ಬೆಂಗಳೂರು, ಜುಲೈ 17 : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮಿತ್ರ ಪಕ್ಷಗಳು ಬಹುಮತವನ್ನು ಸಾಧಿಸಲಿದೆ. ಬಿಜೆಪಿ ಮಿತ್ರ ಪಕ್ಷಗಳು ಸೋಲನ್ನು ಅನುಭವಿಸಲಿದ್ದು , ವಿಪಕ್ಷಗಳ ಒಕ್ಕೂಟ ಗೆಲುವು ಸಾಧಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಯಾಗಿದ್ದು, ಸುಮಾರು 24 ಪಕ್ಷದ ನಾಯಕರು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ವಿಪಕ್ಷಗಳ ನಾಯಕರು ಇಂದು ಮತ್ತು ನಾಳೆ , ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಸಿಎಂ ವಿವರಿಸಿದರು.
ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುತ್ತಿರುವುದೇ ಬಿಜೆಪಿಯ ಕೊಡುಗೆ
ದೇಶವನ್ನು ಲೂಟಿ ಮಾಡಿದಂತಹ ಪಕ್ಷಗಳು ಇಂದು ಒಂದಾಗುತ್ತಿವೆ ಎಂಬ ಬಿಜೆಪಿ ಪಕ್ಷದ ಹೇಳಿಕೆಗೆ ಉತ್ತರ ನೀಡುತ್ತಾ, ಈ ದೇಶದ ಆರ್ಥಿಕತೆಯನ್ನು ಹಾಳು ಮಾಡಿದವರೇ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿಯವರು ಬಂದ ನಂತರ ಬೆಲೆ ಏರಿಕೆ, ಬಡವರು, ರೈತರು, ದಲಿತರು ಇಂದು ಬದುಕಲು ಅಸಾಧ್ಯವಾದ ಪರಿಸ್ಥಿತಿ ಬಂದಿದೆ. ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುವಂತಾಗಿದೆ. ಇದು ಬಿಜೆಪಿಯ ಕೊಡುಗೆ ಎಂದು ತಿಳಿಸಿದರು.
ʼಜೆಡಿಎಸ್ ನ ಸಿದ್ದಾಂತವಿಲ್ಲದ ಪಕ್ಷಗಳು ಒಂದೆಡೆ ಸೇರುತ್ತಿರುವುದರಿಂದ, ನಾವು ಎನ್ ಡಿ ಎ ಕಡೆ ಹೋದರೆ ತಪ್ಪಲ್ಲ, ಪಕ್ಷ ಉಳಿಸಿಕೊಳ್ಳುವುದು ಮುಖ್ಯ ಎಂದು ಜೆಡಿಎಸ್ ನ ಕುಮಾರಸ್ವಾಮಿಯವರು ಹೇಳುತ್ತಿರುವ ಬಗ್ಗೆ ಉತ್ತರ ನೀಡುತ್ತಾ , ಜೆಡಿಎಸ್ ಗೆ ಸಿದ್ಧಾಂತವೇ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯಾತೀತತೆ ಏನಾಯಿತು. ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಎಂದರ್ಥʼ ಎಂದರು.
ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿಯೂ 21 ಪಕ್ಷಗಳ ಮುಖಂಡರು ಬಂದರೂ ಪ್ರಯೋಜನವಾಗಲಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರೆನ್ನಲ್ಲಾ ಕರೆದಿದ್ದು ಕುಮಾರಸ್ವಾಮಿಯವರೇ , ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ಆ ಸಂಬಂಧವನ್ನು ಮುಂದುವರೆಸಲಿಲ್ಲ ಎಂದರು.