Home ಕರ್ನಾಟಕ ಚುನಾವಣೆ - 2023 ಕೊಡಗು ಕದನ | ಹಳಬರ ಎದುರು ಹೊಸಬರ ಹಣಾ ಹಣಿ

ಕೊಡಗು ಕದನ | ಹಳಬರ ಎದುರು ಹೊಸಬರ ಹಣಾ ಹಣಿ

0

ಹಿಂದೂ ಪರ ಸಂಘಟನೆಗಳು ಪ್ರಬಲವಾಗಿರುವ ಕೊಡಗಿನಲ್ಲಿ ಭಾಜಪ ಗೆಲುವಿಗೆ ಪ್ರತಿಬಾರಿಯಂತೆ ಈ ಬಾರಿಯೂ ಆಂತರಿಕ ಅಸಮಾಧಾನವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಾರೆ ಅನ್ನುವುದು ಭಾಜಪದ ಎರಡೂ ಕ್ಷೇತ್ರದ ಅಭ್ಯರ್ಥಿಗಳ ನಂಬಿಕೆ. ಮೋದಿ ಅಲೆ ಕೊಡಗಿನಲ್ಲಿ ಒಂದಿಷ್ಟು ಕಡಿಮೆ ಆಗಿದೆ ಅನ್ನುವುದು ಬಿಟ್ಟರೆ ಮೋದಿ ಹೆಸರಿನಲ್ಲಿ ಭಾಜಪಕ್ಕೆ ಮತಚಲಾವಣೆ ಮಾಡುವ ಮತದಾರರು ಅಧಿಕ ಸಂಖ್ಯೆಯಲ್ಲಿ ಕೊಡಗಿನಲ್ಲಿ ಇದ್ದಾರೆ – ರಂಜಿತ್ ಕವಲಪಾರ, ಪತ್ರಕರ್ತರು

 ವಿರಾಜಪೇಟೆ ಕ್ಷೇತ್ರದಲ್ಲಿ ಭಾಜಪ-ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ನೇರ ಸ್ಪರ್ಧಿಗಳಾಗಿ ಸೆಣಸುತ್ತಾರೆ. ಕಾಂಗ್ರೆಸ್‍ನಿಂದ ಈ ಬಾರಿ ಎ.ಎಸ್ ಪೊನ್ನಣ್ಣ ಸ್ಪರ್ಧಿಸಿದರೆ ಭಾಜಪದಿಂದ ಎಂದಿನಂತೆ ಕೆ.ಜಿ ಬೋಪಯ್ಯ ಅಖಾಡದಲ್ಲಿದ್ದಾರೆ. ಜಾತ್ಯತೀತ ಜನತಾದಳದ ಕಳೆದ ಬಾರಿಯ ಅಭ್ಯರ್ಥಿ ಸಂಕೇತ್ ಪೂವಯ್ಯನವರ ಹೀನಾಯ ಸೋಲಿನ ಬೆನ್ನಲ್ಲಿಯೇ ಈ ಬಾರಿ ವಿರಾಜಪೇಟೆ ಕ್ಷೇತ್ರದಿಂದ ಜನತಾ ದಳ ಪಕ್ಷ ಬಹುತೇಕ ಹಿಂದೆ ಸರಿದಂತೆ ಕಾಣುತ್ತಿದೆಯಾದರೂ ಜೆ.ಡಿ.ಎಸ್ ಪಕ್ಷದ ರಾಜ್ಯ ಸಮಿತಿ ಉಪಾಧ್ಯಕ್ಷ ಮನ್ಸೂರ್ ಅಲಿ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಇತ್ತ ಸಂಕೇತ್ ಪೂವಯ್ಯನವರು ಎ.ಎಸ್ ಪೊನ್ನಣ್ಣನವರ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ತಮ್ಮ ವಿರುದ್ಧ ಅಭ್ಯರ್ಥಿ ಹಾಕದಂತೆ ಹಾಗೂ ಭಾಜಪವನ್ನು ಈ ಬಾರಿ ಸೋಲಿಸಲು ತಮಗೆ ಸಹಕಾರ ನೀಡುವಂತೆ ಹೆಚ್.ಡಿ.ದೇವೆಗೌಡರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದಿದ್ದಾರೆ ಎನ್ನುವ ಸುದ್ದಿಯೂ ಏತನ್ಮಧ್ಯೆ ಜನವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಉತ್ಸಾಹಿ ರಾಜಕಾರಣಿ, ಕರ್ನಾಟಕ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ, ಸುಪ್ರೀಂ ಕೋರ್ಟ್ ವಕೀಲ ಎ.ಎಸ್ ಪೊನ್ನಣ್ಣ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೊಡಗಿನಲ್ಲಿ ಚುನಾವಣೆಗೆ ಪೂರ್ವತಯಾರಿ ಮಾಡಿಕೊಂಡಿದ್ದು ಕ್ಷೇತ್ರದಲ್ಲಿ ಅವರ ಪರವಾಗಿ ಮತದಾರರಲ್ಲಿ ಒಂದಿಷ್ಟು ಒಲವು ಮೂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಾಂಗ್ರೆಸ್‍ನಿಂದ ಯಾವುದೇ ಬಂಡಾಯ ವಿರಾಜಪೇಟೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಇರುವುದು ಪೊನ್ನಣ್ಣನವರಿಗೆ ಸಮಾಧಾನವನ್ನೂ ತಂದಿರುತ್ತದೆ.

