“ಖೇಲ್ ರತ್ನ” ಪ್ರಶಸ್ತಿಯ ಬಗ್ಗೆ ಹಲವು ದಿನಗಳಿಂದ ಇದ್ದ ಗೊಂದಲಕ್ಕೆ ಈಗ ಅಂತಿಮ ತೆರೆ ಬಿದ್ದಿದೆ. ಅಂದಹಾಗೆ ಒಲಿಂಪಿಕ್ಸ್ ಪದಕ ವಿಜೇತೆ ಮನು ಬಾಕರ್ ಸೇರಿದಂತೆ ನಾಲ್ವರು ಕ್ರೀಡಾಳುಗಳಿಗೆ ಈ ಬಾರಿಯ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಸೇರಿದಂತೆ ನಾಲ್ವರು ಅಥ್ಲೀಟ್ಗಳಿಗೆ ಜನವರಿ 17ರಂದು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ಗುರುವಾರ ತಿಳಿಸಿದೆ.
ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಮನು ಅವರ ಹೆಸರು ಆರಂಭದಲ್ಲಿ ಕಾಣೆಯಾಗಿತ್ತು. ಆ ನಂತರ ಮನು ಭಾಕರ್ ಅವರ ತಂದೆ ಕೇಂದ್ರ ಸರ್ಕಾರದ ಈ ನಡೆಯ ಬಗ್ಗೆ ಆಕ್ರೋಶ ಹೊರ ಹಾಕಿ, ಉದ್ದೇಶಪೂರ್ವಕವಾಗಿ ಮನು ಬಾಕರ್ ಅವರನ್ನು ಪ್ರಶಸ್ತಿ ಸುತ್ತಿನಲ್ಲಿ ಹೊರಗಿಡಲಾಗಿದೆ ಎಂದು ಆರೋಪಿಸಿದ್ದರು. ಸಧ್ಯ ಈಗ ಅವರ ಹೆಸರನ್ನು ಕೇಂದ್ರ ಸರ್ಕಾರ ಪಟ್ಟಿಗೆ ಸೇರಿಸಿ, ಗೊಂದಲಕ್ಕೆ ತೆರೆ ಎಳೆದಿದೆ.
ಮನು ಬಾಕರ್, ಚೆಸ್ ಚಾಂಪಿಯನ್ ಗುಕೇಶ್ ಅವರ ಜೊತೆಗೆ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಅವರು ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
“ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸೂಕ್ತ ಪರಿಶೀಲನೆಯ ನಂತರ, ಈ ಕೆಳಗಿನ ಕ್ರೀಡಾಪಟುಗಳು, ತರಬೇತುದಾರರು, ವಿಶ್ವವಿದ್ಯಾಲಯ ಮತ್ತು ಸಂಸ್ಥೆಗೆ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.