ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್ ಮೀಡಿಯಾವು ಪ್ರಕಟಿಸುತ್ತಿರುವ ಹತ್ತನೇ ಮತ್ತು ಕೊನೆಯ ಸರಣಿಯಲ್ಲಿ ಹತ್ತು ಹಲವು ಸಾಧನೆಗಳನ್ನು ಮಾಡಿಯೂ ತೆರೆಮರೆಯಲ್ಲೇ ಉಳಿದ ಮಂಗಳೂರಿನ ಬಿ.ಎಂ ರೋಹಿಣಿಯವರ ಸಾಧನೆಯ ಚಿತ್ರಣವನ್ನು ನೀಡಿದ್ದಾರೆ ಸಾಮಾಜಿಕ ಕಾರ್ಯಕರ್ತರಾಗಿರುವ ಪವಿತ್ರಾ ಜ್ಯೋತಿಗುಡ್ಡೆ.
‘ನಮಗೆ ಗೊತ್ತಿಲ್ಲದ ವಿಷಯ ಇನ್ನೂ ಎಷ್ಟೊಂದು ಇದೆಯಲ್ಲಾ …’ ಎನ್ನುತ್ತಾ ಅಚ್ಚರಿಯಿಂದ ಹೊಸ ವಿಚಾರ, ಆಲೋಚನೆಗಳಿಗೆ ಸದಾ ತೆರೆದುಕೊಳ್ಳುವ ಸರಳ ಸ್ವಭಾವದವರು ಬಿ.ಎಂ.ರೋಹಿಣಿ. ಮಂಗಳೂರು ತಾಲೂಕಿನ ಬಂಟ್ವಾಳ ಹತ್ತಿರದ ತುಂಬೆಯ ಕಾಣೆಮಾರಿನಲ್ಲಿ 06.04.1944ರಂದು ಇವರು ಜನಿಸಿದರು. ತಾಯಿ ದೇವಕಿ, ತಂದೆ ಕೊಗ್ಗಪ್ಪ.
ಕಪ್ಪು ಬಣ್ಣದ ಹುಡುಗಿಗೆ ಶಾಲೆ ಕಲಿವ ಆಸೆ ಅಪಾರ. ಬಡತನ ಇವರಿಗೆ ಆರನೇ ತರಗತಿಯಿಂದಲೇ ಬೀಡಿ ಕಟ್ಟಲು ಕಲಿಸಿತು. ತಂದೆಯಿಂದ ಸಾಹಿತ್ಯ-ಸಂಗೀತದ ಆಸಕ್ತಿ ಬಳುವಳಿಯಾಗಿ ಬಂದಿತ್ತು. ತಂದೆ ಇವರನ್ನು ವ್ಯಾಯಾಮ ಶಾಲೆಗೆ ಕಳುಹಿಸಿದ್ದೂ ಇತ್ತು. ಆದರೆ ಸಂಗೀತ ಹಾಡಬಾರದೆಂಬ ಕಟ್ಟಳೆ ತಂದೆಯದು. ಮನೆ ನಡೆಸಿದವರು, ಮಗಳ ವಿದ್ಯೆಗೆ ಬೆಂಗಾವಲಾದವರು ಮಾತ್ರ ತಾಯಿ. ಬರೆವಣಿಗೆ ಬಾಲ್ಯದಿಂದಲೂ ಇವರ ಕೈ ಹಿಡಿದಿತ್ತು. ಆದರೆ ಇತರರಿಗೆ ತೋರಿಸುವ ಧೈರ್ಯವಿರಲಿಲ್ಲ. ಬಡತನ, ಅವಮಾನಗಳು, ಮೈಬಣ್ಣ ಇವರನ್ನು ಕೀಳರಿಮೆಯ ಕೂಪಕ್ಕೆ ನೂಕಿದ್ದವು. ಇವೆಲ್ಲದರ ಮಧ್ಯೆ ಬದುಕನ್ನು ಹಿಡಿದಿಟ್ಟು ನಡೆಸುವ ಛಲಕ್ಕೆ ಕಡಿಮೆ ಇರಲಿಲ್ಲ. ಓದು ಮುಗಿಸಿ ಶಾಲಾ ಶಿಕ್ಷಕಿಯೂ ಆದರು.

ನಡುವಯಸ್ಸಿನಲ್ಲಿ ಅವಿವಾಹಿತರಾಗಿ ಉಳಿಯುವ ತೀರ್ಮಾನ ಮಾಡಿದರು. ಅದರ ಸವಾಲುಗಳು ಕಡಿಮೆ ಏನೂ ಇರಲಿಲ್ಲ. ಏಳು ಬೀಳುಗಳೊಂದಿಗೆ ಜೀವನವನ್ನು ಅನುಭವಿಸುತ್ತಾ, ಓದು-ಬರಹಗಳನ್ನು ರೂಢಿಸಿಕೊಳ್ಳುತ್ತಾ ಮುಂದುವರಿದರು. ಅನುಭವಗಳ ಆಧಾರದ ಮೇಲೇ ನೇರವಾಗಿ, ಸರಳವಾಗಿ ಬರೆದರು. ಅವರಿಗೆ ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ. ಅಸಾಧ್ಯವಾದ ಆದರ್ಶಗಳನ್ನು ಅವರು ಬರೆದಿಲ್ಲ. ಇದುವೇ ಪರಮ ಸತ್ಯ ಎನ್ನುವುದಕ್ಕಿಂತ, ಬೇರೆಬೇರೆ ಆಲೋಚನೆಗಳಿಗೆ ತೆರೆದುಕೊಳ್ಳುವ ಪ್ರಯತ್ನ ಅವರ ಬರೆವಣಿಗೆಯಲ್ಲಿ ಎದ್ದುಕಾಣುತ್ತದೆ. ಶಾಲಾ ಅಧ್ಯಾಪಕಿಯಾಗಿ ಅವರು ಮಾಡಿದ ಸಾಧನೆ ಅಪಾರ. ವೃತ್ತಿಯಲ್ಲಿ ಇದ್ದುಕೊಂಡೇ ಹಿಂದಿ ಪ್ರವೀಣ, ಕನ್ನಡ ಎಂ.ಎ. ಪದವಿ ಪಡೆದರು.
ಪ್ರಕಟಿತ ಕೃತಿಗಳು:
ಕರ್ತವ್ಯ (1996), ಗರಿಕೆಯ ಕುಡಿಗಳು (2004), ಒಂದು ಹಿಡಿ ಮಣ್ಣು (2016) ಇವರ ಕಥಾ ಸಂಕಲನಗಳು. ಸ್ತ್ರೀ-ಸಂವೇದನೆ(1995), ಸ್ತ್ರೀ ಶಿಕ್ಷಣ ಸಂಸ್ಕೃತಿ (2000), ಸ್ತ್ರೀ ಭಿನ್ನ ಮುಖಗಳು (2005), ಸಾಮಾಜಿಕ ತಲ್ಲಣಗಳು (2007), ಆರಾಧನಾ ರಂಗದಲ್ಲಿ ಸ್ತ್ರೀ (2004), ಪ್ರತಿಸ್ಪಂದನ (2020) ಮತ್ತು ಸಮೀಕ್ಷೆ (2020) ಅವರ ಲೇಖನ/ವಿಮರ್ಶಾ ಕೃತಿಗಳು. ಅಧ್ಯಾಪಕಿಯ ಅಧ್ವಾನಗಳು (2007) ಅವರ ಅನುಭವ ಕಥನ. ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ವಿಶಿಷ್ಟವಾಗಿದೆ. ಅವಿವಾಹಿತ ಮಹಿಳೆ-ಸಮಾಜೋ ಸಾಂಸ್ಕೃತಿಕ ಅಧ್ಯಯನ(2008), ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು(2010), ದಕ್ಷಿಣಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ(2014), ದಕ್ಷಿಣಕನ್ನಡ ಜಿಲ್ಲೆಯ ಬಿಲ್ಲವರ ಗುತ್ತು ಮನೆಗಳ ಅಧ್ಯಯನ(2020) ಇವು ಅವರು ಇತರರೊಂದಿಗೆ ಸೇರಿ ನಡೆಸಿದ ಸಂಶೋಧನಾ ಅಧ್ಯಯನಗಳಾದರೆ, ವೇಶ್ಯಾವಾಟಿಕೆಯ ಕಥೆ-ವ್ಯಥೆ (2022) ಅವರ ಕೃತಿ. ಲಲಿತಾ ರೈ, ಚಿತ್ರ ಕಲಾವಿದ ಪಾವಂಜೆ ಗೋಪಾಲ ಕೃಷ್ಣಯ್ಯ, ಸಂಗೀತ ವಿದ್ವಾನ್ ಎನ್ ಕೇಶವ ಭಟ್ ಮತ್ತು ಸಮಾಜ ಸೇವಕಿ ಹಿಲ್ಡಾ ರಾಯಪ್ಪನ್ ಕುರಿತು ವ್ಯಕ್ತಿಚಿತ್ರಗಳ ಬರಹಗಳನ್ನೂ ಇವರು ಬರೆದಿದ್ದಾರೆ.