ಸರ್ವೋದಯ ಪಕ್ಷದಿಂದ ರೈತಪರ ಹೋರಾಟಗಾರ ಮನುಸೋಮಯ್ಯ ಪಕ್ಷೇತರ ಅಭ್ಯರ್ಥಿಗಳಾಗಿ ಮೊಯ್ದು ಕೊಟ್ಟಮುಡಿ ಹಾಗೂ ನಾಸೀರ್ ಮಕ್ಕಿ ಸ್ಪರ್ಧೆಗೆ ಮುಂದಾಗಿದ್ದು. ಜೆಡಿಎಸ್‍ನಿಂದ ಮನ್ಸೂರ್ ಅಲಿ ಸ್ಪರ್ಧೆ ಖಚಿತವಾದಲ್ಲಿ ಅಲ್ಪಸಂಖ್ಯಾತರ ಮತಗಳ ವಿಭಜನೆಯಿಂದ ಕಾಂಗ್ರೆಸ್‍ಗೆ ಹಿನ್ನೆಡೆ ಆಗುವ ಅಪಾಯ ಇದೆ.

ಇತ್ತ ಟಿಕೆಟ್‍ಗಾಗಿ ಭಾಜಪದಲ್ಲಿ ಈ ಹಿಂದೆ ಎಂದೂ ಕಾಣಿಸದಷ್ಟು ಪೈಪೋಟಿಯ ನಡುವೆಯೂ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಕೆ.ಜಿ ಬೋಪಯ್ಯನವರಿಗೆ ಈ ಬಾರಿಯೂ ಭಾಜಪ ಹೈಕಮಾಂಡ್ ಅಸ್ತು ಅಂದಿದೆ. ಆದರೂ ಇತರೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಬೋಪಯ್ಯನವರಿಗೆ ಒಂದಿಷ್ಟು ತಲೆ ಬಿಸಿ ತಂದಂತೆ ಕಾಣುತ್ತಿದೆ. ಬೋಪಯ್ಯನವರು ಎಂದಿನಂತೆ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ. ಬೂತ್ ಮಟ್ಟದಲ್ಲಿ ಸಧೃಡವಾಗಿರುವ ಪಕ್ಷದ ಕಾರ್ಯಕರ್ತರೂ ಹಾಗೂ ಭಾಜಪದ ಕಾಯಂ ಮತದಾರರು ಅವರನ್ನು ಗೆಲ್ಲಿಸುತ್ತಾರೆ ಅನ್ನುವುದು ಅವರ ನಂಬಿಕೆ.

ಎ.ಬಿ.ವಿ.ಪಿ ಹಾಗೂ ಸಂಘಪರಿವಾರದಿಂದ ಬೆಳೆದು ಬಂದಿರುವ ಬೋಪಯ್ಯನವರಿಗೆ ಹಿಂದೂ ಸಂಘಟನೆಗಳ ಬೆಂಬಲ ಶ್ರೀರಕ್ಷೆ. ಆದರೆ ಪಕ್ಷದ ಆಂತರಿಕ ಗೊಂದಲ ಹಾಗೂ ಕೋವಿಡ್ ಹಾಗೂ ಅತಿವೃಷ್ಠಿಯಿಂದ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿಕಾರ್ಯ ಪೊನ್ನಣ್ಣನವರಿಗೆ ವರದಾನ ಆಗುತ್ತದಾ? ಕಾದು ನೋಡಬೇಕಿದೆ.

ಕಾಂಗ್ರೆಸ್‌ ನ ಮಂಥರ ಗೌಡ ಮತ್ತು ಪೊನ್ನಣ್ಣ

ಎ.ಕೆ ಸುಬ್ಬಯ್ಯನವರ ಮಗ ಎ.ಎಸ್ ಪೊನ್ನಣ್ಣ

ಕೊಡಗಿನಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಹೆಸರುಗಳಿಸಿರುವ ಎ.ಕೆ ಸುಬ್ಬಯ್ಯನವರ ಶಿಷ್ಯ ಬಣ ರಾಜ್ಯದಾದ್ಯಂತ ಈಗಲೂ ಇದ್ದು ನೇರ ಹಾಗೂ ನಿಷ್ಠುರತೆಗೆ ಹೆಸರು ವಾಸಿಯಾಗಿದ್ದ ಸುಬ್ಬಯ್ಯನವರ ಪುತ್ರ ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡುತ್ತಿರುವುದು ವಿಶೇಷ. ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಸುಬ್ಬಯ್ಯನವರಿಗೆ ಅಷ್ಟೇ ಸಂಖ್ಯೆಯ ವಿರೋಧಿಗಳು ಇದ್ದಾರೆ. ಹೋರಾಟ ಹಾಗೂ ಕೊಡಗಿನ ನಾಡು, ನುಡಿ, ವೈಚಾರಿಕತೆಗಳ ವಿಚಾರದಲ್ಲಿ ಇದ್ದ ಅವರ ನಿಲುವು ಈ ಚುನಾವಣೆಯಲ್ಲಿ ಪೊನ್ನಣ್ಣನವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದಾ? ಅಥವಾ ಮತವಾಗಿ ಪರಿವರ್ತನೆ ಆಗುತ್ತದಾ ಎಂಬುದು ಯಕ್ಷಪ್ರಶ್ನೆಯಾಗಿದೆ. ನಯವಾದ ಮಾತುಗಾರಿಕೆ, ವಿನಯವಂತಿಕೆ ಹಾಗೂ ವೈಚಾರಿಕವಾಗಿ ಪೊನ್ನಣ್ಣನವರ ನಿಲುವು ತಂದೆಗಿಂತ ಭಿನ್ನವಾಗಿದೆ ಎಂದು ಈಗಾಗಲೇ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಡಿಕೇರಿ ಕ್ಷೇತ್ರ

