ದೆಹಲಿ: ಸಾರ್ವಜನಿಕ ಕಲ್ಯಾಣಕ್ಕಾಗಿ ಜೈಲಿಗೆ ಹೋಗಲು ಸಹ ಸಿದ್ಧವಿರಿ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರೊಂದಿಗೆ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಜನರನ್ನು ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವ ಮೂಲಕ ತಮ್ಮ ಪಕ್ಷ ಜನಪ್ರಿಯತೆಯನ್ನು ಗಳಿಸಿದೆ ಎಂದು ಕೇಜ್ರಿವಾಲ್ ಹೇಳಿದರು. ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಕ್ಷದ ನಾಯಕರ ಬಗ್ಗೆ ಹೆಮ್ಮೆ ಇದೆ ಎಂದರು.
”ಮಕ್ಕಳಿಗೆ ಉನ್ನತ ಶಿಕ್ಷಣ, ಬಡವರಿಗೆ ಉಚಿತ ಆರೋಗ್ಯದ ಬಗ್ಗೆ ಮಾತನಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಅದಕ್ಕೆ ನಾವು ಸಿದ್ಧರಾಗಿರಬೇಕು. ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ನೀವು ಅನ್ನಿಸುತ್ತಿದೆಯೆ? ಆದರೆ, ಅದರ ಬಗ್ಗೆ ಚಿಂತಿಸಬೇಡಿ. ಇಂದು ಜೈಲಿನಲ್ಲಿರುವ ನಮ್ಮ ನಾಯಕರು ನಮ್ಮ ಹೀರೋಗಳು. ಅವರೆಲ್ಲರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ’’ ಎಂದರು.
ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸಿ ತಮ್ಮ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುತ್ತಿದೆ ಎಂದು ಅವರು ಪರೋಕ್ಷವಾಗಿ ಆರೋಪಿಸಿದರು. ದೇಶದ ಯಾವುದೇ ಪಕ್ಷಗಳು ಗಮನಹರಿಸದ ವಿಚಾರಗಳತ್ತ ತಮ್ಮ ಪಕ್ಷ ಗಮನ ಹರಿಸಿದೆ ಎಂದರು. ದೇಶದಲ್ಲೇ ಪ್ರಪ್ರಥಮ ಬಾರಿಗೆ ತಮ್ಮ ಪಕ್ಷ ಜನತೆಗೆ ಪರ್ಯಾಯವಾಗಿದೆ ಎಂದರು. ಈ ರೀತಿಯ ರಾಜಕೀಯವನ್ನು ಜನರು ಇಷ್ಟಪಡಲಾರಂಭಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.