ಹೊಸದೆಹಲಿ: ಲೋಕಸಭೆಯಲ್ಲಿನ ‘ಚಕ್ರವ್ಯೂಹ’ ಭಾಷಣದ ನಂತರ ಜಾರಿ ನಿರ್ದೇಶನಾಲಯ (ಇಡಿ) ತನ್ನ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಇಡಿ ಒಳಗಿನವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ. ಎಕ್ಸ್ ವೇದಿಕೆಯಲ್ಲಿ ರಾಹುಲ್ ಗಾಂಧಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ
‘ಕೆಲವರಿಗೆ ನನ್ನ ಚಕ್ರವ್ಯೂಹದ ಮಾತು ಇಷ್ಟವಾಗಲಿಲ್ಲ. ಈ ನಿಟ್ಟಿನಲ್ಲಿ ನನ್ನ ವಿರುದ್ಧ ದಾಳಿಗಳನ್ನು ಯೋಜಿಸಲಾಗಿದೆ ಎಂದು ಇಡಿ ‘ಒಳಗಿನವರು’ ನನಗೆ ಹೇಳಿದರು. ನಾನು ED ಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ. ಅವರನ್ನು ಚಹಾ ಮತ್ತು ಬಿಸ್ಕತ್ತುಗಳೊಂದಿಗೆ ನನ್ನ ಮನೆಗೆ ಆಹ್ವಾನಿಸಲು ಸಿದ್ಧವಾಗಿದ್ದೇನೆʼ ಎಂದು ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ.
ಬಜೆಟ್ ಅಧಿವೇಶನದ ಸಮಯದಲ್ಲಿ ರಾಹುಲ್ ದೇಶದ ಜನರು ಬಿಜೆಪಿ ಮತ್ತು ಅದರ ಸಹವರ್ತಿಗಳು ರಚಿಸಿರುವ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
ಈ ಚಕ್ರವ್ಯೂಹದಲ್ಲಿ ಸಣ್ಣ ಉದ್ಯಮಿಗಳನ್ನು ಸಿಲುಕಿಸುವ ಮೂಲಕ ಕೋಟ್ಯಂತರ ಉದ್ಯೋಗಗಳನ್ನು ಇಲ್ಲವಾಗಿಸಲಾಗಿದೆ. ಸಣ್ಣ ಉದ್ಯಮಗಳ ಮೇಲೆ ಐಟಿ, ಜಿಎಸ್ಟಿ ದಾಳಿ ಮೂಲಕ ಅವುಗಳನ್ನು ಇಲ್ಲವಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.