ಅನುಕೂಲಕ್ಕೆ ತಕ್ಕಂತೆ ಬಳಸಿ ಬಿಸಾಡುವ ಬಿಜೆಪಿಯ ಗುಣದಿಂದಾಗಿ ಬೇಸತ್ತು ದೂರವಾಗಿರುವ ಬಹುಸಂಖ್ಯಾತ ಲಿಂಗಾಯತರು, ಕೋಮುವಾದಿ ರಾಜಕಾರಣದ ವಿರುದ್ಧ ಇರುವ ಮುಸಲ್ಮಾನರು, ಎಲ್ಲಾ ಸಮುದಾಯಗಳಲ್ಲಿರುವ ಕೊಬ್ಬರಿ ಬೆಳೆಗಾರರು ಹಾಗು ಹಾಲು ಉತ್ಪಾದಕರ ಮತಗಳು ತಿಪಟೂರಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕವಾಗ ಬಲ್ಲವು – ಅರುಂಧತಿ
ತಿಪಟೂರು ವಿಧಾನ ಸಭಾ ಚುನಾವಣೆ ಹಲವಾರು ಕಾರಣಗಳಿಂದ ರಾಜ್ಯದ ಗಮನ ಸೆಳೆದಿದೆ. ಕಾರಣ ಮುಖ್ಯವಾಗಿ ಇಲ್ಲಿನ ಬಿಜೆಪಿ ಪಕ್ಷದ ಹಾಲಿ ಶಾಸಕರು ಹಾಗು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್. ಅವರ ಅಧಿಕಾರದ ಅವಧಿಯಲ್ಲಿ ಬಸವಣ್ಣ, ಅಂಬೇಡ್ಕರ್, ಕುವೆಂಪು, ಕನಕದಾಸ, ನಾರಾಯಣಗುರು, ವಾಲ್ಮೀಕಿ ಮುಂತಾದ ದಾರ್ಶನಿಕರ ಚರಿತ್ರೆಗಳನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಉದ್ದೇಶಪೂರ್ವಕವಾಗಿ ತಿರುಚಿದ ಅಧ್ವಾನಗಳು ಹಾಗು ಅದನ್ನು ಸಮರ್ಥಿಸಿಕೊಂಡ ಸಚಿವರ ನಡೆಗಳು ರಾಜ್ಯಾದ್ಯಂತ ಸಾರ್ವಜನಿಕ ಚರ್ಚೆ ಹಾಗು ಟೀಕೆಗೆ ಗುರಿಯಾಯಿತು. ಇಷ್ಟಲ್ಲದೆ ಶಾಲಾ ಮಕ್ಕಳ ಶೂ, ಮೊಟ್ಟೆ, ಸಮವಸ್ತ್ರ, ಪುಸ್ತಕ ಪೂರೈಕೆಯಲ್ಲಿನ ಲೋಪಗಳು ಹಾಗು ಅವರ ಹೇಳಿಕೆಗಳು ಅವಧಿಯುದ್ದಕ್ಕೂ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿತ್ತು. ರಾಜ್ಯಾದ್ಯಂತ ಇವರ ನಡೆಗಳ ವಿರುದ್ಧ ನಡೆದ ಮುಷ್ಕರ, ಪಾದಯಾತ್ರೆಗಳು, ಸೋಷಿಯಲ್ ಮೀಡಿಯಾಗಳಲ್ಲಿ ಬಂದ ವ್ಯಂಗ್ಯಚಿತ್ರಗಳು ಇವರನ್ನು ಬಹು ವಿವಾದಿತ ವ್ಯಕ್ತಿಯನ್ನಾಗಿ ಬಿಂಬಿಸಿದವು. ಆದ್ದರಿಂಲೇ ತಿಪಟೂರಿನ ಚುನಾವಣೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಮತ್ತೊಂದೆಡೆ ಹಾಸ್ಯನಟ ನರಸಿಂಹರಾಜು ಕಲಾಮಂದಿರ ಸೇರಿದಂತೆ ಮೊರಾರ್ಜಿ ಶಾಲೆ, ಹಲವಾರು ರಸ್ತೆಗಳು, ಸರ್ಕಲ್ ಪ್ರತಿಮೆ, ಕೆರೆ ಉದ್ಯಾನವನಗಳು ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಲೋಕಾರ್ಪಣೆಯಾಗಿವೆ. ರಸ್ತೆ ಬಡಾವಣೆಗಳಲ್ಲಿ ಬೀದಿ ದೀಪಗಳು ಬೆಳಗುತ್ತಿವೆ. ಇವೆಲ್ಲವೂ ಹಾಲಿ ಶಾಸಕರ ಅಭಿವೃದ್ಧಿಯೇ ಹೌದಾದರೂ ರೈತರು ಬೀದಿಗೆ ಬಿದ್ದಿರುವ ಈ ಹೊತ್ತಿನಲ್ಲಿ ಚುನಾವಣಾ ಅಲಂಕಾರದಂತೆ ತೋರುತ್ತಿದೆ.
