Home ರಾಜ್ಯ ನಾಡಿನ ಪ್ರಗತಿಗೆ ಸಿದ್ಧ ಸೂತ್ರ |2023-24 ರ ಆಯವ್ಯಯ

ನಾಡಿನ ಪ್ರಗತಿಗೆ ಸಿದ್ಧ ಸೂತ್ರ |2023-24 ರ ಆಯವ್ಯಯ

0

ಆಯವ್ಯಯದಲ್ಲಿ ಪ್ರಸ್ತಾಪಿಸಿದ ಯೋಜನೆಗಳು ಮಾತಿನಿಂದ ಕೃತಿಗಿಳಿಯಬೇಕು. ಇದಕ್ಕೆ ಅಧಿಕಾರಿ ವರ್ಗದ ಶ್ರಮ, ಕಾರ್ಯಾಂಗದ ಬದ್ಧತೆ, ಶ್ರಮ ದೂರದೃಷ್ಟಿ ಬಹಳ ಮುಖ್ಯ. ಅದರೊಂದಿಗೇನೇ ಈ ಯೋಜನೆಗಳಿಗೆ ನಿರೀಕ್ಷಿತ ರೀತಿಯಲ್ಲಿ ಸಂಪನ್ಮೂಲ ಕ್ರೋಢೀಕರಣವಾಗಬೇಕು. ನಮ್ಮ ಚುನಾಯಿತ ಪ್ರತಿನಿಧಿಗಳು ಪಕ್ಷ, ಕ್ಷೇತ್ರ, ಜಾತಿ, ಮನೆಮಠಗಳನ್ನು ಮೀರಿ ಯೋಚಿಸಿದಾಗ ಬಜೆಟ್ ಬರೀ ಅಕ್ಷರವಾಗದೆ ಹಸಿದವರಿಗೆ ಅನ್ನವಾಗಬಹುದು – ಡಾ. ಉದಯ ಕುಮಾರ್ ಇರ್ವತ್ತೂರು, ಸಾಮಾಜಿಕ ಆರ್ಥಿಕ ಚಿಂತಕರು

ಅಪಾರ ಜನಪರ ಕಾಳಜಿ, ಹಣಕಾಸು ನಿರ್ವಹಣೆಯ ಕುರಿತ ಆಳವಾದ ಜ್ಞಾನ, ಮತ್ತು ನಾಡು ನುಡಿಯ ಬಗೆಗಿನ ಒಳನೋಟಗಳು ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಈ ವರ್ಷ ಮಂಡಿಸಿದ ಆಯವ್ಯಯ ಪತ್ರದಲ್ಲಿ ಪ್ರತಿಫಲಿಸಿವೆ. ಪ್ರಸ್ತುತ ಸರಕಾರ ಆಧಿಕಾರ ಸ್ವೀಕರಿಸಿದ ಆರಂಭದಲ್ಲಿಯೇ ಮೊದಲ ಹೆಜ್ಜೆಯಾಗಿ ಘೋಷಿಸಿದ ಐದು ಗ್ಯಾರಂಟಿಗಳ ಮೂಲಕ ತಮ್ಮ ಆದ್ಯತೆಯ ಕುರಿತು ಹೇಳಿದ್ದಕ್ಕೆ ಅನುಗುಣವಾಗಿ ಮತ್ತು ಮುಂದುವರಿದ ಭಾಗವಾಗಿ ಪ್ರಸ್ತುತ ಬಜೆಟ್ ನಲ್ಲಿ ಸಮಾಜದ ಹಿಂದುಳಿದವರ, ಮಹಿಳೆಯರ, ಉಪೇಕ್ಷಿತರ, ಮತ್ತು ಬಡವರ್ಗದವರ ವರ್ತಮಾನದ ಅವಶ್ಯಕತೆಗಳಿಗೆ ಸರಕಾರದ ಸಂಪನ್ಮೂಲ ಹರಿಯುವಂತೆ ಯೋಜನೆ ರೂಪಿಸಲಾಗಿದೆ. ಇದರೊಡನೆಯೇ ಬದಲಾಗುತ್ತಿರುವ ಆರ್ಥಿಕ ವಿನ್ಯಾಸದಲ್ಲಿ ದಿನೇ ದಿನೇ ಹಿಗ್ಗುತ್ತಿರುವ ಅಸಂಘಟಿತ ವಲಯದಲ್ಲಿ ದುಡಿಯುವ ಜನರ ಹಿತ ರಕ್ಷಣೆ ಮಾಡುವ ಕಲ್ಯಾಣ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಲಾಗಿದೆ. ಕೇವಲ ತಕ್ಷಣದ ಅಗತ್ಯಗಳಿಗೆ ಸ್ಪಂದಿಸದೇ ದೀರ್ಘಾವಧಿಯಲ್ಲಿ ಆರ್ಥಿಕ ಸಶಕ್ತೀಕರಣಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ವಿನಿಯೋಗಿಸಿ ಆದಾಯ, ಉದ್ಯೋಗ ಮತ್ತು ಮಾನವ ಸಂಪನ್ಮೂಲ ದುಡಿಸಿಕೊಳ್ಳುವ ದೂರದೃಷ್ಟಿಯ ಕಾರ್ಯಯೋಜನೆಗಳನ್ನು ಬಹಳ ಜತನದಿಂದ ರೂಪಿಸಲಾಗಿದೆ.

