Home ವಿಶೇಷ ನುಡಿನಮನ

ನುಡಿನಮನ

0

ಕಾವಿ ತೊಡದ, ಕಿಸೆ ಇರದ ಬಿಳಿಬಟ್ಟೆಯಲ್ಲೇ ಉಳಿದ ಮಹಾನ್‌ ಸಂತ-ಶ್ರೀ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ. ಸರಳತೆಯನ್ನೇ ಉಸಿರಾಡಿದ, ಸನ್ಯಾಸತ್ವದ ತತ್ತ್ವ ಮೀರದ, ತಮ್ಮ ಪ್ರವಚನಗಳಿಂದ ಜನ ಮಾನಸದಲ್ಲಿ ಜ್ಞಾನ ಬಿತ್ತಿ ಶಾಶ್ವತ ಸ್ಥಾನ ಪಡೆದ  ಶ್ರೀಗಳಿಗೆ ಪೀಪಲ್‌ ಮೀಡಿಯಾ ಮೂಲಕ ನುಡಿನಮನ ಸಲ್ಲಿಸಿದ್ದಾರೆ ಕವಯಿತ್ರಿ ಗೀತಾಂಜಲಿ. ಎಸ್. ಸಿ.

  • “ಬದುಕಿಗಾಗಿ ಗಳಿಕೆ, ಗಳಿಕೆಗಾಗಿ ಬದುಕಲ್ಲ”
  • “ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ ಹೋಗುತ್ತವೆ, ಆದರೆ ಅವು ಕೊಳಕಾಗುವುದಿಲ್ಲ. ನಾವು ಬದುಕಿನಲ್ಲಿ ಸೂರ್ಯ ಕಿರಣಗಳಂತೆ ಇರಬೇಕು. ಯಾವ ಜಾಗಕ್ಕೆ ಹೋದರೂ, ಯಾರ ಜೊತೆ ಇದ್ದರೂ ನಾವು  ನಾವಾಗಿರಬೇಕು, ಕೊಳಕಾಗಬಾರದು”
  • “ಒಂದು ಕಾಲು ಮುಂದೆ ಇನ್ನೊಂದು ಕಾಲು ಹಿಂದೆ. ಮುಂದಿನ ಕಾಲಿಗೆ ಗರ್ವವಿಲ್ಲ, ಹಿಂದಿನ ಕಾಲಿಗೆ ಬೇಸರವಿಲ್ಲ. ಯಾಕೆಂದರೆ ಅವುಗಳಿಗೆ ಗೊತ್ತು ಇದು  ಕ್ಷಣಾರ್ಧದಲ್ಲಿ ಬದಲಾಗುವುದು ಅಂತ. ಜೀವನವು ಹೀಗೆ ಯಾವಾಗಲೂ ಸ್ಥಿರವಾಗಿರುವುದಿಲ್ಲ”
  • “ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ
  • “ನಿನ್ನ ಪಾಡಿಗೆ ನೀನಿರು”
  • “ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ”
  • “ಈ ಜೀವನ ತುಂಬ ಸರಳ, ಪ್ರೀತಿಸಿ, ಪ್ರೀತಿಯಿಂದ ಬದುಕಿ ಯಾಕೆಂದರೆ  ಅದು ನಿಮ್ಮ ಬದುಕು”
  • “ಒಂದು ಋತು ಅರಳುಸುತ್ತದ, ಒಂದು ಋತು ಬಾಡುಸ್ತದ. ಮಇದ ಕಾಲ. ಹಾಗೆ ಒಬ್ಬ ವ್ಯಕ್ತಿ ಹಿಂಗ ಅರಳ್ತಾನ, ಕೊನೆಗೊಮ್ಮೆ ಬಾಡಿ ಹೋಗತ್ತಾನ ಈ ಜಗತ್ತಿನಾಗ. ನಾವು ಏನು ಮಾಡಿದರೂ ಖಾಯಂ ಆಗಿ ಹಾಗೆ ಇರುವುದಿಲ್ಲ”

