ಬಳ್ಳಾರಿ: ಇತ್ತೀಚಿಗೆ ಬಳ್ಳಾರಿ ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆಯ ಕುರಿತು ಆಸ್ಪತ್ರೆಯ ನಿರ್ದೇಶಕ ಡಾ. ಗಂಗಾಧರ ಗೌಡ ಅವರು ನೀಡಿರುವ ಸ್ಪೋಟಕ ಹೇಳಿಕೆಯನ್ನು ಉದ್ದೇಶಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿನ್ನಲೆ ಆರೋಗ್ಯ ಸಚಿವ ಡಾ. ಸುಧಾಕರ್ ಕೆ ಅವರ ರಾಜೀನಾಮೆಗೆ ಒತ್ತಾಯಿಸಿದೆ.
ಬಳ್ಳಾರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾದ ಹಿನ್ನಲೆ ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕಾರ್ಯ ಸ್ಥಗಿತವಾಗಿ ಮೂವರು ರೋಗಿಗಳು ಸಾವನ್ನಪ್ಪಿದ್ದು, ಈ ಘಟನೆ ಆಕಸ್ಮಿಕವಾಗಿರಬಹುದು ಎಂದು ಎಲ್ಲರು ಅಭಿಪ್ರಾಯ ಪಟ್ಟಿದ್ದರು. ಆದರೆ ಇದು ಆಕಸ್ಮಿಕವಲ್ಲ ಷಡ್ಯಂತ್ರ ಎಂಬ ಗಂಗಾಧರ ಅವರ ಹೇಳಿಕೆ ಮೇಲೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಸವರಾಜ ಬೊಮ್ಮಾಯಿ ಅವರೇ, ಏನಾಗ್ತಿದೆ ರಾಜ್ಯದಲ್ಲಿ? ಮೊದಲು ವಿಮ್ಸ್ನಲ್ಲಾದ ಸಾವುಗಳು ಸಹಜವಾದವು ಎಂದರು, ಈಗ ಷಡ್ಯಂತ್ರ ಎನ್ನುತ್ತಿದ್ದಾರೆ, ವಿಮ್ಸ್ ನಿರ್ದೇಶಕ ಹಾಗೂ ಆರೋಗ್ಯ ಸಚಿವರ ವಿರುದ್ದ ಶಾಸಕ ಎಸ್.ಟಿ ಸೋಮಶೇಖರ್ ದೂರುತ್ತಿದ್ದಾರೆ. ಸಿಡಿ ಸ್ಟೇ ತರಲು ಇರುವ ಕಾಳಜಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ತಮ್ಮ ಇಲಾಖೆಯ ಬಗ್ಗೆ ಏಕಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ವಿಮ್ಸ್ ಆಸ್ಪತ್ರೆಯಲ್ಲಾದ ಸಾವುಗಳಿಗೆ ಸಿಎಂ ಹಾಗೂ ಆರೋಗ್ಯ ಸಚಿವರು ಹೊಣೆ ಹೊರಬೇಕು. ವಿದ್ಯುತ್ ಕೊರತೆಯಿಂದ ಅವಘಡ ನಡೆದಿಲ್ಲ ಎಂದಾದರೆ ತನಿಖೆಗೆ ಸಮಿತಿ ರಚಿಸಿದ್ದೇಕೆ? ಸುಳ್ಳು ಹೇಳಿ ರಾಜ್ಯದ ದಿಕ್ಕು ತಪ್ಪಿಸುತ್ತಿದೆ ಸರ್ಕಾರ ಎಂದು ಕಾಂಗ್ರೆಸ್ ದೂರಿದೆ.

ರಾಜ್ಯದ ಜನರ ಪ್ರಾಣ ಉಳಿಯಬೇಕು ಎಂದರೆ ಅಸಮರ್ಥ ಸಚಿವ ಡಾ.ಸುಧಾಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.