ನನ್ನ ಮೇಲಿನ ದಾಳಿಯ ಹಿಂದೆ RSS ಕೈವಾಡವಿದೆ: ‘ಸಿಜೆಪಿ’ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆರೋಪ!

ನಾಗ್ಪುರ: ಜೈಪುರ ಪ್ರತಿಭಟನೆ ವೇಳೆ ತಮ್ಮ ಮೇಲೆ ನಡೆದ ಭೌತಿಕ ಹಲ್ಲೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರ ಕೈವಾಡವಿದೆ ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಮಂಗಳವಾರ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ನೀಟ್ (NEET-UG) ಪರೀಕ್ಷೆಯ ಪೇಪರ್ ಲೀಕ್ ಹಗರಣದ ಅಸಲಿ ವಿಷಯದಿಂದ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ವಿದ್ಯಾರ್ಥಿಗಳ ನ್ಯಾಯಯುತ ಧ್ವನಿಯನ್ನು ಹತ್ತಿಕ್ಕಲು ಈ ಹೇಡಿತನದ ದಾಳಿ ನಡೆಸಲಾಗಿದೆ ಎಂದು ಅವರು ದೂರಿದ್ದಾರೆ.

ಮಂಗಳವಾರ ಬೆಳಿಗ್ಗೆ ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದಿಪ್ಕೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ಬಹಿರಂಗಪಡಿಸಿದರು. ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ಭಾರಿ ಅಕ್ರಮಗಳ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಿಜೆಪಿ ನೇತೃತ್ವದಲ್ಲಿ ಇಂದು ನಾಗ್ಪುರದ ಸಂವಿಧಾನ ಚೌಕದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಇದಕ್ಕೂ ಮುನ್ನ ಸೋಮವಾರ ಜೈಪುರದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ, ಕಾರ್ಯಕರ್ತರು ದಿಪ್ಕೆ ಅವರನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಮುಗಿಬಿದ್ದು ಸರಣಿಯಾಗಿ ಕಪಾಳಕ್ಕೆ ಹೊಡೆದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೈಪುರ ದಾಳಿಯ ಹಿಂದೆ ಯಾರಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ದಿಪ್ಕೆ, “ಈ ದಾಳಿಯ ಹಿಂದೆ ಆರ್‌ಎಸ್‌ಎಸ್ ಸಂಘಟನೆಗೆ ಸೇರಿದ ವ್ಯಕ್ತಿಗಳಿದ್ದಾರೆ. ಇದರಲ್ಲಿ ನಮಗೇನೂ ಹೊಸತು ಅನಿಸುತ್ತಿಲ್ಲ. ಈ ದೇಶದಲ್ಲಿ ಯಾರಾದರೂ ಸರ್ಕಾರದ ವಿರುದ್ಧ ಅಥವಾ ಅವರ ಸಿದ್ಧಾಂತದ ವಿರುದ್ಧ ಧ್ವನಿ ಎತ್ತಿದರೆ, ಅವರು ಇದೇ ರೀತಿಯ ದೌರ್ಜನ್ಯದ ಹಾದಿ ಹಿಡಿಯುತ್ತಾರೆ,” ಎಂದು ಆರ್‌ಎಸ್‌ಎಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ತಮಗೆ ಆರ್‌ಎಸ್‌ಎಸ್ ಜೊತೆ ಆಂತರಿಕ ಸಂಬಂಧವಿದೆ ಮತ್ತು ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು ಎಂಬ ಹಳೆಯ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಒಂದು ವೇಳೆ ನನಗೆ ಅವರೊಂದಿಗೆ ಸಂಬಂಧವಿದ್ದರೆ ನಿನ್ನೆ ನನ್ನ ಮೇಲೆ ಏಕೆ ದಾಳಿ ನಡೆಯುತ್ತಿತ್ತು?” ಎಂದು ಪ್ರಶ್ನಿಸಿದ್ದಾರೆ.

“ಇಂತಹ ದಾಳಿಗಳ ಮೂಲಕ ವಿದ್ಯಾರ್ಥಿಗಳ ಹಕ್ಕಿನ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನೀವು ನಮ್ಮ ಮೇಲೆ ಎಷ್ಟೇ ದಾಳಿ ಮಾಡಿದರೂ ನಾವು ನಮ್ಮ ಮುಖ್ಯ ಅಜೆಂಡಾದಿಂದ ಹಿಂದೆ ಸರಿಯುವುದಿಲ್ಲ. ದೇಶದ ಒಂದು ಕೋಟಿಗೂ ಹೆಚ್ಚು ಅಮಾಯಕ ವಿದ್ಯಾರ್ಥಿಗಳಿಗೆ ಆಗಿರುವ ಘೋರ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಕೇಂದ್ರ ಶಿಕ್ಷಣ ಸಚಿವರು ಈ ಹಗರಣದ ಸಂಪೂರ್ಣ ಜವಾಬ್ದಾರಿ ಹೊರಲೇಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.

“ನಮ್ಮ ಸಾರ್ವಜನಿಕ ಹೋರಾಟದಲ್ಲಿ ಇಂತಹ ದಾಳಿಗಳು ಮುಂದೆಯೂ ನಡೆಯಬಹುದು, ಆದರೆ ಇವಕ್ಕೆಲ್ಲ ನಾನು ಎಂದಿಗೂ ಹೆದರುವುದಿಲ್ಲ. ನಾವು ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸತ್ಯಾಗ್ರಹದ ಮಾರ್ಗದಲ್ಲಿ ನಡೆಯುವವರು. ನಮ್ಮ ಹೋರಾಟ ಸಂಪೂರ್ಣವಾಗಿ ಶಾಂತಿಯುತ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲೇ ಮುಂದುವರಿಯಲಿದೆ,” ಎಂದು ದಿಪ್ಕೆ ಸ್ಪಷ್ಟಪಡಿಸಿದ್ದಾರೆ.

ಇಂದು ಸಂಜೆ 4 ಗಂಟೆಗೆ ನಾಗ್ಪುರದ ಸಂವಿಧಾನ ಚೌಕದಲ್ಲಿ ನಡೆಯಲಿರುವ ಶಾಂತಿಪೂರ್ವಕ ಪ್ರತಿಭಟನೆಯಲ್ಲಿ ನಗರದ ವಿದ್ಯಾರ್ಥಿಗಳು ಮತ್ತು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಇನ್ನೊಂದೆಡೆ, ನೀಟ್ ಪೇಪರ್ ಲೀಕ್ ವಿರೋಧಿಸಿ ಸಿಜೆಪಿ ಹಮ್ಮಿಕೊಂಡಿರುವ ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಾಗ್ಪುರ ನಗರದಾದ್ಯಂತ ಪೊಲೀಸರು ಭಾರಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಈ ಬೃಹತ್ ಜನಾಂದೋಲನದಲ್ಲಿ ಸುಮಾರು 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಯುವಕರು ಪಾಲ್ಗೊಳ್ಳುವ ಸಾಧ್ಯತೆಯಿರುವುದರಿಂದ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು