Saturday, April 27, 2024

ಸತ್ಯ | ನ್ಯಾಯ |ಧರ್ಮ

ಜೇನು ಕೃಷಿ | ಅಧಿಕ ಇಳುವರಿಗೆ ಪರಿಸರ ಸ್ನೇಹಿ ವಿಧಾನ

ಕಾಫಿ ಹಾಗು ಮೆಣಸು ಬೆಳೆಯಲ್ಲಿ ಉತ್ತಮ ಪರಾಗಸ್ಪರ್ಶದ ಮೂಲಕ ಅಧಿಕ ಇಳುವರಿ ಪಡೆಯುವಲ್ಲಿ ಜೇನುನೊಣಗಳ ಪಾತ್ರ ಅನನ್ಯ. ಪ್ರತಿ ಎಕರೆ ಕಾಫಿ ತೋಟದಲ್ಲಿ ಕನಿಷ್ಟ ಎರಡು ಜೇನು ಪೆಟ್ಟಿಗೆ ಇಡುವ ಮೂಲಕ ಪುರಾತನ ವೈಭವದ ಕಾಫಿ ಸಂಸ್ಕೃತಿಯನ್ನು ಮರುಕಳಿಸಬೇಕಾಗಿದೆ ಮಂಜುನಾಥ ಹೊಳಲು, ಕೃಷಿ ಬರಹಗಾರರು

ಮಾನವನ ಉಳಿವಿಗಾಗಿ ಜೇನುಹುಳುಗಳ ಸಂತತಿ ಅತಿಮುಖ್ಯ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಹೇಳಿದ್ದಾರೆ. ಕಾಫಿ ಹಾಗು ಮೆಣಸು ಬೆಳೆಯಲ್ಲಿ ಉತ್ತಮ ಪರಾಗಸ್ಪರ್ಶದ ಮೂಲಕ ಅಧಿಕ ಇಳುವರಿ ಪಡೆಯುವಲ್ಲಿ ಜೇನುನೊಣಗಳ ಪಾತ್ರ ಅನನ್ಯ. ನಿಯೋನಿಕೋಟಿನಾಯ್ಡ್ಸ ರಾಸಾಯನಿಕಗಳ ಬಳಕೆಯಿಂದಾಗಿ ಜೇನುನೊಣಗಳ ಸಂಖ್ಯೆ ಕ್ಷೀಣಿಸುತ್ತಿರುವುದು ದುರಂತವೇ ಸರಿ. ಪ್ರತಿ ಎಕರೆ ಕಾಫಿ ತೋಟದಲ್ಲಿ ಕನಿಷ್ಟ ಎರಡು ಜೇನು ಪೆಟ್ಟಿಗೆ ಇಡುವ ಮೂಲಕ ಪುರಾತನ ವೈಭವದ ಕಾಫಿ ಸಂಸ್ಕೃತಿಯನ್ನು ಮರುಕಳಿಸಬೇಕಾಗಿದೆ.

ಆಹಾರ ಉತ್ಪಾದನೆಯಲ್ಲಿ ಜೇನುಹುಳುಗಳ ಪಾತ್ರ ಅನನ್ಯ. ಜೇನುಹುಳುಗಳು ಸಂಘಜೀವಿಗಳು. ಒಂದೊಂದು ಸಂಸಾರವೂ ಒಂದೊಂದು ಹುಟ್ಟಿನಲ್ಲಿ ನೆಲೆಸುತ್ತವೆ. ಪ್ರತಿ ಕುಟುಂಬದಲ್ಲಿ ಮೂರು ಬಗೆಯ ಜೇನುಹುಳುಗಳಿವೆ. ಅವುಗಳು ರಾಣಿಜೇನು, ಗಂಡುಜೇನು ಹಾಗು ದುಡಿಮೆಗಾರ ಜೇನುಹುಳುಗಳು. ಹೀಗೆ ಒಂದು ಜೇನು ಕುಟುಂಬದಲ್ಲಿ ಕೇವಲ ಒಂದೇ ಒಂದು ರಾಣಿಜೇನು, ನೂರಾರು ಗಂಡುಹುಳುಗಳು ಹಾಗು ಹತ್ತಾರು ಸಾವಿರ ದುಡಿಮೆಗಾರ ಜೇನುಹುಳುಗಳಿರುತ್ತವೆ. ಜೇನುಕೃಷಿ ಉಳಿದೆಲ್ಲಾ ಕೃಷಿಗಿಂತ ಭಿನ್ನವಾಗಿದೆ. ಪರಿಸರದಲ್ಲಿನ ಸಸ್ಯ ಸಂಪತ್ತನ್ನು ಅವಲಂಬಿಸಿದ್ದು. ವ್ಯರ್ಥವಾಗುವ ಮಕರಂದದಿಂದ ಜೇನುತುಪ್ಪ ಉತ್ಪತ್ತಿಯಾಗುತ್ತದೆ. ಆದುದರಿಂದ ಜೇನುನೊಣಗಳಿಗೆ ಆಹಾರ ಸಿಕ್ಕುವ ಕಡೆ ಜೇನು ಕುಟುಂಬಗಳನ್ನು ಇಟ್ಟರೆ ಸಾಕು ತಾವೇ ಆಹಾರವನ್ನು ಶೇಖರಿಸುತ್ತವೆ. ಈ ಕೃಷಿ ಕಡಿಮೆ ಬಂಡವಾಳದಲ್ಲಿ ಮಾಡುವಂತಹ ಉಪಕಸುಬು. ವಿಶೇಷವಾಗಿ ನೀರನ್ನು ಬಳಸಬೇಕಿಲ್ಲ ಹಾಗು ವಿದ್ಯುತ್ತಿನ ಅವಶ್ಯಕತೆ ಇರುವುದಿಲ್ಲ. ಕಾಫಿ ತೋಟದಲ್ಲಿ ಜೇನುಕೃಷಿ ಉತ್ತಮ ಆದಾಯ ತರಬಲ್ಲದು.

ಭಾರತದಲ್ಲಿನ ಜೇನುಹುಳುಗಳ ಪ್ರಭೇಧಗಳು

೧. ಕಿರು ಜೇನು 2. ಕೋಲು ಜೇನು, 3. ಮೂಲಿ ಜೇನು ಮತ್ತು 4. ಹೆಜ್ಜೇನು

ಕಿರುಜೇನು

ಇದನ್ನು ವೈಜ್ಞಾನಿಕವಾಗಿ ಏಪಿಸ್ ಇಂಡಿಕಾ ಎಂದು ಕರೆಯುತ್ತಾರೆ. ದೇಶದ ತುಂಬೆಲ್ಲಾ ಕಂಡು ಬರುವ ಸಾಮಾನ್ಯ ಜೇನುಹುಳು. ಉತ್ತಮ ಪರಾಗಸ್ಪರ್ಶಿ ಜೇನು. ಈ ಜೇನುಹುಳುಗಳನ್ನು ಪೆಟ್ಟಿಗೆಯಲ್ಲಿ ಸಾಕಬಹುದು. ಆಧುನಿಕ ರೀತಿಯಲ್ಲಿ ಸಾಕುವುದಕ್ಕೆ ಇದು ಉತ್ತಮ ತಳಿ. ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ, ಬಂಡೆಗಳ ಇಕ್ಕುಳಲ್ಲಿ, ಪೊದೆಗಳಲ್ಲಿ ತನ್ನ ಗೂಡುಗಳನ್ನು ಕಟ್ಟುತ್ತದೆ. ಕಿರುಜೇನು ಕಚ್ಚಿದರೂ ಅಪಾಯವಿಲ್ಲ.

ಹೆಜ್ಜೇನು

ಇದನ್ನು ವೈಜ್ಞಾನಿಕವಾಗಿ ಏಪಿಸ್ ಡಾರ್ಸಾಟ ಎಂಬ ಶಿರೋನಾಮೆಯಿಂದ ಕರೆಯುವುದುಂಟು. ಇದು ಎತ್ತರವಾದ ಮರಗಳಲ್ಲಿ, ದೊಡ್ಡದಾದ ಬಂಡೆಗಳಲ್ಲಿ, ಬೃಹತ್ ಕಟ್ಟಡಗಳಲ್ಲಿ ಗೂಡು ಕಟ್ಟುವ ದೊಡ್ಡ ಜೇನು. ಹೆಜ್ಜೇನು ಕಡಿತದಿಂದ ಮನುಷ್ಯ ಸತ್ತ ಉದಾಹರಣೆಗಳು ಬಹಳಷ್ಟಿವೆ. ಹಾಗಾಗಿ ಈ ಜೇನು ಬಿಡಿಸುವ ಉಸಾಬರಿಗೆ ಯಾರು ಕೈಹಾಕುವುದಿಲ್ಲ. ಹೆಚ್ಚಾಗಿ ಮನುಷ್ಯನ ಚಟುವಟಿಕೆ ಕಡಿಮೆ ಇರುವ ಜಾಗದಲ್ಲಿ ಗೂಡನ್ನು ಕಟ್ಟುತ್ತವೆ. ತುಂಬಾ ದೊಡ್ಡದಾದ ಗೂಡು ಕಟ್ಟುವುದರಿಂದ ತುಂಬಾ ಜೇನುತುಪ್ಪವನ್ನೂ ಕೊಡುತ್ತೆ.

ಕೋಲು ಜೇನು

ಇದನ್ನು ವೈಜ್ಞಾನಿಕವಾಗಿ ಏಪಿಸ್ ಫ್ಲೋರಿಯಾ ಎಂಬ ಹೆಸರಿನಿಂದ ಗುರುತಿಸುವುದುಂಟು. ಇದು ಚಿಕ್ಕ ಜೇನು ನೊಣ. ಬೆಳಕಿನಲ್ಲಿ ಒಂದೊಂದೇ ಸಣ್ಣ ಗೂಡುಗಳನ್ನು ಕಟ್ಟುತ್ತದೆ. ಈ ಜೇನಿಂದ ದೊರೆಯುವ ಜೇನು ಕಡಿಮೆ. ಇದರ ಮೇಣ ಉತ್ತಮ ಗುಣಮಟ್ಟದ್ದಾಗಿರುವುದರಿಂದ ತುಂಬಾ ಬೇಡಿಕೆಯಿದೆ. ಚಿಕ್ಕ ಹೂವುಗಳಲ್ಲಿ ಪರಾಗಸ್ಪರ್ಶದ ಕೆಲಸ ಈ ಜೇನು ಹುಳುಗಳದ್ದು.

ಮೂಲಿ ಜೇನು

ಇದು ವೈಜ್ಞಾನಿಕವಾಗಿ ಏಪಿಸ್ ಟ್ರೈಗೋನ್ ಜಾತಿಗೆ ಸೇರಿದ ಜೇನು. ಇದು ಕುಟುಕುವ ಕೊಂಡಿ ಇಲ್ಲದ ಅತಿ ಸಣ್ಣ ಜೇನು. ಮರಗಳ ಸಂದುಗಳಲ್ಲಿ, ಗೋಡೆಗಳ ಬಿರುಕಿನಲ್ಲಿ ಗೂಡು ಕಟ್ಟುತ್ತದೆ.

ಜೇನುಹುಳುಗಳ ಕಣ್ಮರೆಗೆ ಕಾರಣಗಳು

1. ಕಾಫಿ ಹಾಗು ಮೆಣಸು ಉತ್ಪಾದನೆಯಲ್ಲಿ ಅತಿಯಾದ ಕಾರ್ಕೋಟಕ ರಾಸಾಯನಿಕಗಳ ಬಳಕೆ, ಅವುಗಳಲ್ಲಿ ಮುಖ್ಯವಾಗಿ ಕ್ಲೋರೊಪೆರಿಫಾಸ್, ಸೈಪರ್ ಮೈಥ್ರಿನ್, ಡೆಲ್ಟಾ ಮೈಥ್ರಿನ್, ಎಕಲೇಕ್ಸ, ಪ್ಯಾರಾಕ್ವಾಟ್, ರೌಡಫ್ ಹಾಗು ಪಿಪ್ರೋನಿಲ್ 

