ಧಾರವಾಡದ ಡಿಮಾನ್ಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಜಾತಿಯ ಕಾರಣಕ್ಕಾಗಿ ಮತ್ತು ಔದ್ಯೋಗಿಕ ಉನ್ನತಿಯನ್ನು ಸಹಿಸದ ಹಿನ್ನೆಲೆಯಲ್ಲಿ ಪ್ರೊಫೆಸರ್ ಬಿ.ರಮೇಶ್ ಬಾಬು ಎಂಬುವವರು ಡಿಮಾನ್ಸ್ ನ ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಆ ದೂರಿನ ಅನ್ವಯ ಎಲ್ಲಾ ರೀತಿಯ ತನಿಖೆ ನಡೆದು ಹಿರಿಯ ಅಧಿಕಾರಿಗಳಾದ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಧಾರವಾಡದ ಡಿಮಾನ್ಸ್ ಆಸ್ಪತ್ರೆಯಲ್ಲಿ 2019ರ ಡಿಸೆಂಬರ್ ನಲ್ಲಿ ಸರ್ಕಾರದ ಖಾಲಿ ಇರುವ ಬ್ಯಾಕ್ಲಾಗ್ ಪ್ರಾಧ್ಯಾಪಕರ ಹುದ್ದೆಯಲ್ಲಿ ಪ್ರೊಫೆಸರ್ ಡಾ.ರಮೇಶ್ ಬಾಬು ಕಾರ್ಯ ನಿರ್ವಹಿಸುತ್ತಿದ್ದರು. ನಂತರ 2020 ರ ಜನವರಿಯಲ್ಲಿ ‘ನಿರ್ದೇಶಕರು, ಡಿಮಾನ್ಸ್, ಧಾರವಾಡ’ ಇವರ ಹೆಸರಿನಲ್ಲಿ ಡಾ.ರಮೇಶ್ ಬಾಬು ಅವರಿಗೆ ಪತ್ರವೊಂದು ಬಂದಿತ್ತು. ಆ ಪತ್ರದಲ್ಲಿ ಡಾ.ರಮೇಶ್ ಬಾಬು ಈ ದಿನದಿಂದ ಯಾವುದೇ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದು, ಉಪನ್ಯಾಸ ಮಾಡುವುದು, ಕ್ಲಿನಿಕಲ್ ಕಾರ್ಯನಿರ್ವಹಣೆ ಮಾಡುವುದು ಇವುಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬರೆಯಲಾಗಿತ್ತು. ಹಾಜರಾತಿ ಇದ್ದರೂ ಸಹ ಮೇಲಧಿಕಾರಿಗಳು ಸಂಬಳ ತಡೆ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದರು.
ಜೊತೆಗೆ ಸರ್ಕಾರ ಆದೇಶ ಮಾಡಿದ್ದರೂ ಅನಧಿಕೃತವಾಗಿ ಡಿಮಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲರ ಎದುರು ಬಹಿರಂಗವಾಗಿ ಅವಮಾನ ಮಾಡಿದ್ದಾರೆ. ಹಾಗೂ ಕೋವಿಡ್ 19 ಸಂದರ್ಭದಲ್ಲೂ ಸಹ ಯಾವುದೇ ರೀತಿಯಲ್ಲೂ ಕರ್ತವ್ಯ ನಿರ್ವಹಿಸಲು ಬಿಡದೇ ಈ ದಿನದ ವರೆಗೂ ರಮೇಶ್ ಬಾಬು ಅವರಿಗೆ ಬರುವ ಸಂಬಳ ತಡೆ ಹಿಡಿದಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾದಾಗ ಹಿರಿಯ ಅಧಿಕಾರಿಗಳಾದ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಎಂಬುವವರು ಪರಿಶಿಷ್ಟ ಜಾತಿಗೆ ಸೇರಿದ ಡಾ.ರಮೇಶ್ ಬಾಬು ಅವರು ಭಾರತದ ಯಾವುದೇ ವಿಧ್ಯಾಸಂಸ್ಥೆಗೆ ಕರ್ತವ್ಯ ನಿರ್ವಹಿಸಲು ಅನರ್ಹ, ಎಂದು ಸುಳ್ಳು ದಾಖಲೆ ಸೃಷ್ಟಿಸಿ ಅನಗತ್ಯವಾಗಿ ಸತ್ಯ ಶೋಧನೆಗೆ ಒಳಪಡದ ರೀತಿಯಲ್ಲಿ ವರದಿ ಸಿದ್ದಪಡಿಸಿದ್ದಾರೆ. ಇದೆಲ್ಲವನ್ನೂ ಸಹಿಸಿಕೊಂಡು ಕರ್ತವ್ಯ ನಿರ್ವಹಣೆ ಅಡಿಯಲ್ಲಿ ಕೆಲಸ ಮಾಡಿದ್ದರೂ ಮೇಲಧಿಕಾರಿಗಳು ಇವರನ್ನು ಸರಿಯಾಗಿ ನಡೆಸಿಕೊಳ್ಳದೇ, ಮಾತನಾಡದೇ ಅವಮಾನಕರವಾಗಿ ನಡೆದುಕೊಂಡಿದ್ದಾರೆ.