ಹಿಂದಿನ ಸರಕಾರದಿಂದ ತಾವು ಬಳುವಳಿಯಾಗಿ ಪಡೆದ ಅರ್ಥವ್ಯವಸ್ಥೆ ಈಗಾಗಲೇ ಸೃಷ್ಟಿಸಿರುವ ಹಲವಾರು ಮಿತಿಗಳ ಬಗ್ಗೆ ಅಂಕಿ ಅಂಶಗಳ ಸಮೇತ ವಿವರಿಸಿದ ಶ್ರೀ ಸಿದ್ಧರಾಮಯ್ಯ ಯಾವೆಲ್ಲ ಸವಾಲುಗಳನ್ನು ಎದುರಿಸಿ ತಾನು 2023 – 24ನೇ ಸಾಲಿನ ಆಯವ್ಯಯ ಮಂಡಿಸುತ್ತಿದ್ದೇನೆ ಎನ್ನುವುದನ್ನು ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತಾರೆ.

ಕೃಷಿಕ್ಷೇತ್ರದಲ್ಲಿ ಹಿಂದಿನ ಅವಧಿಯಲ್ಲಿ ಘೋಷಿಸಿದ್ದ ಕೃಷಿ ಭಾಗ್ಯವನ್ನು, ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಿತ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ರೈತರಿಗೆ ಕೃಷಿ ಕ್ಷೇತ್ರದಲ್ಲಿ ಅನ್ವೇಷಣೆ, ಉದ್ಯಮ, ರೈತ ಸಹಾಯಕ ‘ಕೃಷಿಕರ ಉತ್ಪಾದನಾ ಸಂಸ್ಥೆ’, ಆಹಾರ ಸಂಸ್ಕರಣಾ ಉದ್ಯಮ, ತೋಟಗಾರಿಕಾ ಅಭಿವೃದ್ಧಿ ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ರಫ್ತು… ಇತ್ಯಾದಿಗಳಿಗೆ ಈ ಸಾಲಿನ ಬಜೆಟ್ ನಲ್ಲಿ ಸಾಕಷ್ಟು ಒತ್ತು ನೀಡಲಾಗಿದೆ. ಕೃಷಿ ಯಂತ್ರಗಳನ್ನು ಬಳಕೆಗಾಗಿ ಒದಗಿಸುವ ಒಂದು ನೂರು ಕೇಂದ್ರಗಳನ್ನು ತೆರೆಯಲುದ್ದೇಶಿಸುವ ಮೂಲಕ ಕೃಷಿಕ್ಷೇತ್ರದ ಅಭಿವೃದ್ಧಿಗೆ ಚಾಲನೆ ನೀಡುವ ಕೆಲಸವನ್ನು ಬಜೆಟ್‍ನಲ್ಲಿ ಮಾಡಲಾಗಿದೆ. ಹೂವು, ಹಣ್ಣು, ಕಾಫಿಯನ್ನೂ ಸೇರಿದಂತೆ ತೋಟಗಾರಿಕೆಯ ವಿವಿಧ ಉತ್ಪನ್ನಗಳನ್ನು ಗುರುತಿಸಿ, ಪ್ರಾದೇಶಿಕ ವೈಶಿಷ್ಟ್ಯವಿರುವ ಉತ್ಪನ್ನಗಳಿಗೆ ಭೌಗೋಳಿಕ ಗುರುತು ಪಡೆಯುವ ಮೂಲಕ ರೈತರಿಗೆ ಬೌದ್ಧಿಕ ಹಕ್ಕು ಸ್ವಾಮ್ಯ ಪಡೆಯಲು ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ, ರಾಜ್ಯದ ವಿವಿಧೆಡೆ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಅನುಕೂಲವಾಗುವಂತೆ ಉತ್ಪನ್ನಗಳನ್ನು ಕಾಪಿಡಲು ಎಂಟು ಶೀತಲೀಕರಣ ಘಟಕ ಸ್ಥಾಪಿಸಲು ನಿರ್ಧರಿಸಿರುವುದು