Home ವಿಶೇಷ ಆಪ್‌ ಪಕ್ಷದ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್‌ ಗಧ್ವಿ ಯಾರು?

ಆಪ್‌ ಪಕ್ಷದ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್‌ ಗಧ್ವಿ ಯಾರು?

0

ಅತ್ತ ಚುನಾವಣಾ ಆಯೋಗವು ಗುಜರಾತ್‌ ರಾಜ್ಯದ ಚುನಾವಣೆ ಘೋಷಿಸುತ್ತಿದ್ದಂತೆ ಇತ್ತ ಅರವಿಂದ ಕೇಜ್ರಿವಾಲ್‌ ಅವರ ನೇತ್ರತ್ವದ ಆಮ್‌ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ನಿನ್ನೆ ಈ ಕುರಿತು ಜನರ ಬಳಿ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಯಾರಾಗಬೇಕೆನ್ನುವುದನ್ನು ಸೂಚಿಸುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಜನರು ತಮ್ಮ ಆಯ್ಕೆಯಾಗಿ ಇಸುದನ್‌ ಗದ್ವಿ ಎನ್ನುವವರನ್ನು ಮುಂದಿರಿಸಿದ್ದಾರೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಈ ಅಚ್ಚರಿಯ ಆಯ್ಕೆಯಂತೆ ಕಾಣುವ ಇಸುದನ್‌ ಗಧ್ವಿ ಮೂಲತಃ ಓರ್ವ ಪತ್ರಕರ್ತ. 2005ರಲ್ಲಿ ಗುಜರಾತ್ ವಿದ್ಯಾಪೀಠದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಇವರು ದೂರದರ್ಶನ ನಿರೂಪಕರಾಗಿ ಖ್ಯಾತರು.

ತಮ್ಮ ವೃತ್ತಿಜೀವನದ ಆರಂಭದಲ್ಲಿ, ಗಧ್ವಿ ದೂರದರ್ಶನದ ಜನಪ್ರಿಯ ಕಾರ್ಯಕ್ರಮವಾದ ‘ಯೋಜನಾ’ದಲ್ಲಿ ಕೆಲಸ ಮಾಡಿದರು. 2007ರಿಂದ 2011ರ ತನಕ, ಇಸುದನ್ ಪೋರಬಂದರ್ ಪ್ರದೇಶದಲ್ಲಿ ಆನ್-ಫೀಲ್ಡ್ ಪತ್ರಕರ್ತರಾಗಿ ETV ಗುಜರಾತಿಯಲ್ಲಿ ಕೆಲಸ ಮಾಡಿದ್ದರು. ನಂತರ ಅವರು ತಮ್ಮ ಸುದ್ದಿ ಕಾರ್ಯಕ್ರಮವೊಂದರಲ್ಲಿ ಗುಜರಾತಿನ ಡಾಂಗ್ ಮತ್ತು ಕಪರಡಾ ತಾಲೂಕಿನಲ್ಲಿ ನಡೆದ ಅಕ್ರಮ ಅರಣ್ಯನಾಶದ 150 ಕೋಟಿ ರೂ.ಗಳ ಹಗರಣವನ್ನು ಬಹಿರಂಗಪಡಿಸಿದರು, ಇದರ ಪರಿಣಾಮವಾಗಿ ಗುಜರಾತ್ ಸರ್ಕಾರವು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಈಡಾಯಿತು. ಈ ಘಟನೆಯ ನಂತರ ಗಧ್ವಿಯವರ ಖ್ಯಾತಿ ಎಲ್ಲೆಡೆ ಹರಡಿತು.