2. ನೆರಳು ಆಧಾರಿತ ಕಾಫಿ ಉತ್ಪಾದನೆಯಿಂದ ಬಿಸಿಲು ಕೇಂದ್ರಿತ (ಅತಿಯಾದ ಮರಗಸಿ ಹಾಗು ಟಿಂಬರ್ ಲಾಭಕ್ಕಾಗಿ ಸ್ಥಳೀಯ ಮರಗಳ ಮಾರಣಹೋಮ) ಕಾಫಿ ಉತ್ಪಾದನೆಯತ್ತ ಬೆಳೆಗಾರರ ಚಿತ್ತ

3. ಕಾಫಿ ಕೃಷಿಯಲ್ಲಿ ನೆರಳಿಗಾಗಿ ಅತಿಯಾದ ಸಿಲ್ವರ್ ಮರಗಳ ಮೇಲೆ ಅವಲಂಬನೆ

4. ಅರಣ್ಯನಾಶದಿಂದ ಜೇನುಹುಳುಗಳಿಗೆ ವರ್ಷಪೂರ್ತಿ ಬೇಕಾಗಿರುವ ಮಕರಂದದ ಕೊರತೆ ಹಾಗು ನೀರಿನ ಸೆಲೆ ಕಡಿಮೆ ಆಗಿರುವುದು.

ಹೂವುಗಳ ವಿಶಿಷ್ಟ ರಚನೆ ಮತ್ತು ಪರಾಗಕ್ರಿಯೆ

ಜೇನುನೊಣಗಳು ಮಾನವನಿಗೆ ನೀಡುತ್ತಿರುವ ಅದ್ಭುತ ಕೊಡುಗೆ ಜೇನು ಮತ್ತು ಪರಾಗಸ್ಪರ್ಶ ಸೇವೆ. ಕ್ರಿ.ಶ 1950ರಲ್ಲಿ ಇಂಗ್ಲೆಂಡಿನ ಅರ್ಥರ್ ಡಾಬ್ಸ್ ಎನ್ನುವವರು ಮೊದಲಿಗೆ ಜೇನುನೊಣಗಳು ಹೂವುಗಳಿಂದ ಫಲೋತ್ಪತ್ತಿಗೆ ಕಾರಣವಾಗಬಲ್ಲ ಪರಾಗವನ್ನು ಸಂಗ್ರಹಿಸುತ್ತವೆ ಎಂದು ಜಗತ್ತಿಗೆ ತೋರಿಸಿಕೊಟ್ಟರು. ಇದಕ್ಕೂ ಮೊದಲು ಪರಾಗಸ್ಪರ್ಶ ಕ್ರಿಯೆಯ ವಿಧಾನವನ್ನು ಡಾ. ಮುಲ್ಲರ್‌ ರವರು ಸುಮಾರು 1882ರಲ್ಲಿಯೇ ಕಂಡುಕೊಂಡಿದ್ದರು ಹಾಗು 1887ರಲ್ಲಿ ಜೀವ ವಿಕಾಸವಾದ ಪಿತಾಮಹ ಡಾರ್ವಿನ್ನರು ಕೈಯಿಂದ ಹಾಗು ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆಂದು ತಿಳಿಸಿದ್ದರು. ಆನಂತರದ ಸಂಶೋಧನೆಗಳಲ್ಲಿ ಪರಾಗಸ್ಪರ್ಶ ಕ್ರಿಯೆಯಲ್ಲಿ ಜೀನುನೊಣಗಳ ಮಹತ್ವದ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದ್ದು ಇದರಿಂದಾಗಿ ಇಳುವರಿಯಲ್ಲಿನ ಹೆಚ್ಚಳ ಹಾಗು ಆನೆ ಕಾಟಕ್ಕೆ ಮದ್ದಾಗಿ ಕೆಲಕಡೆ ಜೇನುಕೃಷಿ ಆರಂಭಿಸಿದ್ದಾರೆ.

