Monday, April 29, 2024

ಸತ್ಯ | ನ್ಯಾಯ |ಧರ್ಮ

ಕರಾವಳಿಯಲ್ಲಿ ಬೆಂಕಿ ; ಹಚ್ಚುವವರು, ಹಚ್ಚಿಸುವವರು – ಬೊಗಸೆಗೆ ದಕ್ಕಿದ್ದು.. 18

1977ರ ಕೋಮುಗಲಭೆಗಳಿಗೆ ಮುನ್ನ 1968ರಲ್ಲಿ ಮಂಗಳೂರಿನ ಬಂದರು ಪ್ರದೇಶದಲ್ಲಿ ಕೋಮುಗಲಭೆ ನಡೆದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದ. ಆದರೆ, ನಂತರ ದಕ್ಷಿಣ ಕನ್ನಡದಲ್ಲಿ ಗಂಭೀರ ಕೋಮುಗಲಭೆಗಳು ಕೆಲವರ್ಷ ನಡೆದಿರಲಿಲ್ಲ. 1988ರ ಗಲಭೆ, 1998-99ರಲ್ಲಿ ನಡೆದ ಅತ್ಯಂತ ಭೀಕರ ಗಲಭೆಗಳ ಬಗ್ಗೆ ಬೊಗಸೆಗೆ ದಕ್ಕಿದ್ದು-17ರಲ್ಲಿ ಬರೆದಿದ್ದೇನೆ. ಇಲ್ಲಿ ಘಟನೆಗಳನ್ನು ಕಾಲಾನುಕ್ರಮಣಿಕೆಯಲ್ಲಿ ಬರೆಯುವ ಬದಲು, ಯಾವೆಲ್ಲಾ ರೀತಿಯಲ್ಲಿ ಕೋಮುವಾದವನ್ನು, ದ್ವೇಷವನ್ನು  ಬೆಳೆಸಲಾಗುತ್ತಿದೆ ಎಂಬುದನ್ನು ವಿವರಿಸುತ್ತಾ, ಅದಕ್ಕೆ ಸಂಬಂಧಿಸಿದ ಬಿಡಿ ಘಟನೆಗಳ ವಿವರಗಳನ್ನು ಉದಾಹರಣೆಯಾಗಿ ನೀಡಲಾಗಿದೆ. ಇಲ್ಲಿ ಸಂಘಟನೆಗಳ ನಾಯಕರ ಹೆಸರುಗಳನ್ನು ಉಲ್ಲೇಖಿಸದೆ, ಕೋಮುಗಲಭೆಗೆ ಕಾರಣಗಳನ್ನು ಮಾತ್ರ ವಿಶ್ಲೇಷಿಸಲಾಗಿದೆ.

ಕೋಮು ಸಂಘಟನೆಗಳು
ಇಲ್ಲಿ ಮೊದಲಿಗೆ, ಕೋಮುವಾದದ ಬೆಳವಣಿಗೆ ಕಾರಣವಾದ ಸಂಘಟನೆಗಳನ್ನು ಗುರುತಿಸಬೇಕು. ಸಂಘಪರಿವಾರ ಎಂದು ಕರೆಯಲಾಗುವ ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ಹಿಂದೂ ಜಾಗರಣ ವೇದಿಕೆ, ಬಜರಂಗದಳ ಸಂಘಟನೆಗಳು, ಅವುಗಳಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿದ್ದ ಹಿಂದೂ ಜಾಗರಣ ವೇದಿಕೆ ಮತ್ತು ಶ್ರೀರಾಮ ಸೇನೆ ಇತ್ಯಾದಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗುರುತಿಸಬೇಕು. ಆರೆಸ್ಸೆಸ್ ರಾಜಕೀಯ ರಹಿತ  ಸಂಘಟನೆ ಎಂದು ಹೇಳಿಕೊಳ್ಳುತ್ತಿದ್ದರೂ ಬಿಜೆಪಿಯನ್ನು (ಹಿಂದೆ ಜನಸಂಘವನ್ನು) ನಿಯಂತ್ರಿಸುವ ಬ್ರಾಹ್ಮಣ ನಾಯಕತ್ವದ ಸಂಘಟನೆಯಾಗಿದೆ.

ಕೆಲವು ಕೆಳಜಾತಿಗಳ ನಾಯಕತ್ವ ಇರುವ ಸ್ವಲ್ಪ ಕಲಿತ ಯುವಕರಿರುವ ಅಧೀನ ಸಂಘಟನೆ ಹಿಂದೂ ಜಾಗರಣ ವೇದಿಕೆಯಾಗಿದೆ. ಇದರ ಪ್ರಮುಖ ನಾಯಕರು ಮೇಲ್ಜಾತಿಯವರೇ. ಇದರ ಸದಸ್ಯರು ನೇರವಾಗಿ ಗಲಭೆಗಳಲ್ಲಿ ಭಾಗವಹಿಸದೆ ಸಂಘಟನೆ, ಪ್ರಚಾರ, ಪ್ರಚೋದನೆ, ಅಪಪ್ರಚಾರ, ಕಾರ್ಯತಂತ್ರಗಳ ಯೋಜನೆ,  ಅನುಷ್ಟಾನ ಇತ್ಯಾದಿಗಳಲ್ಲಿ ಹೆಚ್ಚಾಗಿ ತೊಡಗಿರುತ್ತಾರೆ. ಬಿಜೆಪಿಯ ಪಕ್ಷದ ಭಾವೀ ನಾಯಕರು ಮೂಡಿಬರುವುದು ಇಲ್ಲಿಂದಲೇ.

ಬಜರಂಗದಳವು ಹೆಚ್ಚು ವಿದ್ಯಾಭ್ಯಾಸವಿಲ್ಲದ, ಧರ್ಮದ ಬಗ್ಗೆ ಹೆಚ್ಚು ತಿಳಿದಿರದ ಕೆಳಜಾತಿಗಳಿಗೆ ಬಡ, ಮಧ್ಯಮ ವರ್ಗಗಳಿಗೆ ಸೇರಿದ ಅಂಧ ಸೈನಿಕರನ್ನು ಹೊಂದಿದೆ. ಇವರೇ ಹೆಚ್ಚಾಗಿ ಕೋಮುಶಾಂತಿ ಕದಡುವ ಕಾಲಾಳುಗಳಾಗಿ ನೇರವಾಗಿ ಭಾಗವಹಿಸುತ್ತಾರೆ. ಕ್ರಿಮಿನಲ್ ಹಿನ್ನೆಲೆ ಇರುವವರೂ ಇಲ್ಲಿದ್ದು, ಕೆಲವರು ಧರ್ಮಕ್ಕೆ ಸಂಬಂಧವೇ ಇಲ್ಲದ ಗುರುತರ ಅಪರಾಧಗಳಿಗಾಗಿ ಜೈಲು ಪಾಲಾಗಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ಪ್ರಚೋದನಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡುವವರು ಹುಟ್ಟಿಕೊಂಡಿದ್ದಾರೆ. ಇವರಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳೂ ಸೇರಿದ್ದಾರೆ.

ಹಿಂದೂ ಯುವಸೇನೆಯು 1990 ದಶಕದಲ್ಲಿ ಆರೆಸ್ಸೆಸ್‌ನ ಬ್ರಾಹ್ಮಣ ಪ್ರಾಬಲ್ಯಕ್ಕೆ, ಆರೆಸ್ಸೆಸ್ಸಿನ ಸ್ಥಳೀಯ ನಾಯಕತ್ವಕ್ಕೆ ಪ್ರತಿಯಾಗಿ ಶೂದ್ರರು ಹುಟ್ಟು ಹಾಕಿದ ಸಂಘಟನೆ. ಇದು ಗಣೇಶೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ, ಅಂಬ್ಯುಲೆನ್ಸ್ ಸೇವೆ ಇತ್ಯಾದಿ ಒದಗಿಸುತ್ತಾ, ಸಾಕಷ್ಟು ಪ್ರಬಲವಾಗಿ ಬೆಳೆಯುತ್ತಿತ್ತು. ಇದರಲ್ಲಿ ಹಿಂದೂ ಗೂಂಡಾ ಎಲಿಮೆಂಟುಗಳು ದೊಡ್ಡ ಪ್ರಮಾಣದಲ್ಲಿ ಇದ್ದವು. ಉತ್ತಮ ಸಂಘಟಕನಾಗಿದ್ದ ಇದರ ಸ್ಥಾಪಕ ಗುಣಕರ ಶೆಟ್ಟಿ ಮಂಗಳೂರಿನ ಗಣಪತಿ ಹೈಸ್ಕೂಲಿನ ಬಳಿ ಹಿಂದೂಗಳಿಂದಲೇ ಕೊಲೆಯಾದ ಬಳಿಕ ಅದರ ಪ್ರಭಾವ ಸಂಪೂರ್ಣ ಕುಸಿದು, ಸದಸ್ಯರು ಬೇರೆಬೇರೆ ಸಂಘಟನೆಗಳಲ್ಲಿ ಹರಿದು ಹಂಚಿಹೋದರು.

ಶ್ರೀರಾಮ ಸೇನೆಯು ಹಿಂದೂ ಹೆಸರಿನಲ್ಲಿ ಯಾವುದೇ ತಾತ್ವಿಕ ನೆಲೆಗಟ್ಟು ಇಲ್ಲದ, ಮುಖ್ಯವಾಗಿ ಗೂಂಡಾ ಎಲಿಮೆಂಟುಗಳಿಂದಲೇ ತುಂಬಿದ ಸಂಘಟನೆಯಾಗಿದೆ. ವಸೂಲಿ, ಬಡ್ಡಿ ವ್ಯವಹಾರ, ಗೋರಕ್ಷಣೆಯ ನೆಪದಲ್ಲಿ ದಾಳಿ, ನೈತಿಕ ಪೊಲೀಸ್‌ಗಿರಿ ಇತ್ಯಾದಿ ನೆಪದಲ್ಲಿ ಹಲ್ಲೆ ಮತ್ತು ದಾಳಿ, ಕೋಮುಪ್ರಚೋದಕ ಭಾಷಣ, ಅನ್ಯ ಕೋಮಿನವರ ಮೇಲೆ ಅಕಾರಣ ಹಲ್ಲೆ ಇತ್ಯಾದಿಗಳನ್ನು ನಡೆಸಿದ ಆರೋಪ ಈ ಸಂಘಟನೆಯ ಮೇಲಿದೆ.