ಹಾಗೇ ಡಾ.ರಮೇಶ್ ಬಾಬುರವರು ಇವೆಲ್ಲವನ್ನೂ ಮರೆತು 2020 ರ ಸ್ವಾತಂತ್ರ್ಯ ದಿನಾಚರಣೆ ದಿನ ಕೈ ಕುಲುಕಿ ಶುಭಾಶಯ ಹೇಳಿದಾಗಲೂ ಅವರ ಸ್ಪರ್ಶದಿಂದ ಕಿರಿಕಿರಿ ಎಂದು ಕೆಲವರೊಂದಿಗೆ ಡಾ.ಮಹೇಶ್ ದೇಸಾಯಿ ಹೇಳಿಕೊಂಡದ್ದೂ ಸಹ ಸಾಕ್ಷ್ಯ ಸಮೇತ ರುಜುವಾತಾಗಿದೆ. ಇದರ ಜೊತೆಗೆ ಡಾ.ರಮೇಶ್ ಬಾಬುರವರ ಮೇಲಾದ ಮಾನಹಾನಿ ಪರವಾಗಿ ನಿಂತ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಡಾ.ಅಂಜು ಬಾಲಾ ಅವರ ಮೇಲೂ ಸಹ ಡಾ.ರಾಘವೇಂದ್ರ ನಾಯಕ್ ಅವರು ದೂರು ದಾಖಲಿಸಿ ಪರಿಶಿಷ್ಟ ಜಾತಿಯವರ ಮೇಲಿನ ಅಸಹನೆಯನ್ನು ಹೊರಹಾಕಿದ್ದು, ಇವೆಲ್ಲವೂ ಸಾಕ್ಷ್ಯ ಸಮೇತ ದಾಖಲಾಗಿದೆ.
ಸಧ್ಯ ಈ ಬಗ್ಗೆ ಸಂಪೂರ್ಣ ತನಿಖೆ ನಡೆದು ಧಾರವಾಡ ಡಿಮಾನ್ಸ್ ನಲ್ಲಿ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಅವರ ಮೇಲೆ ರಾಯಚೂರಿನಲ್ಲಿ FIR ದಾಖಲಾಗಿದೆ. ಸಧ್ಯ ಧಾರವಾಡ ಡಿಮಾನ್ಸ್ ಆಸ್ಪತ್ರೆ ಅಸ್ಪೃಶ್ಯತಾ ಆಚರಣೆಯ ಹಿನ್ನೆಲೆಯಲ್ಲಿ ಸುದ್ದಿಯಾಗುತ್ತಿದೆ. ಡಾ.ರಮೇಶ್ ಬಾಬು ಅವರ ಪ್ರಕಾರ ಮೇಲಧಿಕಾರಿಗಳ ಈ ರೀತಿಯ ವರ್ತನೆಗೆ ಸಮಾಜದ ದೊಡ್ಡ ದೊಡ್ಡ ವ್ಯಕ್ತಿಗಳು, ರಾಜಕಾರಣಿಗಳು ಇವರ ಬೆಂಬಲಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ, ಇದು ಸ್ಪಷ್ಟವಾಗಿ ಔದ್ಯೋಗಿಕ ಉನ್ನತಿಗೆ ಅಸೂಯೆ ಪಡುವ ಕೆಟ್ಟ ಪ್ರವೃತ್ತಿಯಾಗಿದೆ. ಸಮಾಜದಲ್ಲಿ ಕೆಳ ವರ್ಗ ಎಂದು ಗುರುತಿಸಲ್ಪಡುವ ಸಮುದಾಯಗಳನ್ನು ಇಂತಹ ಅಧಿಕಾರಿಗಳೇ ಕೆಟ್ಟ ದೃಷ್ಟಿಯಿಂದ ನೋಡಿದರೆ ಇನ್ನು ಸಾಮಾನ್ಯ ಜನರ ಪಾಡೇನು?