ಕೆಲ ಬೆಳೆಗಳ ಹೂವುಗಳಿಗೆ ಪರಕೀಯ ಪರಾಗಸ್ಪರ್ಶದಿಂದ ಮಾತ್ರ ಫಲೋತ್ಪತ್ತಿ ಸಾಧ್ಯ, ಯಾಕೆಂದರೆ ಹೂವುಗಳ ರಚನೆ ಕ್ಲಿಷ್ಟವಾಗಿದ್ದು ಜೇನುಹುಳು ಅಥವಾ ಇತರ ಕೀಟಗಳ ಸಹಾಯದಿಂದ ಮಾತ್ರ ಪರಾಗಕ್ರಿಯೆ ನಡೆಯುತ್ತೆ. ಇಂತಹ ಬೆಳೆಗಳ ಇಳುವರಿಯಲ್ಲಿ ಕೀಟಗಳ ಪಾತ್ರ ಅನನ್ಯ. ಈ ಕೆಳಗಿನ ಮೂರು ವಿಧವಾದ ಹೂವುಗಳ ಕ್ಲಿಷ್ಟತೆಯಿಂದ ಜೇನು ಕೃಷಿ ಅನಿವಾರ್ಯವಾಗಿದೆ.

1. ಹುಣಸೆ, ಕರಿಮೆಣಸು, ಇತ್ಯಾದಿಗಳು ಗಂಡು ಮತ್ತು ಹೆಣ್ಣು ಭಾಗಗಳನ್ನು ಹೊಂದಿರುವ ಪರಿಪೂರ್ಣ ಹೂವುಗಳನ್ನು ಹೊಂದಿರುತ್ತವೆ. ಆದರೆ ಶಲಾಕಾಗ್ರ, ಪರಾಗಕೋಶಗಳಿಗಿಂತ ಹೆಚ್ಚು ಎತ್ತರದಲ್ಲಿರುವುದರಿಂದ ಪರಾಗರೇಣುಗಳು ಶಲಾಕಾಗ್ರವನ್ನು ತಲುಪಲು ಪರಕೀಯ ಪರಾಗಸ್ಪರ್ಶ ಅವಶ್ಯಕ.

2. ಸಾಸಿವೆ, ಕಾಫಿ, ಹೂಕೋಸು, ಮೂಲಂಗಿ ಕೆಲವು ಬೆಳೆಗಳಲ್ಲಿ ಅದೇ ಸಸ್ಯದ ಹೂವಿನ ಪರಾಗರೇಣು ಅದೇ ಹೂವಿನ ಶಲಾಕೆಯನ್ನು ಪ್ರವೇಶಿಸಲು ಗಾತ್ರದಲ್ಲಿನ ವ್ಯತ್ಯಾಸ ಮತ್ತಿತರ ಕಾರಣಗಳಿಂದ ಅಸಮರ್ಥವಾಗಿರುತ್ತದೆ. ಇವುಗಳಲ್ಲಿ ಪರಿಣಾಮಕಾರಿ ಪರಾಗಸ್ಪರ್ಶಕ್ಕಾಗಿ ಬೇರೆ ಸಸ್ಯಗಳಿಂದ ಮಾತ್ರ ಪರಾಗರೇಣುಗಳ ವರ್ಗಾವಣೆಯಾಗಬೇಕಾಗುತ್ತದೆ.

3. ಪಪಾಯ, ಖರ್ಜೂರ, ಸ್ಪಿನಾಚ್ ಮುಂತಾದವುಗಳಲ್ಲಿ ಗಂಡು ಮತ್ತು ಹೆಣ್ಣು ಹೂವುಗಳನ್ನು ಹೊಂದಿರುವ ಸಸ್ಯಗಳು ಬೇರೆ ಬೇರೆಯಾಗಿರುತ್ತವೆ. ಇಲ್ಲಿ ಗಂಡು ಸಸ್ಯದ ಹೂವಿನಿಂದ ಪರಾಗರೇಣುಗಳು ಹೆಣ್ಣು ಸಸ್ಯದ ಹೂವಿಗೆ ವರ್ಗಾವಣೆಯಾದಲ್ಲಿ ಮಾತ್ರ ಫಲಬಿಡುತ್ತದೆ.

