ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ಉಂಟುಮಾಡುವ ರೀಲ್ಸ್ ಮತ್ತು ಸಂದೇಶಗಳನ್ನು ಹಂಚಿಕೊಂಡು ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ ಆರೋಪದಲ್ಲಿ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 3ರಂದು ರಾತ್ರಿ ಉರ್ವ ಪೊಲೀಸರು ಫೇಸ್ಬುಕ್ ಪರಿಶೀಲನೆ ನಡೆಸುತ್ತಿದ್ದಾಗ, ಪುನೀತ್ ಕೆರೆಹಳ್ಳಿ ಎಂಬಾತನ ಖಾತೆಯಲ್ಲಿ ಎರಡು ಸಮುದಾಯಗಳ ನಡುವೆ ಕೋಮು ದ್ವೇಷವನ್ನು ಹುಟ್ಟಿಸುವಂತಹ ರೀಲ್ಸ್ ಅಪ್ಲೋಡ್ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
***
ಇದೇ ಸಂದರ್ಭದಲ್ಲಿ, ಮಂಗಳೂರಿನ ಇತರ ಪ್ರದೇಶಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದಲ್ಲಿ ಆರು ಜನರನ್ನು ಬಂಧಿಸಲಾಗಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ ಗ್ರೀನ್ಹೌಸ್ ಎನ್.ಎಸ್. ರೋಡ್ ನಿವಾಸಿ ಮೊಹಮ್ಮದ್ ಅಸ್ಲಾಂ (23) ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇಡ್ಯಾ ಗ್ರಾಮದ ಕಾಟಿಪಳ್ಳ ಆಶ್ರಯ ಕಾಲೊನಿ ನಿವಾಸಿಗಳಾದ ಚೇತನ್ (20) ಮತ್ತು ನಿತಿನ್ ಅಡಪ (23) ಎಂಬವರನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಫರಂಗಿಪೇಟೆ ಅರ್ಕುಳ ಕೊಪ್ಪಲ್ ಹೌಸ್ನ ರಿಯಾಝ್ ಇಬ್ರಾಹಿಂ (30), ಕೂಳೂರು ಕಸಬಾ ಬೆಂಗ್ರೆ ಕಿಲೇರಿಯಾ ಮಸೀದಿ ಬಳಿಯ ನಿವಾಸಿ ಜಮಾಲ್ ಝಾಕೀರ್ (21) ಹಾಗೂ ಹಳೆಯಂಗಡಿ ಕೊಳವೈಲ್ನ ಗುರುಪ್ರಸಾದ್ ಎಂಬವರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.