ಮುಸ್ಲಿಮರು ಹಿಂದೆ ಇಂತಹಾ ಬಲವಾದ ಯೋಜಿತ ಸಂಘಟನೆಗಳನ್ನು ಹೊಂದಿರಲಿಲ್ಲ. ಅವರ ಕೃತ್ಯಗಳು ರಕ್ಷಣಾತ್ಮಕ ಮತ್ತು ಪ್ರತಿಕ್ರಿಯಾತ್ಮಕವಾಗಿದ್ದವು. ತಮ್ಮ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮಾತ್ರ ಅವರು ಆಕ್ರಮಣಕಾರಿಯಾಗಿದ್ದರು. ಕೋಮುಗಲಭೆಗಳ ಸಂದರ್ಭಗಳಲ್ಲಿ ಮಸೀದಿಗಳಲ್ಲಿ ಒಟ್ಟು ಸೇರುತ್ತಿದ್ದರು. ನಂತರ ಬೇರೆ ಬೇರೆ ಮಸೀದಿಗಳಿಗೆ ಸಂದೇಶ ಹೋಗಿ ಉದ್ರಿಕ್ತ ಪರಿಸ್ಥಿತಿ ಉಂಟಾಗುತ್ತಿತ್ತು. ಇದೊಂದು ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿರುತ್ತಿತ್ತು.  ಆದರೆ, ಮುಸ್ಲಿಂ  ಧಾರ್ಮಿಕ ನಾಯಕರನ್ನು ಸಂಪರ್ಕಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿತ್ತು. ಕಾಂಗ್ರೆಸ್ ಅವರನ್ನು ಬೆಂಬಲಿಸುತ್ತಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಪರಿಸ್ಥಿತಿ ನಿಧಾನವಾಗಿ ಮತ್ತು ಸಂಪೂರ್ಣವಾಗಿ ಬದಲಾಯಿತು. ಹಲವಾರು ಉಗ್ರವಾದಿ, ಆಕ್ರಮಣಕಾರಿ ಸಂಘಟನೆಗಳು ಹುಟ್ಟಿಕೊಂಡವು. ಅವು ಧಾರ್ಮಿಕ ನಾಯಕರ ನಿಯಂತ್ರಣಕ್ಕೂ ಸಿಗದಾದವು.

ಎರಡು ಕೋಮುಗಳ ನಡುವಿನ ಕಂದರ ವಿಸ್ತಾರವಾಗುತ್ತಾ ಹೋಯಿತು. ಗ್ರಾಮ ಮಟ್ಟದಲ್ಲಿ ನಡೆಯುತ್ತಿದ್ದ ಭೂತದೈವಾರಾದನೆ ಜಾತ್ರೆಗಳಿಗೆ ಹೋಗುವುದನ್ನು ಮುಸ್ಲಿಮರು ನಿಲ್ಲಿಸಿದರು. ಹೋದವರನ್ನು ಹಿಂದೂ ಸಂಘಟನೆಗಳವರು ಹೊಡೆದೋಡಿಸಲು ಆರಂಭಿಸಿದರು. ದರ್ಗಾಗಳಿಗೆ ಹೋಗುತ್ತಿದ್ದ ಮುಸ್ಲಿಮೇತರರ ಸಂಖ್ಯೆ ಕಡಿಮೆಯಾಯಿತು. ಮುಸ್ಲಿಮರಲ್ಲಿಯೂ ಸಂಘಟನೆ, ಪ್ರತಿರೋಧ, ಆಂದೋಲನ ಬಲವಾಗುತ್ತಾ ಹೋಯಿತು. 1993-2006ರ ತನಕ ಈ ಪ್ರಕ್ರಿಯೆ ನಡೆಯಿತು. ಕರ್ನಾಟಕ ಫಾರಂ ಫಾರ್ ಡಿಗ್ನಿಟಿ (ಕೆಡಿಎಫ್) ಹುಟ್ಟಿಕೊಂಡು ಮುಸ್ಲಿಮರಿಗಾದ ಅನ್ಯಾಯಗಳ ವಿರುದ್ಧ ಪ್ರತಿಭಟನೆ ಆರಂಭಿಸಿತು. ಇಂತಹಾ ಚಟುವಟಿಕೆಗಳೇ ಮುಂದೆ ಹೆಚ್ಚು ಆಕ್ರಮಣಕಾರಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್.ಐ) ಸ್ಥಾಪನೆಗೆ ಕಾರಣವಾಯಿತು. ಅದು ಹಿಂದೂ ಸಂಘಟನೆಗಳ ಪ್ರತಿರೂಪವಾಗಿ, ಅವು ಹಿಂದೂ ಹುಡುಗಿಯರ ವಿರುದ್ಧ ಪೊಲೀಸ್‌ಗಿರಿ ನಡೆಸುವಂತೆ, ತಾನು ಮುಸ್ಲಿಂ ಮಹಿಳೆಯರ ಮೇಲೆ ಪೋಲೀಸ್‌ಗಿರಿಗೆ ಇಳಿಯಿತು. ಜೊತೆ ಸಂಘಪರಿವಾರದಂತೆ ಹಿಂಸಾಚಾರ, ಪ್ರತೀಕಾರ ಕೃತ್ಯಗಳಿಗೂ ಮುಂದಾಯಿತು. ಮುಂದೆ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರೂಪದಲ್ಲಿ ರಾಜಕೀಯ ಪಕ್ಷವಾಗಿ ಚುನಾವಣಾ ರಾಜಕಾರಣಕ್ಕೆ ಇಳಿದ ಬಳಿಕ ಅದಕ್ಕೆ ಹೆಚ್ಚಿನ ಬಲವೂ ಬಂತು. ಚೌಕಾಸಿಯ ಶಕ್ತಿಯೂ ಬಂತು. ಸಮಸ್ಯೆ ಇನ್ನಷ್ಟು ಪ್ರಚೋದಕವೂ, ಜಟಿಲವೂ ಆಯಿತು. ಈ ಸಂಘಟನೆಗಳಲ್ಲೂ ತಾತ್ವಿಕ ಹಿನ್ನೆಲೆ ಇರುವವರು ಇದ್ದರೂ, ಗೂಂಡಾ ಮತ್ತು ಕ್ರಿಮಿನಲ್ ಎಲಿಮೆಂಟುಗಳು ದೊಡ್ಡ ಪ್ರಮಾಣದಲ್ಲಿವೆ. ಪ್ರಚೋದನಕಾರಿ ಭಾಷಣ ಮಾಡುವ ರಾಜಕೀಯ, ಧಾರ್ಮಿಕ ನಾಯಕರೂ ಇಲ್ಲಿಯೂ ಇದ್ದಾರೆ.