ಜೇನುನೊಣಗಳ ಪರಾಗಸ್ಪರ್ಶ ಕ್ರಿಯೆಯ ಪರಿಣಾಮಗಳು

1. ಜೇನುನೊಣಗಳು ಪರಾಗರೇಣುವು ಶಲಾಕಾಗ್ರದ ಮೇಲೆ ಮೊಳಕೆಯೊಡೆಯುವುದನ್ನು ಪ್ರಚೋದಿಸುವುದರಿಂದ ಪರಾಗರೇಣುವಿನಲ್ಲಿರುವ ಜೀವಾಣು ಬೇಗನೆ ಅಂಡಾಶಯವನ್ನು ಪ್ರವೇಶಿಸಿ ಗರ್ಭಕಟ್ಟುವಿಕೆಯ ಕ್ರಿಯೆ ಅತಿ ಶೀಘ್ರದಲ್ಲಿ ನಡೆಯುತ್ತದೆ.

2. ಜೇನುನೊಣಗಳ ಪರಾಗಸ್ಪರ್ಶದಿಂದ ಉತ್ಪತ್ತಿಯಾದ ಬೀಜಗಳು ಸದೃಢವಾಗಿದ್ದು ಅವುಗಳ ಬಾಳಿಕೆ, ಎಣ್ಣೆಯ ಅಂಶ, ಗಾತ್ರ ಮತ್ತು ತೂಕ ಹೆಚ್ಚಾಗಿರುತ್ತದೆ. ಅಲ್ಲದೇ ಅವುಗಳ ಮೊಳಕೆಯೊಡೆಯುವ ಶೇಕಡಾವಾರು ಪ್ರಮಾಣ ಅಧಿಕವಾಗಿದ್ದು, ಹುಟ್ಟಿಬರುವ ಸಸ್ಯಗಳು ಹೆಚ್ಚು ಆರೋಗ್ಯದಿಂದ ಬೇಗನೆ ಬೆಳೆಯುವ ಶಕ್ತಿಯನ್ನು ಹೊಂದಿರುತ್ತವೆ.

3. ಕಾಫಿಯ ಕಾಯಿ ಮತ್ತು ಹೂವು ಉದುರುವುದು ಕಡಿಮೆ ಆಗುತ್ತೆ ಹಾಗು ಕಾಫಿಯ ಗುಣಮಟ್ಟ ಅಂದರೆ ಔಟನ್ ಚೆನ್ನಾಗಿ ಬರುತ್ತದೆ.