ಅನುಕೂಲಕರ, ಬೆಳೆಯುತ್ತಿರುವ ಪುಷ್ಪೋದ್ಯಮದ ಬೆಳವಣಿಗೆಗೆ ಒತ್ತು ನೀಡಲಾಗಿದ್ದು ಸ್ವಾಗತಾರ್ಹ. ತೋಟಗಾರಿಕೆಯ ಕುರಿತು ಹೈಸ್ಕೂಲು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಕಾರ್ಯಯೋಜನೆ ರೂಪಿಸಿರುವುದು ವಿನೂತನ ಮತ್ತು ಪ್ರಶಂಸಾರ್ಹ ಕಾರ್ಯ. ರೇಷ್ಮೆ ಕೃಷಿಯ ಉತ್ಪಾದನೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ಸರಕಾರ ಹಾಕಿಕೊಂಡಿರುವ ಯೋಜನೆಗಳು ರೇಷ್ಮೆ ಬೆಳೆಗಾರರ ಸ್ಥಿತಿಯನ್ನು ಸುಧಾರಿಸಬಹುದಾಗಿದೆ.

ಪಶು ಸಂಗೋಪನೆಗೆ ಹಿಂದಿನ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದ ‘ಅನುಗ್ರಹ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಾರ್ಯಯೋಜನೆ ಹಾಕಿಕೊಂಡಿದ್ದು “ನಂದಿನಿ” ಉತ್ಪನ್ನಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ಸೂಚನೆಗಳಿವೆ. ಈ ಮೂಲಕ ರೈತರ ಆದಾಯ ವೃದ್ಧಿಸುವ ಉದ್ದೇಶ ಸ್ವಾಗತಾರ್ಹ. ಮೀನುಗಾರಿಕೆಗೆ ಸಂಬಂಧಿಸಿದಂತೆ ಹಣಕಾಸು, ಇಂಧನ, ಉತ್ಪನ್ನ ರಕ್ಷಣೆಗೆ ಶೀತಲೀಕರಣ ವ್ಯವಸ್ಥೆ ರೂಪಿಸಿದ್ದು ಅವಲಂಬಿತರಿಗೆ ಸಹಕಾರಿ ಸಂಸ್ಥೆಗಳ ಮೂಲಕ ಅಗತ್ಯ ಹಣಕಾಸು ವ್ಯವಸ್ಥೆಯನ್ನು ಒದಗಿಸುವ ಯೋಜನೆಯನ್ನು ಬಜೆಟ್ ಒಳಗೊಂಡಿದೆ. ರೈತರಿಗೆ ಬಡ್ಡಿಯಿಲ್ಲದ ಸಾಲ, ಕಡಿಮೆ ಬಡ್ಡಿಯ ಸಾಲ, ಕೃಷಿಕ್ಷೇತ್ರಕ್ಕೆ ಅನುಕೂಲ ಮಾಡಿಕೊಡುವ ಪರಿಕರಗಳನ್ನು ಪಡೆಯಲು ಸಾಲ ಸೌಲಭ್ಯ, ಎಲ್ಲಕ್ಕಿಂತ ಮುಖ್ಯವಾಗಿ ಕೃಷಿರಂಗಕ್ಕೆ ಮಾರಕವಾಗಿದ್ದ ಮೂರು ಮುಖ್ಯ ಕೃಷಿ ಕಾಯಿದೆಗಳನ್ನು ಸರಕಾರ ವಾಪಾಸ್ ಪಡೆಯಲು ನಿರ್ಧರಿಸಿದ್ದು ಇದು ರೈತರಿಗೆ ಮತ್ತು ಎ.ಪಿ.ಎಂ.ಸಿ. ಇನ್ನೂ ಹೆಚ್ಚು ರೈತಪರವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ಕಾರಣವಾಗಬಹುದು. ರೈತರ ಹಿತಾಸಕ್ತಿ ಕಾಯಲು ಸರಕಾರ ಬದ್ಧವಾಗಿರುವ ಸೂಚನೆ ಬಜೆಟ್‍ನಲ್ಲಿ ಸ್ಪಷ್ಟವಾಗಿದೆ.

