ಮಹೇಶ್ ಜೋಶಿಯವರು ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ ಎಂಬುದು ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲಭಾರತ ಸಾಹಿತ್ಯ ಸಮ್ಮೇಳನದ ವಿವಾದದ ಹಿನ್ನೆಲೆಯಲ್ಲಿ, ಸಮಾಜ ಮತ್ತು ಸಂಸ್ಕೃತಿ ಚಿಂತಕರಾಗಿರುವ ಡಾ.ಕೆ.ಷರೀಫಾ ಅವರ ಆಶಯ.
ಹಾವೇರಿಯಲ್ಲಿ ದಿನಾಂಕ 6-1-202೩ ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರು, ಮತ್ತು ಮುಸಲ್ಮಾನ ಸಾಹಿತಿಗಳನ್ನು ಒಳಗೊಂಡಿಲ್ಲವೆಂದು ಅದರಲ್ಲೂ ಮಹಿಳೆಯರ ಅವಗಣನೆ ಕುರಿತು ವಿವಾದ ಸೃಷ್ಟಿಯಾಗಿದೆ. ಹಿಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಆಗ ಪರಿಷತ್ತಿನ ಅಧ್ಯಕ್ಷರಾದ ಹಂಪ ನಾಗರಾಜಯ್ಯನವರಿಗೆ ಚೆನ್ನಣ್ಣ ವಾಲೀಕಾರ ಮತ್ತು ಜಂಬಣ್ಣ ಅಮರಚಿಂತ ಅವರು ಹೋಗಿ ಸಮ್ಮೇಳನದಲ್ಲಿ ದಲಿತ ಗೋಷ್ಟಿಯೊಂದನ್ನು ಇಡಲು ಹೇಳಿದಾಗ ಹಂಪನಾರವರು “ಕನ್ನಡ ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಎಂದೇನೂ ಇಲ್ಲ” ಎಂದು ಹೇಳಿದಾಗ ಅದನ್ನು ವಿರೋಧಿಸಿದ ಸಾಹಿತಿಗಳು ಅಂದಿನ ಪರಿಷತ್ತಿಗೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟಿದ್ದು ಈಗ ಇತಿಹಾಸ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆಯೇ ಹೊರತು ಅದು ಮನುವಾದಿಗಳ ಕೇಂದ್ರವಲ್ಲ. 1915ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ನೂರಾ ಏಳು ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷೆಯಾಗದಿರುವ ಕೆಟ್ಟ ದುರಿತ ಕಾಲದಲ್ಲಿ ನಾವು ಪರಿಷತ್ತಿನ ಸಮ್ಮೆಳನಗಳಲ್ಲಿ ಸಾಮಾಜಿಕ ನ್ಯಾಯವನ್ನು ಬಯಸುತ್ತಿದ್ದೇವೆ. ಮಹಿಳೆಯರ ಅವಗಣನೆಯನ್ನು ಪ್ರಶ್ನಿಸುತ್ತಿದ್ದೇವೆ. ಪರಿಷತ್ತಿನ ಅಧ್ಯಕ್ಷರು, ಕೋಮುವಾದಿ ಪಕ್ಷದ ಶಾಸಕರು ಸಂಸದರ ಮೂಲಕವೇ ಆರಿಸಿ ಬಂದಾಗ ಅವರಿಗೆ ವಿಧೇಯರಾಗಿರುತ್ತಾರೆ. ಆದರೆ ಪರಿಷತ್ತು ನಡೆಯುತ್ತಿರುವುದು ಸರ್ಕಾರದ ಅನುದಾನದಿಂದ ಮತ್ತು ಸರ್ಕಾರವು ನೀಡುತ್ತಿರುವ ಹಣ ಜನಸಾಮಾನ್ಯರದು. ರಾಜಕೀಯ ಪಕ್ಷ ಅಧಿಕಾರದಲ್ಲಿರಲಿ. ಆದರೆ, ಅವರು ಜನತೆಯ ಅಭಿಪ್ರಾಯವನ್ನು ಗೌರವಿಸಬೇಕಾಗುತ್ತದೆ. ಆಗ ಸಹಜವಾಗಿಯೇ ಅಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಬರುತ್ತದೆ. ನಾಡಿನ ಬಹುಸಂಸ್ಕೃತಿಗೆ ಧಕ್ಕೆಯಾದಾಗ ಅದನ್ನು ಪ್ರತಿಭಟಿಸುವುದು ನಾಗರೀಕರ ಜವಾಬ್ದಾರಿಯಾಗಿದೆ.