ನಿರ್ವಹಣಾ ಕ್ರಮಗಳು

ಬೆಳೆಯಲ್ಲಿ ಅಧಿಕ ಪ್ರಮಾಣದಲ್ಲಿ ಜೇನುನೊಣಗಳಿಂದ ಪರಾಗಸ್ಪರ್ಶ ಕ್ರಿಯೆ ಉಂಟಾಗುವಂತೆ ಮಾಡಲು ಕೃಷಿಕರು ಕೆಲವು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯದಾಗಿ ಬೆಳೆಯಲ್ಲಿ ಇರಿಸಿದ ಜೇನು ಕುಟುಂಬ ಆರೋಗ್ಯದಿಂದಿರುವಂತೆ ನೋಡಿಕೊಳ್ಳುವುದು. ಕುಟುಂಬವು ಯಾವುದೇ ನೈಸರ್ಗಿಕ ಶತ್ರುವಿನ ಅಥವಾ ರೋಗದ ಬಾಧೆಗೆ ತುತ್ತಾಗಿರಬಾರದು. ಆಹಾರದದ ಕೊರತೆಯಿದ್ದಲ್ಲಿ ಸಕ್ಕರೆ ಪಾಕವನ್ನು ಕೊಟ್ಟು ನೊಣಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಲು ಬೇರೆ ಕುಟುಂಬದಿಂದ ಮೊಟ್ಟೆ ಮರಿಗಳಿರುವ ಎರಿಗಳನ್ನು ಪ್ರೌಢ ನೊಣಗಳಿಂದ ಬೇರ್ಪಡಿಸಿ ಬೆಳೆಯಲ್ಲಿ ಇರಿಸಲಿರುವ ಕುಟುಂಬಕ್ಕೆ ಕೊಡಬೇಕು. ತೀರಾ ಹಳೆಯ ಮತ್ತು ಮೊಟ್ಟೆ ಇಡಲು ಸೂಕ್ತವಾಗಿಲ್ಲದ ಎರಿಗಳನ್ನು ತೆಗೆದು ಹಾಕಬೇಕು. ಕುಟುಂಬದ ರಾಣಿ ವಯಸ್ಸಾಗಿ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆಯಾಗಿದ್ದಲ್ಲಿ ಆ ಕುಟುಂಬಕ್ಕೆ ಮೊಟ್ಟೆ ಇಡಲು ಆರಂಭಿಸಿರುವ ಹೊಸ ರಾಣಿಯನ್ನು ಒದಗಿಸಬೇಕು. ಚಳಿಗಾಲದಲ್ಲಿ ಮುಕ್ತವಾಗಿ ಸೂರ್ಯನ ಬಿಸಿಲು ಬೀಳುವಂತಹ ಸ್ಥಳದಲ್ಲಿ ಗೂಡಿನ ದ್ವಾರವು ಪೂರ್ವ ದಿಕ್ಕಿಗೆ ಇರುವಂತೆ ಹಾಗು ಬೇಸಿಗೆ ಕಾಲವಾಗಿದ್ದಲ್ಲಿ ತಂಪಾದ ನೆರಳಿರುವ ಜಾಗದಲ್ಲಿ ಇಡಬೇಕು. ಸಮಗ್ರ ಪರಿಸರದ ಸಮತೋಲನಕ್ಕಾಗಿ, ಉತ್ತಮ ಇಳುವರಿಗಾಗಿ, ಪರ್ಯಾಯ ಆದಾಯ ಮೂಲಕ್ಕಾಗಿ, ಉತ್ತಮ ಆರೋಗ್ಯಕ್ಕಾಗಿ ಹಾಗು ಕಾಫಿ ತೋಟದ ಮೇಲೆ ಆನೆ ದಾಂದಲೆ ನಿಯಂತ್ರಣಕ್ಕಾಗಿ ಜೇನು ಕೃಷಿಯನ್ನು ಆರಂಭಿಸಬಹುದು.

ಅಕ್ಷಯಕಲ್ಪದಲ್ಲಿ ಪ್ರಾಯೋಗಿಕ ವಿವರಣೆ.

ಜೇನು ಕೃಷಿಯಿಂದ ಉತ್ತಮ ತೆಂಗಿನ ಇಳುವರಿಯನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಅಕ್ಷಯಕಲ್ಪದಲ್ಲಿ ನಡೆದ ಒಂದು ಪ್ರಾಯೋಗಿಕ ವಿವರಣೆ ಹೀಗಿದೆ-ಒಂದು ವರ್ಷದ ಹಿಂದೆ ಸುಮಾರು 50 ಜೇನುಪೆಟ್ಟಿಗೆಯನ್ನು ಇಡಲಾಗಿತ್ತು, ಅದರ ವಿವರಗಳನ್ನು ಪ್ರತಿವಾರ ಪಡೆದುಕೊಳ್ಳಲಾಗಿತ್ತು. ಕಳೆದ ಒಂದು ವರ್ಷದಿಂದ ತೆಂಗಿನ ಇಳುವರಿ ಗಣನೀಯವಾಗಿ ಹೆಚ್ಚಾಗಿದ್ದು ಕಂಡುಬಂದಿದೆ.‌

ಮಂಜುನಾಥ ಹೊಳಲು

ಕೃಷಿ ಬರಹಗಾರರು

ಇದನ್ನೂ ಓದಿ-<strong>ಮಣ್ಣಿನ ಆರೋಗ್ಯವೇ ಮಾನವನ ಆರೋಗ್ಯ</strong>

Related Articles

ಇತ್ತೀಚಿನ ಸುದ್ದಿಗಳು