ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ NCP ಪಕ್ಷದ ನಾಯಕ ಅಜಿತ್ ಪವಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇಂದು ತಮ್ಮ ಪಕ್ಷದ 9 ಮಂದಿ ಶಾಸಕರನ್ನು ಒಳಗೊಂಡಂತೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. NCP ಪಕ್ಷದ 53 ಶಾಸಕರಲ್ಲಿ ಸುಮಾರು 40 ಮಂದಿ ಶಾಸಕರು ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಬಗ್ಗೆ ವರದಿಯಾಗಿದೆ.
ಭಾನುವಾರ ಬೆಳಿಗ್ಗೆ ತನ್ನ ನಿವಾಸದಲ್ಲಿ ಎನ್ಸಿಪಿ ಶಾಸಕರ ತುರ್ತು ಸಭೆ ಕರೆದ ನಂತರ ಅಜಿತ್ ಪವಾರ್ ರಾಜಭವನಕ್ಕೆ ಆಗಮಿಸಿದರು. ಸುಮಾರು 40 ಮಂದಿ NCP ಶಾಸಕರ ಸಹಿಯೊಂದಿಗೆ ಇಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಲ್ಲದೆ, ಅವರ ಜೊತೆಗೆ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಅದಿತಿ ತತ್ಕರೆ, ಧನಂಜಯ್ ಮುಂಡೆ, ಹಸನ್ ಮುಶ್ರೀಫ್, ರಾಮರಾಜೇ ನಿಂಬಾಳ್ಕರ್, ಸಂಜಯ್ ಬನ್ಸೋಡೆ, ಧರ್ಮರಾವ್ ಬಾಬಾ ಅತ್ರಮ್ ಹಾಗೂ ಅನಿಲ್ ಭೈದಾಸ್ ಪಾಟೀಲ್ ಕೂಡಾ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು
ಕೆಲವೇ ದಿನಗಳ ಹಿಂದೆ ಅಜಿತ್ ಪವಾರ್ ತಾವು ವಿರೋಧ ಪಕ್ಷದ ಸ್ಥಾನದಿಂದ ಕೆಳಗಿಳಿಯುವ ಹೇಳಿಕೆ ನೀಡಿದ್ದರು. ಇದರ ಹಿಂದೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ತಡವಾಗಿ ಮಾಹಿತಿ ಹೊರಬಿದ್ದಿದೆ.
ಈ ಮೂಲಕ ಮಹಾರಾಷ್ಟ್ರದಲ್ಲಿ NCP ಇಬ್ಭಾಗವಾದಂತಾಗಿದೆ. ಇತ್ತ NCP ಮುಖ್ಯಸ್ಥ ಶರದ್ ಪವಾರ್ ಇದೊಂದು ನಿರೀಕ್ಷಿತ ಬೆಳವಣಿಗೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 1980 ಕ್ಕೂ ಮುನ್ನ ಕೇವಲ 6 ಮಂದಿ ಶಾಸಕರನ್ನು ಹೊಂದಿ ಪಕ್ಷ ಕಟ್ಟಿದ್ದೆ. ಆ ನಂತರ 58 ಶಾಸಕರ ಬಲವನ್ನು NCP ಹೊಂದಿತ್ತು. ಆ ಸಂದರ್ಭದಲ್ಲಿ ಪಕ್ಷ ಬಿಟ್ಟ ಬಹುತೇಕರು ಆ ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದ್ದರು. ಇದು ನನಗೆ ಹೊಸತೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ತಮ್ಮ ಸೋದರಳಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶರದ್ ಪವಾರ್ “ಜುಲೈ 6 ರಂದು ನಾನು ಪಕ್ಷದ ಎಲ್ಲಾ ನಾಯಕರ ಸಭೆ ಕರೆದಿದ್ದೆ, ಅಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದಿತ್ತು. ಪಕ್ಷದೊಳಗೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು. ಆದರೆ ಆ ಸಭೆಯ ಮೊದಲೇ, ಕೆಲವು ನಾಯಕರು ವಿಭಿನ್ನ ನಿಲುವು ತಳೆದಿದ್ದಾರೆ. ಅದರ ಪರಿಣಾಮ ಇಂದಿನ ಬೆಳವಣಿಗೆ” ಎಂದು ಶರದ್ ಪವಾರ್ ಹೇಳಿದ್ದಾರೆ.
“ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಶಾಸಕರ ನಿಲುವು ಎಷ್ಟು ಭಿನ್ನವಾಗಿದೆ ಎಂಬುದನ್ನು ಮುಂದಿನ 2-3 ದಿನಗಳಲ್ಲಿ ಸ್ಪಷ್ಟಪಡಿಸಲಾಗುವುದು. ಅವರಲ್ಲಿ ಕೆಲವರು ನನ್ನನ್ನು ಸಂಪರ್ಕಿಸಿ ಸರ್ಕಾರವನ್ನು ಬೆಂಬಲಿಸಲು ಸಹಿ ಹಾಕುವಂತೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಈಗಲೂ ನಮ್ಮೊಂದಿಗಿದ್ದೇವೆ ಎಂದು ಹೇಳಲು ನನಗೆ ಕರೆ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಸೂಚಿಸಲು ಕರೆ ಮಾಡಿದ್ದಾರೆ.” ಎಂದು ಶರದ್ ಪವಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಅಜಿತ್ ಪವಾರ್ ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ ಒಂಬತ್ತು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಶರದ್ ಪವಾರ್ ಹೇಳಿದ್ದಾರೆ.