Wednesday, June 19, 2024

ಸತ್ಯ | ನ್ಯಾಯ |ಧರ್ಮ

ತೀವ್ರಗಾಮಿ ಸಾಹಿತ್ಯವಿದ್ದರೆ ಅದು ಉಗ್ರಗಾಮಿ ಚಟುವಟಿಕೆ ಅಲ್ಲ : ಸುಪ್ರೀಂಕೋರ್ಟ್

ಹಿಂಸೆ ಕುರಿತ ಸಾಹಿತ್ಯ ಹೊಂದಿದ್ದ ಮಾತ್ರಕ್ಕೆ ಅದು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ  (ಯುಎಪಿಎ) ಅಡಿ ಭಯೋತ್ಪಾದಕ ಚಟುವಟಿಕೆಯಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಶುಕ್ರವಾರ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾದ ಸಾಮಾಜಿಕ ಹೋರಾಟಗಾರರಾದ ವರ್ನನ್‌ ಗೊನ್ಸಾಲ್ವೆಸ್‌ ಮತ್ತು ಅರುಣ್‌ ಫೆರೇರಾ ಅವರಿಗೆ ಜಾಮೀನು ನೀಡಿದ ಸಂದರ್ಭದಲ್ಲಿ ಈ ರೀತಿಯಾಗಿ ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ, ಪ್ರಕರಣದ ಅಷ್ಟೂ ವಿಚಾರಣೆಯನ್ನು ಆಲಿಸಿ, ತೀರ್ಪಿನಲ್ಲಿ ಈ ರೀತಿಯಲ್ಲಿ ಸ್ಪಷ್ಟಪಡಿಸಿದೆ. ಸಾಮಾಜಿಕ ಹೋರಾಟಗಾರರಾದ ವರ್ನನ್‌ ಗೊನ್ಸಾಲ್ವೆಸ್‌ ಮತ್ತು ಅರುಣ್‌ ಫೆರೇರಾ ಯುಎಪಿಎ ಸೆಕ್ಷನ್ 43 ಡಿ (5) ಅಡಿಯಲ್ಲಿ ಜಾಮೀನು ನೀಡಬಾರದಂತಹ ಕಟ್ಟುನಿಟ್ಟಿನ ನಿಯಮಾವಳಿಗೊಳಪಡುವ ಉಗ್ರ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ಪುಣೆಯ ಭೀಮಾ ಕೋರೆಗಾಂವ್ ಕದನ ಸ್ಮಾರಕ ಸ್ಥಳದಲ್ಲಿ 2017ರಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ  ಹೋರಾಟಗಾರರಾದ ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾ ಸೇರಿದಂತೆ 14 ಮಂದಿ ಕಾರಣ ಎಂದು NIA ಆರೋಪಿಸಿತ್ತು. ಕ್ರಿಮಿನಲ್ ಬಲದ ಮೂಲಕ ಸಾರ್ವಜನಿಕ ಹುದ್ದೆಯಲ್ಲಿರುವವರ ಮೇಲೆ ದಾಳಿ ಮಾಡುವಂತಹ ಚಟುವಟಿಕೆಗಳಲ್ಲಿ ಈ ಇಬ್ಬರು ತೊಡಗಿದ್ದರು ಎಂದು ಮೇಲ್ನೋಟಕ್ಕೆ ಹೇಳುವಂತಹ ಯಾವುದೇ ಆಧಾರ ಇಲ್ಲ. ಹಾಗೂ ಸಾಕ್ಷಿಗಳ ಹೇಳಿಕೆಗಳು. ಮೇಲ್ಮನವಿದಾರರ ಭಯೋತ್ಪಾದಕ ಕೃತ್ಯವನ್ನು ಉಲ್ಲೇಖಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಹೇಳಿದೆ.

ಇದನ್ನೂ ಓದಿ :

ಭೀಮಾ ಕೋರೆಗಾಂವ್ ಪ್ರಕರಣ: ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಮ್ ಕೋರ್ಟ್‌

ಜೊತೆಗೆ ಸಾಕ್ಷ್ಯವಾಗಿ ಸಲ್ಲಿಸಿರುವ ಪತ್ರಗಳನ್ನು ಮೇಲ್ಮನವಿದಾರರಿಂದ ವಶಪಡಿಸಿಕೊಂಡಿಲ್ಲ. ಅವುಗಳಲ್ಲಿ ಮೂರನೇ ವ್ಯಕ್ತಿಗಳಾಗಿ ಮಾತ್ರ ಅವರ ಪ್ರಸ್ತಾಪವಿದೆ. ಆದ್ದರಿಂದ ಇಂತಹ ಪತ್ರಗಳು ದುರ್ಬಲ ಮೌಲ್ಯಗಳಿಂದ ಕೂಡಿವೆ ಎಂದು ಜಾಮೀನು ಮಂಜೂರು ಮಾಡಿದೆ.

ತೆಲುಗು ಕವಿ ವರವರರಾವ್‌, ವಕೀಲೆ ಸುಧಾ ಭಾರದ್ವಾಜ್‌ ಸಾಮಾಜಿಕ ಹೋರಾಟಗಾರ ಗೌತಮ್‌ ನವಲಖಾ, ಚಿಂತಕ ಆನಂದ್‌ ತೇಲ್ತುಂಬ್ಡೆ ಬುಡಕಟ್ಟು ಸಮುದಾಯಗಳ ಹೋರಾಟಗಾರ ದಿವಂಗತ ಫಾದರ್‌ ಸ್ಟಾನ್‌ಸ್ವಾಮಿ ಸೇರಿದಂತೆ ಅನೇಕರನ್ನು ಈ ಪ್ರಕರಣದಡಿ ಬಂಧಿಸಲಾಗಿತ್ತು. ಅವರಲ್ಲಿ ಕೆಲವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ ಇನ್ನೂ ಕೆಲವರು ಸೆರೆವಾಸ ಅನುಭವಿಸುತ್ತಿದ್ದಾರೆ. ಸ್ಟಾನ್‌ ಸ್ವಾಮಿ ಜೈಲಿನಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದರು.

Related Articles

ಇತ್ತೀಚಿನ ಸುದ್ದಿಗಳು