ಇದರ ನಂತರ ವಿಟಿವಿ ಗುಜರಾತ್ ಚಾನೆಲ್ಲಿನಲ್ಲಿ ಗುಜರಾತಿ ಭಾಷೆಯ ಮಹಾಮಂಥನ್‌ ಎನ್ನುವ ಕಾರ್ಯಕ್ರಮವನ್ನು 2015ರಿಂದ 2021ರ ತನಕ ನಡೆಸಿಕೊಟ್ಟರು. ಇದೊಂದು ಪ್ರೈಮ್‌ ಟೈಮ್‌ ಕಾರ್ಯಕ್ರಮವಾಗಿತ್ತು. ಅದರ ನಂತರ ಜೂನ್‌ 2021ರಲ್ಲಿ ಆಮ್‌ ಆದ್ಮಿ ಪಕ್ಷವನ್ನು ಸೇರಿದರು. “ನಾನು ಜನಸೇವೆಗಾಗಿ ಮಾಧ್ಯಮ ರಂಗಕ್ಕೆ ಬಂದೆ. ಗುಜರಾತಿನ ಜನರು ನನ್ನನ್ನು ಇಷ್ಟಪಟ್ಟರು. ಮಾಧ್ಯಮ ಕ್ಷೇತ್ರದಲ್ಲಿಯೇ ಉಳಿದುಕೊಂಡರೆ ನಾನು ಕೆಲವೇ ಜನರಿಗಷ್ಟೇ ಸೇವೆ ಸಲ್ಲಿಸಬಹುದು, ಆದರೆ ರಾಜಕೀಯಕ್ಕೆ ಸೇರಿದರೆ ಇನ್ನೂ ಹೆಚ್ಚಿನ ಜನರಿಗೆ ನನ್ನ ಸೇವೆಯನ್ನು ವಿಸ್ತರಿಸಬಹುದು ಎನ್ನುವುದು ಮನದಿಂಗಿತವಾಗಿತ್ತು” ಎನ್ನುವ ಅವರು ಗುಜರಾತಿನ ರಾಜಕೀಯಕ್ಕೆ ಹೊಸತನ ನೀಡಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

1982ರಲ್ಲಿ ಜನಿಸಿದ ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಯುವ ರಾಜಾಕಾರಣಿಯೆಂದೇ ಹೇಳಬಹುದು. ಸಾಂಪ್ರದಾಯಿಕ ರಾಜಕಾರಣದ ಆಚೆಗೆ ಒಮ್ಮೊಮ್ಮೆ ಅಚ್ಚರಿಯ ಆಯ್ಕೆಗಳನ್ನು ಜನರ ಮುಂದಿಡುವಲ್ಲಿ ಸದಾ ಮುಂದಿರುವ ಆಪ್‌ ಈ ಬಾರಿಯೂ ವಿಭಿನ್ನ ಹಿನ್ನೆಲೆಯ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ರಾಜಕೀಯ ಪಂಡಿತರನ್ನು ಅಚ್ಚರಿಯಲ್ಲಿ ಕೆಡವಿದೆ.

ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಅವರಲ್ಲದೆ, ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯಾ ಕೂಡ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ರೇಸಿನಲ್ಲಿದ್ದರು. ಪಾಟಿದಾರ್ ಸಮುದಾಯ ಗುಜರಾತಿನಲ್ಲಿ ಮೀಸಲಾತಿಗಾಗಿ ನಡೆಸಿದ್ದ ಆಂದೋಲನದಲ್ಲಿ ಗೋಪಾಲ್ ಇಟಾಲಿಯಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದ ರೈತ ಕುಟುಂಬಕ್ಕೆ ಸೇರಿದವರು ಮತ್ತು ರಾಜ್ಯದ ಜನಸಂಖ್ಯೆಯ ಶೇಕಡಾ 48ರಷ್ಟಿರುವ ಇತರ ಹಿಂದುಳಿದ ಜಾತಿಗಳಿಗೆ ಸೇರಿದವರು.

ಇತ್ತೀಚೆಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಎಪಿ ಪಕ್ಷವು ತನ್ನ ಗುಜರಾತ್ ಘಟಕವನ್ನು ವಿಸರ್ಜಿಸಿ ಅದನ್ನು ಹೊಸ ಸಾಂಸ್ಥಿಕ ರಚನೆಯೊಂದಿಗೆ ಪುನಶ್ಚೇತನಗೊಳಿಸಿತ್ತು. ಈ ಬದಲಾವಣೆಯಲ್ಲಿ ರಾಜ್ಯದ ಜನಪ್ರಿಯ ವ್ಯಕ್ತಿಯಾಗಿದ್ದ ಇಸುದನ್‌ ಗಧ್ವಿಯವರನ್ನು ಆಪ್‌ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಳಿಸಿತ್ತು.

ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಗುಜರಾತಿನಲ್ಲಿ ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಡಿಸೆಂಬರ್ 8ರಂದು ಹಿಮಾಚಲ ಪ್ರದೇಶದ ಮತಗಳ ಎಣಿಕೆಯೊಂದಿಗೆ ಗುಜರಾತಿನ ಮತ ಎಣಿಕೆಯೂ ನಡೆಯಲಿದೆ ಎಂದು ಗುರುವಾರ ಘೋಷಿಸಿತ್ತು.

You cannot copy content of this page

Exit mobile version