ಈ ರೀತಿಯ ಬೆಳವಣಿಗೆಗೆ ಕಾರಣವಾದ ಘಟನೆಗಳಲ್ಲಿ ಒಂದನ್ನು ಇಲ್ಲಿ ಗುರುತಿಸಲಾಗಿದೆ. ಇದು ಮುಂದೆ ಪೊಳಲಿ, ಮಾಡೂರು ಮುಂತಾದ ಪ್ರದೇಶಗಳು ಹಲವು ಕೊಲೆಗಳಿಗೆ ಸಾಕ್ಷಿಯಾಗಿ, ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿಕೊಳ್ಳುವುದಕ್ಕೆ ಕಾರಣವಾಯಿತು. 2006ರ ಅಕ್ಟೋಬರ್ 7ರಂದು ಬಜರಂಗ ದಳದ ಕಾರ್ಯಕರ್ತರ ಗುಂಪೊಂದು ಪೊಳಲಿಯಲ್ಲಿ ಅಂಬ್ಯುಲೆನ್ಸ್ ಒಂದನ್ನು ತಡೆದು ನಿಲ್ಲಿಸಿತು. ಬೊಳಿಯಾರಿನ ಮೊಹಮ್ಮದ್ ಅಶ್ರಫ್ ಎಂಬವರು ದುಬೈಗೆ ವಿಮಾನ ಹಿಡಿಯಲು ಇತರ ಏಳು ಮಂದಿ ಗೆಳೆಯರ ಜೊತೆ ಅವರಲ್ಲೊಬ್ಬರ ಅಂಬ್ಯುಲೆನ್ಸ್ ಕಾರಿನಲ್ಲಿ ಬಜ್ಪೆಗೆ ತೆರಳುತ್ತಿದ್ದರು. ಅವರನ್ನು ನಿಲ್ಲಿಸಿ ಕೆಳಗಿಳಿಸಿದ ಈ ಕಾರ್ಯಕರ್ತರು ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದರು. ಅವರು ಒಪ್ಪದೇ ಇದ್ದಾಗ ಯದ್ವಾತದ್ವಾ ತಲವಾರು ಬೀಸಿದರು. ಅವರಲ್ಲಿ ಇಬ್ರಾಹಿಂ ಎಂಬವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಎಲ್ಲರೂ ಆಸ್ಪತ್ರೆ ಸೇರಿದರು. ಕೋಮುಗಲಭೆಗಳಲ್ಲಿ ನಡೆದ ಕೊಲೆ, ಪ್ರತೀಕಾರದ ಯೋಜಿತ ಕೊಲೆಗಳನ್ನು ಹೊರತುಪಡಿಸಿದರೆ, ಉಡುಪಿಯ ಹಿರಿಯಡ್ಕದಲ್ಲಿ ಪರಿಚಯವೂ ಇಲ್ಲದವರ ಮೇಲೆ, ಕೇವಲ ಕೋಮುಕಾರಣಕ್ಕಾಗಿ ಗೋಸಾಗಾಟದ ಆರೋಪದಲ್ಲಿ ಮುಸ್ಲಿಂ ತಂದೆ-ಮಗನನ್ನು ಬೆತ್ತಲೆಗೊಳಿಸಿ ಥಳಿಸಲಾದ ರಾಜ್ಯದ  ಮೊದಲ ಸಾಮೂಹಿಕ ಲಿಂಚಿಂಗ್ ಪ್ರಕರಣವು ಒಂದು ಅಮಾನುಷ ಘಟನೆ. ಇದರಲ್ಲಿ ತಂದೆ ಹುಸೈನಬ್ಬ ಎಂಬ ವೃದ್ಧ  ಸಾವಿಗೀಡಾಗಿದ್ದರು. ಇದರ ಆರೋಪಿಗಳು ಬಿಡುಗಡೆಗೊಂಡಾಗ ಹೂಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಇದು ಮುಸ್ಲಿಂ ಉಗ್ರವಾದಿ, ಪ್ರತೀಕಾರವಾದಿ ಸಂಘಟನೆಗಳನ್ನು ಇನ್ನಷ್ಟು ಬಲಗೊಳಿಸಿತು.

