ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್ ಮೀಡಿಯಾವು ಪ್ರಕಟಿಸುತ್ತಿರುವ ಒಂಬತ್ತನೇ ಸರಣಿಯಲ್ಲಿ ಕಾಲದ ಅಗತ್ಯವನ್ನು ಅರಿತು ಸ್ಪಂದಿಸಿದ ಚೇತನ ಬೆಂಗಳೂರಿನ ಡಾ. ವಿಜಯಮ್ಮನವರ ಸಾಧನೆಯ ಹೆಜ್ಜೆ ಗುರುತುಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಕಟ್ಟಿಕೊಟ್ಟಿದ್ದಾರೆ ಡಾ. ಸಬಿಹಾ ಭೂಮೀಗೌಡ.
1942ರಲ್ಲಿ ದಾವಣಗೆರೆಯಲ್ಲಿ ಹುಟ್ಟಿದ ವಿಜಯಮ್ಮ ತಮ್ಮ ಬದುಕಿನ ಶಿಲ್ಪಿ ತಾವೇ ಆದವರು. ಇಂದು ನಾಡಿನ ಹಲವರಿಗೆ ವಿಜಯಲಕ್ಷ್ಮಿ, ಡಾ. ವಿಜಯಾ ಅಂದರೆ ಗೊತ್ತಾಗುವುದಿಲ್ಲ; ಇಳಾ ವಿಜಯಾ ಮತ್ತು ವಿಜಯಮ್ಮ ಆಗಿ ಚಿರಪರಿಚಿತರು. 70-80ರ ದಶಕದಲ್ಲಿ ಬೆಂಗಳೂರಿನಲ್ಲಿ ಯಾರಾದರೂ ಆಟೋದಲ್ಲಿ ಕುಳಿತು ‘ಚಾಮರಾಜನಗರ, ಅಮ್ಮನ ಮನೆ’ ಅಂದರೆ ಸಾಕಿತ್ತು, ಡಾ. ವಿಜಯಮ್ಮ ಅವರ ಮನೆ ತಲುಪಬಹುದಿತ್ತು. ಹೀಗೆ ಅವರು ಎಲ್ಲರಿಗೂ ಅಮ್ಮ.
ಪ್ರತಿಭೆ, ಬುದ್ಧಿವಂತಿಕೆ, ಧೈರ್ಯ, ಪ್ರಾಮಾಣಿಕತೆ, ಸ್ತ್ರೀವಾದ ಮತ್ತು ಸ್ನೇಹಗಳಿಗೆ ಮಾದರಿಯಾದವರು ವಿಜಯಮ್ಮ. ಬದುಕಿನ ಒಂದು ಹಂತದಲ್ಲಿ ಕುಟುಂಬದ ಹಿಂಸೆಯ ವಾತಾವರಣದಿಂದ ಹೊರಬಂದು, ಮಕ್ಕಳ ಜೊತೆ ಹೊಸ ಬದುಕನ್ನು ಆರಂಭಿಸಿದರು. ಶಿಕ್ಷಣ ಮುಂದುವರಿಸಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪದವಿಯನ್ನೂ ಛಲದಿಂದ ಪಡೆದರು. ಮೊದಲು ಐಟಿಐ ಕಾರ್ಖಾನೆಯಲ್ಲಿ ವೃತ್ತಿ ಆರಂಭಿಸಿದ ಅವರು, ಮುಂದೆ ಪತ್ರಕರ್ತೆಯಾಗಿ ಸಹಾಯಕ ಸಂಪಾದಕಿಯಾಗಿ, ಸಹ ಸಂಪಾದಕಿಯಾಗಿ ಏರಿದ ಎತ್ತರ ಎಲ್ಲರಿಗೂ ಮಾದರಿಯಾಗಿದೆ. ಅವರು ಸೇವೆ ಸಲ್ಲಿಸಿದ ಪತ್ರಿಕೆಗಳು ಪ್ರಜಾಮತ, ಮಲ್ಲಿಗೆ, ತುಷಾರ, ರೂಪತಾರಾ, ಉದಯವಾಣಿ, ಅರಗಿಣಿ ಇತ್ಯಾದಿ ಹಲವು. ಅವರು ತೊಡಗಿಸಿಕೊಂಡ ಎಲ್ಲ ಪತ್ರಿಕೆಗಳ ಹೊರ ಆಕೃತಿ ಮತ್ತು ಒಳ ಆವರಣಗಳಲ್ಲಿ ಅವರ ಛಾಪು ಎದ್ದು ಕಾಣುತ್ತದೆ.