ಇತ್ತ ಮಡಿಕೇರಿ ಕ್ಷೇತ್ರದ ಸ್ಥಿತಿ ವಿರಾಜಪೇಟೆಗಿಂತಲೂ ವ್ಯತಿರಿಕ್ತವಾಗಿದೆ. ಇಲ್ಲಿ ಕಾಂಗ್ರೆಸ್ ನಲ್ಲಿ ಮಂಥರ್ ಗೌಡ ಟಿಕೆಟ್ ಗಿಟ್ಟಿಸಿಕೊಂಡಿದ್ದರೆ ಭಾಜಪದಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಎಂ.ಪಿ ಅಪ್ಪಚ್ಚುರಂಜನ್ ಸ್ಪರ್ಧಿಸುತ್ತಿದ್ದಾರೆ. ಯುವ ರಾಜಕಾರಣಿ ಮಂಥರ್ ಗೌಡ ಅವರು ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ ಹದಿನೈದು ದಿನಗಳಲ್ಲಿ ಉಂಟುಮಾಡಿದ ಸಂಚಲನದಿಂದ ಕೊಡಗಿನಲ್ಲಿ ತಮ್ಮದೇ ಆದ ವರ್ಚಸನ್ನು ಉಳಿಸಿಕೊಂಡಿದ್ದಾರೆ. ಇತ್ತ ಭಾಜಪದಿಂದಲೂ ಟಿಕೆಟ್‍ಗಾಗಿ ಪೈಪೋಟಿ ಇದ್ದ ಕಾರಣ ಟಿಕೆಟ್ ವಂಚಿತರು ಅಪ್ಪಚ್ಚು ರಂಜನ್ ಅವರಿಗೆ ಉಲ್ಟಾ ಹೊಡೆದರೆ ಅದು ಮಂಥರ್ ಗೌಡರಿಗೆ ಫ್ಲಸ್ ಆಗಬಹುದು. ಆದರೆ ಕಾಂಗ್ರೆಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹರಪಳ್ಳಿ ರವಿಂದ್ರ ಬಂಡಾಯ ಎದ್ದಿದ್ದು ಮಂಥರ್ ಗೌಡರ ಸೋಲು ಗೆಲುವನ್ನು ಬಂಡಾಯ ಅಭ್ಯರ್ಥಿ ನಿರ್ಧರಿಸುವಂತೆ ಇದೆ. ಆದರೆ ಇಂದು ಬೆಂಗಳೂರಿನಿಂದ ಇಬ್ಬರೂ ಅಭ್ಯರ್ಥಿಗಳ ಬಿ.ಫಾರಂ ತರಲು ಡಿ.ಕೆ ಶಿವಕುಮಾರ್ ಅವರ ಬಳಿ ತೆರಳಿದ್ದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪನವರೊಂದಿಗೆ ರವೀಂದ್ರ ಅವರು  ಕಾಣಿಸಿಕೊಂಡು ಬಂಡಾಯಕ್ಕೆ ವಿದಾಯ ಹೇಳಿರುವಂತೆ ಕಾಣಿಸುತ್ತಿದೆ.

ಕಳೆದ 45ವರ್ಷಗಳಿಂದ 8 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿರಿಯ ರಾಜಕಾರಣಿ ಜೀವಿಜಯ ಅವರು ಜನತಾ ದಳದಿಂದ ಟಿಕೆಟ್ ನಿರೀಕ್ಷೆ ಇಟ್ಟು ಕಾಂಗ್ರೆಸ್ಸಿಗೆ ಬಂದಿದ್ದರು. ಅವರಿಗೂ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕದೆ ಮಂಥರ್ ಗೌಡರಿಗೆ ಟಿಕೆಟ್ ಕೊಟ್ಟಿದ್ದು ಅವರೂ ಅಸಮಾಧಾನಗೊಂಡು ಹರಪಳ್ಳಿ ರವಿಂದ್ರನವರ ಪರ ಮತಯಾಚನೆ ಮಾಡಿದ್ದರು. ಇನ್ನು ಅವರ ನಿಲುವು ಏನು ಅನ್ನುವುದು ನಿಜಕ್ಕೂ ಮಂಥರ್ ಗೌಡರಿಗೆ ಈ ಚುನಾವಣೆಯಲ್ಲಿ ಅಗ್ನಿ ಪರೀಕ್ಷೆ ಆಗಿರುತ್ತದೆ. ಜೀವಿಜಯನವರು ಎಲ್ಲಾದರೂ ಪಟ್ಟು ಬಿಡದೆ ಈ ಚುನಾವಣೆಯಲ್ಲಿ ವಿರೋಧ ವ್ಯಕ್ತಪಡಿಸಿದರೆ ಕಾಂಗ್ರೆಸ್ ಗೆಲುವಿಗೆ ಅವರು ಮುಳುವಾಗುತ್ತಾರೆ. ಜೀವಿಜಯನವರೂ ಇಲ್ಲಿ ನಿರ್ಣಾಯಕ ಪಾತ್ರದಲ್ಲಿ ನಿಲ್ಲುತ್ತಾರೆ.

