ಬೆಳ್ತಂಗಡಿ: ಎರ್ಮಾಯಿ ಜಲಪಾತ ಸಮೀಪದ ಎಲುವಾರೆ ಹಳ್ಳದ ಕಲ್ಲಂಡ ಎಂಬಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತನು ಉಜಿರೆಯ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಹಾಗೂ ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಅವರ ಪುತ್ರ ವಿವೇಕ್ (17) ಎಂದು ತಿಳಿದು ಬಂದಿದೆ.
ಈ ಕುರಿತು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದು, ಶನಿವಾರ ಮಧ್ಯಾಹ್ನ ಕಾಲೇಜು ಇಲ್ಲದಿರುವುದರಿಂದ ವಿವೇಕ್ ಮತ್ತು ಆತನ ಏಳು ಜನ ಸ್ನೇಹಿತರು ಎರ್ಮಾಹಿ ಜಲಪಾತಕ್ಕೆ ಹೋಗಿದ್ದರು. ಈ ವೇಳೆ ಈಜಾಡುತ್ತಿರುವ ಸಂರ್ಭದಲ್ಲಿ ನೀರಿನ ಬಲವಾದ ಪ್ರವಾಹಕ್ಕೆ ಸಿಕ್ಕಿ, ವಿವೇಕ್ ಮುಳುಗಿದ್ದಾನೆ. ಆಗ ಅವನ ಸ್ನೇಹಿತರು ಕಿರುಚಾಡಲು ಪ್ರಾರಂಭಿಸಿದ್ದಾರೆ. ಆಗ ಅಲ್ಲಿನ ಸ್ಥಳೀಯರು ಯಾರೋ ಹುಡುಗರು ಮೋಜು ಮಾಡುತ್ತಿದ್ದಾರೆ ಎಂದು ತಿಳಿದು ಸುಮ್ಮನಾಗಿದ್ದಾರೆ. ಆದರೆ ಅಲ್ಲೇ ಇದ್ದ ಮಹಿಳೆಯೊಬ್ಬರು, ಹತ್ತಿರದಲ್ಲಿರುವ ಮನೆಗಳಿಗೆ ಹೋಗಿ ಜನರನ್ನು ಎಚ್ಚರಿಸಿದ್ದಾರೆ. ಜನರು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿಯೇ ಆತ ಮುಳುಗಿ ಸಾವನ್ನಪ್ಪಿದ್ದ ಎಂದು ತಿಳಿಸಿದ್ದಾರೆ.