ಆ ನಂತರ ಮೇ 13, 2003ರಲ್ಲಿ ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಗಿನ ಅಧ್ಯಕ್ಷರಾಗಿದ್ದ  ಎಂ.ಡಿ. ಜಬ್ಬಾರ್ ಅವರನ್ನು ಹೆಂಡತಿ ಮಕ್ಕಳ ಎದುರೇ ಕೊಂದದ್ದು, ಪ್ರತೀಕಾರವಾಗಿ ನ್ಯಾಯಾಲಯದಲ್ಲಿ  ಬಿಡುಗಡೆಗೊಂಡ ಅದರ ಮುಖ್ಯ  ರೂವಾರಿ ಎನ್ನಲಾದ ಪೊಳಲಿ ಅನಂತು ಎಂಬಾತನನ್ನು ಕೊಂದದ್ದು ಸೇರಿದಂತೆ ಕೋಮುಸಂಬಂಧಿ ಕೊಲೆಗಳ ಸರಣಿಯೇ ನಡೆದಿದೆ. ಜೊತೆಗೆ ಯಾರ ಜೊತೆಗೂ ಜಗಳವಿಲ್ಲದ ಅಮಾಯಕ ವ್ಯಕ್ತಿಗಳೂ ಎರಡೂ ಕಡೆಗಳಲ್ಲಿ ಬಲಿಯಾಗಿದ್ದಾರೆ. ಇಲ್ಲಿ ಕೊಲೆಯಾದವರೂ, ಜೈಲಿನಲ್ಲಿ ಕೊಳೆತವರೂ ಎಲ್ಲರೂ ಕೆಳಜಾತಿಗಳ, ಕೆಳವರ್ಗಗಳ ಸಾಮಾನ್ಯ ಜನರಾಗಿರುವುದು ಗಮನಾರ್ಹ.

1990ರ ದಶಕದಲ್ಲಿ ಈಗ ಭಯೋತ್ಪಾದನೆ ಆರೋಪದಲ್ಲಿ ಜೈಲಿನಲ್ಲಿರುವ ಕೇರಳ ಪಿಡಿಎಫ್ ಪಕ್ಷದ ನಾಯಕನಾಗಿದ್ದ ಅಬ್ದುಲ್ ನಾಸೆರ್ ಮದನಿಯ ಮಂಗಳೂರು ಸಭೆಯು ಸಾಮಾನ್ಯ ಹಿಂದೂಗಳಲ್ಲಿಯೂ ನಡುಕ ಹುಟ್ಟಿಸುವಂತಿತ್ತು. ಆರೆಸ್ಸೆಸ್ ಮಾದರಿಯಲ್ಲಿ ಕಪ್ಪು ಮಿಲಿಟರಿ ರೀತಿಯ ಸಮವಸ್ತ್ರ ಧರಿಸಿದ ಕಾರ್ಯಕರ್ತರ ದಂಡೇ ಮೆರವಣಿಗೆ ಮತ್ತು ಸಭೆಯಲ್ಲಿತ್ತು. ಇದು ಕೂಡಾ ಸಾಮಾನ್ಯ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಪರಸ್ಪರ ಹೆಚ್ಚು ಅಪನಂಬಿಕೆ ತೋರಿ, ಕೋಮುವಾದಿಗಳ ಕಡೆಗೆ ವಾಲುವಂತೆ ಮಾಡಿತು.

ಸಂಘಟನೆಗಳ ಸ್ವರೂಪ
ಜಿಲ್ಲೆಯಲ್ಲಿ ನಡೆದಿರುವ ಕೋಮುಗಲಭೆ ಮತ್ತು ಹಿಂಸಾಚಾರಗಳನ್ನು ಸ್ಥೂಲವಾಗಿ ಗಮನಿಸುವ ಮೊದಲು ಎರಡೂ ಕೋಮುಗಳ ಸಂಘಟನೆಗಳಲ್ಲಿ ಇರುವ ಸಮಾನತೆಗಳನ್ನು ಮತ್ತು ಅವುಗಳ ರಚನೆಗಳನ್ನು ಗುರುತಿಸುವ ಅಗತ್ಯವಿದೆ.

