ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಒಳಗೊಂಡಂತೆ ಒಕ್ಕೂಟ ಸರಕಾರದ ಹಲವು ನಿಯಮಗಳನ್ನು ವಿರೋಧಿಸಿ ಕಾಂಗ್ರೆಸ್ ಇಂದು ದೆಹಲಿಯ ರಾಮ ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸಿದೆ.
ಈ ಮೆಹಂಗಾಯಿ ಪರ್ ಹಲ್ಲಾ ಬೋಲ್ ರ್ಯಾಲಿಯಲ್ಲಿ ಮಾತಾಡಿದ ರಾಹುಲ್ ಗಾಂಧಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ದ್ವೇಷ ಹೆಚ್ಚಾಗಿದೆ ಎಂದು ಹೇಳಿದರು. ಬಿಜೆಪಿ ಮತ್ತು ಆರ್ಎಸ್ ಜನರನ್ನು ವಿಭಜಿಸುತ್ತಾ ಜನರಲ್ಲಿ ಭಯ ಬಿತ್ತುತ್ತಿವೆ. ನರೆಂದ್ರ ಮೋದಿ ಸರಕಾರದಿಂದ ಬಡವರು, ರೈತರು, ಸಣ್ಣ ವ್ಯಾಪಾರಿಗಳಿಗೆ ಏನಾದರೂ ಪ್ರಯೋಜನವಾಗಿದೆಯೇ ಎಂದು ಪ್ರಶ್ನಿಸಿದ ಅವರು ಕೇವಲ ಇಬ್ಬರು ದೊಡ್ಡ ಕೈಗಾರಿಕೋದ್ಯಮಿಗಳು ಮಾತ್ರ ಈ ದ್ವೇಷ ಮತ್ತು ಭಯದ ಲಾಭ ಪಡೆಯುತ್ತಿದ್ದಾರೆ ಎಂದು ಸರಕಾರದ ಮೇಲೆ ಠೀಕಾ ಪ್ರಹಾರ ನೀಡಿದರು.
ಪ್ರಧಾನಿ ವಿರುದ್ಧ ಕಿಡಿಕಾರಿದ ರಾಹುಲ್ ಮೂರು ಕಾನೂನುಗಳನ್ನು ತಂದದ್ದು ರೈತರಿಗಾಗಿ ಅಲ್ಲ ಅವುಗಳನ್ನು ತಂದಿರುವುದು ಎರಡು ಕಾರ್ಪೋರೇಟ್ ಸಂಸ್ಥೆಗಳಿಗೆ. ಆದರೆ ರೈತರ ಶಕ್ತಿಗೆ ಮಣಿದ ಮೋದಿ ಆ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಬೇಕಾಯಿತು. ಬಿಜೆಪಿ ದೇಶವನ್ನು ಒಡೆಯುತ್ತಿದೆ, ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುತ್ತದೆ. ನಾವು ದ್ವೇಷವನ್ನು ಅಳಿಸುತ್ತೇವೆ, ದ್ವೇಷವನ್ನು ಮಣಿಸಿದಾಗ ಮಾತ್ರ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಸಾಧ್ಯ ಎಂದು ಅವರು ಹೇಳಿದರು.
ರ್ಯಾಲಿಯಲ್ಲಿ ಮಾತಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ನಿರುದ್ಯೋಗ ಮತ್ತು ಬೆಲೆ ಏರಿಕೆ ಮೋದಿ ಸರಕಾರದ ಇಬ್ಬರು ಸಹೋದರರು ಎಂದು ವಾಗ್ದಾಳಿ ನಡೆಸಿದರು. ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಬೇಕಿದೆ ಮತ್ತು ಮೋದಿ ಸರಕಾರಕ್ಕೆ ಪರಿಣಾಮಕಾರಿ ಸಂದೇಶವನ್ನು ನೀಡಬೇಕಿದೆ ಎಂದು ಪ್ರತಿಭಟನೆಯ ಉದ್ದೇಶವನ್ನು ಸ್ಪಷ್ಟ ಪಡಿಸುತ್ತಾ ನುಡಿದರು.