ಸಣ್ಣ ಮತ್ತು ಬೃಹತ್ ನೀರಾವರಿ ಕ್ಷೇತ್ರದಲ್ಲಿಯೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದು ಕಲ್ಯಾಣ ಕರ್ನಾಟಕವನ್ನೂ ಸೇರಿದಂತೆ ಇದರಿಂದ ಕೃಷಿ ರಂಗದ ಪ್ರಗತಿಯಾಗುವ ನಿರೀಕ್ಷೆ ಇದೆ. ಕೆರೆ ತುಂಬುವುದು ನವಿಲೆ ಜಲ ಸಮತೋಲನ ಜಲಾಶಯ, ಎತ್ತಿನ ಹೊಳೆ, ಮೇಕೆದಾಟು, ಕಳಸಾ ಬಂಡೂರ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸಲಾಗಿದೆ. ಇದರೊಂದಿಗೆ ಜಲಶುದ್ಧೀಕರಣ, ಕುಡಿಯುವ ನೀರಿನ ಪೂರೈಕೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಬಯಲು ಸೀಮೆಯಲ್ಲಿ ಹಸಿರು ಹೆಚ್ಚಿಸಲು ವಿಶೇಷ ಒತ್ತು ನೀಡಿ ಹಣಕಾಸು ಒದಗಿಸಿರುವುದು ಸ್ವಾಗತಾರ್ಹ.