ಮುಖ್ಯವಾಗಿ ಎರಡೂ ರೀತಿಯ ಸಂಘಟನೆಗಳಲ್ಲಿ ಸೂತ್ರಧಾರಿಗಳಾಗಿರುವವರು ಅತ್ಯಂತ ಪ್ರಭಾವಿಗಳಾಗಿರುವ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಮುಂದಾಳುಗಳು, ಶ್ರೀಮಂತ ವರ್ತಕರು, ಉದ್ಯಮಿಗಳು, ಧಾರ್ಮಿಕ ಅಥವಾ ರಾಜಕೀಯ ನಾಯಕರಾಗಿರುತ್ತಾರೆ. ಅವರು ಎಲ್ಲಿಯೂ ನೇರವಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೇ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಇವರನ್ನು ಮುಟ್ಟಲು ಯಾವುದೇ ಸರಕಾರ ಹಿಂಜರಿಯುವ ಪರಿಣಾಮವಾಗಿ ಪೊಲೀಸರೂ ಅಸಹಾಯಕರಾಗಿರಬೇಕಾಗುತ್ತದೆ. ಜಿಲ್ಲೆಯಲ್ಲಿ ಇದನ್ನು ಮೀರಿದ ಅನೇಕ ಅಧಿಕಾರಿಗಳು ವರ್ಗಾವಣೆಗೆ ಒಳಗಾದ ಹಲವು ನಿದರ್ಶನಗಳಿವೆ. ಇವರು ಗಲಭೆಗಳಲ್ಲಿ, ಕ್ರಿಮಿನಲ್ ಕೃತ್ಯಗಳಲ್ಲಿ ಬಂಧಿತರಾದವರನ್ನು ಬಿಡಿಸುವುದು, ನೆರವು ನೀಡುವುದು ಇತ್ಯಾದಿಗಳ ಮೂಲಕ ಜೀವನಪರ್ಯಂತ ಗುಲಾಮರನ್ನಾಗಿ ಮಾಡುತ್ತಾರೆ.

ಎರಡನೇ ರೀತಿಯವರೆಂದರೆ ಎರಡನೇ ಹಂತದ ನಾಯಕರಾಗಿರುವವರು. ಇಂತವರಲ್ಲಿ ಕೆಲವರು ತಾತ್ವಿಕ ನಿಷ್ಟೆ ಹೊಂದಿದ್ದರೂ, ಹೆಚ್ಚಿನವರು ಕೆಳಹಂತದ ರಾಜಕೀಯ ನಡೆಸುವ ಮರಿ ಪುಡಾರಿಗಳು, ಮರಳು, ಬಡ್ಡಿ ವ್ಯವಹಾರ, ಗೂಂಡಾಗಿರಿ, ವಸೂಲಿ, ಕ್ಲಬ್, ಜೂಜು, ವಾಹನ, ಭೂವ್ಯವಹಾರ, ಮ್ಯಾನ್ ಪವರ್ ಇತ್ಯಾದಿಯಾಗಿ ಅಕ್ರಮ ಚಟುವಟಿಕೆಗಳನ್ನೂ, ಅಂಗಡಿ, ಶೋರೂಂ, ಗುತ್ತಿಗೆ, ಮದ್ಯ ಮಾರಾಟ ಇತ್ಯಾದಿಯಾಗಿ ಅರೆಕಾನೂನು ಬಾಹಿರ, ಅಂದರೆ ಉದ್ದಿಮೆ ಕಾನೂನುಬದ್ಧವಾಗಿದ್ದರೂ ಅಕ್ರಮ ಚಟುವಟಿಕೆ ನಡೆಸುವ ವ್ಯವಹಾರಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಇವರು ಧಾರ್ಮಿಕ, ಕ್ರೀಡಾ ಸೋಗಿನ ಕಾರ್ಯಕ್ರಮಗಳನ್ನು ನಡೆಸುತ್ತಾ, ನೆರವು ನೀಡುತ್ತಾ, ಬಾವುಟ, ಬಂಟಿಂಗ್, ಬ್ಯಾನರ್, ಕಟೌಟ್ ಇತ್ಯಾದಿಗಳಲ್ಲಿ ಸ್ಪರ್ಧೆ ನಡೆಸುತ್ತಾ, ಕ್ಷುಲ್ಲಕ ಕಾರಣಗಳಿಗಾಗಿ ತಂಟೆ ತಕರಾರು, ಉದ್ವಿಗ್ನತೆ ಎಬ್ಬಿಸುತ್ತಾ, ಸಭೆ, ಪ್ರತಿಭಟನೆಗಳನ್ನು ಆಯೋಜಿಸುತ್ತಾ ಇರುತ್ತಾರೆ. ಇಂತವರಿಗೆ ಗೂಂಡಾ ಎಲಿಮೆಂಟುಗಳನ್ನು ಪೋಷಿಸುವುದು, ತಮ್ಮ ಚಟುವಟಿಕೆಗಳಿಗೆ ರಾಜಕೀಯ, ಧಾರ್ಮಿಕ ನಾಯಕರ ಆಶೀರ್ವಾದ ಪಡೆಯುವುದು ಅನಿವಾರ್ಯವಾಗಿರುತ್ತದೆ. ಇವರು ಕೂಡಾ ಕಾನೂನಿನ ಕೈಗೆ ಸಿಗುವುದಿಲ್ಲ.

