ಯುಗಾದಿ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಖುಷಿಯಲ್ಲಿ ಇರುವವರಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. ರಜೆ ಕಾರಣಕ್ಕೆ ದೂರದಲ್ಲಿರುವ ತಮ್ಮ ಊರುಗಳಿಗೆ ಹೋಗಿ ಹಬ್ಬ ಆಚರಿಸಲು ಹೊರಟಿರುವವರಿಂದ ಖಾಸಗಿ ಬಸ್ ಮಾಲಿಕರು ಸುಲಿಗೆಗೆ ಇಳಿದಿದ್ದಾರೆ.
ಈ ಹಿಂದೆಯೂ ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ದರ ಹೆಚ್ಚಿಸುವ ಚಾಳಿಯಿಟ್ಟುಕೊಂಡಿದ್ದ ಖಾಸಗಿ ಬಸ್ ಮಾಲೀಕರು ಅದನ್ನು ಮತ್ತೆ ಮುಂದುವರೆಸಿದ್ದಾರೆ.
ಮಾರ್ಚ್ 28 ರಿಂದ ಖಾಸಗಿ ಬಸ್ ಗಳ ಪ್ರಯಾಣದ ದರ ಬಲು ದುಬಾರಿಯಾಗಿದೆ. ಮಾಮೂಲಿ ದರಕ್ಕಿಂತ ಎರಡರಿಂದ ಎರಡೂವರೆ ಪಟ್ಟು ಜಾಸ್ತಿ ಮಾಡಿ ಜನಸಾಮಾನ್ಯರಿಂದ ಸುಲಿಗೆಗೆ ಇಳಿದಿದ್ದಾರೆ.
ಉದಾಹರಣೆಗೆ ಬೆಂಗಳೂರುನಿಂದ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ ಸೆಮಿ ಲಕ್ಷುರಿ ಬಸ್ ಗಳಲ್ಲಿ 800 ರಿಂದ 1200 ರೂ.ವರೆಗೆ ಇದ್ದ ಟಿಕೆಟ್ ದರ ಈಗ 2000- 3000 ರೂ.ಗೆ ಹೆಚ್ಚಳವಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ 600- 800 ರೂ. ಇದ್ದ ಟಿಕೆಟ್ ದರ 1,500 ರೂ ಇಂದ 1,800, ಹಾಗೂ 2,000ರೂ ವರೆಗೆ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಮಾಮೂಲಿ 800-1,200 ರೂ. ದರ ಇದ್ದು, ಈಗ 2000 ರಿಂದ 3500 ರೂ.ವರೆಗೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಕೂಡಲೇ ಖಾಸಗಿ ಬಸ್ ಮಾಲಿಕ ಈ ದರ ಏರಿಕೆಗೆ ಕಡಿವಾಣ ಹಾಕದೇ ಹೋದರೆ ಬೆಲೆ ಏರಿಕೆಯಿಂದ ತತ್ತರಿಸಿ ಹೈರಾಣಾಗಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಖಾಸಗಿ ಬಸ್ ಮಾಲೀಕರು ಬೇಕಾಬಿಟ್ಟಿ ದರ ನಿಗದಿ ಮಾಡುತ್ತಿದ್ದರೂ, ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.