ಅಸ್ಸಾಂನ ಹೈಲಾಕಾಂಡಿ ಜಿಲ್ಲೆಯಲ್ಲಿ 16 ವರ್ಷದ ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಹಾಗೂ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಈ ಘಟನೆಯು ಇಡೀ ಪ್ರದೇಶವನ್ನೇ ತೀವ್ರ ಆಘಾತಕ್ಕೀಡುಮಾಡಿದೆ. ವಿಚಾರಣೆ ವೇಳೆ, ಬಾಲಕಿಗೆ ‘ಪಾಠ ಕಲಿಸಲು’ ಈ ಭೀಕರ ಸಂಚು ರೂಪಿಸಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.
ಮನೆಯಲ್ಲಿ ಏಕಾಂಗಿಯಾಗಿದ್ದ ಬಾಲಕಿ
ಪೋಲಿಸರ ಪ್ರಕಾರ, ಆಗಸ್ಟ್ 1 ರ ರಾತ್ರಿ ಬಾಲಕಿಯ ತಾಯಿ ಮತ್ತು ಕಿರಿಯ ಸಹೋದರ ಕುಟುಂಬದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದಳು. ತಾಯಿ ಮತ್ತು ಸಹೋದರ ಮನೆಗೆ ಹಿಂತಿರುಗಿದಾಗ, ಬಾಲಕಿಯು ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಆಕೆಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಅಡುಗೆಮನೆಯ ಪರಿಕರ ಬಳಸಿ ದೌರ್ಜನ್ಯ
ತನಿಖೆಯ ವೇಳೆ, ಸಂತ್ರಸ್ತೆಯ ಖಾಸಗಿ ಭಾಗಗಳಿಗೆ ವಸ್ತುವೊಂದನ್ನು ತುರುಕಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅದನ್ನು ಪರಿಶೀಲಿಸಿದಾಗ, ಅದು ಅಡುಗೆಮನೆಯಲ್ಲಿ ಬೇಳೆ ಕಡೆಯಲು ಬಳಸುವ ಪರಿಕರ ಎಂಬುದು ತಿಳಿದುಬಂದಿದೆ. ಸಂತ್ರಸ್ತೆಯ ತಾಯಿ ಆ ವಸ್ತುವನ್ನು ತಮ್ಮದೇ ಮನೆಯ ಅಡುಗೆಮನೆಯ ಸಾಮಗ್ರಿ ಎಂದು ಗುರುತಿಸಿದ್ದಾರೆ.
ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಹೈಲಾಕಾಂಡಿಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (SSP) ಅಮಿತಾಭ್ ಸಿನ್ಹಾ ಮಾತನಾಡಿ, ಆರಂಭಿಕ ತನಿಖೆಯಲ್ಲಿ ಬಲವಂತವಾಗಿ ಮನೆಗೆ ನುಗ್ಗಿದ ಯಾವುದೇ ಕುರುಹುಗಳು ಕಂಡುಬಂದಿಲ್ಲ, ಹೀಗಾಗಿ ಪರಿಚಿತರೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ಮೊದಲು ಮೂವರು ಆರೋಪಿಗಳನ್ನು ಮತ್ತು ನಂತರ ಇಬ್ಬರನ್ನು ವಶಕ್ಕೆ ಪಡೆದರು. ಬಂಧಿತ ಐವರೂ ಅಪ್ರಾಪ್ತರಾಗಿದ್ದು, ಅವರಲ್ಲಿ ಒಬ್ಬ 16 ವರ್ಷದ ಬಾಲಕನೂ ಸೇರಿದ್ದಾನೆ. ಪ್ರತಿಯೊಬ್ಬರೂ ಸಂತ್ರಸ್ತೆಗೆ ಮೊದಲೇ ಪರಿಚಿತರಾಗಿದ್ದರು ಎಂದು ತಿಳಿದುಬಂದಿದೆ.
‘ಪಾಠ ಕಲಿಸಲು’ ನಡೆದಿತ್ತು ಭೀಕರ ಯೋಜನೆ
ವಿಚಾರಣೆ ವೇಳೆ, ಸಂತ್ರಸ್ತೆಯು 18 ವರ್ಷದ ಆರೋಪಿಯೊಬ್ಬನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು ಎಂಬುದು ತಿಳಿದುಬಂದಿದೆ. ಜೊತೆಗೆ ಆಕೆ ಇನ್ನೊಬ್ಬ ಯುವಕನೊಂದಿಗೂ ಸಂಪರ್ಕದಲ್ಲಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಇದರಿಂದ ಕೋಪಗೊಂಡ ಆರೋಪಿಗಳು ಆಕೆಗೆ “ಪಾಠ ಕಲಿಸಲು” ಈ ಯೋಜನೆಯನ್ನು ಹೆಣೆದಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದ ರಾತ್ರಿ, ತನ್ನ ಪ್ರೇಮಿಗೆ ಈ ವಿಷಯ ತಿಳಿಸಿದ್ದಳು. ತಕ್ಷಣವೇ ಅವನು ತನ್ನ ಇಬ್ಬರು ಸ್ನೇಹಿತರೊಂದಿಗೆ ಆಕೆಯ ಮನೆಗೆ ತಲುಪಿದನು, ಇತ್ತ ಇನ್ನೊಬ್ಬ ಯುವಕ ಕೂಡ ತನ್ನ ಸ್ನೇಹಿತನೊಂದಿಗೆ ಅಲ್ಲಿಗೆ ಬಂದನು. ನಂತರ ಎಲ್ಲರೂ ಸೇರಿ ಬಾಲಕಿಯ ಮೇಲೆ ಈ ಭೀಕರ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಪೋಕ್ಸೋ ಹಾಗೂ ಕೊಲೆ ಪ್ರಕರಣ ದಾಖಲು
ಬಂಧಿತ ಎಲ್ಲಾ ಆರೋಪಿಗಳ ವಿರುದ್ಧ ಅಪ್ರಾಪ್ತೆಯ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಗಾಗಿ ರಚಿಸಲಾದ ಎಸ್ಐಟಿಗೆ ವಿಧಿವಿಜ್ಞಾನ (ಫೊರೆನ್ಸಿಕ್) ತಂಡಗಳು ನೆರವಾಗುತ್ತಿವೆ. ವೈಜ್ಞಾನಿಕ ಸಾಕ್ಷ್ಯಾಧಾರಗಳು ಮತ್ತು ಇತರ ಸಾಕ್ಷಿಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರದೇಶದಲ್ಲಿ ಭುಗಿಲೆದ್ದ ಆಕ್ರೋಶ
ಘಟನೆಯ ನಂತರ ಸ್ಥಳೀಯ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಥಳೀಯರು ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ‘ಅತ್ಯಂತ ನೋವಿನ ಸಂಗತಿ ಹಾಗೂ ಸಮಾಜಕ್ಕೆ ಶಾಪ’ ಎಂದು ಬಣ್ಣಿಸಿದ್ದಾರೆ.
