‘ಬಿಜೆಪಿಯವರು ಹಿಂದುತ್ವ ಹಾಗೂ ಹುಲಿಯುಗುರಿಗೆ ತಳುಕು ಹಾಕುತ್ತಿದ್ದಾರೆ. ಈ ಆರಗ ಜ್ಞಾನೇಂದ್ರ ಶುದ್ಧ ತಲೆಹರಟೆ, ಜ್ಞಾನವೇ ಇಲ್ಲ’ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ರಾಜ್ಯಾದ್ಯಂತ ದೊಡ್ಡ ವಿವಾದಕ್ಕೆ ಕಾರಣವಾಗಿದ್ದ ‘ಹುಲಿಯುಗುರು’ (Tiger Claw) ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಪರ ವಿರೋಧದ ಚರ್ಚೆಯ ನಡುವೆ ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಹುಲಿಯುಗುರಿಗೂ, ಹಿಂದುತ್ವಕ್ಕೂ ತಳುಕು ಹಾಕುವ ಪ್ರಯತ್ನ ಮಾಡಿದ್ದರು.
ಟಿಪ್ಪು ಸುಲ್ತಾನರನ್ನು ಮೈಸೂರಿನ ಹುಲಿ ಎಂಬುದನ್ನು, ಟಿಪ್ಪು ಹುಲಿ ಬೇಟೆಯಾಡಿದ್ದನ್ನು ವೈಭವಯುತವಾಗಿ ತೋರಿಸುವುದು ಅಪರಾಧ. ಟಿಪ್ಪು ಬೇಟೆಯಾಡಿದ ಫೋಟೋ ಬಳಸುವವರನ್ನೂ ಅರೆಸ್ಟ್ ಮಾಡಬೇಕು ಎಂದು ಆರಗ ಜ್ಞಾನೇಂದ್ರ ಕೆಲವೇ ದಿನಗಳ ಕೆಳಗೆ ಮಾತನಾಡಿದ್ದರು.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ‘ಯಾವನೋ ಹುಚ್ಚ ಹಿಂದುತ್ವಕ್ಕೂ ಹುಲಿಯುಗುರಿಗೂ ತಳುಕು ಹಾಕಿದ್ದಾನಂತೆ. ಈ ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅದೇನೋ ಟಿಪ್ಪು ಹುಲಿ ಬೇಟೆಯಾಡಿದ ಫೋಟೊ ಬಳಸುವವರನ್ನೂ ಅರೆಸ್ಟ್ ಮಾಡಿ ಅಂತ ತಲೆಹರಟೆ ಮಾತಾಡಿದ್ದಾರೆ. ಅವರಿಗೆ ಜ್ಞಾನವೇ ಇಲ್ಲ’ ಎಂದು ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.