ಬರೆಯುತ್ತಾ ಓದುತ್ತಾ ಜನರಿಂದ ಪ್ರತ್ಯೇಕವಾಗಿ ಉಳಿದವರಲ್ಲ ರೋಹಿಣಿ. ವಿಭಿನ್ನ ಸಾಮಾಜಿಕ ಚಟುವಟಿಕೆಗಳ ಒಡನಾಟವನ್ನು ಸದಾ ಅವರು ಇಟ್ಟುಕೊಂಡವರು. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಕಾರ್ಯದರ್ಶಿಯಾಗಿ, ಸಂಘವನ್ನು ಕಟ್ಟಿ ಬೆಳೆಸುವುದರಲ್ಲಿ, ಸಂಘವು ಹುಟ್ಟಿದಂದಿನಿಂದ ನಿರಂತರ ಶಮಿಸುತ್ತಿರುವ ಇವರು ಈಗ ಸೆಸ್ಕಾ ಸಹಯೋಗದೊಂದಿಗೆ ಉದಯೋನ್ಮುಖರನ್ನು ಕಥಾರಚನೆಯಂಥ ಶಿಬಿರಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಡೀಡ್ಸ್, ವೆಲೊರೆಡ್, ಸಂಚಲನ, ಶಿಕ್ಷಕ-ಸಂಗತಿ ಮುಂತಾದ ಹಲವು ಸಂಘಸಂಸ್ಥೆಗಳ ಜೊತೆ ಸಕ್ರಿಯವಾಗಿದ್ದಾರೆ. ಯಾವುದೇ ಸಾಮಾಜಿಕ-ಸಾಹಿತ್ಯಿಕ ಕಾರ್ಯಕ್ರಮ ನಡೆಯುವಲ್ಲಿ, ಸದ್ದಿಲ್ಲದೆ ಭಾಗವಹಿಸಿ, ತಮ್ಮ ಪಾಲಿನ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಡುವುದು ರೋಹಿಣಿಯವರ ವಿಶಿಷ್ಟತೆ. ಬದುಕಿನ ಬಗ್ಗೆ ಖುಷಿ, ಪ್ರೀತಿ ಇಟ್ಟುಕೊಳ್ಳಲು ಸಾಧ್ಯವಾದ ಬಗ್ಗೆ ಅವರಿಗೆ ಹೆಮ್ಮೆಯಿದೆ. ರೋಹಿಣಿಯವರು ಬದುಕಿನಲ್ಲಿ ವಿರೋಧಿಸಿದ ಹಾಗೂ ಶರಣಾದ ರೀತಿ ವಿಶಿಷ್ಟ. ಹೊರನೋಟಕ್ಕೆ ಅತ್ಯಂತ ಸರಳವಾಗಿ, ನಮ್ರವಾಗಿ ಕಾಣುವ ಅವರ ಬದುಕಿನ ತುಂಬ ದಿಟ್ಟ ನಿರ್ಧಾರಗಳೇ ತುಂಬಿವೆ. ಇವರ ‘ಸ್ತ್ರೀಸಂವೇದನೆ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ‘ಸ್ತ್ರೀ ಶಿಕ್ಷಣ ಸಂಸ್ಕೃತಿ’ ಕೃತಿಗೆ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪ್ರಶಸ್ತಿಗಳು ದೊರೆತಿವೆ.
ಎಪ್ಪತ್ತೆಂಟರ ಹರೆಯದ ರೋಹಿಣಿಯವರನ್ನು ಹಲವರು ಗೌರವಿಸಿ ತಾವೂ ಸಂಭ್ರಮಿಸಿದ್ದಾರೆ. ಮೌಲ್ಯ ಗೌರವ ಪ್ರಶಸ್ತಿ (2002), ಕಾಂತಾವರ ಸಾಹಿತ್ಯ ಪ್ರಶಸ್ತಿ (2015), ಕರ್ನಾಟಕ ಸರಕಾರದ ವೀರರಾಣಿ ಅಬ್ಬಕ್ಕ ಪ್ರಶಸ್ತಿ(2016), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವ ಪ್ರಶಸ್ತಿ (2015), ಇನ್ಫೋಸಿಸ್ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ(2021) ಮುಂತಾದವು ಅವುಗಳಲ್ಲಿ ಕೆಲವು. ಇಂತಹ ತೆರೆಮರೆಯಲ್ಲೇ ಉಳಿದು ಈ ವಯಸ್ಸಿನಲ್ಲಿಯೂ ಓದು, ಸಂಶೋಧನೆ, ಸಂಘಟನೆ, ಸಮಾಲೋಚನೆಗಳಲ್ಲಿ ಕ್ರಿಯಾಶೀಲರಾಗಿರುವ ಹಿರಿಯಕ್ಕ ರೋಹಿಣಿಯವರು ನಮ್ಮ ಹೆಮ್ಮೆ.
ಪವಿತ್ರಾ ಜ್ಯೋತಿಗುಡ್ಡೆ
ಸಾಮಾಜಿಕ ಕಾರ್ಯಕರ್ತರು.