ದಾವಣಗೆರೆ: ರೈಲ್ವೆ ಇಲಾಖೆ ಒಂದು ನಿಲ್ದಾಣ, ಒಂದು ಉತ್ಪನ್ನ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಸ್ಥಳಿಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ವೋಕಲ್ ಫಾರ್ ಲೋಕಲ್ ಘೋಷಣೆಯಂತೆ ದೇಶದ 750 ರೈಲ್ವೆ ನಿಲ್ದಾಣಗಳಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ನೋಂದಾಯಿತ ಕರಕುಶಲ, ಕೈಮಗ್ಗ, ಕೃಷಿ, ಖಾದಿ, ಸಂಸ್ಕರಿಸಿದ ಆಹಾರ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ದುರ್ಬಲ ವರ್ಗದ ಜನರಿಗೆ ಹೆಚ್ಚುವರಿ ಆದಾಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಿದ್ದೇಶ್ವರ ಅವರು ಹೇಳಿದರು.
ರಾಜ್ಯದ ಮೈಸೂರು ವಿಭಾಗದ 10 ರೈಲ್ವೆ ನಿಲ್ದಾಣಗಳಲ್ಲಿ ದಾವಣಗೆರೆಯ ನಿಲ್ದಾಣವು ಆಯ್ಕೆಯಾಗಿದ್ದು, ಅಕ್ಟೋಬರ್ 2ನೇ ವಾರದಿಂದ ಈ ಯೋಜನೆ ಜಾರಿ ಆಗಲಿದ್ದು, ಕನಿಷ್ಟ 15 ದಿನದಿಂದ ಗರಿಷ್ಠ 30 ದಿನ ಮಳಿಗೆಯಲ್ಲಿ ಉತ್ಪನ್ನ ಮಾರಾಟ ಮಾಡಬಹುದು. ಇದಕ್ಕಾಗಿ ಉತ್ಪನ್ನ ಮಾರಾಟಮಾಡುವವರು ಮಳಿಗೆಗೆ ನೊಂದಣಿ ಶುಲ್ಕ 1000 ರೂ, ಹಾಗೂ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.