ಬೆಳಗಾವಿ: 2023ರ ಡಿಸೆಂಬರ್ 10-11 ರಂದು ಹೊಸ ವಂಟಮುರಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಅವರನ್ನು ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣದಲ್ಲಿ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 6 ಮಹಿಳೆಯರು ಸೇರಿದಂತೆ 12 ಜನರಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ (Rigorous Imprisonment) ವಿಧಿಸಿದೆ.
ಶಿಕ್ಷೆಗೊಳಗಾದವರಲ್ಲಿ ಬಸಪ್ಪ ರುದ್ರಪ್ಪ ನಾಯಕ್, ರಾಜು ರುದ್ರಪ್ಪ ನಾಯಕ್, ಕೆಂಪಣ್ಣ ರಾಜು ನಾಯಕ್ ಮತ್ತು ಇತರರು ಸೇರಿದ್ದಾರೆ.
ಸಂತ್ರಸ್ತೆಯ ಮಗ ಆರೋಪಿಗಳ ಪೈಕಿ ಒಬ್ಬರ ಮಗಳೊಂದಿಗೆ ಓಡಿಹೋದ ನಂತರ ಉಂಟಾದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಆರೋಪಿಗಳ ಗುಂಪು ಮಹಿಳೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿತ್ತು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು.
ಸಂತ್ರಸ್ತೆಯ ದೂರಿನ ಮೇರೆಗೆ, 2023ರ ಡಿಸೆಂಬರ್ 11 ರಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದರಲ್ಲಿ ಭಾರತೀಯ ದಂಡ ಸಂಹಿತೆ (IPC) ಮತ್ತು ಆಸ್ತಿ ನಷ್ಟ ತಡೆ ಕಾಯ್ದೆಯಡಿ ಅನೇಕ ಆರೋಪಗಳನ್ನು ಪಟ್ಟಿ ಮಾಡಲಾಗಿತ್ತು.
2023ರ ಡಿಸೆಂಬರ್ 16 ರಂದು ಸಿಐಡಿ (CID) ತನಿಖೆಯನ್ನು ಕೈಗೆತ್ತಿಕೊಂಡಿತು ಮತ್ತು 2024ರ ಏಪ್ರಿಲ್ 22 ರಂದು ದೋಷಾರೋಪಣಾ ಪಟ್ಟಿಯನ್ನು (chargesheet) ಸಲ್ಲಿಸಿತು. ಇದರಲ್ಲಿ 92 ಸಾಕ್ಷಿಗಳು ಮತ್ತು 37 ಸಾಕ್ಷ್ಯಗಳನ್ನ ಪಟ್ಟಿ ಮಾಡಲಾಗಿತ್ತು.
ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ನ್ಯಾಯಾಧೀಶರಾದ ಎಚ್.ಎಸ್. ಮಂಜುನಾಥ್ ಅವರು ತೀರ್ಪು ನೀಡಿದರು ಮತ್ತು ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ಎಸ್. ಸುಲ್ಲದ್ ವಾದ ಮಂಡಿಸಿದರು.