ಎಲ್ಲ ಬಗೆಯ ಸಾಹಿತ್ಯಗಳಿಗೂ ಧರ್ಮಗಳಿಗೂ ಅವಿನಾಭಾವ ಸಂಬಂಧವಿದೆ. ಧರ್ಮಗಳಿಗೂ ಸಾಹಿತ್ಯಕ್ಕೂ ಇರುವ ನಂಟು ತುಂಬಾ ಪ್ರಾಚೀನವಾದುದು. ಬದುಕು ಚಲನಶೀಲವಾಗಿರುವಂತೆ ಸಾಹಿತ್ಯವೂ ಚಲನಶೀಲವಾಗಿದೆ. ಕನ್ನಡ ಸಾಹಿತ್ಯಕ್ಕೆ ಇರುವ ದೀರ್ಘ ಇತಿಹಾಸವನ್ನು ಒಂದು ಬಾರಿ ಅವಲೋಕಿಸಿದಾಗ ಅಲ್ಲಿ ಆರಂಭದ ಕನ್ನಡ ಸಾಹಿತ್ಯದ ಘಟ್ಟಗಳಲ್ಲಿ ಮುಸ್ಲಿಂ ಮಹಿಳಾ ಸಂವೇದನೆಗಳನ್ನು ಕಾಣಲು ಸಾಧ್ಯವಾಗುವುದಿಲ್ಲ.
14ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗೂ ಮುಸ್ಲಿಂ ದೊರೆಗಳು, ರಾಣಿಯರು ರಾಜ್ಯಭಾರ ಮಾಡಿದ ಚರಿತ್ರೆಯನ್ನು ನಾವು ಕಾಣಬಹುದಾಗಿದೆ. ಅಲ್ಲಿ ಕನ್ನಡದ ಮುಸ್ಲಿಂ ಸಾಹಿತಿಗಳು ಸಿಗುವುದಿಲ್ಲ. ಅದಕ್ಕೆ ಅದರದೇ ಆದ ಐತಿಹಾಸಿಕ ಕಾರಣಗಳಿವೆ. ಒಬ್ಬ ಲೇಖಕ ತಾನು ಬಯಸಿದರೂ ಬಯಸದೇ ಇದ್ದರೂ ಸಹ ಯಾವುದಾದರೂ ಒಂದು ಧರ್ಮದಲ್ಲಿ ಹುಟ್ಟುವುದು ಅನಿವಾರ್ಯವಾಗಿದೆ. ಆದರೆ ಅವರು ಆ ಧರ್ಮದ ಚೌಕಟ್ಟುಗಳನ್ನು ಮೀರುವ ಕ್ರಿಯೆಯಿಂದ ಸಾರ್ವಜನಿಕ, ಮತ್ತು ಸಾರ್ವತ್ರಿಕ ವ್ಯಕ್ತಿಗಳಾಗುತ್ತಾರೆ.
ಇಪ್ಪತ್ತನೆಯ ಶತಮಾನದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ ಸಾಹಿತ್ಯ ಘಟ್ಟಗಳು ಮತ್ತು ಚಳುವಳಿಗಳು ನಡೆದವು. ಆದರೆ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳೆಯರ ಸಂವೇದನೆಗಳು ದಾಖಲಾಗಲು ಆರಂಭಿಸಿದ್ದು ದಲಿತ ಬಂಡಾಯದ ಕಾಲದಲ್ಲಿ ಎಂದು ಹೇಳಬಹುದು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಮುಸ್ಲಿಂ ಲೇಖಕರು ಕನ್ನಡದಲ್ಲಿ ಕಥೆ, ಕವನ, ಕಾದಂಬರಿ, ಲೇಖನ, ನಾಟಕ, ವಿಮರ್ಶೆ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸುತ್ತ ಕನ್ನಡ ಸಾಹಿತ್ಯ ಲೋಕವನ್ನು ಮುಸ್ಲಿಂ ಸಂವೇದನೆಗಳ ತೊರೆಯನ್ನು ಹರಿಸುತ್ತ ಶ್ರೀಮಂತಗೊಳಿಸಿದ್ದಾರೆ.
ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂಕಟಗಳನ್ನು, ದಲಿತ ಬಂಡಾಯ ಸಂದರ್ಭದಲ್ಲಿ ಬಂದ ಈ ಸಮುದಾಯದ ಸಾಹಿತಿಗಳು ಈ ಧರ್ಮದೊಳಗಿನ ಕುಟುಂಬ, ಲಿಂಗತಾರತಮ್ಯ, ಬಹುಪತ್ನಿತ್ವ, ತಲ್ಲಾಕ್, ಇದ್ದತ್, ಖುಲಾಹ್, ಕೋಮುವಾದ, ಮೂಲಭೂತವಾದ, ಮತಾಂತರ, ಮೆಹರ್, ವಸ್ತ್ರಸಂಹಿತೆ, ವರ್ಗನೆಲೆ, ಪುರುಷಾಧಿಪತ್ಯ, ಅವಳ ಚಲನವಲನದ ಮೇಲೆ ನಿಯಂತ್ರಣ, ಹೀಗೆ ಹಲವಾರು ವಿಷಯಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಆದಾಗ್ಯೂ ಅವರ ಅನುಭವಕ್ಕೆ ದಕ್ಕಿದ ಸೀಮಿತ ವಿಷಯಗಳು ಮಾತ್ರ ಸಾಹಿತ್ಯದಲ್ಲಿ ದಾಖಲಾಗಿವೆ. ಒಂದು ಜನಸಮುದಾಯದ ಹೋರಾಟಗಳು ಲೇಖನಿಗಿಂತ ಹರಿತವಾದವುಗಳು. ಬರಹವು ಇಂತಹ ಚಳುವಳಿ ಹೋರಾಟಗಳ ಮೂಲಕವೇ ಯಾವುದೇ ಧರ್ಮದಡಿಯ ಅಧರ್ಮವನ್ನು ಪ್ರಶ್ನಿಸುವ ಕಸುವು ಪಡೆಯುತ್ತದೆ. ಈ ಲೇಖಕರು ಧರ್ಮದ ಒಳಗಿನ ಮತ್ತು ಹೊರಗಿನ ವಿರೋಧಿ ಶಕ್ತಿಗಳನ್ನು ತೆರೆದು ತೋರಿದರು. ಈ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆಗಿನ ಕಾಲದಲ್ಲಿ ದಲಿತ ಚಳುವಳಿಯಿಂದ ಬಂದ ಲೇಖಕರು ಪುರೋಹಿತಶಾಹಿಯನ್ನು ವಿರೋಧಿಸಿ ಬರೆದಂತೆ ಮುಸ್ಲಿಂ ಸಮುದಾಯದ ಸಾಹಿತಿಗಳು ತಮ್ಮ ಧರ್ಮದ ಒಳಗಿನ ಶತ್ರು ಮತ್ತು ಹೊರಗಿನ ಶತ್ರುಗಳನ್ನು ಏಕಕಾಲಕ್ಕೆ ಗುರುತಿಸಿದರು. ಮೂಲಭೂತವಾದವನ್ನು ಪ್ರಶ್ನಿಸುತ್ತಲೇ ಮಹಿಳಾ ಶೋಷಣೆಯ ವಿವಿಧ ಮುಖಗಳನ್ನು ಮುಖಾಮುಖಿ ಮಾಡಿದರು. ಬೊಳುವಾರು ಮಹಮ್ಮದ್ ಕುಂಞಯವರು “ಇಡೀ ಜಗತ್ತಿನಲ್ಲಿ ಮುಸ್ಲಿಂ ಗೆಳತಿಯರು ಒಟ್ಟಾರೆ ಕಾಲದ ಅಗತ್ಯಕ್ಕೆ ಸ್ಪಂದಿಸಲಾರದಂತಹ ಸಂಕ್ರಮಣ ಕಾಲ ಒದಗಿ ಬಂದಿದೆ. ಇಂಡಿಯಾದ ಅಲ್ಪಸಂಖ್ಯಾತರ ಬರವಣಿಗೆಗೆ ವಿಶಿಷ್ಟ ಆರ್ಥವಿದೆ” ಎನ್ನುತ್ತಾರೆ. ಅದಷ್ಟೇ ಅಲ್ಲದೇ ಮುಂದುವರಿಯುತ್ತಾ “ದಲಿತ ಪ್ರಜ್ಞಾವಂತನೊಬ್ಬ ತನ್ನ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ತನ್ನ ಕೋಮಿನ ಮೇಲುವರ್ಗದವನನ್ನಷ್ಟೇ ವಿರೋಧಿಸಿದರೆ ಸಾಕಾಗುತ್ತದೆ. ಆದರೆ ಮುಸ್ಲಿಂ ಪ್ರಜ್ಞಾವಂತನೊಬ್ಬ ತನ್ನ ಕೋಮಿನ ಮೇಲುವರ್ಗದ ವಿರುದ್ಧ ಧ್ವನಿಯೆತ್ತುವುದರ ಜತೆಯಲ್ಲೇ ಮುಸ್ಲಿಂ ವಿರೋಧಿ ಧೋರಣೆಗಳನ್ನು ತಳೆಯುವ ಮುಸ್ಲಿಮೇತರ ಕೋಮುಶಕ್ತಿಯನ್ನೂ ಸಹ ವಿರೋಧಿಸ ಬೇಕಾಗುತ್ತದೆ” ಎನ್ನುತ್ತಾರೆ.
ಮುಸ್ಲಿಂ ಸಮುದಾಯ ಕನ್ನಡದಲ್ಲಿ ಬರೆಯಲು ಆರಂಭಿಸಿದ ಕಾಲವೆಂದರೆ ಅದು ಶಿಶುನಾಳ ಷರೀಫರಿಂದಲೇ ಆರಂಭವಾಗುತ್ತದೆ. ಆನಂತರದಲ್ಲಿ ಈ ಸಮುದಾಯದಿಂದ ಬಂದ ಮೊದಲ ತಲೆಮಾರಿನ ಬರಹಗಾರರಾದ ಎಸ್.ಕೆ.ಕರಿಂಖಾನ್, ಎಂ.ಜೀವನ, ಎಂ.ಅಕಬರಲಿ, ಬಿ.ಎ.ಸನದಿ, ಅಬ್ದುಲ್ ಮಜೀದ್ಖಾನ್, ಎಂ.ದಸ್ತಗೀರ್, ಕೆ.ಎಸ್.ನಿಸಾರ್ ಅಹಮದ್ ಮೊದಲಾದ ಸಾಹಿತಿಗಳು ಬಂದರು. ಎರಡನೇ ತಲೆಮಾರಿನ ಲೇಖಕರಾದ ಫಕೀರ್ ಮಹಮದ್ ಕಟ್ಪಾಡಿ, ಬೊಳುವಾರು ಮಹಮದ್ ಕುಂಙ್ಞ , ಸಾರಾ ಅಬೂಬಕರ್, ಮುಮ್ತಾಜ್ ಬೇಗಂ (ಮುಲ್ಕಿ) ಕೆ.ಷರೀಫಾ, ಅಬ್ದುಲ್ ರಶೀದ್, ರಂಜಾನ್ ದರ್ಗಾ, ರಹಮತ್ ತರೀಕೆರೆ, ಅಬ್ಬಾಸ್ ಮೇಲಿನಮನಿ, ಡಿ.ಬಿ.ರಜಿಯಾ, ಪೀರಬಾಷಾ, ಬಾನು ಮುಷ್ತಾಕ್, ನಜೀರ್ ಚಂದಾವರ, ಸಬೀಹಾ, ಹಸನ್ ನಯಿಂ ಸುರಕೋಡ, ಎನ್.ಎಮ್. ಇಸ್ಮಾಯಿಲ್, ಎಲ್. ಕೆ.ಅತೀಕ್, ಮುಜಫರ್ ಅಸ್ಸಾದಿ, ಅದಿಬ್ ಅಖ್ತರ್, ದಸ್ತಗೀರಸಾಬ ದಿನ್ನಿ, (ಕೊಪ್ಪಳದ) ಮುಮ್ತಾಜ ಬೇಗಂ, ರಜಿಯಾ ಬಳಬಟ್ಟಿ, ಎಂ.ಷಹನಾಜ್ ಮುಂತಾದ ಮುಸ್ಲಿಂ ಸಮಾಜದ ಲೇಖಕರು ಮುನ್ನೆಲೆಗೆ ಬಂದರು.
