ಕವನ
1.
ಊರ ಮಲವನ್ನು ತಲೆಮ್ಯಾಲೆ ಹೊತ್ತು
ಸಾಗಿಸುವುದು ಅಪರಾಧವಾಗಿ ಅದೆಷ್ಟೋ
ವರುಷಗಳಾಗಿ ಹೋಗಿವೆ.
ಭಂಗಿಗಳಿಗದು ನಿತ್ಯ ಕಾಯಕ
ಅದಕ್ಕಾಗಿ ಸವಣೂರು ನವಾಬರಿಂದ
ಒಂದಷ್ಟುಜಾಗ,
ಗುಡಿಸಲಿನಂತ ಗೂಡುಗಳಲ್ಲಿ.
ಸಂಸಾರ, ಮಕ್ಳುಮರಿಗಳು,
ಕೋಳಿಕುರಿಗಳು ನಾಯಿ
-ನಾಯಿಮರಿಗಳು..ಇತ್ಯಾದಿ.
ರಸ್ತೆಬದಿಯಲ್ಲಿರುವ ಗುಡಿಸಲುಗಳ ಮೇಲೆ
ಊರ ಮುನಿಸಿಪಾಲಿಟಿಯ ಕಣ್ಣು.
ಅವರಿಗೆ ಅಲ್ಲಿ ಕಾಂಪ್ಲೆಕ್ಸ್ ಕಟ್ಟಿಸಬೇಕಿತ್ತು.ಅದಕ್ಕಾಗಿ
ಭಂಗಿಗಳಿಗೆ ನೋಟೀಸು ನೀಡಲಾಯಿತು.
ನೂರಾರು ವರುಷಗಳಿಂದಲೂ ಬದುಕಿದ್ದ ಅಜ್ಜ-ಮುತ್ತಜ್ಜರ ಪರಿಚಯ
ಹೇಳಿದರು. ಮುನಿಸಿಪಾಲಿಟಿಯವರ ಹೃದಯ
ಕರಗಲಿಲ್ಲ. ಅಲ್ಲಿದ್ದ ಭಂಗಿಗಳ ಬದುಕನ್ನು ಧ್ವಂಸ ಮಾಡಲಾಯಿತು.
ಕುಡಿಯುವ ನೀರನ್ನು ನಿಲ್ಲಿಸಿದರು.
ಓಡಿಸಲು ಪ್ರಯತ್ನಿಸಿದರು.
ಬದುಕು ಮೂರಾಬಟ್ಟೆಯಾಗಿ ಹೋಯಿತು.
ಅನ್ಯ ಮಾರ್ಗವೇ ಇರಲಿಲ್ಲ
ಮಲ ತುಂಬಿದ ಕೊಡಗಳನ್ನವರು ಮೈಮೇಲೆ ಸುರುವಿಕೊಂಡರು.
ಜನ ದೂರದರ್ಶನ, ಪತ್ರಿಕೆಗಳಲ್ಲಿ ಸುದ್ದಿ ನೋಡಿಯೇ
ವಾಂತಿ ಮಾಡಿಕೊಂಡರು. ಇನ್ನು ಕೆಲವರು ಮೂಗು ಮುಚ್ಚಿಕೊಂಡರು.
” ಛೀ…ಥೂ….”ಅಂದರು.
ಭಂಗಿಗಳ ಮೈಮೇಲೆ ಯಾರದ್ದೋ ಮಲ
ಹರಿಯುತ್ತಿತ್ತು.ಸರ್ಕಾರ..ಎದ್ದೆನೋ ಬಿದ್ದೆನೋ..
ಎಂದು ಓಡೋಡಿ ಬಂದಿತು.
ಕೆಲಸ ಕೊಡಿಸುವ, ಮನೆ ಕೊಡಿಸುವ
ಭರವಸೆಗಳು ದೂರದರ್ಶನಗಳಲ್ಲಿ
ಬಿತ್ತರವಾಗತೊಡಗಿದವು.
****
ಮಾತು 1.
ಸಂದರ್ಶಕನೊಬ್ಬ ಭಂಗಿಗಳನ್ನು ಮಾತಾಡಿಸುತ್ತಿದ್ದ.
ಸಂದರ್ಶಕ:”ನಿಮ್ಮಹೆಸರೇನು?”
ಭಂಗಿ ಮೌನವಾಗಿಯೇ ಇದ್ದ. ಆತ ತನ್ನ ಕೈ ತೋರಿಸಿದ.
ಆ ಕೈಯಲ್ಲಿ ಹಸಿರು ಹಚ್ಚೆ “ಗೊತ್ತಿಲ್ಲ” ಗುರುತಿತ್ತು.
ಮಾತು 2.
ಸಂದರ್ಶಕ ಹುಟ್ಟಿದ ದಿನಾಂಕ ಕೇಳಿದ.
“ನಾನು ಹುಟ್ಟಿದ್ದು ಈಗ್ಗೆ ಮೂರು ದಿನಗಳ
ಹಿಂದೆ….ಅದೇ ಊರವರ ಮಲವನ್ನು ತಲೆ
ಮ್ಯಾಲೆ…ಸುರಕೊಂಡೆವಲ್ಲ…ಅವತ್ತೇ ನಾವ್
ಹುಟ್ಟಿದ್ದು ..ಸಾ..!” ಎಂದ.
“ನಾನಷ್ಟೇ ಅಲ್ಲ ,ನಾನು ನನ್
ಚಿಗಪ್ಪ, ಚಿಗವ್ವ, ಹೆಂಡ್ತಿ, ಮಕ್ಳು
ಎಲ್ಲರೂ ಹುಟ್ಟಿದ್ದೇ ಅವಾಗಲ್ಲವಾ ಸಾರು..
