ಬೆಂಗಳೂರು: ಕರ್ನಾಟಕ ಸರ್ಕಾರವು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಯೋಜಿಸುತ್ತಿರುವಂತೆಯೇ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಚರಿಸುತ್ತಿರುವ ʼಕರಾಳ ದಿನ’ವನ್ನು ಬೆಂಬಲಿಸಲು ಬೆಳಗಾವಿ ಜಿಲ್ಲೆಗೆ ಪ್ರತಿನಿಧಿಯನ್ನು ಕಳುಹಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಈ ನಿರ್ಧಾರದಿಂದ ಕೆರಳಿದ ಕನ್ನಡ ಪರ ಸಂಘಟನೆಗಳು ಇದಕ್ಕೆ ಅವಕಾಶ ನೀಡದಂತೆ ರಾಜ್ಯವನ್ನು ಒತ್ತಾಯಿಸಿವೆ.
ಬೆಳಗಾವಿ ಸೇರಿದಂತೆ 840 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸುವ ಹೋರಾಟದ ನೇತೃತ್ವ ವಹಿಸಿರುವ ಎಂಇಎಸ್ ಸಂಘಟನೆಗೆ ಬೆಂಬಲ ಸೂಚಿಸಲು ತಮ್ಮ ಸರ್ಕಾರ ಬೆಳಗಾವಿಗೆ ಪ್ರತಿನಿಧಿಯನ್ನು ಕಳುಹಿಸಲಿದೆ ಎಂದು ಮಹಾರಾಷ್ಟ್ರ ಸಿಎಂ ಶನಿವಾರ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಹಾಜರಾಗುವಂತೆ ಎಂಇಎಸ್ ನಾಯಕರು ನಮಗೆ ಆಹ್ವಾನ ನೀಡಿದ್ದಾರೆ ಮತ್ತು ನಾವು ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ ಎಂದು ಸಿಎಂ ಶಿಂಧೆ ಕೊಲ್ಲಾಪುರದಲ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಲವು ಕನ್ನಡ ಪರ ಸಂಘಟನೆಗಳು ಶಿಂಧೆ ಹೇಳಿಕೆಗೆ ಸೂಕ್ತ ಪ್ರತಿಕ್ರಿಯೆ ನೀಡದ ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ನವೆಂಬರ್ 1 ರಂದು ‘ಕರಾಳ ದಿನ’ ಆಚರಿಸಲು ಎಂಇಎಸ್ಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಬೆಳಗಾವಿಯನ್ನು ಕರ್ನಾಟಕದ ಭಾಗವಾಗುವಂತೆ ಶಿಫಾರಸು ಮಾಡಿದ್ದ ಮಹಾಜನ್ ಸಮಿತಿಯನ್ನು ಮಹಾರಾಷ್ಟ್ರ ತಿರಸ್ಕರಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ವಿಷಯ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ.