ಬೆಂಗಳೂರು: ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಿಂದ ದಲಿತರ ಭೂಮಿ ಕಬಳಿಕೆ, ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಸಮತಾ ಸೈನಿಕ ದಳ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ‘ವಿಧಾನಸೌಧ ಚಲೋ’ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಆಶ್ರಮದ ಎದುರು ಕಳೆದ 30 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮುಂದುವರಿದ ಭಾಗವಾಗಿ ಕನಕಪುರ ರಸ್ತೆಯ ಆಶ್ರಮದ ಗೇಟ್ ನಂ.5 ರಿಂದ ಆರಂಭವಾದ ಪಾದಯಾತ್ರೆಯು ಬನಶಂಕರಿ, ಬಸವನಗುಡಿ, ಟೌನ್ಹಾಲ್ ಮಾರ್ಗವಾಗಿ ವಿಧಾನಸೌಧದತ್ತ ಸಾಗಲಿದೆ. ಸಾವಿರಾರು ಕಾರ್ಯಕರ್ತರು ಮತ್ತು ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಕೆ. ಗೋಪಾಲ್ ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗೋಮಾಳ ಹಾಗೂ ಸರ್ಕಾರಿ ಜಾಗಗಳನ್ನು ತಕ್ಷಣ ತೆರವುಗೊಳಿಸಬೇಕು, ಕಬಳಿಸಲಾದ ದಲಿತರ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಮೂಲ ಫಲಾನುಭವಿಗಳಿಗೆ ಮರುಹಂಚಿಕೆ ಮಾಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಗಳು ಪ್ರಮುಖವಾಗಿ ಆಗ್ರಹಿಸಿವೆ.
ಪಾದಯಾತ್ರೆಯ ವಿವರ:
ದಿನಾಂಕ: 17.08.2026 ಸೋಮವಾರ
ಸಮಯ: ಬೆಳಿಗ್ಗೆ 10 ಗಂಟೆ
ಆರಂಭ: ಆರ್ಟ್ ಆಫ್ ಲಿವಿಂಗ್ ಆಶ್ರಮ ಗೇಟ್ ನಂ.5, ಕನಕಪುರ ಮುಖ್ಯ ರಸ್ತೆ
ಮಾರ್ಗ: ಲಕ್ಷ್ಮಿಪುರ, ಕುಪ್ಪಾರೆಡ್ಡಿ ಕೆರೆ, ಸಿಲ್ಕ್ ಇನ್ಸ್ಟಿಟ್ಯೂಟ್, ತಲ್ಘಟ್ಟಪುರ, ಬನಶಂಕರಿ, ಯಡಿಯೂರು, ಬಸವನಗುಡಿ, ಸಿಟಿ ಮಾರ್ಕೆಟ್, ಟೌನ್ ಹಾಲ್, ಕಾರ್ಪೊರೇಷನ್ ವೃತ್ತದ ಮೂಲಕ ವಿಧಾನಸೌಧ
