Home ದೇಶ ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಧಕ್ಕೆ: ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರದ ಹಸ್ತಕ್ಷೇಪ ಹೆಚ್ಚಳವಾಗಿದೆ ಎಂದ ‘ಸ್ಕಾಲರ್ಸ್ ಅಟ್...

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಧಕ್ಕೆ: ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರದ ಹಸ್ತಕ್ಷೇಪ ಹೆಚ್ಚಳವಾಗಿದೆ ಎಂದ ‘ಸ್ಕಾಲರ್ಸ್ ಅಟ್ ರಿಸ್ಕ್’ ವರದಿ

0

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರ ನಿರ್ಬಂಧಗಳನ್ನು ಎದುರಿಸುತ್ತಿದೆ ಎಂದು ಉನ್ನತ ಶಿಕ್ಷಣ ಕ್ಷೇತ್ರದ ಮೇಲಿನ ದೌರ್ಜನ್ಯಗಳನ್ನು ಅಧ್ಯಯನ ಮಾಡುವ ಜಾಗತಿಕ ಸಂಸ್ಥೆ ‘ಸ್ಕಾಲರ್ಸ್ ಅಟ್ ರಿಸ್ಕ್’ (SAR) ತಿಳಿಸಿದೆ. ಸಂಸ್ಥೆಯು ಬಿಡುಗಡೆ ಮಾಡಿರುವ ‘ಫ್ರೀ ಟು ಥಿಂಕ್ 2026’ ವರದಿಯಲ್ಲಿ, ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರದ ಪ್ರಭಾವ ಹೆಚ್ಚಾಗುತ್ತಿದ್ದು, ವಿಶ್ವವಿದ್ಯಾಲಯಗಳ ಆಡಳಿತ, ಕುಲಪತಿಗಳ ನೇಮಕಾತಿ ಹಾಗೂ ಶೈಕ್ಷಣಿಕ ಆದ್ಯತೆಗಳನ್ನು ರಾಜಕೀಯವಾಗಿ ನಿಯಂತ್ರಿಸಲಾಗುತ್ತಿದೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿದೆ.

ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳು ಕೈಗೊಳ್ಳುತ್ತಿರುವ ಕ್ರಮಗಳು ಕ್ಯಾಂಪಸ್‌ಗಳಲ್ಲಿ ಮುಕ್ತ ಚರ್ಚೆ ಮತ್ತು ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿವೆ ಎಂದು ವರದಿ ಹೇಳಿದೆ. ಅಸಮ್ಮತಿ ವ್ಯಕ್ತಪಡಿಸುವ ಉಪನ್ಯಾಸಕರನ್ನು ಸೇವೆಯಿಂದ ವಜಾಗೊಳಿಸುವುದು, ವಿಚಾರ ಸಂಕಿರಣಗಳನ್ನು ರದ್ದುಪಡಿಸುವುದು ಹಾಗೂ ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸುವಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. 2025ರ ಜುಲೈ 2 ರಿಂದ 2026ರ ಜೂನ್ 30ರ ನಡುವೆ ಜಗತ್ತಿನ 59 ದೇಶಗಳಲ್ಲಿ ಶಿಕ್ಷಣ ಕ್ಷೇತ್ರದ ಮೇಲೆ ನಡೆದ 382 ದಾಳಿಗಳನ್ನು ಸಂಸ್ಥೆ ದಾಖಲಿಸಿದೆ. ಅಲ್ಲದೆ, ಅಂತರರಾಷ್ಟ್ರೀಯ ‘ಅಕಾಡೆಮಿಕ್ ಫ್ರೀಡಮ್ ಇಂಡೆಕ್ಸ್’ನಲ್ಲಿ ಭಾರತದ ಸೂಚ್ಯಂಕ ಸ್ಕೋರ್ 2022ರಲ್ಲಿ 0.38 ಇದ್ದದ್ದು 2025ರ ವೇಳೆಗೆ 0.14ಕ್ಕೆ ತೀವ್ರವಾಗಿ ಕುಸಿದಿದ್ದು, ದೇಶವು ‘ತೀವ್ರ ನಿರ್ಬಂಧಿತ’ ವಿಭಾಗಕ್ಕೆ ಸೇರಿದೆ ಎಂದು ವರದಿ ಉಲ್ಲೇಖಿಸಿದೆ.

ಉನ್ನತ ಶಿಕ್ಷಣದ ಮೇಲೆ ತನ್ನ ಸಿದ್ಧಾಂತವನ್ನು ಹೇರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಅನ್ನು ಪ್ರಮುಖ ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ವರದಿ ಆರೋಪಿಸಿದೆ. ಉಪಕುಲಪತಿಗಳ ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳನ್ನು ಸಡಿಲಗೊಳಿಸಿರುವುದು ಹಾಗೂ ತಾತ್ಕಾಲಿಕ ಉಪನ್ಯಾಸಕರ ಮೇಲಿದ್ದ ಶೇಕಡಾ 10ರ ಮಿತಿಯನ್ನು ತೆಗೆದುಹಾಕಿರುವುದು ಸರ್ಕಾರದ ನೇರ ಹಿಡಿತವನ್ನು ಹೆಚ್ಚಿಸುವ ಹುನ್ನಾರ ಎಂದು ಟೀಕಿಸಲಾಗಿದೆ. ಇದರೊಂದಿಗೆ ಕ್ಯಾಂಪಸ್‌ಗಳಲ್ಲಿ ನಡೆಯುವ ಪ್ರತಿಭಟನೆಗಳ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಸಂಘರ್ಷಗಳು ಹೆಚ್ಚುತ್ತಿರುವುದು ಹಾಗೂ ಭಿನ್ನಾಭಿಪ್ರಾಯಗಳನ್ನು ವ್ಯವಸ್ಥಿತವಾಗಿ ನಿಗ್ರಹಿಸುತ್ತಿರುವುದು ಭಾರತದ ಶೈಕ್ಷಣಿಕ ವಾತಾವರಣವನ್ನು ಕುಗ್ಗಿಸುತ್ತಿದೆ ಎಂದು ಎಚ್ಚರಿಸಲಾಗಿದೆ.

You cannot copy content of this page

Exit mobile version