Home ಬೆಂಗಳೂರು ದೇಶದ ಗಡಿ ಸುತ್ತಲೂ 21 ಸಾವಿರ ಕಿ.ಮೀ ಸಂಚರಿಸಿ ದಾಖಲೆಯ ಸಾಧನೆಗೈದ ಬೆಂಗಳೂರಿನ ಸಂದೀಪ್‌

ದೇಶದ ಗಡಿ ಸುತ್ತಲೂ 21 ಸಾವಿರ ಕಿ.ಮೀ ಸಂಚರಿಸಿ ದಾಖಲೆಯ ಸಾಧನೆಗೈದ ಬೆಂಗಳೂರಿನ ಸಂದೀಪ್‌

0

ಬೆಂಗಳೂರು : ದೇಶದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ ಮತ್ತು ಕೊರೋನ ಸಾಂಕ್ರಾಮಿಕ ರೋಗ ಹರಡುವಿಕೆಯ ನಂತರ ದೇಶದ ಜನಜೀವನದ ಪರಿಸ್ಥಿತಿ ಅಧ್ಯಯನ ಹಾಗೂ ರಸ್ತೆ ಸುರಕ್ಷತೆ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ, ಬೆಂಗಳೂರಿನ ಬೈಕರ್ ಸಂದೀಪ್‌ ಎನ್‌.ಎ ಎಂಬುವವರು ದೇಶಾದ್ಯಂತ 21 ಸಾವಿರ ಕಿ.ಮೀ ದೂರ ಒಬ್ಬರೇ ಸಂಚರಿಸಿ ಬೆಂಗಳೂರಿಗೆ ವಾಪಾಸ್ಸಾಗಿದ್ದು ದಾಖಲೆ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಚೆಕ್ಕಲಸಂದ್ರದಲ್ಲಿ ನೆಲೆಸಿರುವ ಸಂದೀಪ್‌ ಎಂಬುವವರು 32 ವರ್ಷದ ಹಳೆಯ ಯಜ್ಡಿ ರೋಡ್‌ ಕಿಂಗ್‌ ದ್ವಿಚಕ್ರ ವಾಹನದಲ್ಲಿ 58 ದಿನಗಳ ಬೈಕ್‌ ಸವಾರಿ ಮಾಡಿ, 21 ಸಾವಿರ ಕಿ.ಮೀ ಕ್ರಮಿಸಿ ಸುದೀರ್ಘ ಪಯಣ ನಡೆಸಿ ಬೆಂಗಳೂರಿಗೆ ಗೆಲುವಿನ ತೃಪ್ತಿಯಿಂದ ವಾಪಾಸ್ಸಾಗಿದ್ದಾರೆ.

ದೇಶ ಸುತ್ತಿದ ಸಂದೀಪ್‌ ಅವರ ಯಜ್ಡಿ ರೋಡ್‌ ಕಿಂಗ್‌ ಬೈಕ್

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮವನ್ನು ದೇಶದ ಗಡಿ ಕಾಯುವ ಸೈನಿಕರೊಂದಿಗೆ ಆಚರಿಸುವ ಉದ್ದೇಶದಿಂದ ಭಾರತ – ಪಾಕಿಸ್ತಾನ, ಭಾರತ- ಚೀನಾ, ಭಾರತ-ಮಯನ್ಮಾರ್‌ ಹಾಗೂ ಭಾರತ-ನೇಪಾಳ ಗಡಿಗಳಿಗೆ ಭೇಟಿ ನೀಡಿ ಅಲ್ಲಿ ಕರ್ತವ್ಯದಲ್ಲಿದ್ದ ಸೈನಿಕರೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ‌ ಆಚರಿಸಿದ ಮೊದಲ ವ್ಯಕ್ತಿ ಸಂದೀಪ್‌ ಆಗಿದ್ದು ಇದು ಅವರ ಮೊದಲನೇ ದಾಖಲೆ ಆಗಿದೆ.

ಸೈನಿಕರೊಂದಿಗೆ ಸಂವಾದ ನಡೆಸಿದ ಸಂದೀಪ್‌, ಅವರ ತ್ಯಾಗ ಮತ್ತು ಸೇವೆಗೆ ವಿಶೇಷ ಧನ್ಯವಾದ ಅರ್ಪಿಸಿರುವದಾಗಿ ಹೆಮ್ಮೆಯಿಂದ ಹೇಳುತ್ತಾರೆ. ಇದೇ ಸಮಯದಲ್ಲಿ ಮಹಾಮಾರಿ ಕೊರೋನಾ ನಂತರ ಜನಜೀವನದ ಪರಿಸ್ಥಿತಿಯನ್ನು ಹತ್ತಿರದಿಂದ ನೋಡಿ ಆ ಕುರಿತು ವಿಶೇಷ ಅನುಭವ ಪಡೆದಿರುವುದಾಗಿ ಸಂದೀಪ್‌ ಹೇಳಿಕೊಂಡಿದ್ದಾರೆ.

ದಿನೆ ದಿನೆ ಹೆಚ್ಚುತ್ತಿರುವ ಅಪಘಾತದಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು,  ಇದರಲ್ಲಿ ಯುವಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದು ಆತಂಕದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಅಪಘಾತ ರಹಿತ ಸುರಕ್ಷಿತ ಪ್ರಯಾಣ ಹಾಗೂ ರಸ್ತೆ ಸುರಕ್ಷತೆ ಕುರಿತು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಲು ಸಂದೀಪ್‌ ಇಂತಹ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ಜಗತ್ತಿನಲ್ಲಿಯೇ ದೊಡ್ಡ ಸಂಖ್ಯೆಯ ಯುವ ಸಮುದಾಯ ಹೊಂದಿರುವ ಭಾರತ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತದೆ. ಈ ಸಂದರ್ಭದಲ್ಲಿ ದೇಶದ ಅಮೂಲ್ಯ ಆಸ್ತಿಯಾದ ಯುವ ಜನಾಂಗದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ದ್ವಿಚಕ್ರ ವಾಹನದಲ್ಲಿ ಭಾರತ ದರ್ಶನ  ಯಾತ್ರೆ ನಡೆಸಿರುವುದಾಗಿ ಸಂದೀಪ್‌ ಹೇಳುತ್ತಾರೆ.

ಈ ಬಗ್ಗೆ ಪೀಪಲ್‌ ಮೀಡಿಯಾದೊಂದಿಗೆ ಮಾತನಾಡಿದ ಸಂದೀಪ್‌ ಅವರು, ʼಅಮೃತ ಮಹೋತ್ಸವ ಆಚರಣೆಯಲ್ಲಿ ಮೆಟ್ರೋನಲ್ಲಿ, ಸಾಮಾನ್ಯ ಜನರಿಗೆ ಒಂದು ರೀತಿ ಎಲ್ಲಾ ಸೌಲಭ್ಯಗಳು ಇರುತ್ತೆ. ಆದರೆ ಈ ದಿನಗಳಲ್ಲಿ ಗಡಿ ಕಾಯುವ ಯೋಧರು ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಅದಕ್ಕೆಂದೇ ದೇಶದ ಗಡಿ ಭಾಗಗಳನ್ನು ಕವರ್‌ ಮಾಡುವ ಉದ್ದೇಶದಲ್ಲಿ ರೈಡ್‌ ಶುರು ಮಾಡಿದೆ ಮತ್ತು ದೇಶವನ್ನು ಕಾಯುವ ಸೈನಿಕರಿಗೆ ಸೆಲ್ಯೂಟ್‌ ಮಾಡಿ ನಮನ ಸಲ್ಲಿಸುವುದಕ್ಕೆ ತುಂಬಾ ಆಸೆ ಇತ್ತು. ಆದ್ದರಿಂದ ನಾನೊಬ್ಬನೆ ಗಡಿ ಭಾಗಗಳಿಗೆ ಹೋಗಿ ಅಲ್ಲಿನ ಸೈನಿಕರನ್ನು ಭೇಟಿ ಮಾಡಿದೆʼ ಎಂದು ಹೇಳಿದರು.

