ಎಚ್ ಡಿ ಕೋಟೆ ತಾಲ್ಲೂಕು ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಹಾಡಿಯಲ್ಲಿ ಮನಕಲಕುವ ಘಟನೆ ನಡೆದಿದೆ. ತಪ್ಪು ಮತ್ತು ಸುಳ್ಳು ಮಾಹಿತಿಯಿಂದ ಹಾಡಿಯ ಜೇನು ಕುರುಬರ ಒಂದು ಕುಟುಂಬ ಅನಾಥವಾಗಿ ಬೀದಿಗೆ ಬೀಳುವ ದುಸ್ಥಿತಿಗೆ ಬಂದು ನಿಂತಿದೆ.
ಘಟನೆಯ ವಿವರ
ಎಚ್ ಡಿ ಕೋಟೆ ತಾಲ್ಲೂಕು ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಹಾಡಿಯಲ್ಲಿ ಜಿಂಕೆ ಮಾಂಸ ಕದ್ದ ಆರೋಪದ ಅಡಿಯಲ್ಲಿ ಕರಿಯಪ್ಪ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗುಂಡ್ರೆ ಅರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗಳು 3 ದಿನದ ಹಿಂದೆ ಕರಿಯಪ್ಪರನ್ನು ಬಂಧಿಸಿ ವಿಚಾರಣೆ ನೆಪದಲ್ಲಿ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರು.
ಆರೋಪಿ ಸ್ಥಾನದಲ್ಲಿದ್ದ ಕರಿಯಪ್ಪ ಯಾವುದೇ ಕಾರಣಕ್ಕೂ ತಾನು ಜಿಂಕೆ ಮಾಂಸ ತಿಂದಿಲ್ಲ ಎಂದು ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ ಅರಣ್ಯಾಧಿಕಾರಿಗಳು ಮಾತ್ರ ತಿಂದದ್ದು ಒಪ್ಪಿಕೊಳ್ಳಲೇಬೇಕು ಎಂಬ ರೀತಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಆದರೆ ಕರಿಯಪ್ಪ ಮಾತ್ರ ಇದನ್ನು ಒಪ್ಪಿಕೊಂಡಿರಲಿಲ್ಲ. ಆದರೂ ಅರಣ್ಯಾಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿ ಕರಿಯಪ್ಪ ಮೇಲೆ ದೈಹಿಕವಾಗಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಅರಣ್ಯಾಧಿಕಾರಿಗಳ ವಶದಲ್ಲಿದ್ದ ಕರಿಯಪ್ಪ ಅಕ್ಟೋಬರ್ 12 ರಂದು ಮೃತಪಟ್ಟ ಸುದ್ದಿ ಹೊರಬಿದ್ದಿದೆ. ಅರಣ್ಯ ಸಿಬ್ಬಂದಿಗಳ ಅತಿಯಾದ ಹೊಡೆತದಿಂದ ಕರಿಯಪ್ಪ ಮೃತಪಟ್ಟಿದ್ದಾರೆ ಎಂದು ಹೊಸಹಳ್ಳಿ ಹಾಡಿಯ ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಜೊತೆಗೆ ಅರಣ್ಯ ಸಿಬ್ಬಂದಿಗಳು ಕಚೇರಿಗೆ ಬೀಗ ಜಡಿದು ಪರಾರಿಯಗಿದ್ದಾರೆ. ಸಧ್ಯಕ್ಕೆ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು ಅಂತರಸಂತೆ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗ ಅರಣ್ಯ ಕಚೇರಿಗೆ ಕಾವಲಿದ್ದಾರೆ.
ಸಧ್ಯ ಮೃತ ಕರಿಯಪ್ಪ ಶವವನ್ನು ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೈತುಂಬಾ ಲಾಟಿ ಏಟಿನ ಹೊಡೆತದ ಕಲೆಗಳಿದ್ದು, ಅರಣ್ಯಾಧಿಕಾರಿಗಳು ಮನುಷ್ಯತ್ವವೇ ಇಲ್ಲದಂತೆ ವರ್ತಿಸಿದ್ದು ಸ್ಪಷ್ಟವಾಗಿದೆ. ಅಕಸ್ಮಾತ್ ತಪ್ಪು ಮಾಡಿದ್ದರೂ ವಿಚಾರಣೆಗೆ ಇರುವ ವಿವಿಧ ಮಾರ್ಗಗಳನ್ನು ಅನುಸರಿಸುವುದು ಬಿಟ್ಟು ಜೀವ ತಗೆಯುವ ಮಟ್ಟಕ್ಕೆ ಅರಣ್ಯಾಧಿಕಾರಿಗಳು ಇಳಿದದ್ದು, ಅಧಿಕಾರಿ ವರ್ಗಗಳು ತಲೆ ತಗ್ಗಿಸುವಂತಹ ವಿಚಾರವಾಗಿದೆ. ಇದು ಸ್ಪಷ್ಟವಾಗಿ ಅರಣ್ಯಾಧಿಕಾರಿಗಳು ನಡೆಸಿದ ಕೊಲೆ ಎಂದು ಸ್ಥಳೀಯ ಮಾನವ ಹಕ್ಕುಗಳ ಹೋರಾಟಗಾರರು
ಅಭಿಪ್ರಾಯ ಪಟ್ಟಿದ್ದಾರೆ.
