ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಡಿ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಎಂಬವರನ್ನು ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣವನ್ನು ಬೇರೆ ರೀತಿಯಲ್ಲಿ ತಿರುಚಲು ಪ್ರವೇಶ್ ಶುಕ್ಲ ಪ್ರಯತ್ನಿಸಿದ ಬಗೆಗಿನ ಮಾಹಿತಿ ತಡವಾಗಿ ಹೊರಬಿದ್ದಿದೆ.
ಮಂಗಳವಾರ ಸಂಜೆಯ ವೇಳೆಗೆ ಎಲ್ಲೆಡೆ ವೈರಲ್ ಆದ ಮೂತ್ರ ವಿಸರ್ಜನೆ ಮಾಡಿರುವ ಈ ವಿಡಿಯೋ ತನ್ನದಲ್ಲ ಎಂದು ಹೇಳುವಂತೆ ಪ್ರವೇಶ್ ಶುಕ್ಲ ಬಲವಂತವಾಗಿ ಸಂತ್ರಸ್ತನ ಮೇಲೆ ಒತ್ತಡ ಹೇರಿರುವ ಮಾಹಿತಿ ಹೊರಬಿದ್ದಿದೆ. ಈ ವಿಡಿಯೋ ನಕಲಿ, ವಿಡಿಯೋದಲ್ಲಿ ಇರುವುದು ತನ್ನ ಮಗನಲ್ಲ ಎಂದು ಹೇಳಿದ ಪತ್ರಕ್ಕೆ ಪ್ರವೇಶ್ ಶುಕ್ಲ ಬಲವಂತವಾಗಿ ಯುವಕನ ತಂದೆಯಿಂದ ಸಹಿ ಮಾಡಿಸಿಕೊಂಡಿದ್ದಾನೆ.
ಸಧ್ಯ ಸಹಿ ಮಾಡಿಸಿಕೊಂಡ ಪತ್ರದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಸಹಿ ಮಾಡಿಸಿಕೊಂಡ ಪತ್ರದ ಬಗ್ಗೆ ತನಿಖೆಗೂ ಸಹ ಒತ್ತಡ ಹೆಚ್ಚಿದೆ. ಈ ನಡುವೆ ‘ತಮ್ಮ ಮಗ ಬಿಜೆಪಿ ಪ್ರತಿನಿಧಿ ಎಂಬ ಕಾರಣಕ್ಕೆ ರಾಜಕೀಯ ಪಿತೂರಿಯಿಂದ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ’ ಎಂದು ಪ್ರವೇಶ್ ಶುಕ್ಲಾ ತಂದೆ ಮತ್ತು ಕುಟುಂಬಸ್ಥರು ದೂರಿದ್ದಾರೆ. ಸಧ್ಯಕ್ಕೆ ವಶಕ್ಕೆ ಪಡೆದಿರುವ ಶುಕ್ಲಾನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.
ಆದರೆ ‘ಈ ವಿಡಿಯೋ ನಕಲಿ ಅಲ್ಲ, ಇದು ನಕಲಿ ಎಂದು ಹೇಳಲು ಆತನ ಮೇಲೆ ಪ್ರಭಾವ ಬಳಸಿ ಒತ್ತಡ ತಂದು ಆತನ ತಂದೆಯಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮೂರು ಮಂದಿ ಇದ್ದ ಬಗ್ಗೆಯೂ ಮಾಹಿತಿ ತಿಳಿದಿದೆ. ಆ ಮೂವರನ್ನು ನಾವು ವಿಚಾರಣೆ ಮಾಡಲಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇಂತಹ ಅಮಾನವೀಯ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಧ್ಯಪ್ರದೇಶ ದೇಶದಲ್ಲೇ ಅತಿ ಹೆಚ್ಚು ದಲಿತ ದೌರ್ಜನ್ಯ ನಡೆಯುತ್ತಿರುವ ರಾಜ್ಯವಾಗಿದೆ. ಇಂತಹ ಅಪರಾಧ ಪ್ರಕರಣ ಮಾನವೀಯತೆ ತಲೆ ತಗ್ಗಿಸುವಂತೆ ಮಾಡಿದೆ. ಎಂದು ರಾಹುಲ್ ಗಾಂಧಿ ಈ ಪ್ರಕರಣದ ಬಗ್ಗೆ ಟ್ವಿಟ್ ಮಾಡಿದ್ದಾರೆ.
https://twitter.com/RahulGandhi/status/1676485839985991680?s=19
ಇನ್ನೊಂದು ಕಡೆ ‘ಪರ್ವೇಶ್ ಶುಕ್ಲಾ ಮನೆಯ ಕೆಲವು ಭಾಗ ಅತಿಕ್ರಮಣವಾಗಿ ನಿರ್ಮಾಣವಾಗಿದ್ದು ಅದರ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಸಿಹಾಬಲ್ ಎಸ್ಡಿಎಂ ಅಧಿಕಾರಿ ಆರ್ಪಿ ತ್ರಿಪಾಠಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆರೋಪಿ ಪರ್ವೇಶ್ ಶುಕ್ಲಾ ಅವರ ಮನೆ ಮೂರು ಜನರ ಭಾಗವಾಗಿದೆ. ಇದರಲ್ಲಿ ಕೆಲವು ಭಾಗವನ್ನು ಅತಿಕ್ರಮಣ ಮಾಡಿ ನಿರ್ಮಿಸಿದ್ದರು. ಇದನ್ನು ಕೆಡವಲಾಗಿದೆ. ಮೂತ್ರ ವಿಸರ್ಜನೆ ಅಪರಾಧದ ಹೊರತಾಗಿ, ಪರ್ವೇಶ್ ಶುಕ್ಲಾ ವಿರುದ್ಧ ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿವೆ. ಸರ್ಕಾರದ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಡಿಎಂ ತಿಳಿಸಿದ್ದಾರೆ.