ಮೂರನೇ ವರ್ಗವೆಂದರೆ ಇಂತಹಾ ಗಲಭೆ ಗಲಾಟೆಗಳಲ್ಲಿ ಭಾಗವಹಿಸಿ ಜೀವ ಕಳೆದುಕೊಳ್ಳುವ, ಜೀವ ತೆಗೆಯುವ, ಜೀವ ಕಳೆದುಕೊಳ್ಳುವ, ಹಲ್ಲೆ ಮಾಡುವ, ಹಲ್ಲೆಗೆ ಒಳಗಾಗುವ, ಜೈಲುಪಾಲಾಗುವ, ಜೀವನ ಹಾಳುಮಾಡಿಕೊಳ್ಳುವ, ಹೆತ್ತವರು ಮತ್ತು ಕುಟುಂಬವನ್ನು ಸಂಕಟಕ್ಕೆ ತಳ್ಳುವ ಯುವಕರು. ಇವರಲ್ಲಿ ಕೆಲವರು ಪ್ರಾಮಾಣಿಕವಾಗಿಯೇ ಕೋಮು ಪಿತ್ತವನ್ನು ನೆತ್ತಿಗೇರಿಸಿಕೊಂಡವರು. ಇಂತವರಲ್ಲಿ ಕುಡುಕರು, ಗಾಂಜಾ ವ್ಯಸನಿಗಳು, ನಿರುದ್ಯೋಗಿಗಳು, ಸೋಮಾರಿಗಳು, ಶೋಕಿಲಾಲರು, ಗೂಂಡಾಗಳು, ಸೈಕೊಗಳು, ಕಳ್ಳ ದರೋಡೆಕೋರರು, ರೇಪಿಸ್ಟರೇ ಮೊದಲಾಗಿ ಪಕ್ಕಾ ಕ್ರಿಮಿನಲ್‌ಗಳು ಇರುತ್ತಾರೆ. ಮೊದಲಿಗೆ ಇವರಿಗೆ ನೆರವಾಗುವ ಸಂಘಟನೆಗಳು, ಪಕ್ಷಗಳು ಅವರು ತೊಂದರೆಗೆ ಸಿಲುಕಿ ಮುಳುಗುತ್ತಿರುವಾಗ ಕೈ ಬಿಡುತ್ತವೆ. ಅವರಿಗೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳಿ ಕೈತೊಳೆದುಕೊಳ್ಳುತ್ತವೆ. ಸತ್ತಾಗ ಪ್ರತಿಭಟನೆಯ ನಾಟಕವಾಡುತ್ತಾ, ಪ್ರತೀಕಾರಕ್ಕಾಗಿ ಪ್ರಚೋದಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಇದು ಎಲ್ಲಾ ಬಣ್ಣಗಳ ಮಟ್ಟಿಗೂ ನಿಜ. ಹೆಚ್ಚಿನ ಸಲ ಎರಡೂ ಕೋಮುಗಳಿಗೆ ಸೇರಿದ ಇಂತವರ ನಡುವಿನ ವೈಯಕ್ತಿಕ ವ್ಯವಹಾರ ಮತ್ತು ಸ್ಪರ್ಧೆಗೆ ಸಂಬಂಧಿಸಿಯೇ ಕೋಮು ಉದ್ವಿಗ್ನತೆ ಉಂಟಾಗುತ್ತದೆ.

ನಾಲ್ಕನೇ ವರ್ಗವೇ ಇಂತಹಾ ಕೋಮುವಾದಿ ಚಟುವಟಿಕೆಗಳು, ಹಿಂಸಾಚಾರ, ಬಂದ್ ಪ್ರತಿಭಟನೆಗಳಿಂದ ಕೆಲಸವಿಲ್ಲದೇ ತೊಂದರೆ ಅನುಭವಿಸುವ, ಕೆಲವೊಮ್ಮೆ ಹಲ್ಲೆಗೂ ಒಳಗಾಗುವ ಕಾರ್ಮಿಕರಾದಿಯಾಗಿ ಜನಸಾಮಾನ್ಯರು. ಇವರು ಯಾವ ಚಟುವಟಕೆಗಳಲ್ಲಿ ಭಾಗವಹಿಸದಿದ್ದರೂ, ತೊಂದರೆ ಅನುಭವಿಸಿದರೂ ಮಾನಸಿಕವಾಗಿ ಒಂದಲ್ಲ ಒಂದು ಗುಂಪು ಅಥವಾ ಪಕ್ಷವನ್ನು ಮುಗ್ಧವಾಗಿ ಬೆಂಬಲಿಸುವವರು ಅಥವಾ ಸಮರ್ಥಿಸುವವರು.