ಮಡಿಕೇರಿಯಿಂದ ಎಸ್.ಡಿ.ಪಿ.ಐ ಸ್ಪರ್ಧೆ ಕಾಂಗ್ರೆಸ್ಸಿಗೆ ಮುಳುವು.

ಇತ್ತ ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಎಸ್.ಡಿ.ಪಿ.ಐ ಪಕ್ಷದ ಅಭ್ಯರ್ಥಿ ಅಮೀನ್ ಮೋಹಿಸಿನ್ ಸ್ಪರ್ಧೆ ಖಚಿತವಾಗಿದ್ದು ಅವರು ನಾಮಪತ್ರ ಸಲ್ಲಿಸಿರುತ್ತಾರೆ. ಯುವ ರಾಜಕಾರಣಿ ಅಮೀನ್ ತಮ್ಮದೇ ವರ್ಚಸ್ಸನ್ನು ಹೊಂದಿದ್ದು ಇಲ್ಲಿ ಇವರ ಸ್ಪರ್ಧೆ ಅಲ್ಪಸಂಖ್ಯಾತರ ಮತವಿಭಜನೆ ಸಾಧ್ಯತೆಯನ್ನು ಹೆಚ್ಚಿಸಿದೆ. ಇವರ ಸ್ಪರ್ಧೆ ಕಾಂಗ್ರೆಸ್ಸಿಗೆ ಮುಳುವಾದರೆ ಭಾಜಪದ ಗೆಲುವಿಗೆ ಸಹಕಾರಿ ಎನ್ನುವ ಅಭಿಪ್ರಾಯಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.

ಮಡಿಕೇರಿ ಕ್ಷೇತ್ರದಲ್ಲಿ ಜೆ.ಡಿ.ಎಸ್ ಕಣ್ಣಾಮುಚ್ಚಾಲೆ ಆಟಕ್ಕೆ ಚುಕ್ಕಿ ನಾಪಂಡ ಮುತ್ತಪ್ಪನವರಿಗೆ ಅಸ್ತು ಅಂದ ಕುಮಾರಣ್ಣ