ಕಾರಣ ತಿಪಟೂರಿನ ಜೀವನಾಡಿಯಾದ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ. ತಾಲ್ಲೂಕಿನ ರೈತರು ಸರ್ಕಾರದ ಬೆಂಬಲ ಬೆಲೆಗೆ ಆಗ್ರಹಿಸಿ ಒಂದು ತಿಂಗಳು ಸತತ ಚಳುವಳಿ, ಮುಷ್ಕರ, ಉಪವಾಸ, ಸಾವಿರಾರು ರೈತರ ಪ್ರತಿಭಟನಾ ಜಾಥಾ ಹಾಗು ಸ್ವಾಭಿಮಾನಿ ಸಮಾವೇಶಗಳನ್ನು ನಡೆಸಿದರೂ ಸ್ಥಳೀಯ ಶಾಸಕ – ಸಚಿವರಾಗಿ ಬಿ ಸಿ ನಾಗೇಶ್ ಸ್ಪಂದಿಸದಿರುವುದು ತೆಂಗುಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆ, ಬೆಲೆ ಏರಿಕೆಗಳಿಂದಾಗಿ ಕಾಣಿಸುತ್ತಿರುವ ಪ್ರಭುತ್ವ ವಿರೋಧಿ ಅಲೆಯ ಕಾವು ಇಲ್ಲಿ ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದೆ.ಇದು ಚುನಾವಣೆಯ ಹೊಸ್ತಿಲಲ್ಲಿರುವ ತಿಪಟೂರು ಕ್ಷೇತ್ರದ ವಾಸ್ತವ.
ಇದುವರೆಗೂ ಚಳುವಳಿಗಳಲ್ಲಿ ತೊಡಗಿಸಿಕೊಂಡು ಪಠ್ಯಪುಸ್ತಕ ಪರಿಷ್ಕರಣೆಯ ಹಿಂದಿನ ಸಾಂಸ್ಕೃತಿಕ ರಾಜಕಾರಣವನ್ನು ವಿರೋಧಿಸಿ ತಾಲ್ಲೂಕಿನಾದ್ಯಂತ ಪಾದಯಾತ್ರೆ, ತಿಪಟೂರು ಚಲೋ ಸಂಘಟಿಸಿ, ಜನಪರ ಕಾರ್ಯಕ್ರಮಗಳಾದ ಹೆಣ್ಣುಮಕ್ಕಳಿಗಾಗಿ ಆರೋಗ್ಯ ಸಖಿ ಕೇಂದ್ರಗಳು, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಯುವಜನರಿಗೆ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ಜನರನ್ನು ತಲುಪಿದ್ದ, ಸಜ್ಜನರೆಂದೇ ಜನಪ್ರಿಯರಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೇಟ್ ಆಕಾಂಕ್ಷಿ ಟೂಡಾ ಶಶಿಧರ್ ಟಿಕೇಟ್ ವಂಚಿತರಾಗಿದ್ದಾರೆ. ಮಾಜಿ ಶಾಸಕ ಲಿಂಗಾಯತ ಸಮುದಾಯದ ಕೆ. ಷಡಕ್ಷರಿ ಕಾಂಗ್ರೆಸ್ ಹುರಿಯಾಳಾಗಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿದ್ದ ಒಕ್ಕಲಿಗ ಸಮುದಾಯದ ಕೆ.ಟಿ.ಶಾಂತಕುಮಾರ್ ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕುರುಬ ಸಮುದಾಯದ ನಾರಾಯಣ್ ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.