ಶಿಕ್ಷಣ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಜನಸಂಖ್ಯೆಯ ದೊಡ್ಡ ಭಾಗ “ಮಾನವ ಸಂಪನ್ಮೂಲದ ಕಣಜ” ವಾಗಲಿದೆ. ಅಂದರೆ ದೊಡ್ಡ ಪ್ರಮಾಣದ ಯುವ ಸಮುದಾಯ ರೂಪುಗೊಳ್ಳಲಿದೆ. ಇದನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸುವ ಸವಾಲು ಸರಕಾರದ ಮುಂದಿದೆ. ಉತ್ತಮ ಶಿಕ್ಷಣ, ಆರೋಗ್ಯ, ಕೌಶಲ್ಯ, ಉದ್ಯೋಗದ ಭರವಸೆಯೇ ಮೊದಲಾದ ರಚನಾತ್ಮಕ ಯೋಜನೆಗಳನ್ನು ಬದ್ಧತೆಯಿಂದ ಸಿದ್ಧ ಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ದೂರ ದೃಷ್ಟಿಯ ಹಲವಾರು ಯೋಜನೆಗಳ ನೀಲನಕಾಶೆ ಸಿದ್ಧವಾದಂತಿದೆ. ನಾಲ್ಕು ಸಾವಿರ ಪಂಚಾಯತ್‍ಗಳಲ್ಲಿ ‘ಕೂಸಿನ ಮನೆ’ ಶಿಶುಪಾಲನ ಕೇಂದ್ರಗಳಿಂದ ಹಿಡಿದು ಪ್ರಾಥಮಿಕ, ಹೈಸ್ಕೂಲು, ಪದವಿಪೂರ್ವ, ಪದವಿ ತರಗತಿ ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿಯೂ ವರ್ತಮಾನದ ಅಗತ್ಯಗಳನ್ನು ಅನುಸರಿಸಿ ತಕ್ಷಣದ ಅವಶ್ಯಕತೆ (ಪ್ರಯೋಗಾಲಯ, ಉತ್ತಮ ಗ್ರಂಥಗಳ ಅನುವಾದ ಕಾರ್ಯ, ಆವರ್ತನಾ ವೆಚ್ಚಗಳಿಗಾಗಿ ಅನುದಾನ, ತರಬೇತಿ) ಮತ್ತು ದೀರ್ಘಾವಧಿ (ಮೂಲಭೂತ ಸೌಕರ್ಯ ಒದಗಿಸುವುದು, ಡಿಜಿಲಾಕರ್ ಮೂಲಕ ಅಂಕ ಪಟ್ಟಿ ಒದಗಿಸುವುದು, ಫಲ ನೀಡುವ ಯೋಜನೆಗಳನ್ನು ಬಹಳ ಸ್ಪಷ್ಟವಾಗಿ ರೂಪಿಸಿದ್ದು, ಸಾಕಷ್ಟು ಹಣಕಾಸಿನ ನೆರವನ್ನು ಒದಗಿಸಿರುವುದು ಸ್ವಾಗತಾರ್ಹ. ಒಟ್ಟು ಆದಾಯದ ಸುಮಾರು ಶೇಕಡಾ 10% ರಷ್ಟು ಅನುದಾನ ಶಿಕ್ಷಣದ ಕುರಿತು ವೆಚ್ಚವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಬದಲಾಗುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗುವುದನ್ನು ತಡೆಯಲು ಆರಂಭಿಸಲಾದ  ಸೈಬರ್ ಕಾನೂನು ಸುವ್ಯವಸ್ಥೆ, ಪೊಲೀಸ್ ವಿಭಾಗದ ಆಧುನೀಕರಣ, ಸಿಬ್ಬಂದಿ ತರಬೇತಿ, ಗೃಹ ನಿರ್ಮಾಣ, ಉತ್ತಮ ಯೋಜನೆಗಳು.‌

ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸ್ ಕೇಂದ್ರಗಳ ಹೆಚ್ಚಳ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ, ಇಎಸ್‍ಐ ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ, ಹೃದಯ ಸಂಬಂಧಿ ಕಾಯಿಲೆಗಳ ತುರ್ತು ಸ್ಪಂದನಕ್ಕಾಗಿ ಪುನೀತ್‍ರಾಜ್ ಕುಮಾರ್ ಅವರ ಹೆಸರಲ್ಲಿ ಏಇಡಿ (AED) ಸೌಲಭ್ಯ, ಕೊಡಗು, ಗದಗ, ಕೊಪ್ಪಳದಲ್ಲಿ 450 ಹಾಸಿಗೆಗಳ ಆಸ್ಪತ್ರೆ, ಕನಕಪುರದಲ್ಲಿ ಮೆಡಿಕಲ್ ಕಾಲೇಜ್, ಜಿಲ್ಲಾ ಕೇಂದ್ರಗಳಲ್ಲಿ ಪರಿಶಿಷ್ಟ ವರ್ಗದವರಿಗೆ ಆರೈಕೆಗಾಗಿ ವೃದ್ಧಾಶ್ರಮ, ಸಿಟಿ, ಎಂ.ಆರ್.ಐ. ಸ್ಕ್ಯಾನಿಂಗ್ ಸವಲತ್ತು, ನಿಮ್ಹಾನ್‌ಸ್‌ನಲ್ಲಿ “ಮೆದುಳು ಆರೋಗ್ಯ ಕಾರ್ಯಕ್ರಮ” ಇವೇ ಮುಂತಾದ ಕಾರ್ಯಕ್ರಮಗಳು ಸಮಾಜದ ಬಡ, ದುರ್ಬಲ ಮತ್ತು ಅಂಚಿನ ವರ್ಗದವರಿಗೆ ಸಹಕಾರಿಯಾಗಲಿವೆ. ಅಲ್ಪಸಂಖ್ಯಾತ ವರ್ಗದವರಿಗೆ ವಿಶೇಷ ಯೋಜನೆಗಳು, ಇಂದಿರಾ ಕ್ಯಾಂಟೀನ್, ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ, ಕಲ್ಯಾಣ ಕರ್ನಾಟಕದಲ್ಲಿ ಶೌಚಾಲಯ ಸಂಕೀರ್ಣ, ಉಬರ್, ಝೊಮ್ಯಾಟೊ, ಅಮೆಜಾನ್‍ನಂತಹ ಆನ್‍ಲೈನ್ ಸಂಬಂಧಿತ ಉದ್ದಿಮೆಯಲ್ಲಿ ದುಡಿಯುವ ವರ್ಗಕ್ಕೆ ಆರೋಗ್ಯ ಮತ್ತು ಜೀವವಿಮೆ ನೀಡಿರುವುದು, ಹಮಾಲಿಗಳಿಗೆ ಸಹಾಯ ಧನ, ವಿದ್ಯಾರ್ಥಿಗಳಿಗೆ ಪೋಷಕಾಂಶ ಒದಗಿಸಿರುವುದು ಮೆಚ್ಚ ತಕ್ಕ ಅಂಶಗಳು.