ಶತಶತಮಾನಗಳಿಂದ ಮೌನವಾಗಿದ್ದ ಈ ಜನಾಂಗದ ಮಹಿಳಾ ಸಾಂಸ್ಕೃತಿಕ ಜಗತ್ತು ಅನಾವರಣಗೊಂಡು ದಾಖಲಿಸಿಕೊಂಡು, ಜನಮನ್ನಣೆ ಪಡೆಯಿತು. ಕನ್ನಡದಲ್ಲಿ ರಚಿತವಾದ ಮೊದಲ ಮಹಿಳಾ ಕಾದಂಬರಿ, 1908 ರಲ್ಲಿ ಶಾಂತಾಬಾಯಿ ನೀಲಗಾರರವರು ಬರೆದ “ಸದ್ಗುಣಿ ಕೃಷ್ಣಾಬಾಯಿ” ಪ್ರಕಟವಾಯಿತು. ಆದರೆ ಸಾರಾ ಅಬೂಬಕರವರು ಬರೆದ “ಚಂದ್ರಗಿರಿಯ ತೀರದಲ್ಲಿ” 1984ರಲ್ಲಿ ಪ್ರಕಟವಾಯಿತು. ಹಿಂದೂ ಮಹಿಳೆಯೊಬ್ಬಳು ಕನ್ನಡದಲ್ಲಿ ಕಾದಂಬರಿ ರಚಿಸಿದ 75 ವರ್ಷಗಳ ಬಳಿಕ ಒಬ್ಬ ಮುಸ್ಲಿಂ ಮಹಿಳೆ ಕನ್ನಡದಲ್ಲಿ ಮೊದಲ ಕಾದಂಬರಿಯೊಂದು ಬರೆಯುತ್ತಾಳೆಂದರೆ ಅದಕ್ಕೆ ಅದರದೇ ಆದ ಸಾಂಸ್ಕೃತಿಕ ಚಾರಿತ್ರಿಕ, ಮತ್ತು ರಾಜಕೀಯ ಕಾರಣಗಳಿರುತ್ತವೆ. ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂವೇದನೆಯ ಮೊದಲ ಕಾದಂಬರಿ ಸಾರಾ ಅಬೂಬಕ್ಕರ್ ರವರದು 1984ರಲ್ಲಿ ಪ್ರಕಟವಾದರೆ, ಕನ್ನಡದ ಮೊದಲ ಮುಸ್ಲಿಂ ಕಥೆಗಾರ್ತಿ ಮುಮ್ತಾಜ ಬೇಗಂ ರವರ ಮೊದಲ ಕಥಾ ಸಂಕಲನ ‘ಅವ್ಯಕ್ತ’ 1985ರಲ್ಲಿ ಪ್ರಕಟವಾಯಿತು. 1975ರಿಂದಲೂ ಕವಿತೆಗಳನ್ನು ಬರೆಯುತ್ತಿರುವ ಡಾ.ಕೆ.ಷರೀಫಾರವರು ಮುಸ್ಲಿಂ ಸಮಾಜದಿಂದ ಬಂದ ಕನ್ನಡದ ಮೊದಲ ಕವಯಿತ್ರಿಯಾದರು.ಮುಂದೆ ಹಲವಾರು ಬರಹಗಾರ್ತಿಯರು ಈ ಸಮುದಾಯದಿಂದ ಬಂದರು
ಮುಂದೆ ಶಾಬಾನುವಿನ ಜೀವನಾಂಶದ ತಲ್ಲಾಕಿನ ವಿಷಯ ಬಂದಾಗ ಮುಸ್ಲಿಂ ಮೂಲಭೂತವಾದಿಗಳು “ಇದು ನಮ್ಮ ಸಮಾಜದ ಆಂತರಿಕ ವಿಷಯ”ವೆಂದು ಇತರರ ಪ್ರವೇಶವನ್ನು ನಿರಾಕರಿಸಿದವು. ಅಕ್ರಮಣಕಾರಿ “ದೇಶಭಕ್ತಿ” ಸಾಬೀತುಪಡಿಸುವಂತಹ ಮಾದರಿಗಳು ನಂತರದ ಕಾಲಘಟ್ಟದಲ್ಲಿ ಸೃಷ್ಟಿಯಾದವು. ಅನಂತರದಲ್ಲಿ ಭಾರತೀಯ ಮುಸ್ಲಿಮರಲ್ಲಿ ಅಭದ್ರತೆ, ಅನಾಥಪ್ರಜ್ಞೆ ಕಾಡತೊಡಗಿದವು. ಅಲ್ಲದೇ ಹಿಂದೂ ಮುಸ್ಲಿಂ ಎರಡೂ ಧರ್ಮದ ಮಹಿಳೆಯರ ಮೇಲೆ ಧರ್ಮಾಚರಣೆಯ ಒತ್ತಡಗಳೂ ಹೆಚ್ಚಾದವು. ರೂಪ್ ಕನ್ವರಳ ಸತಿಯಾದುದು, ಬಾಬ್ರಿ ಮಸೀದಿ ಧ್ವಂಸವಾದುದು ಇಡೀ ಜನಶಕ್ತಿಯನ್ನು ಕೋಮುವಾದಿಗಳನ್ನಾಗಿಸಿತು. ಆಗಲೇ ಸಾಹಿತ್ಯ ಚಳುವಳಿಗಳು ಮತ್ತು ಸಾಂಸ್ಕೃತಿಕ ಚಳುವಳಿಗಳಿಗೆ ಹಿನ್ನಡೆಯಾಯಿತು. ಯಾವ ಧರ್ಮದ ಕೋಮುವಾದವೇ ಇರಲಿ ಅದು ಆಯಾ ಧರ್ಮದ ಮಹಿಳೆಯರನ್ನು ಹಿಂಸೆ, ಕ್ರೌರ್ಯಗಳಿಗೆ ಬಲಿಯಾಗಿಸಿತು. ಇಂತಹ ನಿರ್ಭಂಧಗಳು ಅವಳ ಬದುಕಿನ ನೆಲೆಗಳನ್ನು ಕಿತ್ತುಕೊಳ್ಳತೊಡಗಿತು. ಅವಳ ಪ್ರಗತಿಗೆ ಮಾರಕವಾಗತೊಡಗಿದ್ದಂತೂ ಸತ್ಯ. ಶಾಹೀನ್ಬಾಗ್ನ ಎನ್.ಆರ್.ಸಿ., ಸಿಎಎ, ಕುರಿತು ಹೋರಾಟ ಮಾಡಿದ ದಾದಿಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ. ಅವರು ತಮ್ಮ ಪರ್ಯಾಯಗಳನ್ನು ರೂಪಿಸಿಕೊಳ್ಳುತ್ತಲೇ ಹಕ್ಕು ಸ್ಥಾಪನೆಯತ್ತ ಸಾಗಿದ ಧೀಮಂತ ಮಹಿಳೆಯರಾಗಿದ್ದಾರೆ.
ಅನಂತರ ಬರುವ ಮೂರನೇ ತಲೆಮಾರಿನ ಬರಹಗಾರರಾದ, ಸಂತೆಬೆನ್ನೂರ ಫೈಜ್ ನಟರಾಜ, ಇಸ್ಮತ್ ಫಜೀರ್, ಚಾಂದ್ ಪಾಷ, ದಾದಾಪೀರ್ ಜೈಮನ್, ನಜ್ಮಾ ನಜೀರ್, ಮಿಸ್ರಿಯಾ, ತಾಜುಮಾ, ಮುಮ್ತಾಜ್ ಬಿರಾದಾರ್, ಯು.ಟಿ.ಫರ್ಜಾನಾ, ಮುಹಮ್ಮದ್ ಮುಸ್ತಫಾ, ಫಾತಿಮಾ ರಲಿಯಾ, ಬಿ.ಎಂ ಸಿಹಾನ ಮುಂತಾದ ಮುಸ್ಲಿಂ ಸಮುದಾಯದಿಂದ ಮೂರು ತಲೆಮಾರುಗಳಿಂದಲೂ ಬಂದ ಇಷ್ಟೆಲ್ಲ ಸಾಹಿತಿಗಳಿರಬೇಕಾದರೆ ಹಾಗೂ ಇವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿರುವಾಗಲೂ ಅವರನ್ನು ದೂರ ಮಾಡುವುದು ಸರಿಯೇ? ಹುಟ್ಟಿದ ಮನೆಯಂಗಳದಿಂದ, ವ್ಯಾಪಾರದಿಂದ, ಹಲಾಲ್ಕಟ್, ಜಟ್ಕಾಕಟ್, ತಲೆ ಮೇಲಿನ ತುಂಡು ಬಟ್ಟೆಯಿಂದ, ಈಗ ಪರಿಷತ್ತಿನ ಸಮ್ಮೇಳನದಿಂದಲೇ ಹೊರಗು ಮಾಡುತ್ತಿದ್ದಾರಲ್ಲ ಇದು ನ್ಯಾಯವೇ?. ಪರಿಷತ್ತಿನಂತಹ ಮಹತ್ತ್ವದ ಸಂಸ್ಥೆಯೊಂದು ಕೋಮುವಾದಿಗಳ ಕೈಗೆ ಸಿಕ್ಕು ಯಾವ ರೀತಿ ಅಂಗವಿಕಲವಾಗುತ್ತಿದೆ ಎಂಬುದರ ಬಗ್ಗೆ ಕನ್ನಡಿಗರು ಗಮನಿಸುತ್ತಿದ್ದಾರೆ. ಮಹಿಳೆಯರು, ದಲಿತರು ಮತ್ತು ಮುಸ್ಲಿಮರನ್ನು ದೂರವಿಟ್ಟು ಇವರು ಏನನ್ನು ಸಾಧಿಸುವವರಿದ್ದಾರೆ? ಒಟ್ಟು 86 ಜನ ಸನ್ಮಾನಿತರಲ್ಲಿ ದೊಡ್ಡಮನಿ ಮತ್ತು ನದಾಫ್ ಇಬ್ಬರನ್ನು ಬಿಟ್ಟರೆ ಬೇರಾರೂ ಮುಸ್ಲಿಮರಿಲ್ಲ. ಒಟ್ಟು ಮೂರು ಬೇರೆ, ಬೇರೆ ವೇದಿಕೆಗಳಿದ್ದು, ಮೊದಲ ವೇದಿಕೆಯಲ್ಲಿ 9 ಗೋಷ್ಟಿಗಳಿದ್ದು ಅದರಲ್ಲಿ ಒಬ್ಬ ಭಾಷಣಕಾರರೂ ಮುಸ್ಲಿಮರಿಲ್ಲ. ಅದರಲ್ಲಿ ಒಬ್ಬ ಕವಿಯೂ ಮುಸ್ಲಿಮನಿಲ್ಲ. ಎರಡನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು, ಅದರಲ್ಲಿ ಕವನ ಓದುವುದಕ್ಕೆ ಮಾತ್ರ ಒಬ್ಬ ಮುಸ್ಲಿಂ ಮಹಿಳೆಯಿದ್ದಾರೆ. ಮೂರನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು ಅದರಲ್ಲಿ ಕವಿಗೋಷ್ಟಿಗೊಬ್ಬರು ಮತ್ತು ಗೋಷ್ಠಿಯಲ್ಲಿ ಒಬ್ಬರನ್ನು ಬಿಟ್ಟರೆ ಇನ್ನುಳಿದವರನ್ನು ಸ್ವಾಗತಕ್ಕೆ, ವಂದನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪರಿಷತ್ ಅಧ್ಯಕ್ಷರು ರಥ ಕೆತ್ತಿದವರನ್ನು, ಹೂ ಹೆಣೆದವರನ್ನು, ಕಸ ಗುಡಿಸಿದವರನ್ನು, ಷಾಮಿಯಾನಾ ಕಟ್ಟಿದವರನ್ನೆಲ್ಲ ಮುಸ್ಲಿಮರೆಂದು ಹೇಳಿ ದಿಕ್ಕು ತಪ್ಪಿಸುವುದೆಂದರೆ ಏನು?.
ಇಲ್ಲಿ ಪ್ರಶ್ನೆಯಿರುವುದು ಸಾಹಿತಿಗಳದು. ಜೋಶಿಯವರು ಇಂತಹ ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ.
ಡಾ.ಕೆ.ಷರೀಫಾ
ಸಮಾಜ ಮತ್ತು ಸಂಸ್ಕೃತಿ ಚಿಂತಕರು.