ವಿರಾಜಪೇಟೆ ಕ್ಷೇತ್ರದ ಸ್ಪರ್ಧೆಯಿಂದ ಬಹುತೇಕ ಹೊರಗೆ ಉಳಿದಿರುವಂತೆ ತೋರುವ ಜೆ.ಡಿ.ಎಸ್ ಪಕ್ಷ ಇನ್ನೂ ಮಡಿಕೇರಿಗೆ ಅಧಿಕೃತ ಅಭ್ಯರ್ಥಿಯನ್ನು ಘೋಷಿಸದೆ ಗೊಂದಲದ ವಾತಾವರಣ ಸೃಷ್ಟಿಮಾಡಿತ್ತು. ಇತ್ತ ಪ್ರಬಲ ಜೆ.ಡಿ.ಎಸ್ ಟಿಕೆಟ್ ಆಕಾಂಕ್ಷಿ ನಾಪಂಡ ಮುತ್ತಪ್ಪನವರು ಜೆ.ಡಿ.ಎಸ್ ಟಿಕೆಟ್ ನನಗೆ ಖಾತ್ರಿಯಾಗಿದೆ ಅನ್ನುವ ವಿಶ್ವಾಸದೊಂದಿಗೆ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದರು. ಇತ್ತ ಹರಪಳ್ಳಿ ರವೀಂದ್ರನವರಿಗೆ ಕುಮಾರಸ್ವಾಮಿ ಟಿಕೆಟ್ ನೀಡುವುದಾಗಿ ಪಕ್ಷಕ್ಕೆ ಕರೆದಿರುವ ಕುರಿತು ಚರ್ಚೆ ಇತ್ತು. ಈ ಕುರಿತು ಸ್ವತಃ ರವೀಂದ್ರ ಅವರೇ ಸ್ಪಷ್ಟತೆ ನೀಡಿದ್ದು, ಹಲವು ತಿಂಗಳಿನಿಂದ ಸಕ್ರಿಯವಾಗಿರುವ ನಾಪಂಡ ಮುತ್ತಪ್ಪ ಹಾಗೂ ಅವರ ಬೆಂಬಲಿಗರಲ್ಲಿ ಈ ಸುದ್ದಿ ಗೊಂದಲ ಸೃಷ್ಟಿಸಿತ್ತು. ಈ ಗೊಂದಲದ ನಡುವೆಯೇ ನಾಮಪತ್ರ ಸಲ್ಲಿಸಿರುವ ಮುತ್ತಪ್ಪನವರಿಗೆ ಜೆ.ಡಿ.ಎಸ್ ಕೊನೆಕ್ಷಣದಲ್ಲಿ ಟಿಕೆಟ್ ನೀಡಿದೆ. ಕುಮಾರ ಸ್ವಾಮಿ ಅವರು ಮಡಿಕೇರಿಗೆ ಎ.ಎನ್ ಮುತ್ತಪ್ಪ ಅಭ್ಯರ್ಥಿ ಎಂದು ಹೇಳುವ ವಿಡಿಯೋ ಬಿಡುಗಡೆಯಾಗಿದೆ.

ಭಾಜಪದ ಬೋಪಯ್ಯ ಮತ್ತು ಅಪ್ಪಚ್ಚು ರಂಜನ್

ಈ ನಡುವೆ ಇನ್ನೊಂದು ಸುದ್ದಿಯೂ ಹರಿದಾಡುತ್ತಿತ್ತು. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಥರ್‍ ಗೌಡ ಅವರ ತಂದೆ ಎ.ಮಂಜು ಅರಕಲಗೋಡು ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದು ಅವರ ಹಾಗೂ ಕುಮಾರಸ್ವಾಮಿ ಸಂಬಂಧ ಚೆನ್ನಾಗೆ ಇದೆ. ಇಲ್ಲಿ ಮಗನ ಸ್ಪರ್ಧೆಗೆ ಅನುಕೂಲ ಆಗುವ ನಡೆಯನ್ನು ತೆಗೆದುಕೊಳ್ಳಬೇಕು ಎಂದು ಮಂಜು ಅವರು ಕುಮಾರ ಸ್ವಾಮಿ ಅವರ ಬಳಿ ಕೇಳಿಕೊಂಡಿರುವ ಸಾಧ್ಯತೆ ಇದ್ದು ಈ ಕಾರಣಕ್ಕೂ ಜೆಡಿಎಸ್ ಟಿಕೆಟ್ ಗೊಂದಲ ಜೀವಂತ ಇಡಲಾಗಿದೆ ಅನ್ನುವ ಚರ್ಚೆ ನಡೆಯುತ್ತಿತ್ತು. ಆದರೆ ಅಧಿಕೃತವಾಗಿ ಜೆ.ಡಿ.ಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅನ್ನುವುದರೊಂದಿಗೆ ಎಲ್ಲಾ ಊಹಾಪೋಹಗಳಿಗೆ ಚುಕ್ಕಿ ಇಡಲಾಗಿದೆ.