ಇದರೊಂದಿಗೆ ಪ್ರವಾಸೋದ್ಯಮ ಮತ್ತು ಬಂದರುಗಳ ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕರ್ನಾಟಕದ ಕೋಟೆಗಳ ಅಭಿವೃದ್ಧಿ, ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಲ್ಲಿ ಸ್ಥಾಪಿಸಲುದ್ದೇಶಿಸಿರುವ ವಾಯುತಾಣಗಳು, ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ಸಸಿಹಿತ್ಲು ಬೀಚ್‍ನ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡಾಭಿವೃದ್ಧಿ, ಸಾಕಷ್ಟು ಜನರಿಗೆ ಉದ್ಯೋಗ ಮತ್ತು ಸರಕಾರಕ್ಕೆ ಆದಾಯ ತರಬಹುದಾದ ಯೋಜನೆಗಳಾಗಿವೆ. ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಸವಲತ್ತು ಮತ್ತು ಪೊಲೀಸ್ ಮತ್ತು ಅರಣ್ಯ ವಿಭಾಗದ ಉದ್ಯೋಗಗಳಲ್ಲಿ ಮೀಸಲಾತಿ ಉಪಯುಕ್ತ ಯೋಜನೆಗಳಾಗಬಹುದು. ಮಹಿ‌ಳಾ ಉದ್ಯಮಶೀಲತೆಗೆ ಒತ್ತು, ಹೊಸದಾಗಿ ಆರಂಭಿಸಲು ಉದ್ದೇಶಿಸಿದ ಪೆಟ್ರೋಲ್ ಬಂಕ್‌ ಗಳ ನಿರ್ವಹಣೆಯ ಹೊಣೆಯನ್ನು ಮಹಿಳಾ ಸಹಕಾರಗಳಿಗೆ ನೀಡುವ ಯೋಜನೆ ಉತ್ತಮ ಯೋಚನೆ. ಕಾಡುಗೋಡಿಯಲ್ಲಿ ಆರಂಭಿಸಲು ಉದ್ದೇಶಿರುವ ಸೆಮಿಕಂಡಕ್ಟರ್ ಉತ್ಪಾದನೆಯ ಉದ್ದೇಶದ ಕೈಗಾರಿಕಾ ವಲಯ ರಾಜ್ಯದ ಹೆಮ್ಮೆಯಾಗಬಹುದಾಗಿದೆ. ಇದರೊಂದಿಗೆ ರಾಜ್ಯದ ಇತರೆಡೆ ಕೈಗಾರಿಕಾ ವಲಯ, ಕಾರಿಡಾರ್ ಆರಂಭ, ಟ್ರಾಫಿಕ್ ನಿರ್ವಹಣೆಗಾಗಿರುವ ಯೋಜನೆಗಳು ಉಪಯುಕ್ತ.

