ಜುಲೈ 18ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸಭೆಯನ್ನು ಆಯೋಜಿಸಲಾಗಿದೆ. ನಾಳೆ ನಡೆಯಲಿರುವ ಎನ್ಡಿಎ ಸಭೆಯಲ್ಲಿ ನಮ್ಮ 38 ಮಿತ್ರಪಕ್ಷಗಳು ಭಾಗವಹಿಸುವುದನ್ನು ಖಚಿತಪಡಿಸಿವೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಜೆಪಿ ನಡ್ಡಾ ಹೇಳಿಕೊಂಡಿದ್ದಾರೆ.
ಜುಲೈ 18ರಂದು ದೆಹಲಿಯಲ್ಲಿ ನಡೆಯಲಿರುವ ಎನ್ಡಿಎ ಸಭೆಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಷ್ಟ್ರೀಯ ಲೋಕ ಜನತಾ ದಳದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಅವರನ್ನು ಆಹ್ವಾನಿಸಿದ್ದಾರೆ.
ಸೋಮವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಡ್ಡಾ, ʼಕಳೆದ 9 ವರ್ಷಗಳಲ್ಲಿ ಎನ್ಡಿಎ ಸರ್ಕಾರ ಉತ್ತಮ ಆಡಳಿತ ನೀಡಿದೆ ಮತ್ತು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಇದುವರೆಗೆ 28 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳಿಗೆ (ಡಿಬಿಟಿ) ವರ್ಗಾಯಿಸಲಾಗಿದೆʼ ಎಂದರು.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (NDA) ದೇಶ ಸೇವೆ ಮತ್ತು ದೇಶವನ್ನು ಬಲಪಡಿಸಲು ರೂಪುಗೊಂಡ ಆದರ್ಶ ಮೈತ್ರಿಯಾಗಿದೆ ಎಂದು ಜೆಪಿ ನಡ್ಡಾ ಹೇಳಿದರು.
ಯುಪಿಎ ಮೈತ್ರಿಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಯುಪಿಎಗೆ ಯಾವುದೇ ನಾಯಕರಿಲ್ಲ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯೂ ಅದಕ್ಕಿಲ್ಲ ಎಂದು ಹೇಳಿದರು. ಇದು ಸ್ವಾರ್ಥ ಮತ್ತು ಕೇವಲ ಫೋಟೋ ತೆಗೆಸಿಕೊಳ್ಳುವ ಸಲುವಾಗಿ ಹುಟ್ಟಿಕೊಂಡ ಮೈತ್ರಿ ಎಂದು ಅವರು ಜರಿದರು.