ಕಾರ್ಮಿಕ ನಾಯಕ ನಾಪಂಡ ಮುತ್ತಪ್ಪ, ಹಾಲಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಮಂಥರ್ ಗೌಡ ನಡುವೆ ಮಡಿಕೇರಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ವಿಜಯಲಕ್ಷಿ ಯಾರ ಕೈ ಹಿಡಿಯುತ್ತಾಳೆ ಕಾದು ನೋಡಬೇಕಿದೆ. ಸಿಪಿಐ ಪಕ್ಷದಿಂದ ಹೆಚ್.ಎಂ ಸೋಮಪ್ಪ, ಐ.ಪಿ.ಎಂ ಪಕ್ಷದಿಂದ ರಶೀದಾ ಬೇಗಂ, ಪಕ್ಷೇತರ ಅಭ್ಯರ್ಥಿಯಾಗಿ ಹೇಮಂತ್ ಕುಮಾರ್ ಕೂಡ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಬೂತ್ ಮಟ್ಟದಲ್ಲಿ ಕೊಡಗಿನಲ್ಲಿ ಭಾಜಪ ಸಧೃಡ

ತಲಾ 269 ಮತಗಟ್ಟೆಗಳಲ್ಲಿ ಎರಡೂ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು. 4,19,550 ಕ್ಕೂ ಹೆಚ್ಚು ಮತದಾರರು ಕೊಡಗಿನ ಎರಡೂ ಕ್ಷೇತ್ರದಲ್ಲಿ ಇದ್ದಾರೆ. ಈ ಬಾರಿ ಶೇಕಡಾ 80%ಕ್ಕಿಂತಲೂ ಹೆಚ್ಚಿನ ಮತದಾನ ಆಗುವ ಸಾಧ್ಯತೆಯೂ ಕೊಡಗಿನಲ್ಲಿ ಇದೆ. ಎರಡೂ ಕ್ಷೇತ್ರಗಳ ಅಷ್ಟೂ ಮತಗಟ್ಟೆಗಳಲ್ಲೂ ಭಾರತೀಯ ಜನತಪಾರ್ಟಿಯ ಸಕ್ರಿಯ ಕಾರ್ಯಕರ್ತರು ಇರುವುದು ಬಿ.ಜೆ.ಪಿಗೆ ವರದಾನ ಆಗುತ್ತಾ ಬಂದಿದೆ. ಇತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಸ್ಥಿತಿ ಹಾಗಿಲ್ಲ. ಕೆಲವೊಂದು ಮತಗಟ್ಟೆಗಳಲ್ಲಿ ಅವರು ಕಾರ್ಯಕರ್ತರ ಕೊರತೆಯನ್ನು ಈ ಹಿಂದೆಯೂ ಎದುರಿಸುತ್ತಾ ಬಂದಿದ್ದಾರೆ. ಅಂತಹಾ ಬೂತ್‍ಗಳಲ್ಲಿ ಅವರಿಗೆ ಮತ ಕಡಿಮೆ ಬೀಳುವ ಸಾಧ್ಯತೆ ಇದೆ. ಈ ಬಾರಿ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹಣ ನಿರ್ಣಾಯಕ ಆಗುತ್ತದಾ?

ಇಲ್ಲಿ ಸ್ಪರ್ಧಾರ್ಥಿಗಳೆಲ್ಲರೂ ಆರ್ಥಿಕವಾಗಿ ಸಧೃಡರಾಗಿರುವುದರಿಂದ ಈ ಚುನಾವಣೆ ಹೆಚ್ಚು ರಂಗುಪಡೆಯುವ ಸಾಧ್ಯತೆ ಇದೆ. ಇದು ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಸಾಬೀತಾಗಿದೆ. ಆದರೆ ಕೊಡಗಿನಲ್ಲಿ ಆಮಿಷಗಳಿಗೆ ಒಳಗಾಗಿ ಮತಬದಲಾವಣೆ ಕಷ್ಟ ಅನ್ನುವುದು ಬಲವಾದ ನಂಬಿಕೆ. ಇಲ್ಲಿ ರಂಗು ರಂಗಿನ ರಾಜಕೀಯಕ್ಕೆ ಕಿಮ್ಮತ್ತು ಕಡಿಮೆ. ಸ್ವಾಭಿಮಾನಿಗಳು ಹೆಚ್ಚಿರುವಲ್ಲಿ ಈ ಮಾರ್ಗ ಅಷ್ಟೊಂದು ಫಲಕೊಡುವುದಿಲ್ಲ. ಇಲ್ಲಿ ಜಾತಿ ರಾಜಕಾರಣವೂ ಅಷ್ಟಾಗಿ ವರ್ಕ್ ಔಟ್ ಆಗುವುದಿಲ್ಲ. ಈ ಹಿಂದೆ ನಡೆದಿರುವ ಚುನಾವಣೆಗಳು ಹಾಗೂ ಅದರ ಫಲಿತಾಂಶವೇ ಅದಕ್ಕೆ ಸಾಕ್ಷಿ.

ಹಿಂದೂತ್ವ, ಮೋದಿ ಅಲೆ ವರ್ಕ್ ಆಗುತ್ತಾ?

ಹಿಂದೂ ಪರ ಸಂಘಟನೆಗಳು ಪ್ರಬಲವಾಗಿರುವ ಕೊಡಗಿನಲ್ಲಿ ಭಾಜಪ ಗೆಲುವಿಗೆ ಪ್ರತಿಬಾರಿಯಂತೆ ಈ ಬಾರಿಯೂ ಆಂತರಿಕ ಅಸಮಾಧಾನವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಾರೆ ಅನ್ನುವುದು ಭಾಜಪದ ಎರಡೂ ಕ್ಷೇತ್ರದ ಅಭ್ಯರ್ಥಿಗಳ ನಂಬಿಕೆ. ಮೋದಿ ಅಲೆ ಕೊಡಗಿನಲ್ಲಿ ಒಂದಿಷ್ಟು ಕಡಿಮೆ ಆಗಿದೆ ಅನ್ನುವುದು ಬಿಟ್ಟರೆ ಮೋದಿ ಹೆಸರಿನಲ್ಲಿ ಭಾಜಪಕ್ಕೆ ಮತಚಲಾವಣೆ ಮಾಡುವ ಮತದಾರರು ಅಧಿಕ ಸಂಖ್ಯೆಯಲ್ಲಿ ಕೊಡಗಿನಲ್ಲಿ ಇದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿದ್ದು ಭಾಜಪದ ಭದ್ರಕೋಟೆ ಇನ್ನಷ್ಟು ಭದ್ರವಾಗುತ್ತದಾ? ಅಥವಾ ಎಲ್ಲರೂ ಒಗ್ಗಟ್ಟಾಗಿ ಭದ್ರಕೋಟೆಯನ್ನೂ ಭೇದಿಸಿ ಅವರ ಪತಾಕೆ ಹಾರಿಸುತ್ತಾರಾ? ಫಲಿತಾಂಶ ಮೇ13 ಕ್ಕೆ ತಿಳಿಯಲಿದೆ.

ರಂಜಿತ್ ಕವಲಪಾರ, ಪತ್ರಕರ್ತರು

ಇದನ್ನೂ ಓದಿ-ತಿಪಟೂರು | ಶಿಕ್ಷಣ ಸಚಿವರಿಗೆ ಯಡಿಯೂರಪ್ಪನವರ ಕಣ್ಣೀರು ಮುಳುವಾಗುತ್ತಾ?https://peepalmedia.com/tipatur-is-yeddyurappas-tears-affect-for-education-minister/

You cannot copy content of this page

Exit mobile version