ಕರ್ನಾಟಕ ರಾಜ್ಯ ಉದಯವಾಗಿ ಐವತ್ತು ವರ್ಷದ ನೆನಪಿನ ಕಾರ್ಯಕ್ರಮ ಹಾಕಿಕೊಂಡಿರುವುದು ಸ್ವಾಗತಾರ್ಹವಾದದ್ದು. ಅದರಲ್ಲಿಯೂ ಖ್ಯಾತ ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಹೆಸರಿನ ಟ್ರಸ್ಟ್ ಸ್ಥಾಪಿಸಲು ಬಯಸಿರುವುದು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಆಲೋಚನೆ, ವಿಚಾರಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ‘ಬೆಳಕಿಲ್ಲದ ದಾರಿಯಿಂದ ಕನಸಿನ ನಾಡಿಗೆ, ನಡಿಗೆ’ ಎನ್ನಬಹುದೇನೋ? ಜನಪದ ಲೋಕಕ್ಕೆ ವಿಶೇಷ ಅನುದಾನ, ಹಾಗೂ ಕೈಮಗ್ಗಗಳ ಸದ್ದು ಕೇಳಿಸಲೂ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ ಪ್ರಯತ್ನಿಸಿರುವುದು ಶ್ಲಾಘನೀಯ. ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದ ಸಾಹಿತಿ, ಚಿಂತಕರ ಆಲೋಚನೆಗಳು ಬಜೆಟ್‍ನಲ್ಲಿ ಪ್ರಸ್ತಾಪವಾಗಿರುವುದು ಸರಕಾರದ ಎಲ್ಲಾ ಆಲೋಚನೆಗಳನ್ನು ಪ್ರತಿಬಿಂಬಿಸಿವೆ.

ಬಜೆಟ್‍ನಲ್ಲಿ ಮಂಡಿಸಿರುವ ಎಲ್ಲಾ ಪ್ರಸ್ತಾಪಗಳೂ ಉತ್ತಮವಾಗಿವೆ. ಈ ಎಲ್ಲಾ ಯೋಜನೆಗಳು ಮಾತಿನಿಂದ ಕೃತಿಗಿಳಿಯಬೇಕು. ಇದಕ್ಕೆ ಅಧಿಕಾರಿ ವರ್ಗದ ಶ್ರಮ, ಕಾರ್ಯಾಂಗದ ಬದ್ಧತೆ, ಶ್ರಮ ದೂರದೃಷ್ಟಿ ಬಹಳ ಮುಖ್ಯ, ಅದರೊಂದಿಗೇನೇ ಈ ಯೋಜನೆಗಳಿಗೆ ನಿರೀಕ್ಷಿತ ರೀತಿಯಲ್ಲಿ ಸಂಪನ್ಮೂಲ ಕ್ರೋಢೀಕರಣವಾಗಬೇಕು. ನಮ್ಮ ಚುನಾಯಿತ ಪ್ರತಿನಿಧಿಗಳು ಪಕ್ಷ, ಕ್ಷೇತ್ರ, ಜಾತಿ, ಮನೆಮಠಗಳನ್ನು ಮೀರಿ ಯೋಚಿಸಿದಾಗ ಮತ್ತು ಆರುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಅವಕಾಶ ತಮ್ಮೆದುರಿಗಿದೆ ಎಂದು ಮನಗಂಡಾಗ ಬಜೆಟ್ ಬರೀ ಅಕ್ಷರವಾಗದೆ ಹಸಿದವರಿಗೆ ಅನ್ನವಾಗಬಹುದು. ಹಾಗಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

ಡಾ. ಉದಯ ಕುಮಾರ್ ಇರ್ವತ್ತೂರು

ನಿವೃತ್ತ ಪ್ರಾಂಶುಪಾಲರು ಹಾಗೂ ಸಾಮಾಜಿಕ ಆರ್ಥಿಕ ಚಿಂತಕರು

ಇದನ್ನೂ ಓದಿ-ಆದ್ಯತೆಗಳ ಮರು ಜಾರಿ: ಸಿದ್ಧರಾಮಯ್ಯನವರ ಬಜೆಟ್

You cannot copy content of this page

Exit mobile version