ತಾಲ್ಲೂಕಿನ ಮತದಾರರು ಬದಲಾವಣೆ ಬಯಸಿ ಕಾಂಗ್ರೆಸ್ನತ್ತ ಮುಖ ಮಾಡಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದ್ದರೂ ಪಕ್ಷದೊಳಗಿನ ಕೆಲ ಬಣಗಳು ತಟಸ್ಥವಾದಂತೆ ಕಂಡುಬಂದು ಕ್ರಮೇಣ ತ್ರಿಕೋನ ಸ್ಪರ್ಧೆ ಏರ್ಪಡಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆಡಳಿತ ವಿರೋಧಿ ಅಲೆಯ ಜೊತೆಗೆ ಇಲ್ಲಿನ ಲಿಂಗಾಯತ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ನ ಷಡಕ್ಷರಿಯವರಿಗೆ ಬೇರೆಬೇರೆ ಕಾರಣಗಳಿಗಾಗಿ ಗಣನೀಯ ಮತದಾರರಿರುವ ಮುಸಲ್ಮಾನರು, ಕುರುಬರು, ದಲಿತರ ಬೆಂಬಲ ಇರುವಂತೆ ತೋರುತ್ತಿದೆ. ಭಿನ್ನಮತವನ್ನು ಬದಿಗೆ ಸರಿಸಿ ಟೂಡಾ ಶಶಿಧರ್ ಮತ್ತು ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಕಾಂಗ್ರೆಸ್ ಗೆಲ್ಲುವ
ಲಕ್ಷಣಗಳು ಈ ಸದ್ಯಕ್ಕೆ ನಿಚ್ಚಳವಾಗಿದೆ.
ಇದನ್ನೂ ಓದಿ – ಕರಾವಳಿಯಲ್ಲಿ ಧರ್ಮ ರಾಜಕಾರಣ ಚುನಾವಣೆಯ ಪ್ರಮುಖ ಅಸ್ತ್ರ- ಅಭಿವೃದ್ಧಿ ನಗಣ್ಯhttps://peepalmedia.com/on-the-coast-religion-is-the-main-weapon-of-political-election-development-is-negligible/
ನೆಲೆ ಕಳೆದುಕೊಂಡಿದ್ದ ಜೆಡಿಎಸ್, ತನ್ನ ಒಕ್ಕಲಿಗ ಅಭ್ಯರ್ಥಿಯಿಂದಾಗಿ ಗಣನೀಯವಾಗಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲಿಡುತ್ತಿದೆ. ರಾಜಕಾರಣದಲ್ಲಿ ಕನಿಷ್ಟ ಸಂಖ್ಯೆಯಲ್ಲಿರುವ, ಬ್ರಾಹ್ಮಣರಾಗಿರುವ ಬಿ.ಸಿ.ನಾಗೇಶ್ ಗೆ ಕಳೆದ ಬಾರಿ ಯಡಿಯೂರಪ್ಪನವರಿಂದಾಗಿ ಬಿದ್ದ ಲಿಂಗಾಯತ ಮತಗಳು ಅವರ ಗೆಲುವಿಗೆ ಕಾರಣವಾಗಿತ್ತು. ಆದರೆ ಈ ಬಾರಿ ಯಡಿಯೂರಪ್ಪನವರ ಕಣ್ಣೀರು ಈ ಕ್ಷೇತ್ರದಲ್ಲಿ ಬಿಜೆಪಿ ಗೆ ಮುಳುವಾಗುವಂತೆ ಕಾಣುತ್ತಿದೆ.
ಅರುಂಧತಿ ಎಂ
ರಾಜಕೀಯಾಸಕ್ತರು
ಇದನ್ನೂ ಓದಿ – ಪ್ರಸಾದ್ ರಾಜ್ ಕಾಂಚನ್ ಗೆ ಕಾಂಗ್ರೆಸ್ ಟಿಕೆಟ್- ‘ಧನಾಢ್ಯ’ ನಾಯಕರನ್ನು ಎದುರಿಸಲು ‘ಕಾಂಚಾಣ’ದ ಅನಿವಾರ್ಯತೆ https://peepalmedia.com/congress-ticket-for-prasad-raj-kanchan/