Home ದೇಶ ‘ಪಿಎಂ ಕಿಸಾನ್ ಸಮ್ಮಾನ್’ ಯೋಜನೆಯಿಂದ ರಾಜ್ಯದ 7 ಲಕ್ಷ ರೈತರು ಹೊರಕ್ಕೆ ; ಕಾರಣ ಇಲ್ಲಿದೆ...

‘ಪಿಎಂ ಕಿಸಾನ್ ಸಮ್ಮಾನ್’ ಯೋಜನೆಯಿಂದ ರಾಜ್ಯದ 7 ಲಕ್ಷ ರೈತರು ಹೊರಕ್ಕೆ ; ಕಾರಣ ಇಲ್ಲಿದೆ ನೋಡಿ

0

‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿದ್ದ ರಾಜ್ಯದ 53.81 ಲಕ್ಷ ರೈತರ ಪೈಕಿ 7 ಲಕ್ಷ ರೈತರನ್ನು ಅನರ್ಹಗೊಳಿಸಲಾಗಿದೆ. ಯೋಜನೆ ಆರಂಭವಾದ ಒಂದು ವರ್ಷದಲ್ಲಿ ಅತಿ ಹೆಚ್ಚು ರೈತರು ನೋಂದಣಿ ಮಾಡಿಸಿ ಪ್ರಯೋಜನ ಪಡೆದಿದ್ದರು. ಆದರೆ ಆ ಪಟ್ಟಿಯಲ್ಲಿ 7 ಲಕ್ಷಕ್ಕೂ ಅಧಿಕ ರೈತರನ್ನು ಅನರ್ಹಗೊಳಿಸಲಾಗಿದೆ.

2018ರಲ್ಲಿ ಯೋಜನೆ ಆರಂಭವಾದ ಸಂದರ್ಭದಲ್ಲಿ 19,819 ರೈತರು ನೋಂದಾಯಿಸಿದ್ದು, 2019-20 ರಲ್ಲಿ 53,81,184 ರೈತರು ನೋಂದಾಯಿಸಿದ್ದರು. ಅರ್ಹರಲ್ಲದವರು ಕೂಡ ಹೆಸರು ನೋಂದಾಯಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರಿಂದ ಪರಿಶೀಲನೆ ಕಾರ್ಯ ಆರಂಭಿಸಲಾಗಿದ್ದು, ಈಗ 47.50 ಲಕ್ಷ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಅನರ್ಹಗೊಂಡ ರೈತರಲ್ಲಿ ಭೂ ದಾಖಲೆಗಳ ಕೊರತೆ, ಇ-ಕೆವೈಸಿ ಸಮಸ್ಯೆ, ತೆರಿಗೆ ಪಾವತಿದಾರರು, ಸರ್ಕಾರಿ ನೌಕರಿ ಹೊಂದಿರುವುದು, ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಸೇರಿದಂತೆ ಅನೇಕ ಕಾರಣಗಳಿಂದ ಹಂತ ಹಂತವಾಗಿ ಪರಿಶೀಲನೆ ನಡೆಸಿ ಸುಮಾರು 7 ಲಕ್ಷ ರೈತರನ್ನು ಅನರ್ಹಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಧಾರ್ ಮತ್ತು ಪಹಣಿಯೊಂದಿಗೆ ಫ್ರೂಟ್ಸ್ ಐಡಿ ತಂತ್ರಾಂಶದಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಇ-ಕೆವೈಸಿಯೊಂದಿಗೆ ಕಿಸಾನ್ ಸಮ್ಮಾಣ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಜಮೀನಿನ ಮಾಲೀಕರು ನಿಧನರಾಗಿದ್ದಲ್ಲಿ ಇತರೆ ವಾರಸುದಾರರು ಪೌತಿ ಖಾತೆ ಮಾಡಿಸಿದರೆ ಯೋಜನೆಗೆ ಅರ್ಹರಾಗುತ್ತಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2019 ರ ನಂತರ ಜಮೀನು ಖರೀದಿಸಿದವರು ಮತ್ತು ತಂದೆಯ ಜಮೀನನ್ನು ಭಾಗ ಮಾಡಿಕೊಂಡಿದ್ದರೆ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗಿದೆ.

You cannot copy content of this page

Exit mobile version