ಇಲ್ಲೊಂದು ವಿಚಿತ್ರ ವಿದ್ಯಮಾನವನ್ನು ಗಮನಿಸಬೇಕು. ಅದೆಂದರೆ, ಸಾರ್ವಜನಿಕವಾಗಿ ಕಚ್ಚಾಡುವಂತೆ ಕಾಣಿಸಿಕೊಳ್ಳುವ ಒಂದನೇ ಮತ್ತು ಎರಡನೇ ಹಂತದ ನಾಯಕರು ಪರಸ್ಪರ ಸಂಪರ್ಕ, ವ್ಯವಹಾರದಲ್ಲಿದ್ದು, ಜನಸಾಮಾನ್ಯರನ್ನು ಮಾತ್ರ ಕಚ್ಚಾಡಿಸುವುದು. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದು.

ರಾಜಕೀಯವಾಗಿ, ಎಸ್‌ಡಿಪಿಐಯ ಮೇಲೆ ಇರುವ ಆರೋಪವೆಂದರೆ, ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ತೀವ್ರ ವಿರುದ್ಧವಾಗಿರುವಂತೆ ತೋರಿಸಿಕೊಳ್ಳುತ್ತದೆ. ಕಾಂಗ್ರೆಸ್ ಅಷ್ಟು ಪ್ರಬಲ ವಿರೋಧ ಮಾಡುತ್ತಿಲ್ಲ; ಮೃದು ಹಿಂದೂತ್ವ ತಳೆಯುತ್ತಿದೆ ಎಂದು ಆರೋಪಿಸುತ್ತದೆ. ಆದರೆ ಚುನಾವಣೆಯ ವೇಳೆ ಸ್ಪರ್ಧಿಸಿ, ಮುಸ್ಲಿಂ ಮತಗಳನ್ನು ಒಡೆದು, ತಾನೂ ಗೆಲ್ಲದೆ, ತನ್ನ ಪರಮ ವೈರಿಯಾದ ಬಿಜೆಪಿ ಗೆಲ್ಲಲು ಸುಲಭ ಮಾಡಿಕೊಡುತ್ತಿದೆ ಎಂಬದೇ ಈ ಆರೋಪ.

ವ್ಯವಹಾರದ ಉದಾಹರಣೆ ಕೊಡಬೇಕೆಂದರೆ, ಶ್ರೀಮಂತ ಮುಸ್ಲಿಮರ ಒಡೆತನದ ಮಂಗಳೂರಿನ ಹೆಚ್ಚಿನ ಮಾಲ್, ಬಜಾರ್, ಆರ್ಕೇಡ್, ಶೋರೂಂಗಳ ಸೆಕ್ಯುರಿಟಿ ಗುತ್ತಿಗೆಯನ್ನು ಹಿಂದೂ ಸಂಘಟನೆಗಳು ನಡೆಸುವ ಸೆಕ್ಯೂರಿಟಿ ಏಜೆನ್ಸಿಗಳಿಗೆ ನೀಡಲಾಗಿದೆ. ಗಲಾಟೆ ಮಾಡುವವರೇ ಕಾವಲುಗಾರರಾದರೆ, ಗಲಾಟೆಯೇ ಇರುವುದಿಲ್ಲ ಎಂಬ ತರ್ಕ ಇರಬಹುದು. ಆದರೆ, ಈ ಕೋಮು ಸಂಘಟನೆಗಳಿಗೆ ತಮ್ಮ ಗೂಂಡಾ ಪಡೆಗಳಿಗೆ ಸುಲಭದ ಉದ್ಯೋಗ ಒದಗಿಸಿ, ಸಾಕಲು ಇದು ಅನುಕೂಲವಾಗುತ್ತದೆ. ಜನಸಾಮಾನ್ಯರಿಗೆ ಇದರ ಪರಿವೆಯೇ ಇರುವುದಿಲ್ಲ.

ಒಟ್ಟಿನಲ್ಲಿ ದಕ್ಷಿಣ ಕನ್ನಡದ ಕೋಮು ಸಮಸ್ಯೆಗೆ ಧರ್ಮ ಒಂದು ನೆಪವಾಗಿದ್ದು, ಅದರ ಮೂಲ ಮೇಲು ಜಾತಿ ಮತ್ತು ವರ್ಗಗಳ ರಾಜಕೀಯ ಮತ್ತು ಆರ್ಥಿಕ ಮಾಫಿಯಾದಲ್ಲಿದೆ. ಆರ್ಥಿಕವಾಗಿ ಮುಂದುವರಿದಿರುವ, ಅತೀಬುದ್ಧಿವಂತರ ಜಿಲ್ಲೆಗಳಲ್ಲಿ ಕೋಮುವಾದ ಬೆಳೆಯಲು ಈ ಆರ್ಥಿಕ ಕಾರಣವೂ ಒಂದಾಗಿರಬಹುದು ಮತ್ತು ಗೂಂಡಾಗಿರಿ ಮಾಡುವವರಿಗೆ ಒಂದು ಧಾರ್ಮಿಕ ಐಡೆಂಟಿಟಿ ಮತ್ತು ಹುಸಿ ಸ್ದಾನಮಾನ ದೊರಕಿಸಿಕೊಡುವುದು ಇನ್ನೊಂದು ಕಾರಣವಾಗಿರಬಹುದು.

Related Articles

ಇತ್ತೀಚಿನ ಸುದ್ದಿಗಳು