ಆದಿವಾಸಿ ಕರಿಯಪ್ಪ ನಿಧನದಿಂದ ಅವರ ವಯೋವೃದ್ಧ ತಾಯಿ ಕೂಡಾ ಅನಾಥರಾಗಿದ್ದಾರೆ ಹಿಂದಿಲ್ಲ, ಮುಂದಿಲ್ಲದ ತಾಯಿ
ತನ್ನ ಮುಂದಿನ ಗತಿಯ ಬಗ್ಗೆ ದಿಕ್ಕೇ ತೋಚದಂತೆ ಮರುಗುತ್ತಿದ್ದಾರೆ. ‘ತನ್ನ ಮಗನ ಸಾವಿಗೆ ಅರಣ್ಯಾಧಿಕಾರಿಗಳು ಮತ್ತು ಇಲಾಖೆಯ ಸಿಬ್ಬಂದಿಗಳೇ ಹೊಣೆಗಾರರು. ಆತನ ಮೇಲಾದ ಮಾರಣಾಂತಿಕ ಹಲ್ಲೆಯ ಕಾರಣದಿಂದಲೇ ಆತ ಮೃತಪಟ್ಟಿದ್ದಾನೆ’ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಹೆಚ್.ಡಿ.ಕೋಟೆ ತಾಲ್ಲೂಕು ತಹಶೀಲ್ದಾರ್ ರತ್ನಾಂಬಿಕೆ ಅವರು ಪ್ರತಿಕ್ರಯಿಸಿದ್ದು, ‘ಅರಣ್ಯಾಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ದುರ್ಘಟನೆ ನಡೆದಿದ್ದು, ಸರ್ಕಾರಕ್ಕೆ ಅತಿ ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇನೆ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಈ ಹಿಂದಿನಿಂದಲೂ ಅರಣ್ಯ ವ್ಯಾಪ್ತಿಯಲ್ಲಿ ಎಲ್ಲಿ ಏನೇ ತಪ್ಪು ನಡೆದರೂ, ಸಮಸ್ಯೆ ಕಂಡುಬಂದರೂ ಕಾಡಂಚಿನ ಇಂತಹ ದನಿಯಿಲ್ಲದ ಜನರನ್ನೇ ಕರೆದುಕೊಂಡು ಹೋಗಿ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸುತ್ತಾರೆ. ಎಲ್ಲಿ ಏನೇ ತಪ್ಪಾದರೂ ಮೊದಲು ನಾವೇ ತಲೆ ಕೊಡಬೇಕು. ಇಲ್ಲಿನ ಆದಿವಾಸಿಗಳ ಮೇಲಿನ ಅರಣ್ಯಾಧಿಕಾರಿಗಳ ದೌರ್ಜನ್ಯ ಇಂದು ನಿನ್ನೆಯದಲ್ಲ. ಕಾಡನ್ನೇ ನಂಬಿ ಬದುಕುತ್ತಿರುವ ನಮ್ಮ ಗೋಳು ಕೇಳುವವರು ಯಾರು ಎಂದು ಸ್ಥಳೀಯರು ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.
ಪ್ರಕರಣದ ಕುರಿತು ಅಧಿಕಾರಿಗಳ ಮಟ್ಟದಲ್ಲಿ ತನಿಖೆ ಆಗಬಹುದು. ತಪ್ಪಿತಸ್ಥ ಅಧಿಕಾರಿಗಳು ಅಮಾನತು ಆಗಬಹುದು ಅಥವಾ ಅವರಿಗೆ ಶಿಕ್ಷೆ ಕೂಡಾ ಆಗಬಹುದು. ಆದರೆ ನಿರಂತರವಾಗಿ ಆದಿವಾಸಿ ಸಮುದಾಯದ ಮೇಲಾಗುತ್ತಿರುವ ಈ ದೌರ್ಜನ್ಯಕ್ಕೆ ಕೊನೆ ಯಾವಾಗ? ಮೃತ ಕರಿಯಪ್ಪ ಮತ್ತೆ ಮರುಜೀವ ಪಡೆಯಲಾರ. ಅವರ ಸಾವಿಗೆ ನ್ಯಾಯ ಸಿಗುವುದೇ? ಬೀದಿಗೆ ಬೀಳುತ್ತಿರುವ ಮೃತರ ಕುಟುಂಬಕ್ಕೆ ಮುಂದಿನ ಆಸರೆ ಯಾರು?