ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶ್ರೀ ಮಲೆಮಹಾದೇಶ್ವರ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ರಾಜ್ಯದಲ್ಲಾಗುತ್ತಿರುವ ಭಾರೀ ಮಳೆ ಮತ್ತು ರೈತರ ಬೆಳೆ ನಾಶದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ʼ ಮಳೆ ಕರ್ನಾಟಕದ ಉದ್ದಗಲಕ್ಕೂ ಆಗುತ್ತಿದೆ. ಕೆರೆಕಟ್ಟೆಗಳು ತುಂಬಿವೆ. ಆದರೆ ಕೆಲವು ಕಡೆ ಪ್ರವಾಹ ಆಗಿದೆ. ಜನವಸತಿ ತೊಂದರೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿದೆ. ಮಂಡ್ಯಕ್ಕೆ ಸಂಬಂಧಿಸಿದಂತೆ ವೀಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಳೆ ನಾಶಕ್ಕೆ 2.30 ಕೋಟಿ ರೈತರಿಗೆ ಪರಿಹಾರವನ್ನು ಒದಗಿಸಲಾಗಿದೆ. ಅದರ ಜೊತೆಗೆ ಇಬ್ಬರು ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಿದೆ. ಬಿದ್ದುಹೋಗಿದ್ದ 304 ಮನೆಗಳಿಗಳಿಗೆ 100ಕ್ಕೆ 100 ಪರಿಹಾರ ನೀಡಲಾಗಿದೆ. ಮತ್ತೆ ಒಂದು ವಾರದಿಂದ ಆಗುತ್ತಿರುವ ಮಳೆಗೆ ಕೂಡಲೇ ಬೆಲೆ ನಾಶ, ಮನೆಗಳಿಗೆ ಸಂಬಂಧಿಸಿದಂತೆ ವರದಿ ನೀಡಿದರೆ ಕೂಡಲೇ ಪರಿಹಾರ ನೀಡಲಾಗುವುದುʼ ಎಂದು ಭರವಸೆ ನೀಡಿದರು.
ʼನಾನು ಮುಖ್ಯ ಮಂತ್ರಿ ಆದಾಗಿನಿಂದ ಒಂದೂವರೆ ತಿಂಗಳಲ್ಲಿ ಡಿಬಿಟಿ ಮುಖಾಂತರ ಪರಿಹಾರ ವಿತರಣೆಯಾಗುತ್ತಿದೆ ಎಂದರು. ಖಾತೆಗಳಿಗೆ ನೇರವಾಗಿ ಹೋಗುತ್ತಿದೆ. ಪರಿಹಾರವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಒಣಬೇಸಾಯಕ್ಕೆ 13600ರೂ, ನೀರಾವರಿಗೆ 25 ಸಾವಿರ ಪರಿಹಾರ ನೀಡುತ್ತಿದ್ದೇವೆ. ತೋಟಗಳಿಗೆ ಕೇಂದ್ರ 18 ಸಾವಿರ ರೂ.ಗಳನ್ನು ನೀಡಿದರೆ ರಾಜ್ಯ ಸರ್ಕಾರ 28 ಸಾವಿರ ರೂ.ಗಳನ್ನು ನೀಡುತ್ತಿದೆ . ಮನೆಗಳಿಗೆ ಕೇಂದ್ರ ಸರ್ಕಾರ 95 ಸಾವಿರ ರೂ. ನೀಡುತ್ತದೆ. ನಾವು ಪೂರ್ಣ ಬಿದ್ದಿರುವ ಮನೆಗಳಿಗೆ 5 ಲಕ್ಷ, ಭಾಗಶಃ ಹಾಳಾಗಿರುವ ಮನೆಗಳಿಗೆ 3 ಲಕ್ಷ, ಹಾಗೂ ಸ್ವಲ್ಪ ಹಾಳಾಗಿರುವ ಮನೆಗಳಿಗೆ 50 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಹೀಗೆ ಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದೇವೆʼ ಎಂದು ಹೇಳಿದರು.
ʼಹಿಂದೆ ಈ ರೀತಿ ಪ್ರಕ್ರಿಯೆಗಳಾಗುತ್ತಿರಲಿಲ್ಲ. ಮನೆಗಳ ಜೊತೆಗೆ ಬೆಳೆಗಳ ನಾಶಕ್ಕೆ ಎರಡು ಪಟ್ಟುಪರಿಹಾರ ನೀಡುತ್ತಿರುವುದು ಬಿಜೆಪಿ ಸರ್ಕಾರ. ರೈತರ ಪರವಾಗಿ ನಾವು ಇದ್ದು, ಏನೇ ಸಂಕಷ್ಟ ಬಂದರೂ ಅವರೊಂದಿಗೆ ನಿಲ್ಲುತ್ತೇವೆʼ ಎಂದು ಮಾತನಾಡಿದರು.