ಈ ಮೇಲಿನವು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನಗಳಿಂದ ಆಯ್ದ ಕೆಲವು ಮುತ್ತಿನಂತಹ ಸಾಲುಗಳು. ಇವರ ಪ್ರವಚನಗಳು ಸರಳ ಹಾಗೂ ಆಡುಭಾಷೆಯಲ್ಲಿದ್ದವು. ಹಾಗಾಗಿ ಬುದ್ಧನಂತೆ ಅಪಾರ ಜನರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಸ್ವತಃ ಸರಳ ಸಜ್ಜನಿಕೆಯ  ಸಂತರಾಗಿದ್ದರು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಒಬ್ಬ ಸಾಮಾನ್ಯ ರೈತ ಕುಟುಂಬದಲ್ಲಿ  ತಂದೆ ಓಗಪ್ಪ ಬಿರಾದಾರ ತಾಯಿ ಸಂಗವ್ವ ಇವರ ಪ್ರಥಮ ಪುತ್ರರಾಗಿ  ಇವರು ೧೯೪೦ ಸೆಪ್ಟೆಂಬರ್ 5 ರಂದು ಜನಿಸಿದರು.  ಬಾಲ್ಯದ ಹೆಸರು ಸಿದ್ದಗೊಂಡಪ್ಪ. ಹುಟ್ಟೂರಿನಲಿ ನಾಲ್ಕನೇ ತರಗತಿಯವರೆಗೆ ಓದಿ, ನಂತರ ಶ್ರೀ ಮಲ್ಲಿಕಾರ್ಜುನ  ಶಿವಯೋಗಿಗಳ  ಪ್ರಭಾವಕ್ಕೆ ಒಳಗಾಗಿ ಮುಂದೆ  ವಿಜಯಪುರದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಮಹಾರಾಷ್ಟ್ರದಲ್ಲಿ ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮಲ್ಲಿಕಾರ್ಜುನ ಶಿವಯೋಗಿಗಳ ಶಿಷ್ಯರಾಗಿ  ಗುರುಗಳನ್ನು ಮೀರಿಸಿದ  ಶಿಷ್ಯರಾದರು. ಶ್ರೀರಾಮಕೃಷ್ಣ ಪರಮಹಂಸರು ಹಾಗೂ ವಿವೇಕಾನಂದರಂತೆ ಇವರಿಬ್ಬರ ಸಂಬಂಧವಿದ್ದಿತು. ವಿಶ್ವದ ಹಲವಾರು ದಾರ್ಶನಿಕರನ್ನು  ಆಳವಾಗಿ ಅಧ್ಯಯನ  ಮಾಡಿ ಅವರ ಚಿಂತನೆಗಳನ್ನು  ಮೈಗೂಡಿಸಿಕೊಂಡು, ಜನ ಸಾಮಾನ್ಯರಿಗೂ ಅದನ್ನು ತಲುಪಿಸಿದರು.

ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ತಮ್ಮ ಪ್ರವಚನಗಳನ್ನು ಮಾಡಿರುವರು. ಸಣ್ಣ ಸಣ್ಣ ಕತೆಗಳ ಮೂಲಕ, ರಾಮಾಯಣ ಮಹಾಭಾರತ  ಪುರಾಣ ಕತೆಗಳನ್ನು ಸರಳವಾಗಿ  ಹೇಳುವ ಮೂಲಕ ಬದುಕಿನ ನೀತಿ ಪಾಠವನ್ನು ಹೇಳುತ್ತಿದ್ದರು.

ದೇಶ ವಿದೇಶಗಳಲ್ಲಿ  ತಮ್ಮ ಪ್ರವಚನಗಳಿಂದ ಹೆಸರಾದವರು. ಅಪಾರ  ಅನುಯಾಯಿಗಳು ಇದ್ದರೂ ರಾಜಕೀಯದಿಂದ ದೂರವಿದ್ದರು. ಯಾವ ಸರ್ಕಾರದಿಂದಲೂ ಅನುದಾನ ಪಡೆಯಲಿಲ್ಲ. ತಮ್ಮ ಭಕ್ತ ಗಣ ನೀಡುತ್ತಿದ್ದ ದವಸ ಧಾನ್ಯಗಳಿಂದ ಆಶ್ರಮದಲ್ಲಿ ದಾಸೋಹ ನಡೆಯುತ್ತಿದೆ. ಯಾರ ಹಣಕಾಸಿನ ಹಂಗಿಗೂ ಬೀಳಲಿಲ್ಲ.  ಸಿದ್ದೇಶ್ವರ ಸ್ವಾಮಿಗಳು ಧರಿಸುವ ಅಂಗಿಗೆ ಕಿಸೆ ಇರುತ್ತಿರಲ್ಲಿಲ್ಲ, ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯೂ ಇರಲಿಲ್ಲ!

ಯಾವ ಆಷಾಢಭೂತಿತನವೂ ಇವರಲ್ಲಿ ಇಲ್ಲ. ಪವಾಡ ಪುರುಷರೂ ಅಲ್ಲ. ಧರ್ಮಭ್ರಾಂತರಂತೂ ಅಲ್ಲವೇ ಅಲ್ಲ. ಹಾಗಾಗಿಯೇ ಜಾತಿ, ಧರ್ಮ, ಪಂಥಗಳನ್ನು ಮೀರಿ  ಎಲ್ಲಾ  ವರ್ಗಗಳ  ಜನರು ಇವರ ಅನುಯಾಯಿಗಳಾಗಿದ್ದರು. ಇವರಲ್ಲಿ ಭಕ್ತಿಯಿಂದ ದೇವರನ್ನು ಕಂಡರು.

ಪ್ರಶಸ್ತಿಗಳಿಗಾಗಿ ಅರ್ಜಿಯನ್ನು ಸಲ್ಲಿಸುವ ವ್ಯಕ್ತಿಗಳು ಎಲ್ಲೆಡೆಯೂ ಕಾಣಸಿಗುವ ಈ ಕಾಲಘಟ್ಟದಲ್ಲಿ  ಈ ಸಂತನನ್ನು ಪ್ರಶಸ್ತಿಗಳೇ ಹುಡುಕಿಕೊಂಡು ಬಂದರೂ ನಯವಾಗಿ  ನಿರಾಕರಿಸಿಬಿಟ್ಟರು!

ತಮ್ಮ ವಯೋಸಹಜ ಅನಾರೋಗ್ಯದಿಂದ ಜನವರಿ ಎರಡು, ೨೦೨೩ ರಂದು ಇಹಲೋಕವನ್ನು ತ್ಯಜಿಸಿದರು. ಹೆಚ್ಚಿನ ಚಿಕಿತ್ಸೆಗೆ ಒಲ್ಲೆ ಎಂದುಬಿಟ್ಟರು. ಒಬ್ಬ ಮಹಾ ಮೇಧಾವಿ, ನಿರ್ಮೋಹಿ, ನಿಗರ್ವಿಯ ನಿರ್ಗಮನದಿಂದ ಭಕ್ತ ಸಮೂಹದಲ್ಲಿ ತಂದೆಯನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಕಾಡಿದೆ. ಇವರು ಕೆಲವರಿಗೆ ತಂದೆಯಂತೆ, ಹಲವರಿಗೆ ಗುರುವಿನಂತೆ, ಹೆಚ್ಚಿನವರಿಗೆ ನಡೆದಾಡುವ ದೇವರಂತೆ  ಇವರು ಕಂಡರು.

ಬದುಕ್ಕಿದ್ದಾಗಲೂ, ಸಾವಿನ ನಂತರವೂ ವೈಭವ, ವಿಜೃಂಭಣೆ  ಬಯಸುವವರ  ನಡುವೆ ಎಲ್ಲವನ್ನೂ ನಿರಾಕರಿಸಿ ಕಡೆಗೆ ತನಗಾಗಿ ಸ್ಮಾರಕವನ್ನೂ ನಿರಾಕರಿಸಿದ ಸಿದ್ದೇಶ್ವರ ಗುರುಗಳು ಸಾವಿನಲ್ಲೂ  ಮಾದರಿಯಾಗಿಬಿಟ್ಟರು.

ಜನಸಾಮಾನ್ಯರಿಗೆ ಬದುಕಿನ ದಾರಿದೀಪವಾಗಿದ್ದು ಮಾತ್ರವಲ್ಲ, ಒಬ್ಬ ಸಂತ/ಸನ್ಯಾಸಿ/ಮಾಠಾಧೀಶರು  ಹೇಗೆ ಬದುಕಬೇಕೆಂದು  ಬದುಕಿ ತೋರಿಸಿ ಕೊಟ್ಟು ಜನಮಾನಸದಲ್ಲಿ ಶಾಶ್ವತವಾಗಿ ಉಳಿದವರು ಶ್ರೇಷ್ಟ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳು!.

ಇಂತಹ ಸಂತನ ಅಂತಿಮ ದರ್ಶನದಂದು ವಿಜಯಪುರ ಜಿಲ್ಲೆಯ ಕೇಂದ್ರ ಭಾಗದಲ್ಲಿ ಲಕ್ಷೋಪಲಕ್ಷ ಜನರು ಯಾವ ಗದ್ದಲ, ಗಲಾಟೆ, ಗೊಂದಲಗಳಿಲ್ಲದೆ ಸಂಯಮದಿಂದ ತಮ್ಮ ಅಶ್ರುತರ್ಪಣ ಅರ್ಪಿಸಿದ್ದು ಒಂದು ದಾಖಲೆ ಹಾಗೂ ಇತಿಹಾಸ!

ಗೀತಾಂಜಲಿ. ಎಸ್. ಸಿ.

ಕವಯಿತ್ರಿ

You cannot copy content of this page

Exit mobile version