“ಇ.ಡಿ, ಐ.ಟಿ, ಸಿಬಿಐಗೆ ಹೆದರಿ ಬಿಜೆಪಿಗೆ ಸೇರುವ ರಕ್ತ ನನ್ನದು ಅಥವಾ ಕನಕಪುರದವರದ್ದು ಅಲ್ಲ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ದಾಖಲಿಸಿರುವ ಮಾನಹಾನಿ ಮೊಕದ್ದಮೆಯ ವಿಚಾರಣೆಗೆ ಬುಧವಾರ ಕನಕಪುರ ನ್ಯಾಯಾಲಯಕ್ಕೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ವಿರುದ್ಧ ಇ.ಡಿ, ಐ.ಟಿ, ಸಿಬಿಐ ಪ್ರಕರಣಗಳಿವೆ. ಆದರೆ, ನಾನು ಬಿಜೆಪಿಗೆ ಸೇರುವುದಿಲ್ಲ. ಯತ್ನಾಳ ಅವರ ಬಾಯಿ ಕೆಟ್ಟದ್ದು. ಅವರು ನಾನು ಬಿಜೆಪಿ ಸೇರುತ್ತೇನೆ ಎಂದು ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ₹100 ಕೋಟಿ ಮಾನಹಾನಿ ಮೊಕದ್ದಮೆ ಹಾಕಿ, ₹1 ಕೋಟಿ ನ್ಯಾಯಾಲಯ ಶುಲ್ಕ ಪಾವತಿಸಿದ್ದೇನೆ” ಎಂದರು.
“ಯತ್ನಾಳ ಅವರು ಈ ಪ್ರಕರಣವನ್ನು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿ, ಕನಕಪುರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವಂತೆ ಸೂಚಿಸಿತು. ಇಂದು ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದೇನೆ” ಎಂದು ಶಿವಕುಮಾರ್ ತಿಳಿಸಿದರು.
“ನಾನು ಈಗಾಗಲೇ ಎಲ್ಲಾ ಕಷ್ಟಗಳನ್ನು ಅನುಭವಿಸಿದ್ದೇನೆ. ಬಿಜೆಪಿಗೆ ಸೇರುವ ರಕ್ತ ನನ್ನದಲ್ಲ. ಕನಕಪುರದ ಜನರ ರಕ್ತ ಯಾರಿಗೂ ಶರಣಾಗುವಂತದ್ದಲ್ಲ” ಎಂದು ಅವರು ಒತ್ತಿ ಹೇಳಿದರು.