ವಿಜಯಮ್ಮ ಅವರದು ಹಲವು ಪ್ರಥಮಗಳ ಹಾದಿ. ಅವರು ಕನ್ನಡದ ಮೊದಲ ಸಿನಿ ಪತ್ರಿಕಾ ವಿಮರ್ಶಕಿ, ಮೊದಲ ಬೀದಿ ನಾಟಕ ಕರ್ತೃ. ತುರ್ತುಪರಿಸ್ಥಿತಿಯ ಕಾಲದಲ್ಲಿ ಬೀದಿ ನಾಟಕ ಬರೆದು ಆಡಿಸಿ ಜನಪ್ರಿಯ ಗೊಳಿಸಿದರು, ‘ಸೂತ್ರದ ಬೊಂಬೆಯಾಟ’ದಂಥ ಜನಪದ ಕಲೆಯನ್ನು ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಪುನಾರಚಿಸಿದರು, ಗಿರೀಶ್ ಕಾರ್ನಾಡರ ‘ಮಾ ನಿಷಾದ’ ಎಂಬ ನಾಟಕವನ್ನು, ಗಿರಡ್ಡಿ ಗೋವಿಂದರಾಜರ ‘ಕನಸುಗಳು’ ಎಂಬ ಕಥೆಯನ್ನು ಬೊಂಬೆಯಾಟಕ್ಕೆ ಅಳವಡಿಸಿ ಪ್ರಯೋಗಿಸಿದರು, ಕಲೆಗೆ ಸಂಬಂಧಿಸಿದ ‘ಸಂಕುಲ’ ಎಂಬ ವಿಶಿಷ್ಟ ನಿಯತಕಾಲಿಕವನ್ನು ತಂದವರು, ‘ನಮ್ಮ ಮಾನಸ’ ಎಂಬ ನಿಯತಕಾಲಿಕದ ಸ್ಥಾಪನೆಯಲ್ಲೂ ಅವರ ಕೊಡುಗೆ ಮಹತ್ತ್ವದ್ದಾಗಿದೆ. ‘ಇಳಾ’ ಎಂಬ ಮುದ್ರಣಾಲಯವನ್ನು ಸ್ಥಾಪಿಸಿ ಮಹಿಳೆಯರ ಅನೇಕ ಕೃತಿಗಳನ್ನು ಮತ್ತು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು, ಅನೇಕ ಉದಯೋನ್ಮುಖ ಬರಹಗಾರರ, ಪತ್ರಕರ್ತರ, ನಟರ ಮತ್ತು ಸಂಗೀತಗಾರರ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಿದವರು. ಬೆಂಗಳೂರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ತಂದವರು.
ಸಾಮಾಜಿಕ ಅನ್ಯಾಯದ ವಿರುದ್ಧ ಸದಾ ದನಿ ಎತ್ತುತ್ತಲೇ ಬಂದಿರುವ ವಿಜಯಮ್ಮ ಅವರು ಸಾಮೂಹಿಕ ಚಳವಳಿಗಳಲ್ಲಿ ಅದರಲ್ಲೂ ದಲಿತ, ಬಂಡಾಯ ಹಾಗೂ ಮಹಿಳಾ ಚಳವಳಿಗಳ ಜೊತೆ ತೊಡಗಿಸಿಕೊಂಡು, ಯುವ ಪಡೆಗೆ ಬೆಂಬಲ ನೀಡಿದವರು. ಕರ್ನಾಟಕದ ಗೋಕಾಕ್ ಚಳವಳಿಗೆ ಡಾ. ರಾಜಕುಮಾರ್ ಅವರು ಧುಮುಕುವಲ್ಲಿ ವಿಜಯಮ್ಮ ಅವರ ಪಾತ್ರ ಮಹತ್ತ್ವದ್ದಾಗಿದೆ.
ಬರಹಗಾರ್ತಿಯಾಗಿಯೂ ವಿಜಯಮ್ಮ ತಮ್ಮದೇ ಅನನ್ಯತೆ ಹೊಂದಿರುವವರು. ಶ್ರೀರಂಗರ ನಾಟಕಗಳ ಬಗೆಗೆ ಸಂಪ್ರಬಂಧ ರಚಿಸಿ ಪಿಎಚ್ಡಿ ಪದವಿ ಪಡೆದಿರುವ ಅವರು ನಾಟಕ, ಬೀದಿ ನಾಟಕ, ಲೇಖನ ಸಂಗ್ರಹ, ಅಂಕಣ ಬರಹ, ವ್ಯಕ್ತಿ ಚಿತ್ರಣಗಳ 22 ಕೃತಿಗಳನ್ನು ರಚಿಸಿದ್ದಾರೆ. 22 ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಅವರ ಆತ್ಮಕತೆ `ಕುದಿ ಎಸರು’ ಹಲವು ಮುದ್ರಣಗಳನ್ನು ಕಂಡ, 2019ರ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವವನ್ನು ಗಳಿಸಿಕೊಂಡ ಜನಪ್ರಿಯ ಕೃತಿಯಾಗಿದೆ. ಸರ್ಕಾರದ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸುವ ಇಚ್ಛೆಯಿಲ್ಲದ್ದರಿಂದ ಹಲವು ಪ್ರಶಸ್ತಿಗಳನ್ನು ನಿರಾಕರಿಸಿದ್ದಾರೆ. ಅಕಾಡೆಮಿ ಪ್ರಶಸ್ತಿಯ ನಗದು ಹಣವನ್ನೂ ಪಡೆಯದೇ ನಿರಾಕರಿಸಿದ್ದಾರೆ.
ವಿಜಯಮ್ಮ ಅವರದು ಬಹುಮುಖ ಸಾಧನೆ. ಕಾಲದ ಅಗತ್ಯವನ್ನು ಅರಿತು ಸ್ಪಂದಿಸಿದ ಚೇತನ. ಅನೇಕರಿಗೆ ಅವರು ಏರಬೇಕಾದ ಎತ್ತರಕ್ಕೆ ಮಾದರಿ. ಅವರು ನಮ್ಮ ಅಕ್ಕ ನಮ್ಮ ಹಿರಿಮೆಯಾಗಿದ್ದಾರೆ.
ಸಬಿಹಾ ಭೂಮೀಗೌಡ
ಸಂಸ್ಕೃತಿ ಚಿಂತಕರು ಮತ್ತು ಸಾಮಾಜಿಕ ಹೋರಾಟಗಾರರು.