಡಿಕೆಯ ವಿಷಯದಲ್ಲಿ ಎಲ್ಲ ಹೆಚ್ಚು ಗಾರಿಕೆ ಮುರಿದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟ ಪ್ರಕೃತಿಯ ಶಕ್ತಿ ನಿಜದ ಆಶ್ಚರ್ಯ. 

ದಿಗಂತ್ ಬಿಂಬೈಲ್‌

ಹವ್ಯಾಸಿ ಬರಹಗಾರರು

You cannot copy content of this page

Exit mobile version