ಅಲ್ಲೀವರ್ಗೂ ನಾವಿದ್ದೀವಿ ಅನ್ನಾದು ನಿಮ್ಗೂ
ಗೊತ್ತರ್ಲಿಲ್ಲ. ಸಾ….? ಪೇಪರ್ರು, ಟೀವಿ ನ್ಯಾಗ
ಬಂದಮ್ಯಾಲೆ ನಾವ್ ಹುಟ್ಟಿದ್ದು!”ಎಂದ.
ಸಂದರ್ಶಕನ ಬಾಯಿ ಒಣಗುತ್ತಿತ್ತು.
ಮಾತು 3.
ಆತನ ಕೈಯಲ್ಲಿ ಗಡಿಯಾರವಿತ್ತು. ಗಮನಿಸಿದ
ಸಂದರ್ಶಕ “ಮುಳ್ಳಿಲ್ಲದ ಗಡಿಯಾರ…!!
ಯಾಕ್ಹೀಗೆ?” ಉದ್ಗಾರ ತೆಗೆದ.
ಅದಕ್ಕೆ “ಅಯ್ಯೋ ನಮ್ ಕಾಲ
ಮುಗ್ದುಹೋಗಿದೆ…
ನಮಿಗೆ ಟೇಮೇ ಇಲ್ವಲ್ಲಾ ಸಾರ್..”ಭಂಗಿ
ವಿಲಕ್ಷಣ ನಗೆ ನಕ್ಕ.
*****
ಸಂದರ್ಶಕನಿಗೆ ಅನುಮಾನ
ಆತನೇನು ದಾರ್ಶನಿಕನಾ..?
ಇಲ್ಲ ಬರೀ ಭಂಗಿಯಾ..?
ಕಾಡುತ್ತಿದೆ.
************
2.
ನನ್ನೂರಿನಲ್ಲಿ ದಲಿತನೊಬ್ಬನು ಸಾಯುವುದಿಲ್ಲ
ಒಂದೇ ಬಾರಿಗೆ, ಎಲ್ಲರ ಹಾಗೆ.
ಕಣ್ಣು ಮುಚ್ಚಿ,ಉಸಿರು ನಿಲ್ಲಿಸಿ,
ಕೈಕಾಲು ಸೆಟಗೊಂಡರೂ ಸತ್ತನೆಂದು ಹೇಳುವ ಹಾಗಿಲ್ಲ!
ಸತ್ತ ಮೇಲೆಯೂ ಸಾಯಬೇಕು
ಮತ್ತೆ ಮತ್ತೆ,ಉಳ್ಳವರ ಮನೆ, ಹೊಲ ದಾಟಿ
ನೆಲದ ಮೇಲೆ ಬೀಳುವ ತನಕವೂ ಗ್ಯಾರಂಟಿಯಿಲ್ಲ ಸಾವು!
3.
ಮಲ ಹೊರುವುದು ಅಪರಾಧ
ಬೋರ್ಡಿನ ಜತೆಯಲ್ಲಿಯೆ ಇದೆ
“ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗಿಗಾಗಿ
ಸಂಪರ್ಕಿಸಿ”ಬೋರ್ಡು!
4..
ಯಾರೋ ನಡೆದಾಡಿದ ಸದ್ದು ಎದೆಯೊಳಗೆ,
ಹೀಗಿರಲಿಲ್ಲವಂತೆ
ಅಪ್ಪನ ಕಾಲದಲಿ!
ಎದೆಯ ಮೇಲೆಯೇ ಇದ್ದವಂತೆ ಅವರ ಕಾಲು!
5.
ನನ್ನೂರಿನಲ್ಲಿ ಹಾಕುವರು ಹಾರ ಇಂದಿಗೂ
ಬಾಬಾರ ಪ್ರತಿಮೆಗಳಿಗೆ ದೂರ ನಿಂತು!
ಪ್ರತಿಮೆಗಳು ಮಾತನಾಡುವುದಿಲ್ಲ ನಿಜ,
ಆದರೆ ದುಃಖಿಸುತ್ತವೆ.
ಮತ್ತೆ ದುಃಖಿಸುತ್ತವೆ,ದೂರವಿಟ್ಟ ತನ್ನ
ಜನರಿಗಾಗಿ.
6..
ಶೌಚಗುಂಡಿಯಿಂದ ಮೇಲೇಳದೆ,ಮತ್ತೂ
ಕೆಲವರು ಬೊಗಸೆ ನೀರಿಗಾಗಿ ಮೈಮೇಲೆ ಮಲ
ಸುರುವಿಕೊಂಡ ದಿನ,
ಮತ್ತೆ ಹುಟ್ಟುತ್ತಲೇ ಇರುತ್ತಾರೆ
ಕೆಲವರಂತೂ ಹೂಳುವಾಗಲೂ
ಮತ್ತೆ ಮತ್ತೆ ಸಾಯುತ್ತಾರೆ.
ಹೀಗೆ ಮತ್ತೆ ಹುಟ್ಟಿ, ಮತ್ತೆ ಸಾಯುವಾಗ
ಹೆಣಗಾಡುತ್ತದೆ ನನ್ನೂರು,ಉಸಿರಾಡಲು
ಕೊಸರಾಡುತ್ತದೆ ಸಂವಿಧಾನ
ಬಿ.ಶ್ರೀನಿವಾಸ