ʼಒಬ್ಬ ಬೈಕ್‌ ರೈಡರ್‌ ಆಗಿ ರೋಡ್‌ ಸೇಫ್ಟಿ ಎಷ್ಟು ಮುಖ್ಯ ಅಂತ  ನಮಗೆ ಚೆನ್ನಾಗಿ ಗೊತ್ತಿದೆ. ರಸ್ತೆಯಲ್ಲಿ ನಡೆಯುವವರಿಗೆ, ಬೈಕ್‌, ಕಾರು ಚಾಲಿಸುವವರಿಗೂ ರೋಡ್‌ ಸೇಫ್ಟಿ ತುಂಬಾ ಮುಖ್ಯವಾಗಿದೆ. ಈ ಬಗ್ಗೆ ನಮ್ಮ ಊರುಗಳಲ್ಲಿ ದಿನನಿತ್ಯ ಹೇಗಿರುತ್ತೆ ಅನ್ನೊದು ನಮಗೆ ತಿಳಿದಿರುತ್ತೆ. ಆದರೆ ಬೇರೆ ರಾಜ್ಯದ ಜನರು ಹೇಗೆ ರೂಲ್ಸ್‌  ಫಾಲೋ ಮಾಡ್ತಾರೆ. ಅಲ್ಲಿನ ಪರಿಸ್ಥಿತಿ ಏನು ಮತ್ತು ನಮ್ಮಲ್ಲಿ ಯಾವ ರೀತಿ ರೂಲ್ಸ್‌ ಇದೆ ಅನ್ನುವುದು ಸ್ವತಃ ಅವರುಗಳ ಬಳಿ ಮಾತನಾಡಿಸಿ ಅವರಿಗೂ ಅರಿವು ಮೂಡಿಸುವ ಕೆಲಸ ಮಾಡಿದೆ. ಸುಮಾರು ಲೋಕಲ್‌ ಬೈಕ್‌ ಕ್ಷಬ್‌ಗಳಿಗೆ ಭೇಟಿ ನೀಡಿ ಅವರುಗಳ ಜೊತೆ ಮಾತನಾಡಿದೆ. ನಾನು ಹೋಗಿದ್ದು ಗಡಿ ಭಾಗಗಳಲ್ಲಿ ಆದ್ದರಿಂದ ಹೆಚ್ಚು ಬೈಕ್‌ ಕ್ಷಬ್‌ಗಳನ್ನು ನನಗೆ ಸಿಗಲಿಲ್ಲ. ಅಲ್ಲಿನ ರಸ್ತೆ ಪರಿಸ್ಥಿತಿಗಳು ಹೇಗಿವೆ ಎಂಬುದನ್ನು ನಾನು ರೋಡ್‌ಚೆಕ್‌ ಇಂದ ತಿಳಿದುಕೊಂಡೆʼ ಎಂದರು.

ಸೆಪ್ಟಂಬರ್‌ 27ರಂದು ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ ಸಂದೀಪ್‌ ಕೇರಳದ ಕಣ್ಣೂರು, ಪಶ್ಚಿಮ ಕರಾವಳಿ ಮಾರ್ಗವಾಗಿ ಗೋವಾ, ರಾಜಸ್ಥಾನ, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರ, ಸಪ್ತ ಸಹೋದರಿ ರಾಜ್ಯಗಳಾದ ಅಸ್ಸಾಂ, ಸಿಕ್ಕಿಂ, ಮಿಜೋರಾಂ, ಅರುಣಾಚಲ್‌ ಪ್ರದೇಶ ಹಾಗೂ ಪೂರ್ವ ಕರಾವಳಿ ಮಾರ್ಗವಾಗಿ ಕನ್ಯಾಕುಮಾರಿ ಮೂಲಕ ಮೈಸೂರಿಗೆ ಬಂದಿದ್ದರು.

ಒಟ್ಟು 58 ದಿನಗಳ ಯಾತ್ರೆಯಲ್ಲಿ ವೈವಿದ್ಯಮಯ ರೋಚಕ ಅನುಭವ ಪಡೆದಿರುವುದಾಗಿ ಸಂದೀಪ್‌ ಹೇಳಿದ್ದಾರೆ. ಬೆಂಗಳೂರಿನ ಟ್ರಾವೆಲ್‌ ಏಜೆನ್ಸಿಯೊಂದರಲ್ಲಿ ಕೆಲಸ  ಮಾಡುತ್ತಿರುವ ಸಂದೀಪ ಈ ಮೊದಲು ಬೆಂಗಳೂರಿನ ಸಿಕ್ಕಿಂ ತನಕ 6 ಸಾವಿರ ಕಿಮೀ ಪ್ರಯಾಣಿಸಿ ದಾಖಲೆ ಮಾಡಿದ್ದರು.

ದೇಶದ ಗಡಿ ಪ್ರದೇಶದಲ್ಲಿ ಸೈನಿಕರು ನಮ್ಮ ನಾಡಿನ ರಕ್ಷಣೆಗಾಗಿ ಹಗಲಿರುಳು ಪಡುತ್ತಿರುವ ಕಷ್ಟವನ್ನು ಕಣ್ಣಾರೆ ನೋಡಿ ಅನುಭವ ಪಡೆದ ಸಂದೀಪ್ ರಕ್ಷಣಾ ಪಡೆಗಳ ಯೋಧರ ತ್ಯಾಗಕ್ಕೆ ದೇಶದ ಜನತೆ ಜೀವನ ಪರ್ಯಂತ ಋಣಿಯಾಗಿರಬೇಕು ಎಂದಿದ್ದಾರೆ.

(ವಿ.ಸೂ ಬೈಕರ್‌ ಸಂದೀಪ್‌ ಅವರ ದೇಶ ಸುತ್ತಿದ ಅನುಭವಗಳನ್ನು ಅವರ ಬಾಯಿಯಿಂದಲೇ ನೀವು ಸಧ್ಯದಲ್ಲೇ ಪೀಪಲ್‌ ಟೀವಿ ಮೂಲಕ ಕೇಳಲಿದ್ದೀರಿ)

You cannot copy content of this page

Exit mobile version